New Year 2023: ಹೊಸ ವರ್ಷದಲ್ಲಿ ಹಣ ಉಳಿತಾಯಕ್ಕೆ ಈ ನಿರ್ಣಯಗಳನ್ನು ಮಾಡಿ!
2022ರ ವರ್ಷ ಕೊನೆಯಾಗುತ್ತಿದೆ, 2023ರ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ. ಈ ಹೊಸ ವರ್ಷವು ನೀವು ಎಲ್ಲವನ್ನೂ ಹೊಸದಾಗಿ ಆರಂಭ ಮಾಡಲು ಇರುವ ಅವಕಾಶವಾಗಿದೆ. ಈ ಹೊಸ ವರ್ಷದಲ್ಲಿ ನಿಮ್ಮ ಹಣಕಾಸು ಗುರಿಯ ಬಗ್ಗೆ ದೃಢವಾಗಿರಿ ಹಾಗೂ ಹಣವನ್ನು ಹೇಗೆ ಉಳಿತಾಯ ಮಾಡುವುದು ಎಂದು ಈಗಲೇ ಪ್ಲ್ಯಾನ್ ಮಾಡಿಕೊಳ್ಳಿ.
ಜಾಗತಿಕವಾಗಿ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆರ್ಥಿಕ ಹಿಂಜರಿತದ ಅಪಾಯ ಎದ್ದು ಕಾಣುತ್ತಿದೆ. ಈ ನಡುವೆ ನಾವು ಈಗಲೇ ಹಣ ಉಳಿತಾಯ ಮಾಡಿದರೆ ಒಳಿತು. ಸುಖಾಸುಮ್ಮನೇ, ದುಬಾರಿ ಜೀವನಕ್ಕಾಗಿ ಹಣವನ್ನು ವ್ಯಯ ಮಾಡುವುದಕ್ಕಿಂತ ಕಷ್ಟ ಕಾಲಕ್ಕೆ ಸಹಾಯಕ್ಕೆ ಬರುವಂತೆ ಹಣ ಉಳಿತಾಯ ಮಾಡಿದರೆ ಜೀವನ ಸುಖಮಯವಾಗಲಿದೆ.
Year Ender 2022: 2023ರಲ್ಲಿ ಮನೆಯಲ್ಲಿಯೇ ಹಣ ಸಂಪಾದಿಸಲು 5 ವಿಧಾನ!
ನೀವು ಈ ಹೊಸ ವರ್ಷಕ್ಕೂ ಮುನ್ನ ಹಣವನ್ನು ಉಳಿತಾಯ ಮಾಡಲು ಕೆಲವೊಂದು ನಿರ್ಣಯಗಳನ್ನು ಕೈಗೊಂಡರೆ ಹೇಗೆ? ಇದರಿಂದ ನಿಮ್ಮ ಹಣವು ಉಳಿತಾಯವಾಗುವುದು ಖಂಡಿತ. ಕೆಲವು ಪ್ರಮುಖ ನಿರ್ಣಯಗಳನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ನಿರ್ಣಯ 1: ವೆಚ್ಚದ ಮೇಲೆ ನಿಗಾ ಇರಲಿ
ನೀವು ಎಷ್ಟು ವೆಚ್ಚ ಮಾಡುತ್ತಿದ್ದೀರಿ, ಯಾವುದಕ್ಕೆ ವೆಚ್ಚ ಮಾಡುತ್ತಿದ್ದೀರಿ ಎಂಬುವುದರ ಮೇಲೆ ನೀವು ನಿಗಾ ಇರಿಸುವುದು ಮುಖ್ಯವಾಗಿದೆ. ಇದರಿಂದಾಗಿ ನೀವು ಅನವಶ್ಯಕ ವೆಚ್ಚವನ್ನು ಕಡಿತ ಮಾಡಲು ಸಾಧ್ಯವಾಗುತ್ತದೆ. ನೀವು ಡೆಬಿಟ್ ಕಾರ್ಡ್ ಮೂಲಕ ಎಷ್ಟು ಖರ್ಚು ಮಾಡುತ್ತಿದ್ದೀರಿ, ಕ್ರೆಡಿಟ್ ಕಾರ್ಡ್ ಇದ್ದರೆ ಅದರ ಮೂಲಕ ಎಷ್ಟು ಖರ್ಚು ಮಾಡುತ್ತಿದ್ದೀರಿ, ನಗದು ಎಷ್ಟು ಖರ್ಚು ಮಾಡುತ್ತಿದ್ದೀರಿ ಎಂದು ಮಾಸಿಕ ಲೆಕ್ಕಾಚಾರವನ್ನು ಮಾಡಿಕೊಳ್ಳಿ. ಈ ರೀತಿ ವೆಚ್ಚದ ಮೇಲೆ ನಿಗಾ ಇರಿಸುವುದರಿಂದ ನಮ್ಮ ಖರ್ಚು ವೆಚ್ಚವನ್ನು ನಾವು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ.
ನಿರ್ಣಯ 2: ಅನವಶ್ಯಕ ವೆಚ್ಚಕ್ಕೆ ಬ್ರೇಕ್ ಹಾಕಿ
ನೀವು ಪ್ರತಿ ತಿಂಗಳಿನಲ್ಲಿ ಹಣವನ್ನು ಉಳಿತಾಯ ಮಾಡಬೇಕಾದರೆ ಅದಕ್ಕೆ ಉತ್ತಮ ಮಾರ್ಗ ಅನವಶ್ಯಕ ವೆಚ್ಚಕ್ಕೆ ಬ್ರೇಕ್ ಹಾಕುವುದು ಆಗಿದೆ. ನೀವು ಮಾಸಿಕವಾಗಿ ಎಷ್ಟು ಖರ್ಚು ಮಾಡುತ್ತೀರಿ ಎಂದು ನೋಡಿಕೊಳ್ಳಿ, ಅದರಲ್ಲಿ ಅನಗತ್ಯ ಖರ್ಚನ್ನು ಕಡಿತ ಮಾಡಿ. ಯಾವುದು ಅನವಶ್ಯಕ ಅನಿಸುತ್ತದೆಯೋ ಅದಕ್ಕೆ ಬ್ರೇಕ್ ಹಾಕಿ. ಹಾಗೆಯೇ ಪ್ರತಿ ದಿನ ರೆಸ್ಟೋರೆಂಟ್ ಊಟ ಆರೋಗ್ಯಕ್ಕೂ ಹಾಳು, ಅದಕ್ಕೂ ಬ್ರೇಕ್ ಹಾಕಿ. ಹಾಗೆಯೆ ಕಾರು, ಬೈಕ್ನಲ್ಲಿ ಓಡಾಟ ಕಡಿಮೆ ಮಾಡಿ. ಸಾರ್ವಜನಿಕ ವಾಹನ ಬಳಸಿ. ಇದರಿಂದಾಗಿ ಪರಿಸರವು ಸುರಕ್ಷಿತ, ನಿಮ್ಮ ಹಣವು ಉಳಿತಾಯ.
ನಿರ್ಣಯ 3: ಹಣಕಾಸು ಹೂಡಿಕೆ ಬಗ್ಗೆ ಖಚಿತತೆ
ನೀವು ಭವಿಷ್ಯದಲ್ಲಿ ಏನು ಹಣಕಾಸು ಗುರಿಯನ್ನು ಹೊಂದಿದ್ದೀರಿ, ಎಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಿ ಎಂಬುವುದು ನಿಮಗೆ ಖಚಿತವಾಗಿರಲಿ. ನೀವು ಕೊನೆಯದಾಗಿ ಯಾವಾಗ ಹಣಕಾಸು ಗುರಿಯನ್ನು ಪರಿಷ್ಕರಣೆ ಮಾಡಿದ್ದೀರಿ ನೋಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡಿಕೊಳ್ಳಿ. ಎಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ ಎಷ್ಟು ಲಾಭವಿದೆ ಎಂದು ಸರಿಯಾಗಿ ನೋಡಿಕೊಳ್ಳಿ. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ. ಆದರೆ ತಜ್ಞರ ಬಳಿ ಸಲಹೆ ಪಡೆಯದೆ ಹೂಡಿಕೆ ಮಾಡಬೇಡಿ. ಎಫ್ಡಿ ಹೂಡಿಕೆ ಮಾಡಿ, ಉತ್ತಮ ರಿಟರ್ನ್ ನೀಡುವ ಸರ್ಕಾರಿ, ಎಲ್ಐಸಿ, ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿ.
ನಿರ್ಣಯ 4: 50/30/20 ನಿಯಮದ ಪ್ರಕಾರ ಹಣ ಉಳಿತಾಯ
ನಿಮ್ಮ ಬಜೆಟ್ನ ಪ್ರಮುಖವಾದ ಭಾಗ ನೀವು ಎಷ್ಟು ಉಳಿತಾಯ ಮಾಡುತ್ತೀರಿ ಎಂಬುವುದು ಆಗಿದೆ. ನೀವು ಬೇರೆ ಬೇರೆ ಸಂದರ್ಭಕ್ಕಾಗಿ ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಮಾಸಿಕವಾಗಿ ನಿಮ್ಮ ಆದಾಯವನ್ನು 50/30/20 ನಿಯಮದ ಪ್ರಕಾರ ವ್ಯಯ ಮಾಡಬೇಕು. ಕನಿಷ್ಠ ಶೇಕಡ 20ರಷ್ಟು ಹಣವನ್ನು ನೀವು ಉಳಿತಾಯ ಮಾಡುವ ಮೊತ್ತವಾಗಿ ಪರಿಗಣಿಸಬೇಕು. ಶೇಕಡ 50ರಷ್ಟು ಮೊತ್ತವನ್ನು ಮಾಸಿಕ ಅಗತ್ಯಕ್ಕಾಗಿ ಖರ್ಚು ಮಾಡಬೇಕು. 30 ಶೇಕಡ ಹಣವು ಹೂಡಿಕೆ ಮೊದಲಾದವುಗಳಿಗೆ ಉಳಿಸಬೇಕು. ಇದರಿಂದಾಗಿ ನೀವು ಹಣ ಉಳಿತಾಯ ಮಾಡುವುದು ಸರಳ, ಸುಲಭವಾಗಲಿದೆ. ಹಾಗೆಯೇ ತುರ್ತು ಸಂದರ್ಭಕ್ಕಾಗಿಯೂ ನೀವು ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ. ಈ ಶೇಕಡ 20ರ ಉಳಿತಾಯದ ಮೊತ್ತವನ್ನು ನೀವು ತುರ್ತು ನಿಧಿಯಾಗಿಯೂ ಪರಿಗಣಿಸಬಹುದು. ಅಥವಾ ಅದರಲ್ಲೆ ವಿಭಾಗವನ್ನು ಮಾಡಬಹುದು. ನಿವೃತ್ತಿ ಜೀವನಕ್ಕಾಗಿ ಶೇಕಡ 30ರಲ್ಲಿ ಹೂಡಿಕೆ ಮಾಡಿಕೊಳ್ಳಿ. ನಿವೃತ್ತಿ ಜೀವನದಲ್ಲಿ ಹಣಕಾಸು ತೊಂದರೆ ಬಾರದಂತೆ ನೋಡಿಕೊಳ್ಳಲು ಈಗಲೇ ಹೂಡಿಕೆ ಮಾಡಿ.
ನಿರ್ಣಯ 5: ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ
ಪ್ರಸ್ತುತ ಸಾಲವನ್ನು ಪಡೆಯುವುದು ಅತೀ ಸರಳ ಹಾಗೂ ಸುಲಭವಾಗಿದೆ. ಡಿಜಿಟಲೈಜೇಷನ್ನಿಂದ ಎಲ್ಲವೂ ಕೂಡಾ ಒಂದು ಕ್ಲಿಕ್ನಲ್ಲಿ ಆಗಲಿದೆ. ಆದರೆ ನೀವು ಸಾಲವನ್ನು ಪಡೆಯುವಾಗ ಆಲೋಚನೆ ಮಾಡುವುದು ಕೂಡಾ ಮುಖ್ಯ. ತೀರಾ ಅನಿವಾರ್ಯ ಸ್ಥಿತಿ ಇಲ್ಲವಾದರೆ, ಸುಲಭವಾಗಿ ಸಾಲ ಲಭ್ಯವಿದೆ ಎಂಬ ಕಾರಣಕ್ಕೆ ಸಾಲ ಪಡೆಯಬೇಡಿ. ಇದರಿಂದಾಗಿ ನಿಮ್ಮ ಉಳಿತಾಯದ ಮೇಲೆ ಪೆಟ್ಟು ಬೀಳಲಿದೆ. ಉಳಿತಾಯದ ಮೊತ್ತದ ಸಾಲ ಮರುಪಾವತಿಗಾಗಿ ಹೋಗಲಿದೆ. ಒಂದು ವೇಳೆ ತೀರಾ ಅಗತ್ಯವಾಗಿ ಸಾಲವನ್ನು ಪಡೆದಿದ್ದರೆ ಸಾಲ ಹೊರೆ ಕಡಿಮೆ ಮಾಡಲೆಂದು ಮಾಸಿಕ ಇಎಂಐ ಪಾವತಿ ಜೊತೆಗೆ ಬೇರೆ ಹೆಚ್ಚುವರಿ ಮೊತ್ತ ಉಳಿತಾಯ ಮಾಡಿ, ಸಾಲವನ್ನು ಮರುಪಾವತಿ ಮಾಡುತ್ತಾ ಬನ್ನಿ. ಒಮ್ಮೆಲ್ಲೆ ಕೊಂಚ ಅಧಿಕ ಮೊತ್ತವನ್ನು ಪಾವತಿಸುವುದರಿಂದಾಗಿ ನಿಮ್ಮ ಸಾಲದ ಹೊರೆ ಕಡಿಮೆಯಾಗಲಿದೆ. ಹಾಗೆಯೇ ಯಾವೆಲ್ಲ ಸಾಲ ಇದೆ ಲೆಕ್ಕ ಹಾಕಿ, ಪಟ್ಟಿ ಮಾಡಿ ಅದನ್ನು ಮರುಪಾವತಿ ಮಾಡುತ್ತಾ ಹೋಗಿ.
ನಿರ್ಣಯ 6: ಕುಟುಂಬಕ್ಕಾಗಿ ಆರೋಗ್ಯ, ಜೀವ ವಿಮೆ ಇರಲಿ
ವಿಮೆ ಎಂಬುವುದು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸುತ್ತದೆ. ಕುಟುಂಬ ವಿಮೆಯು ನಿಮ್ಮ ಮಕ್ಕಳನ್ನು ಮಾತ್ರವಲ್ಲ ಕುಟುಂಬವನ್ನೇ ಸುರಕ್ಷಿತವಾಗಿರಿಸುತ್ತದೆ. ವಿಮೆ ಒಂದು ಬಿಲ್ಡಿಂಗ್ನ ಫೈರ್ ಅಲರಾಂ ಇದ್ದ ಹಾಗೆ. ಇದನ್ನು ನಾವು ಪ್ರತಿ ದಿನ ಬಳಸುವುದಿಲ್ಲ. ಆದರೆ ಇದುವೇ ನಮ್ಮ ಜೀವನವನ್ನು, ಜೀವವನ್ನು ರಕ್ಷಣೆ ಮಾಡುತ್ತದೆ. ಬೇರೆ ಬೇರೆ ವಿಮೆ ಇದೆ. ನಾವು ಆರೋಗ್ಯ ವಿಮೆ ಹಾಗೂ ಜೀವ ವಿಮೆ ಮಾಡಿಸಿದರೆ, ಆರೋಗ್ಯ ತುರ್ತು ಸಂದರ್ಭದಲ್ಲಿ ಸಹಾಯವಾಗಲಿದೆ. ನಾವು ಸಾಲದ ಹೊರೆಯಲ್ಲಿ ಬೀಳದಂತೆ ಈ ವಿಮೆಯು ನೋಡಿಕೊಳ್ಳಲಿದೆ.