Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
ಕೇಂದ್ರ ಬಜೆಟ್ ಮಂಡನೆಯಾಗಲು ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಹಣಕಾಸು ವರ್ಷ 2023-2024ನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಪ್ರತಿ ವರ್ಷದಂತೆ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಾಗುತ್ತದೆ. ಈ ಬಜೆಟ್ ಮೇಲೆ ತಮ್ಮ ವಲಯಕ್ಕೆ ಯಾವೆಲ್ಲ ನಿರೀಕ್ಷೆಗಳು ಇದೆ ಎಂದು ಈಗಾಗಲೇ ಬೇರೆ ಬೇರೆ ವಲಯಗಳು ಹೇಳಿದೆ. ಸಾಮಾನ್ಯ ಜನರು ಕೂಡಾ ವಿವಿಧ ವಲಯಗಳಂತೆ ಹಲವಾರು ಬಜೆಟ್ ನಿರೀಕ್ಷೆಗಳನ್ನು ಹೊಂದಿದ್ದಾರೆ.
ರೈಲ್ವೆ ಬಜೆಟ್ ಅನ್ನು ಕೂಡ ಒಳಗೊಂಡಿರುವ ಈ ಬಜೆಟ್ ಮೇಲೆ ಸಾಮಾನ್ಯವಾಗಿ ರೈಲ್ವೆ ಪ್ರಯಾಣಿಕರೂ ಆಗಿರುವ ಸಾಮಾನ್ಯ ಜನರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಅದು ಕೂಡಾ ಮುಖ್ಯವಾಗಿ 2024ನೇ ಲೋಕಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾಗಿದೆ ಹಾಗೂ ನರೇಂದ್ರ ಮೋದಿ ಸರ್ಕಾರದ ಈ ಅಧಿಕಾರವಧಿಯ ಕೊನೆಯ ಬಜೆಟ್ ಆಗಿದೆ. ಆದ್ದರಿಂದಾಗಿ ಬಜೆಟ್ ಮೇಲೆ ಸಾಮಾನ್ಯ ಜನರ ನಿರೀಕ್ಷೆ ಹೆಚ್ಚೇ ಆಗಿದೆ.
Budget 2023: ಕೇಂದ್ರ ಬಜೆಟ್ನ ಇತಿಹಾಸ, ಕುತೂಹಲಕಾರಿ ಸಂಗತಿ ತಿಳಿಯಿರಿ
ರೈಲುಗಳಲ್ಲಿ ನೈರ್ಮಲ್ಯ ಕಾಪಾಡುವುದು, ರೈಲುಗಳಲ್ಲಿ ಸುರಕ್ಷತೆಗಾಗಿ ಈ ಬಜೆಟ್ನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುವುದು ಸಾಮಾನ್ಯ ಜನರ ನಿರೀಕ್ಷೆಯಾಗಿದೆ. ಈ ಬಗ್ಗೆ ಗುಡ್ರಿಟರ್ನ್ಸ್ಗೆ ಪ್ರತಿಕ್ರಿಯೆ ನೀಡಿದ ಹೆಸರು ಉಲ್ಲೇಖಿಸಲು ಬಯಸದ ರೈಲ್ವೆ ಪ್ರಯಾಣಿಕರೊಬ್ಬರು, "ರೈಲಿನಲ್ಲಿ ಸುರಕ್ಷತೆ ಕಡಿಮೆಯಾಗುತ್ತಿದೆ. ಸ್ವಚ್ಛತೆಯೂ ಕೂಡಾ ಇಲ್ಲದಾಗಿದೆ. ದರವು ಕೂಡಾ ನಿರಂತರವಾಗಿ ಹೆಚ್ಚಳವಾಗುತ್ತಿದೆ. ದರ ಇಳಿಕೆ ಮಾಡಬೇಕು. ಪ್ರಮುಖವಾಗಿ ಪ್ಲಾಟ್ಫಾರ್ಮ್ ದರ ಇಳಿಸಬೇಕು," ಎಂದು ತಿಳಿಸಿದ್ದಾರೆ. ಹಾಗಾದರೆ ಬಜೆಟ್ ಮೇಲೆ ಸಾಮಾನ್ಯ ಜನರ ಬೇರೆ ನಿರೀಕ್ಷೆಗಳು ಏನಿದೆ ತಿಳಿಯೋಣ ಮುಂದೆ ಓದಿ...
ಅಧಿಕ ರೈಲಿನ ಬೇಡಿಕೆ
ಮುಂಬೈ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರತಿದಿನ ಓಡಾಟಕ್ಕೆ ರೈಲು ಆಧಾರವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಜನರ ಸಾಮಾನ್ಯ ಸಂಚಾರ ಮಾರ್ಗವಾಗಿದೆ. ಈ ಬಜೆಟ್ನಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಯೋಜನೆಯನ್ನು ಸರ್ಕಾರವು ಜಾರಿ ಮಾಡಬೇಕೆಂಬುವುದು ಸಾಮಾನ್ಯ ಜನರ ಬೇಡಿಕೆಯಾಗಿದೆ. ದೈನಂದಿನ ಓಡಾಟ ನಡೆಸಲಾಗುವ ರೈಲುಗಳು ನಿಲ್ಲಲು ಸ್ಥಳವಿಲ್ಲದಷ್ಟು ತುಂಬಿ ಹೋಗಿರುತ್ತದೆ. ರೈಲಿನಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಪ್ರಯಾಣ ಮಾಡುವುದರಿಂದ ಕಷ್ಟವಾಗುತ್ತಿದೆ. ರೈಲಿನ ಸಂಖ್ಯೆ ಹೆಚ್ಚಾದರೆ ಜನರ ಪ್ರಯಾಣ ಕೊಂಚ ಸುಲಭವಾಗಬಹುದು ಎಂಬ ಅಭಿಪ್ರಾಯವಿದೆ. ಮಹಿಳೆಯರ ಸುರಕ್ಷತೆಗೂ ಕ್ರಮಕೈಗೊಳ್ಳಬೇಕು ಎಂದು ಮಹಿಳಾ ಪ್ರಯಾಣಿಕರು ಹೇಳಿದ್ದಾರೆ.
PM Kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
ಎಲ್ಪಿಜಿ, ಮೊದಲಾದ ವಸ್ತುಗಳ ದರ ಇಳಿಸಿ
ಈ ಹಣದುಬ್ಬರದ ನಡುವೆ ಒಂದು ಕುಟುಂಬದ ಬಜೆಟ್ ನಿರ್ವಹಣೆ ಕೂಡಾ ಬುಡಮೇಲಾಗಿದೆ. ಹಣದುಬ್ಬರ ಹೆಚ್ಚಾದಂತೆ ಆರ್ಬಿಐ ರೆಪೋ ದರ ಏರಿಕೆ ಮಾಡಿದೆ, ಇದರಿಂದಾಗಿ ಬ್ಯಾಂಕುಗಳ ಸಾಲದ ಬಡ್ಡಿದರದ ಮೇಲೆ ಪ್ರಭಾವ ಬೀರಿದೆ. ಇದು ಸಾಲ ಪಡೆದಿರುವ ಸಾಮಾನ್ಯ ಜನರ ಬಜೆಟ್ ಮೇಲೆ ಪ್ರಭಾವ ಉಂಟು ಮಾಡಿದೆ. ಇನ್ನು ಪ್ರತಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರ ಜೀವನ ವೆಚ್ಚ ಅಧಿಕವಾಗುತ್ತಿದೆ. ಅದರಿಂದಾಗಿ ಈ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್, ಪೆಟ್ರೋಲ್ ದರ ಸೇರಿದಂತೆ ಇತರೆ ವಸ್ತುಗಳ ದರವನ್ನು ಇಳಿಕೆ ಮಾಡಲು ಕ್ರಮವನ್ನು ಕೈಗೊಳ್ಳಬೇಕು ಎಂದು ಸಾಮಾನ್ಯ ಜನರು ಆಗ್ರಹಿಸಿದ್ದಾರೆ.
ಉದ್ಯೋಗ ಸೃಷ್ಟಿ ಮಾಡಿ
ಪ್ರಸ್ತುತ ದೇಶದಲ್ಲಿ ಉದ್ಯೋಗ ಕಡಿತ ಮುಂದುವರಿದಿದೆ. ಭಾರತ ಮಾತ್ರವಲ್ಲ ಜಾಗತಿಕವಾಗಿ ಹಲವಾರು ಸಂಸ್ಥೆಗಳು ತಮ್ಮ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ, ಮುಂದೆ ಕಾಡಲಿರುವ ಆರ್ಥಿಕ ಹಿಂಜರಿತವನ್ನು ಎದುರಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದೆ. ಉದ್ಯೋಗವನ್ನು ಕಳೆದುಕೊಂಡವರು ಮತ್ತು ಶಿಕ್ಷಣ ಮುಗಿಸಿದವರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಇನ್ನು ಶಿಕ್ಷಣಕ್ಕೆ ತಕ್ಕುದಾದ ಉದ್ಯೋಗವು ಕೂಡಾ ಲಭ್ಯವಾಗುತ್ತಿಲ್ಲ. ಆದ್ದರಿಂದಾಗಿ ಕೇಂದ್ರ ಸರ್ಕಾರವು ಶಿಕ್ಷಣಕ್ಕೆ ತಕ್ಕುದಾದ ಉದ್ಯೋಗ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕು ಎಂಬವುದು ಸಾಮಾನ್ಯ ಜನರ ಬೇಡಿಕೆಯಾಗಿದೆ.