ಜನರ ಬ್ಯಾಂಕ್ ಖಾತೆಯಿಂದ ಹಣವನ್ನು ಎಗರಿಸಲು ವಂಚಕರು ಈಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ತಮ್ಮ ಇಂಜಿನಿಯರಿಂಗ್ ತಂತ್ರಗಳನ್ನು ಬಳಸಿಕೊಳ್ಳುತ್ತಿರುವ ವಂಚಕರು ಈ ಮೂಲಕ ಜನರ ಬ್ಯಾಂಕಿಂಗ್ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬಳಿಕ ಜನರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಎಗರಿಸುತ್ತಿದ್ದಾರೆ.
ಈ ವಂಚಕರು ತಮ್ಮ ಟಾರ್ಗೆಟ್ಗಳು ಯಾರು ಇರುತ್ತಾರೋ ಅವರಿಂದ ವಿವಿಧ ರೀತಿಯಲ್ಲಿ ಹಣವನ್ನು ಪಡೆಯುತ್ತಾರೆ. ನಾವು ಗಿಫ್ಟ್ ನೀಡುತ್ತೇವೆ ಎಂದು ಹೇಳಿಕೊಂಡು, ಸಹಾಯದ ಭರವಸೆ ನೀಡಿಕೊಂಡು ಹಾಗೂ ಕೆಲವೊಮ್ಮೆ ಬೆದರಿಕೆಯನ್ನು ಹಾಕುವ ಮೂಲಕ ಈ ವಂಚಕರು ಹಣವನ್ನು ಪಡೆಯುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಡಿಜಿಟಲ್ ವಂಚನೆಗಳು ಬೇರೆ ರೂಪವನ್ನೇ ಪಡೆದುಕೊಂಡಿದೆ. ಈಗ ಡಿಜಿಟಲ್ ವಂಚನೆಯು ಜನರಲ್ಲಿ ವಿಶ್ವಾಸ ಮೂಡಿಸಿ ಮಾಡಲಾಗುವ ವಂಚನೆಗಳೇ ಅಧಿಕವಾಗಿದೆ. ಈ ವಂಚಕರು ಅಧಿಕವಾಗಿ ಮೆಟ್ರೋ/ನಗರ ಪೊಲೀಸ್ ಮತ್ತು ಕಾನೂನಿನ ಕ್ರಮವನ್ನು ತಪ್ಪಿಸಿಕೊಳ್ಳುವ ನಿಟಿನಲ್ಲಿ ಮೆಟ್ರೋ ಮತ್ತು ನಗರ ಕೇಂದ್ರಗಳ ಬಾಹ್ಯ ಪ್ರದೇಶದಲ್ಲಿ ಈ ಡಿಜಿಟಲ್ ವಂಚನೆಯನ್ನು ನಡೆಸುತ್ತಿದ್ದಾರೆ.

ಹಣ ಎಗರಿಸಲು ವಂಚಕರ ಹೊಸ ಮಾರ್ಗ ಯಾವುದು?
ಇತ್ತೀಚೆಗೆ ಬ್ಯಾಂಕುಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಆನ್ಲೈನ್ ವಂಚನೆಯ ದೂರುಗಳು ಅಧಿಕವಾಗುತ್ತಿದೆ. ಜನರು ಕೆವೈಸಿ ಅಪ್ಡೇಟ್, ನಕಲಿ ಷೇರು ಮಾರುಕಟ್ಟೆ ಪಟ್ಟಿ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಇನ್ನು ಉದ್ಯೋಗದ ವಿಚಾರದಲ್ಲಿ ವಂಚನೆಯೂ ನಡೆಯುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಿಂದಾಗಿ ಈ ವಂಚಕರು ಉದ್ಯೋಗದ ವಿಚಾರವನ್ನೇ ಸುಳಿಗೆಗೆ ಬಳಸಿಕೊಂಡಿದ್ದಾರೆ. ಇನ್ನು ಗ್ರಾಹಕರ ಸಹಾಯವಾಣಿ ಎಂಬ ಹೆಸರಿನ ಮೂಲಕವೂ ವಂಚನೆಯನ್ನು ನಡೆಸಲಾಗುತ್ತಿದೆ. ತಪ್ಪಾದ ಗ್ರಾಹಕರ ಸಹಾಯವಾಣಿ ಮೂಲಕ ಜನರಿಗೆ ವಂಚನೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಇಮೇಲ್, ಎಸ್ಎಮ್ಎಸ್, ಕರೆಯ ಮೂಲಕ ಈ ವಂಚನೆಯನ್ನು ನಡೆಸಲಾಗುತ್ತದೆ. ಜನರ ಇಮೇಲ್ ಖಾತೆ, ಲಾಗಿನ್ ರುಜುವಾತು, ಕಾರ್ಡ್ ಮಾಹಿತಿ, ಪಿನ್ಗಳು ಹಾಗೂ ಒಟಿಪಿ ವಿವರಗಳನ್ನು ಹಂಚಿಕೊಳ್ಳಿ ಎಂದು ಒತ್ತಾಯ ಮಾಡಲಾಗುತ್ತದೆ. ಇದಕ್ಕಾಗಿ ಲಿಂಕ್ ಅನ್ನು ಕೂಡಾ ಕಳುಹಿಸಲಾಗಿರುತ್ತದೆ. ನೀವು ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನಿಮ್ಮ ಫೋನ್ ಅನ್ನೇ ನಿಯಂತ್ರಣಕ್ಕೆ ಪಡೆಯುವ ಆಪ್ ನಿಮ್ಮ ಅರಿವಿಗೆ ಬರದಂತೆ ಡೌನ್ಲೋಡ್ ಆಗಲಿದ್ದು, ಬಳಿಕ ನಿಮ್ಮ ಮೊಬೈಲ್ ಅನ್ನು ಸಂಪೂರ್ಣವಾಗಿ ವಂಚಕರು ನಿಯಂತ್ರಣ ಮಾಡಲು ಸಾಧ್ಯವಾಗಲಿದೆ. ಇದು ಸಾಮಾನ್ಯವಾಗಿ ವಿಶಿಂಗ್ ದಾಳಿಗಳು ಆಗಿದೆ.
ಏನಿದು ವಿಶಿಂಗ್ ದಾಳಿ?
ವಿಶಿಂಗ್(Vishing) ದಾಳಿಯಲ್ಲಿ ವಂಚಕರು ತಾವು ಬ್ಯಾಂಕ್ನ ಸಿಬ್ಬಂದಿಗಳು, ವಿಮಾ ಏಜೆಂಟ್ಗಳು, ಆರೋಗ್ಯ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡುತ್ತಾರೆ ಅಥವಾ ನಿಮ್ಮನ್ನು ಸಂಪರ್ಕ ಮಾಡುತ್ತಾರೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮ ಹೆಸರು ಅಥವಾ ಜನ್ಮ ದಿನಾಂಕವನ್ನು ದೃಢಪಡಿಸಿಕೊಳ್ಳುತ್ತಾರೆ. ಬಳಿಕ ನಿಮಗೆ ಅಗತ್ಯ ಸೇವೆಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಈ ವಂಚಕರು ಕೂಡಲೇ ತಮ್ಮ ಅಗತ್ಯ ದಾಖಲೆಗಳನ್ನು ನೀಡುವಂತೆ ಜನರಿಗೆ ಹೇಳುತ್ತಾರೆ. ನಿಮ್ಮ ಖಾತೆಯಲ್ಲಿ ಸಮಸ್ಯೆ ಉಂಟಾಗಿದೆ, ವಿಮೆಯ ಸಮಸ್ಯೆ ಇದೆ ಎಂದು ಹೇಳಿಕೊಂಡು ನಿಮ್ಮ ಮಾಹಿತಿಯನ್ನು ಪಡೆಯುತ್ತಾರೆ. ಈ ಮಾಹಿತಿಯನ್ನು ವಂಚಕರು ಬಳಸಿಕೊಂಡು ಹಣವನ್ನು ಎಗರಿಸುತ್ತಾರೆ.
ಆದ್ದರಿಂದಾಗಿ ಜನರು ಒಟಿಪಿ ಅಥವಾ ಪಿನ್ ಅನ್ನು ಎಂದಿಗೂ ಕೂಡಾ ಶೇರ್ ಮಾಡಬಾರದು ಎಂಬುವುದನ್ನಯ ಗಮನದಲ್ಲಿ ಇರಿಸಬೇಕು. ಸಾಮಾನ್ಯವಾಗಿ ಈ ವಂಚನೆಯ ಕರೆಯನ್ನು ಜನರು ಕೆಲಸದಲ್ಲಿ ಇರುವ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಜನರು ಕೆಲಸದ ಒತ್ತಡದ ಸಂದರ್ಭದಲ್ಲಿ ಇರುವಾಗ ಈ ಕರೆಯು ನಿಜ ಎಂದು ಭಾವಿಸುವಂತೆ ಮಾಡಲಾಗುತ್ತದೆ.
ಇನ್ನು ಎಚ್ಡಿಎಫ್ಸಿ ಬ್ಯಾಂಕಿನ ಗ್ರಾಹಕರಿಗೆ ನಡೆದ ವಂಚನೆ ಪ್ರಕರಣರವನ್ನು ಪರಿಶೀಲನೆ ಮಾಡಿದಾಗ ಈ ವಂಚನೆಯು ಬೆಳಿಗ್ಗೆ 7.00 ರಿಂದ ರಾತ್ರಿ 7.00 ರವರೆಗೆ ನಡೆದಿದೆ ಎಂಬುವುದು ತಿಳಿದು ಬಂದಿದೆ. ಹಾಗೆಯೇ ಸೈಬರ್ ವಂಚನೆಗಳು ಶೇಕಡ 65-70 ರಷ್ಟು ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅದರಲ್ಲೂ ಮುಖ್ಯ ವಿಷಯ ಏನೆಂದರೆ ಈ ವಂಚನೆಗೆ ಒಳಗಾದವರ ಪೈಕಿ ಶೇಕಡ 80-85 ಮಂದಿ 22-50 ವಯಸ್ಸಿನವರು ಆಗಿದ್ದಾರೆ.


Click it and Unblock the Notifications