ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
ಹಣದುಬ್ಬರ ಕೊಂಚ ಹತೋಟಿಗೆ ಬರುತ್ತಿರುವಾಗಲೇ ಈಗ ಕೆಲವು ಅಗತ್ಯ ವಸ್ತುಗಳ ದರವು ಏರಿಕೆಯಾಗುತ್ತಿದೆ. ದೇಶದಲ್ಲಿ ಅಕ್ಕಿ, ಗೋಧಿ, ಗೋಧಿ ಹಿಟ್ಟು ಹಾಗೂ ಹಲವಾರು ಅಗತ್ಯ ಆಹಾರ ಉತ್ಪನ್ನಗಳ ಬೆಲೆಯು ಸಾರ್ವಕಾಲಿಕ ಏರಿಕೆಯಾಗಿದೆ. ಈ ಎಚ್ಚರಿಕೆಯ ಕರೆಗಂಟೆಯ ಮಧ್ಯೆ ಕೇಂದ್ರ ಸರ್ಕಾರವು ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ಇಳಿಸುವ ನಿಟ್ಟಿನಲ್ಲಿ ಸಂಗ್ರಹಿಸಿದ್ದ 30 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಆಹಾರ ಸಚಿವಾಲಯವು 30ಲಕ್ಷ ಟನ್ ಗೋಧಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದೆ. ಬೆಲೆ ಹೆಚ್ಚಳವನ್ನು ಕಡಿವಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಆಹಾರ, ಕಚ್ಚಾತೈಲ ದರ ಕುಸಿತ: ಡಿಸೆಂಬರ್ ಸಗಟು ಹಣದುಬ್ಬರ ಇಳಿಕೆ
ಗೋಧಿ ಮತ್ತು ಅಕ್ಕಿಯನ್ನು ಅಗತ್ಯಕ್ಕೆ ತಕ್ಕಂತೆ ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತು ಖಾಸಗಿ ವ್ಯಾಪಾರಿಗಳಿಗೆ ಈ ಹಿಂದೆಯೇ ತಿಳಿಸಿದ್ದ ಅಥವಾ ತೀರ್ಮಾನ ಮಾಡಿದ್ದ ಬೆಲೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಗಾದರೆ ಪ್ರಸ್ತುತ ಅಕ್ಕಿ, ಗೋಧಿ, ಗೋಧಿ ಹಿಟ್ಟು ಬೆಲೆ ಎಷ್ಟು ಏರಿಕೆಯಾಗಿದೆ. ಯಾಕಾಗಿ ಇದು ಎಚ್ಚರಿಕೆಯ ಕರೆಗಂಟೆ ಎಂದು ತಿಳಿಯೋಣ ಮುಂದೆ ಓದಿ....
ಅಕ್ಕಿ, ಗೋಧಿ, ಗೋಧಿ ಹಿಟ್ಟಿನ ಬೆಲೆ ಎಷ್ಟಿದೆ?
ಲಭ್ಯವಿರುವ ಮಾಹಿತಿಯ ಪ್ರಕಾರ, 2023ರ ಜನವರಿ 25ರಂದು ಅಕ್ಕಿ ದರವು ಪ್ರತಿ ಕೆಜಿಗೆ 38.25 ರೂಪಾಯಿ ಆಗಿದೆ. ಕಳೆದ ವರ್ಷ ಒಂದು ಕೆಜಿ ಅಕ್ಕಿ ಬೆಲೆಯು 35.74 ರೂಪಾಯಿ ಆಗಿದೆ. ಇನ್ನು 2023ರ ಜನವರಿ 25ರಂದು ಗೋಧಿ ಹಿಟ್ಟಿನ ಬೆಲೆಯು ಪ್ರತಿ ಕೆಜಿಗೆ 33.43 ರೂಪಾಯಿ ಆಗಿತ್ತು. ಆದರೆ ಕಳೆದ ವರ್ಷದಲ್ಲಿ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆಯು 28.24 ರೂಪಾಯಿ ಆಗಿತ್ತು. ಇನ್ನು ತೊಗರಿ ಬೇಳೆ ಬೆಲೆಯು ಕೂಡಾ ಹೆಚ್ಚಳವಾಗಿದೆ. 2023ರ ಜನವರಿ 25ರಂದು ಬೇಳೆ ಬೆಲೆಯು ಪ್ತಿ ಕೆಜಿಗೆ 111.95 ರೂಪಾಯಿ ಆಗಿತ್ತು. ಆದರೆ ಜನವರಿ 24ರಂದು ಪ್ರತಿ ಕೆಜಿ ಬೇಳೆ ದರವು 102.7 ರೂಪಾಯಿ ಆಗಿತ್ತು.
ಈ ಬಗ್ಗೆ ಆಹಾರ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ, "ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯು ಏರಿಕೆಯಾಗುತ್ತಿದೆ ಎಂಬುವುದನ್ನು ನಾವು ಗಮನಿಸಿದ್ದೇವೆ. ಈ ಬಗ್ಗೆ ನಾವು ತಿಳಿದಿದ್ದೇವೆ. ಸರ್ಕಾರವು ಅದಕ್ಕಾಗಿ ಬೇರೆ ಬೇರೆ ಆಯ್ಕೆಯನ್ನು ನೋಡುತ್ತಿದೆ. ಶೀಘ್ರವೇ ಬೆಲೆ ಏರಿಕೆಗೆ ನಾವೊಂದು ಪರಿಹಾರವನ್ನು ನೀಡುತ್ತೇವೆ," ಎಂದು ಈ ಹಿಂದೆ ತಿಳಿಸಿದ್ದರು.
ಭಾರತದಲ್ಲಿ ಗೋಧಿ ಉತ್ಪಾದನೆ ಇಳಿಕೆ
2021-22ರ (ಜುಲೈ-ಜೂನ್) ಭಾರತದಲ್ಲಿ ಗೋಧಿ ಉತ್ಪಾದನೆಯು 106.84 ಮಿಲಿಯನ್ ಟನ್ಗೆ ಇಳಿಕೆಯಾಗಿದೆ. ಕಳೆದ ವರ್ಷ ಗೋಧಿ ಉತ್ಪಾದನೆಯು 109.59 ಮಿಲಿಯನ್ ಟನ್ ಆಗಿತ್ತು. ಇದರಿಂದಾಗಿ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಈ ರೀತಿ ಬೆಲೆ ಏರಿಕೆಯಾದರೆ ಹಣದುಬ್ಬರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.