ಯಾವಾಗ ಬೇಕಾದರೂ ಕೆಲಸ ಹೋದೀತು; ಹಣಕಾಸು ಸ್ಥಿತಿ ಹೇಗೆ ನಿಭಾಯಿಸ್ತೀರಿ?
ಇವತ್ತಿನ ಸಂದರ್ಭದಲ್ಲಿ ಯಾವ ಕೆಲಸವೂ ಶಾಶ್ವತ ಅಲ್ಲ. ಕೆಲಸದ ಭದ್ರತೆ ಬೇಕೆಂದರೆ ಸರ್ಕಾರಿ ನೌಕರಿ ಬೇಕು. ಆದರೆ, ಎಲ್ಲರಿಗೂ ಸರ್ಕಾರಿ ಕೆಲಸ ಸಿಕ್ಕೋದಿಲ್ಲ. ದೊಡ್ಡ ಖಾಸಗಿ ಕಂಪನಿಗಳಲ್ಲಿ ಹೇರಳ ಸಂಬಳ ಕೊಡುತ್ತಾರೆ. ಆದರೆ, ಜಾಬ್ ಸೆಕ್ಯೂರಿಟಿ? ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾಬ್ ಸೆಕ್ಯೂರಿಟಿ ಎಂಬುದು ಮರೀಚಿಕೆ. ಪ್ರತಿಭೆ, ಜ್ಞಾನ, ಹೊಂದಿಕೆ ಸಾಮರ್ಥ್ಯವನ್ನೇ ಬಂಡವಾಳವಾಗಿಸಿಕೊಂಡು ದೇವರ ಮೇಲೆ ಭಾರ ಹಾಕಿ ಮುಂದುವರಿಯಬೇಕು.
ಗೂಗಲ್ನಲ್ಲಿ ಕೆಲಸ, ಮೈಕ್ರೋಸಾಫ್ಟ್ನಲ್ಲಿ ಕೆಲಸ, ಇಂಟೆಲ್ನಲ್ಲಿ ಕೆಲಸ... ಇನ್ನೇನು ನಮ್ಮ ಜೀವನ ಸಲೀಸಾ ಎಂಬ ಕನಸಿನ ಗುಂಗಿನಲ್ಲಿದ್ದ ಅನೇಕರಿಗೆ ಕಳೆದ ಎರಡು ವರ್ಷದಿಂದ ಬಹಳ ದೊಡ್ಡ ಘಾಸಿಯಾಗಿದೆ. ಇತ್ತೀಚೆಗೊಂದು ದೊಡ್ಡ ದೊಡ್ಡ ಕಂಪನಿಗಳು ಸಾಲು ಸಾಲಾಗಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿವೆ. ಮೆಟಾ ೧೧ ಸಾವಿರ ಮಂದಿಯನ್ನು ಕೆಲಸದಿಂದ ಹೊರಗೆ ಕಳುಹಿಸಿದರೆ ಅಮೆಜಾನ್ ೧೦ ಸಾವಿರ ನೌಕರರಿಗೆ ಪಿಂಕ್ ಸ್ಲಿಪ್ ಕೊಡುವ ಆಲೋಚನೆಯಲ್ಲಿದೆ. ಟ್ಟಿಟ್ಟರ್ ರಾದ್ಧಾಂತವಂತೂ ಎಲ್ಲರಿಗೂ ಗೊತ್ತಾಗಿದೆ. ಭಾರತದಲ್ಲೂ ಹಲವು ಕಂಪನಿಗಳು ಉದ್ಯೋಗ ಕಡಿತದ ದಾರಿ ತುಳಿಯುತ್ತಿವೆ. ಆರ್ಥಿಕವಾಗಿ ಸಂಕಷ್ಟ ಎರಗಿ ಕಂಪನಿಯೇ ಮುಚ್ಚಿಹೋಗುವ ಪರಿಸ್ಥಿತಿ ಬರುವ ಮುನ್ನವೇ ಸಿಬ್ಬಂದಿ ವರ್ಗ ಕಡಿತ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬಂತಹ ಸ್ಥಿತಿ ಇದೆ.
ಹೂಡಿಕೆ ನಿರೀಕ್ಷೆಯಲ್ಲಿ ಎಚ್ಡಿಎಫ್ಸಿಯಿಂದ ಬಾಂಡ್ ವಿತರಣೆ; ನೀವು ಕೊಳ್ಳಬಹುದೇ?
ಈ ಆರ್ಥಿಕ ಹಿಂಜರಿತದ ಅವಧಿ ಮುಗಿಯುವವರೆಗೂ ಜಾಬ್ ಕಟ್ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಕೋವಿಡ್ ನಂತರ ಆರ್ಥಿಕತೆ ಹೇಗೆ ನಳನಳಿಸಲು ಆರಂಭವಾಗಿತ್ತೋ ಅದೇ ರೀತಿ ಈಗ ಆರ್ಥಿಕ ಹಿಂಜರಿತದಿಂದ ಜಗತ್ತು ಹೊರಬಂದ ಬಳಿಕ ಉದ್ಯೋಗಸೃಷ್ಟಿ ಮತ್ತೆ ಕಾರ್ಯಾರಂಭಿಸುತ್ತದೆ. ಅಲ್ಲಿಯವರೆಗೂ ಉದ್ಯೋಗನಷ್ಟ ಅನುಭವಿಸಿದವರು ವಾಸ್ತವವನ್ನು ಅರಿತು ಅದಕ್ಕೆ ತಕ್ಕಂತೆ ಪರಿಸ್ಥಿತಿ ನಿಭಾಯಿಸದೇ ವಿಧಿ ಇಲ್ಲ.
ಒಂದು ವೇಳೆ ಉದ್ಯೋಗ ನಷ್ಟವಾದರೆ ಮುಂದೇನು? ಯಾರೇ ಆದರೂ ಬೇರೆ ಉದ್ಯೋಗ ಅರಸುವುದು ಸ್ವಾಭಾವಿಕ. ಆ ಪ್ರಕ್ರಿಯೆಯಂತೂ ಎಲ್ಲರೂ ಮಾಡುವಂಥದ್ದೇ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಶೀಘ್ರದಲ್ಲಿ ಹೊಸ ಉದ್ಯೋಗ ಸಿಗುತ್ತದೆಂದು ಖಾತ್ರಿಯಾಗಿ ಹೇಳಲು ಅಸಾಧ್ಯ. ಕೆಲ ತಿಂಗಳ ಮಟ್ಟಿಗಾದರೂ ನಿರುದ್ಯೋಗಿ ಸ್ಥಿತಿ ಅನುಭವಿಸಬೇಕಾಗಬಹುದು. ಆಗ ಪರಿಸ್ಥಿತಿ ಹೇಗೆ ನಿಭಾಯಿಸುತ್ತೀರಿ ಎಂಬುದು ನಿಮಗೆ ಎದುರಾಗುವ ಅಗ್ನಿಪರೀಕ್ಷೆ. ಇದನ್ನು ಎದುರಿಸಲು ಕೆಲವೊಂದಿಷ್ಟು ಟಿಪ್ಸ್ ಸಹಾಯವಾಗಬಹುದು. ನೀವು ಸದ್ಯ ಉದ್ಯೋಗ ಹೊಂದಿದ್ದರೂ ಮುನ್ನೆಚ್ಚರಿಕೆಯಾಗಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
ತುರ್ತು ಹಣ ಸಂಗ್ರಹಿಸಿ
ನೀವು ಉದ್ಯೋಗದಲ್ಲಿ ಇದ್ದರೆ ತುರ್ತು ನಿಧಿ ಸಂಗ್ರಹಿಸುವ ಕೆಲಸವನ್ನು ಖಂಡಿತ ಮರೆಯಬೇಡಿ. ನೀವು ಹೂಡಿರುವ ಕೆಲ ಸೇವಿಂಗ್ ಸ್ಕೀಮ್ಗಳ ಹೊರತಾಗಿ ಸಾಧ್ಯವಾದಷ್ಟೂ ಹಣವನ್ನು ಎಮರ್ಜೆನ್ಸಿ ಫಂಡ್ಗೆ ಎತ್ತಿಡಿ. ನಿಮ್ಮ ಇಎಂಐ, ಮನೆ ಬಾಡಿಗೆ, ವಿದ್ಯುತ್, ಗ್ಯಾಸ್, ನೀರು ಇತ್ಯಾದಿ ಮಾಸಿಕ ಬಿಲ್ಗಳು ಹಾಗೂ ಊಟ ಮತ್ತಿತರ ಅಗತ್ಯ ವೆಚ್ಚಕ್ಕೆ ಬೇಕಾದ ಹಣ ಒಂದು ತಿಂಗಳಿಗೆ ಎಷ್ಟು ಎಂಬುದು ಗೊತ್ತಿರುತ್ತದೆ. ಆರು ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ಎಮರ್ಜೆನ್ಸಿ ಫಂಡ್ನಲ್ಲಿ ಇರಲಿ. ಅದಕ್ಕಿಂತ ಹೆಚ್ಚಿದ್ದಷ್ಟೂ ಇನ್ನೂ ಒಳ್ಳೆಯದು. ಪ್ರತೀ ತಿಂಗಳು ನಿಮ್ಮ ಆದಾಯದಲ್ಲಿ ಶೇ. 10ರಷ್ಟು ಹಣವನ್ನು ಈ ತುರ್ತು ನಿಧಿಗೆ ಇರಿಸುತ್ತಾ ಹೋಗಿ.
ಸೀಮಿತ ಖರ್ಚು
ಈ ವಿಚಾರದಲ್ಲಿ ಬುದ್ಧಿ ಹೇಳುವುದು ಸುಲಭ. ಆದರೆ, ಆಚರಣೆಗೆ ತರುವುದು ಕಷ್ಟವೇ. ಯಾವುದು ಅಗತ್ಯ, ಯಾವುದು ಐಷಾರಾಮಿ ಎಂಬುದನ್ನು ಗುರುತಿಸುವ ವಿವೇಕವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಆರ್ಥಿಕ ಅನಿಶ್ಚಿತತೆ ಸ್ಥಿತಿ ಇರುವವರೆಗೂ ಎಚ್ಚರಿಕೆಯಿಂದ ವೆಚ್ಚ ನಿಭಾಯಿಸಿ. ಕೆಲಸ ಕಳೆದುಕೊಂಡವರಂತೂ ಒಂದೊಂದಕ್ಕೂ ಖರ್ಚು ಮಾಡಲು ಹತ್ತಾರು ಬಾರಿ ಯೋಚಿಸಬೇಕು.
ವೈಯಕ್ತಿಕ ಇನ್ಷೂರೆನ್ಸ್ ಇರಲಿ
ಈಗ ವಿಮೆ ಬಹಳ ಮುಖ್ಯ. ಕೆಲಸ ಮಾಡುವ ಸ್ಥಳದಲ್ಲಿ ಇನ್ಷೂರೆನ್ಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಕೆಲಸ ಹೋದ ಮರುದಿನವೇ ಇನ್ಷೂರೆನ್ಸ್ ಅಸಿಂಧುಗೊಳ್ಳುತ್ತದೆ. ಆದ್ದರಿಂದ ವೈಯಕ್ತಿಕವಾಗಿ ಒಂದು ಮೆಡಿಕಲ್ ಇನ್ಷೂರೆನ್ಸ್ ಮಾಡಿಸುವುದು ಉತ್ತಮ. ಯಾವಾಗ ಯಾರಿಗೆ ಆರೋಗ್ಯ ತಪ್ಪುತ್ತದೋ ಹೇಳುವುದು ಕಷ್ಟ.
ತಾತ್ಕಾಲಿಕ ವರಮಾನಕ್ಕೆ ಪ್ರಯತ್ನ
ಈಗಿನ ಇಂಟರ್ನೆಟ್ ಯುಗದಲ್ಲಿ ಆನ್ಲೈನ್ನಲ್ಲಿ ಹಲವು ಉದ್ಯೋಗಾವಕಾಶಗಳು ಸಿಗುತ್ತವೆ. ನಿಮ್ಮ ಕೌಶಲ್ಯ ಬೇಡುವ ಉದ್ಯೋಗವನ್ನು ಆನ್ಲೈನ್ನಲ್ಲಿ ಹುಡುಕಿದರೆ ಸಿಗಬಹುದು. ನಿಮಗೆ ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್ ಬರುತ್ತದೆಂದರೆ ಫ್ರೀಲಾನ್ಸ್ ಆಗಿ ಕೆಲಸ ಸಿಗುತ್ತದೆ. ವಿಡಿಯೋ ಎಡಿಟಿಂಗ್, ಗ್ರಾಫಿಕ್ಸ್ ಡಿಸೈಸನರ್ಸ್, ಟ್ರಾನ್ಸ್ಲೇಟರ್ಸ್, ವಾಯ್ಸ್ ಓವರ್ ಆರ್ಟಿಸ್ಟ್, ಕಾಪಿ ರೈಟರ್, ಡಾಟಾ ಪ್ರೋಸೆಸಿಂಗ್ ಹೀಗೆ ವಿವಿಧ ರೀತಿಯ ಕೆಲಸಗಳು ಆನ್ಲೈನ್ನಲ್ಲಿ ಸಿಗುತ್ತವೆ. ನಿಮಗೆ ಹೊಸ ಕೆಲಸ ಸಿಗುವವರೆಗೂ ಇಂಥ ಫ್ರೀಲಾನ್ಸ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು.
ಕುತೂಹಲವೆಂದರೆ ಯಾವುದರೂ ಒಳ್ಳೆಯ ಬ್ಯುಸಿನೆಸ್ ಐಡಿಯಾ ಈ ಸಂದರ್ಭದಲ್ಲಿ ನಿಮ್ಮ ತಲೆಗೆ ಹೊಳೆಯಬಹುದು. ಹಾಗೇನಾದರೂ ಅಂಥ ಐಡಿಯಾ ಬಂದಲ್ಲಿ ಸಾಧ್ಯವಾದರೆ ಜಾರಿಗೆ ತನ್ನಿ. ಆಗಲಿಲ್ಲವೆಂದರೂ ಮುಂದೆಂದಾದರೂ ಆ ಐಡಿಯಾ ನಿಮ್ಮನ್ನು ಪ್ರಯೋಗಶೀಲರನ್ನಾಗಿ ಮಾಡಬಹುದು. ಯಾವುದಕ್ಕೂ ನೀವು ನಿರುದ್ಯೋಗಿಯಾಗಿದ್ದಾಗ ಬುದ್ಧಿ ಮತ್ತು ಮನಸನ್ನು ಮುಕ್ತವಾಗಿಟ್ಟುಕೊಂಡಿರಿ.