ಈ ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಮಾಡುವ ಮುನ್ನ ಇದನ್ನು ಓದಿ..
ಪ್ರಸ್ತುತ ದೇಶದಲ್ಲಿ ಹಬ್ಬದ ಸೀಸನ್ ಆಗಿದೆ. ಈ ಸಂದರ್ಭದಲ್ಲಿ ಜನರು ಶಾಪಿಂಗ್ ಮಾಡುವುದರಲ್ಲಿ ತೊಡಗಿದ್ದಾರೆ. ದೀಪಾವಳಿಗೂ ಮುನ್ನ ಜನರು ತಮ್ಮ ಮನೆಯನ್ನು ಸುಂದರವಾಗಿ ಅಲಂಕಾರ ಮಾಡುವ ನಿಟ್ಟಿನಲ್ಲಿ ಈಗಲೇ ತಯಾರಿ ಆರಂಭ ಮಾಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಮನೆಯ ಹೊರಗೆ ನೇತು ಹಾಕುವ ದೀಪಾಲಂಕಾರ ಇನ್ನು ಹೊಸ ವರ್ಷ ಕಳೆದೇ ಕೆಳಗಿಯುವುದು ಕೂಡಾ ಇದೆ. ಆದರೆ ಈ ಹಬ್ಬಕ್ಕಾಗಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ ನಾವು ಕೆಲವು ಅಂಶಗಳನ್ನು ತಿಳಿದು ಕೊಂಡಿರಲೇಬೇಕು.
ಈ ಹಿಂದೆ ಈ ಹಬ್ಬದ ಸಂದರ್ಭದಲ್ಲಿ ನಮ್ಮ ಕುಟುಂಬದಲ್ಲಿ ಕೊಂಚ ಅಥವಾ ಕೊಂಚ ಹೆಚ್ಚೇ ಆರ್ಥಿಕ ಒತ್ತಡ ಉಂಟು ಮಾಡುತ್ತಿದ್ದವು. ಕುಟುಂಬದ ಎಲ್ಲರೂ ಒಟ್ಟು ಕೂತು ಖರ್ಚಿನ ಲೆಕ್ಕ ಹಾಕಿ ಹಬ್ಬ ಮಾಡುತ್ತಿದ್ದರು. ಕೆಲವು ಸಂಸ್ಥೆಗಳಲ್ಲಿ ದೀಪಾವಳಿಗೂ ಮುನ್ನ ವಾರ್ಷಿಕ ಬೋನಸ್ ದೊರೆಯುತ್ತಿದ್ದವು. ಹಲವಾರು ಮಂದಿ ಇದಕ್ಕಾಗಿ ಕಾಯುತ್ತಿದ್ದರು. ಇನ್ನು ಕೆಲವರು ಈಗಾಗಲೇ ಬಟ್ಟೆಯನ್ನು ಖರೀದಿ ಮಾಡಿ ಟೈಲರ್ ಬಳಿ ಹೊಲಿಯಲು ನೀಡಿರುತ್ತಿದ್ದರು.
ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?
ಆದರೆ ಈಗ ಎಲ್ಲಾವೂ ಬದಲಾಗಿದೆ. ಜನರು ವರ್ಷಕ್ಕೆ ಒಮ್ಮೆ ಅಲ್ಲ, ತಮ್ಮ ಬಳಿ ಹಣ ಇದ್ದಾಗ ಬಟ್ಟೆಯನ್ನು ಖರೀದಿ ಮಾಡುತ್ತಾರೆ. ರೆಡಿಮೇಡ್ ಬಟ್ಟೆಯಿಂದಾಗಿ ಟೈಲರ್ಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲಾ ಖರೀದಿ ಸಂದರ್ಭದಲ್ಲಿಯೂ ಇಎಂಐ ವ್ಯವಸ್ಥೆಗಳು ಇದೆ. ಮಕ್ಕಳು ಸಿಹಿ ತಿಂಡಿ ತಿನ್ನಲು ಹಬ್ಬದ ಸೀಸನ್ಗಾಗಿಯೇ ಕಾಯಬೇಕಾಗಿಲ್ಲ. ಈಗ ದೀಪಾವಳಿ ಮಾತ್ರವಲ್ಲದೆ ಎಲ್ಲಾ ಸಣ್ಣ ಪುಟ್ಟ ಹಬ್ಬವನ್ನು ಕೂಡಾ ಅದ್ದೂರಿಯಿಂದ ಆಚರಣೆ ಮಾಡುವವರೂ ಕೂಡಾ ಇದ್ದಾರೆ. ನಾವು ಈ ಹಬ್ಬ ಎಂದಾಗ ನಮ್ಮ ಖರ್ಚಿನ ಲೆಕ್ಕಾಚಾರವನ್ನೇ ಮರೆತು ಬಿಡುವುದು ಕೂಡಾ ಇದೆ. ನಾವು ಈ ಹಬ್ಬದ ಭಾವಾನಾತ್ಮಕ ಅಲೆಯಲ್ಲಿ ತೇಲುತ್ತಾ ಸಾಲದ ಸುಳಿಗೆ ಸಿಲುಕುವುದು ನಮ್ಮ ಮುಂದಿನ ಜೀವನಕ್ಕೆ ನಾವು ಈಗ ತಂದೊಡ್ಡುವ ಅಪಾಯ. ಆದ್ದರಿಂದ ಈ ಹಬ್ಬದ ಸೀಸನ್ನಲ್ಲಿ ಕೆಲವೊಂದು ಆರ್ಥಿಕ ಟಿಪ್ಸ್ಗಳು ನಿಮಗೆ ನೀಡಲೇಬೇಕು. ಈ ಟಿಪ್ಸ್ಗಳನ್ನು ತಿಳಿಯಲು ಮುಂದೆ ಓದಿ.
ನಿಮ್ಮ ಖರ್ಚು ಹಾಗೂ ಆದಾಯದ ನಡುವೆ ಇರಲಿ ಸಮತೋಲನ
ನೀವು ಈ ಹಬ್ಬದ ಸೀಸನ್ನಲ್ಲಿ ನಿಮ್ಮ ಖರ್ಚು ಹಾಗೂ ಆದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತೀ ಮುಖ್ಯ. ಖರ್ಚು ಮಾಡುವಾಗ ನಿಮ್ಮ ಆದಾಯಕ್ಕೆ ಸರಿಯಾಗಿ ಈ ಖರ್ಚು ಹೊಂದಾಣಿಕೆ ಆಗಲಿದೆಯೇ ಎಂದು ನೋಡಿಕೊಳ್ಳಿ. ಇನ್ನು ನೀವು ಯಾವ ವಸ್ತು ಖರೀದಿಗೆ ಎಷ್ಟು ಖರ್ಚು ಮಾಡಬೇಕು ಎಂದು ಮೊದಲೇ ಲೆಕ್ಕ ಹಾಕಿಕೊಳ್ಳುವುದು ಅತೀ ಉತ್ತಮ. ಅದರಿಂದಾಗಿ ನೀವು ಎಷ್ಟು ಖರ್ಚು ಮಾಡಿದ್ದೀರಿ ಹಾಗೂ ನಿಮ್ಮಲ್ಲಿ ಇನ್ನು ಎಷ್ಟು ಆದಾಯವಿದೆ ಎಂಬುವ ಲೆಕ್ಕಾಚಾರ ನಿಮಗೆ ಸಿಗಲಿದೆ. ನೀವು ಶೇಕಡ 10 ರಷ್ಟು ನಿಮ್ಮ ವಾರ್ಷಿಕ ಆದಾಯವನ್ನು ಮೂರು ತಿಂಗಳಿನಲ್ಲಿ ಬರುವ ಹಬ್ಬಕ್ಕೆ ಖರ್ಚು ಮಾಡುತ್ತೀರಿ ಎಂದಾದರೆ ನಿಮ್ಮ ಬೇರೆ ಯಾವುದೇ ಜವಾಬ್ದಾರಿಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಿ. ನೀವು ಎಷ್ಟು ಖರ್ಚು ಮಾಡಬೇಕು ಎಂದು ಈಗಲೇ ನಿರ್ಧಾರ ಮಾಡಿಕೊಳ್ಳಿ. ಈ ವಿಚಾರವನ್ನು ಮನೆಯ ಎಲ್ಲರಿಗೂ ತಿಳಿಸಿ. ಇದರಿಂದಾಗಿ ನಿಮ್ಮ ಮನೆಯವರು ನಿಮ್ಮ ಗಮನಕ್ಕೆ ಬಾರದೆ ಬೇರೆ ದುಂದು ವೆಚ್ಚ ಮಾಡುವುದು ತಪ್ಪುತ್ತದೆ.
ಇನ್ನೊಬ್ಬರ ಹೊಗಳಿಕೆಗಾಗಿ ನಿಮ್ಮ ಖರ್ಚು ಇರದಿರಲಿ
ನೀವು ಖರ್ಚು ಮಾಡಿದ್ದಷ್ಟು ಹೆಚ್ಚು ನಿಮ್ಮನ್ನು ಹೊಗಳುವವರು ಇರಬಹುದು. ಆದರೆ ನೀವು ಈ ಹೊಗಳಿಕೆಗಾಗಿ ದುಂದು ವೆಚ್ಚ ಮಾಡಿ, ಬಳಿಕ ಪೇಚಿಗೆ ಸಿಲುಕಬೇಡಿ. ನಿಮ್ಮನ್ನು ಹೊಗಳುವುದು ನಿಜವಾಗಿ ನಿಮ್ಮ ಮೇಲೆ ಇರುವ ಅಸೂಯೆಯಿಂದ ಹೇಳಿರಲೂ ಬಹುದು. ಜನರನ್ನು ಮೆಚ್ಚಿಸುವ ನಿಟ್ಟಿನಲ್ಲಿ ನೀವು ಅಧಿಕ ಖರ್ಚನ್ನು ಮಾಡುವುದು ಮುಂದೆ ನಿಮಗೆಯೇ ತೊಂದರೆಯನ್ನು ಉಂಟು ಮಾಡಬಹುದು. ನೀವು ಆ ಹಿನ್ನೆಲೆ ನಿಮ್ಮ ಖರ್ಚು ಅಗತ್ಯ ಮೀರದಿರದಂತೆ ನೋಡಬೇಕು. ನಿಮ್ಮ ಸಂತೋಷವು ಹಣವನ್ನು ಖರ್ಚು ಮಾಡುವುದಕ್ಕೆ ಸೀಮಿತವಾಗದೆ, ಸಂತೋಷವನ್ನು ಹಂಚಿಕೊಳ್ಳುವುದರಲ್ಲಿ ಇರಲಿ.
ಹಬ್ಬದ ಸೀಸನ್: ಈರುಳ್ಳಿ, ಟೊಮೆಟೊ ಬೆಲೆ ಭಾರೀ ಏರಿಕೆ
ದುಂದು ವೆಚ್ಚ ಬೇಡ, ಬಡವರಿಗೆ ಸಹಾಯ ಮಾಡಿ
ನೀವು ದುಂದು ವೆಚ್ಚ ಮಾಡುವ ಬದಲಾಗಿ ಈ ಹಬ್ಬದ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿ. ಹಬ್ಬವನ್ನು ಬಡ ಜನರು ಸಂತೋಷದಿಂದ ಆಚರಣೆ ಮಾಡಲು ಸಹಾಯ ಮಾಡುವ ಮೂಲಕ ನಿಮ್ಮ ಸಂತಸವನ್ನು ಹೆಚ್ಚಿಸಿಕೊಳ್ಳಿ. ನಮ್ಮ ದೇಶದಲ್ಲಿ ಆರ್ಥಿಕ ಅಸಮಾನತೆಯು ಒಂದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ನೀವು ಈ ಹಬ್ಬದ ಸೀಸನ್ನಲ್ಲಿ ಯಾರಲ್ಲಿ ಹಬ್ಬ ಆಚರಿಸಲು ಹಣವಿಲ್ಲವೋ ಅವರಿಗೆ ಸಹಾಯ ಮಾಡಿ. ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ ಹಬ್ಬವು ಎಲ್ಲರ ಮನೆಯಲ್ಲಿ ಸಂಭ್ರಮ ಸೃಷ್ಟಿಸುವಂತೆ ಮಾಡಿ.
ನೀವು ಬಳಸದ ವಸ್ತು ನಿಮಗೆ ಏಕೆ?
ಇನ್ನು ಈ ಹಬ್ಬದ ಸಂದರ್ಭದಲ್ಲಿ ಖರ್ಚು ನಿಭಾಯಿಸಲು ಅಥವಾ ಬೇರೆಯವರಿಗೆ ಸಹಾಯ ಮಾಡಲು ನಿಮಗೆ ಹಲವಾರು ಮಾರ್ಗಗಳು ಇದೆ. ನಿಮ್ಮ ಮನೆಯಲ್ಲಿ ಕೆಲವು ಸಾಮಾಗ್ರಿಗಳು, ಹೊಸ ಬಟ್ಟೆಗಳು, ಜ್ಯುವೆಲ್ಲರಿಗಳು ಇರಬಹುದು. ಆದರೆ ನೀವು ಅದನ್ನು ಉಪಯೋಗವೇ ಮಾಡದಿರಬಹುದು. ಹೀಗೆ ಏನಾದರೂ ಉಪಯೋಗ ಮಾಡದ ಹೊಸ ವಸ್ತುಗಳು ನಿಮ್ಮಲ್ಲಿ ಇದೆಯೇ ಎಂದು ನೋಡಿಕೊಳ್ಳಿ. ನೀವು ಬಳಸದ ವಸ್ತುಗಳು ನಿಮಗ್ಯಾಕೆ ಹೊರೆ?. ಈ ವಸ್ತುಗಳನ್ನು ನೀವು ಮಾರಾಟ ಮಾಡಿದರೆ, ನಿಮಗೆ ಈ ಹಬ್ಬದ ಸಂದರ್ಭದಲ್ಲಿ ಕೊಂಚ ಖರ್ಚಿಗೆ ಹಣವಾದರೂ ಆದೀತು. ಇಲ್ಲವಾದ್ದಲ್ಲಿ ನೀವು ಬಡ ಜನರಿಗೆ ನೀವು ಉಪಯೋಗ ಮಾಡದ ಹೊಸ ಬಟ್ಟೆಯನ್ನು, ಜ್ಯುವೆಲ್ಲರಿಯನ್ನು ನೀಡಿದರೆ, ಹಬ್ಬದ ಕಳೆ ಇನ್ನಷ್ಟು ಹೆಚ್ಚಾಗುತ್ತದೆ.
ಒಟ್ಟಾರೆಯಾಗಿ ನಮ್ಮ ಈ ಹಬ್ಬದ ಸಂಭ್ರಮವೂ ನಮಗೆ ಮುಂದೆ ಹೊರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಹಬ್ಬಕ್ಕಾಗಿ ದುಂದು ಖರ್ಚು ಮಾಡಿ, ಮತ್ತೆ ಸಾಲದ ಬಲೆಯಲ್ಲಿ ಒದ್ದಾಡದಿರಿ. ನೀವು ಹಬ್ಬದ ಖರ್ಚಿನ ಬಗ್ಗೆ ಮೊದಲೇ ಲೆಕ್ಕಾಚಾರ ಮಾಡಿಕೊಳ್ಳಿ, ಈ ಲೆಕ್ಕಾಚಾರದ ಬಗ್ಗೆ ನಿಮ್ಮ ಕುಟುಂಬಕ್ಕೂ ತಿಳಿಸಿ. ಖರ್ಚಿನ ಮಿತಿಯ ಬಗ್ಗೆ ತಿಳಿಸಿ. ಅದರಲ್ಲೂ ಮುಖ್ಯವಾಗಿ ಈ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನಿಂದಾದ ಆರ್ಥಿಕ ತೊಂದರೆಯಿಂದ ಕೊಂಚ ಚೇತರಿಕೆ ಕಾಣುತ್ತಿರುವಾಗಲೇ ಮತ್ತೆ ಸಂಕಷ್ಟಕ್ಕೆ ಒಳಾಗಗಬೇಡಿ.