ಪಿಎಂ ಉಜ್ವಲ ಯೋಜನೆ: ಪ್ರಯೋಜನ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?
ಪ್ರಧಾನ ಮಂತ್ರಿ ನರೇಂದ್ರ ಮೋದಿ 2016ರ ಮೇ 1ರಂದು ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಆರಂಭ ಮಾಡಿದ್ದಾರೆ. ಆರಂಭದಲ್ಲಿ ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದ್ದು, 2021ರಲ್ಲಿ ಉಜ್ವಲ ಯೋಜನೆ 2.0 ಅನ್ನು ಆರಂಭಿಸಲಾಗಿದೆ.
ಈ ಯೋಜನೆಯು 2016ರಲ್ಲಿ ಆರಂಭವಾಗಿದ್ದು ಏಪ್ರಿಲ್ 3, 2017ರವರೆಗೆ 20 ಲಕ್ಷ ಎಲ್ಪಿಜಿ ಸಂಪರ್ಕವನ್ನು ಸಂಪೂರ್ಣ ಮಾಡಲಾಗಿದೆ. ಇನ್ನು ಈ ಯೋಜನೆ ಆರಂಭ ಮಾಡಿ ನಾಲ್ಕೈದು ತಿಂಗಳ ಒಳಗೆ ಸುಮಾರು ಒಂದು ಕೋಟಿಯಷ್ಟು ಫಲಾನುಭವಿಗಳು ಸಂಪರ್ಕಕ್ಕಾಗಿ ನೋಂದಾವಣೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಈ ಯೋಜನೆಯಡಿಯಲ್ಲಿ ಕೆಲವು ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ ಮೇಲೆ ಇನ್ನೂರು ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ಹೊಸ ಎಲ್ಪಿಜಿ ಸಂಪರ್ಕ ದರ ಏರಿಕೆ: ಕನೆಕ್ಷನ್ ಪಡೆಯುವುದು ಹೇಗೆ?
2021ರ ಆಗಸ್ಟ್ 10ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) 2.0 ಆರಂಭ ಮಾಡಿದ್ದಾರೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಎಲ್ಪಿಜಿ ಸಂಪರ್ಕ ಕಲ್ಪಿಸುವ ಮೂಲಕ ಪಿಎಂಯುವೈ 2.0 ಯೋಜನೆಯನ್ನು ಉದ್ಘಾಟನೆ ಮಾಡಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲಿ ಉಜ್ವಲ ಯೋಜನೆ ಫಲಾನುಭವಿಗಳ ಜೊತೆ ಮಾತನಾಡಿದ್ದಾರೆ. ಪ್ರಸ್ತುತ ಎಲ್ಪಿಜಿ ಹೊಸ ಸಂಪರ್ಕ ದರವನ್ನು ಏರಿಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹೊರೆಯನ್ನು ಕಡಿಮೆ ಮಾಡಲು ಈ ಉಜ್ವಲ ಯೋಜನೆಯ ಬಗ್ಗೆ ತಿಳಿದುಕೊಳ್ಳಿ...
ಏನಿದು ಉಜ್ವಲ ಯೋಜನೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಹಯೋಗದೊಂದಿಗೆ ಆರಂಭ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ದೇಶೀಯ ಅಡುಗೆ ಅನಿಲ ಅಂದರೆ ಎಲ್ಪಿಜಿ ಸಂಪರ್ಕವನ್ನು ಒದಗಿಸುತ್ತದೆ. ಉಜ್ವಲ ಯೋಜನೆ 2.0 ಅಡಿಯಲ್ಲಿ ಫಲಾನುಭವಿಗಳಿಗೆ ಮೊದಲ ಸಿಲಿಂಡರ್ ಅನ್ನು ಉಚಿತವಾಗಿ ನೀಡುವುದರೊಂದಿಗೆ, ಸ್ಟವ್ ಅನ್ನು ಕೂಡಾ ಉಚಿತವಾಗಿ ನೀಡಲಾಗುತ್ತದೆ.
ಉಜ್ವಲ ಯೋಜನೆ 2.0 ಎಂದರೇನು?
ಉಜ್ವಲ ಯೋಜನೆ 2.0 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಸುಮಾರು ಒಂದು ಕೋಟಿಗೂ ಅಧಿಕ ಕುಟುಂಬಕ್ಕೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಹಾಗೆಯೇ ಉಚಿತ ಎಲ್ಪಿಜಿ ಸಿಲಿಂಡರ್ ಹಾಗೂ ಸ್ಟವ್ ನೀಡುವುದು ಕೂಡ ಈ ಯೋಜನೆಯ ಭಾಗವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಒಂದು ಕೋಟಿ ಫಲಾನುಭವಿಗಳಿಗೆ ಎಲ್ಪಿಜಿ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದವು. ಈ ಯೋಜನೆಯ ಮೂಲಕ ಈಗಾಗಲೇ ಸುಮಾರು ಎಂಟು ಕೋಟಿಗೂ ಅಧಿಕ ಮಂದಿಗೆ ಉಚಿತ ಎಲ್ಪಿಜಿ ಸಂಪರ್ಕ ಲಭ್ಯವಾಗಿದೆ.
ಉಜ್ವಲ ಯೋಜನೆಯ ಲಾಭವೇನು?
ಈ ಯೋಜನೆಯು ಫ್ರೀ ಕಾಸ್ಟ್ ರಿಫಿಲ್, ಸ್ಟವ್ ಜೊತೆಗೆ ಡಿಪಾಸಿಟ್ ಇಲ್ಲದೆ ಎಲ್ಪಿಜಿ ಸಂಪರ್ಕ ಪಡೆಯಲು ಜನರಿಗೆ ಸಹಕಾರಿಯಾಗಿದೆ. ಪ್ರತಿ ಸಿಲಿಂಡರ್ ಸಂಪರ್ಕಕ್ಕೆ ಈ ಯೋಜನೆಯ ಮೂಲಕ ಭದ್ರತಾ ಠೇವಣಿಯನ್ನು ನೀಡಲಾಗುತ್ತದೆ. ಮೊದಲ ಸಂಪರ್ಕದ ವೇಳೆ ಸಿಲಿಂಡರ್, ರೆಗ್ಯೂಲೇಟರ್, ಪಾಸ್ಬುಕ್, ಸ್ಟವ್ ಇತರ ವಸ್ತುಗಳು ಉಚಿತವಾಗಿ ಲಭ್ಯವಾಗಲಿದೆ. ದೇಶದ ಎಲ್ಲಾ ಬಿಪಿಎಪ್ ಕಾರ್ಡ್ ಹೊಂದಿರುವವರ ಮನೆಯಲ್ಲಿ ಎಲ್ಪಿಜಿ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಈ ಮೂಲಕ ಮಹಿಳೆಯರ ಆರೋಗ್ಯ ಸುಧಾರಣೆಯ ಗುರಿಯನ್ನು ಕೂಡಾ ಹೊಂದರಲಾಗಿದೆ. ದೇಶದಲ್ಲಿ ಇಂದು ಕೂಡಾ ಲಕ್ಷಾಂತರ ಜನರು ಕಟ್ಟಿಗೆ, ಸೀಮೆಎಣ್ಣೆ, ಕಲ್ಲಿದ್ದಲು, ಬೆರಣಿಯನ್ನು ಅವಲಂಬಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಯೋಜನೆ ಮಹತ್ವಪೂರ್ಣವಾಗಿದೆ.
ಪಿಎಂ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅತೀ ಅತೀ ಹೆಚ್ಚು ದಾಖಲೆಗಳ ಅಗತ್ಯವಿಲ್ಲ. ಇನ್ನು ವಲಸೆ ಕಾರ್ಮಿಕರು ಪಡಿತರ ಚೀಟಿ ಅಥವಾ ಇತರ ವಿಳಾಸ ಪುರಾವೆಗಳನ್ನು ಸಲ್ಲಿಕೆ ಮಾಡಬೇಕಾಗಿಲ್ಲ. ಅವರಿಗೆ ಕುಟುಂಬದ ಮಾಹಿತಿ ಹಾಗೂ ಸದ್ಯ ತಂಗಿರುವ ವಿಳಾಸದ ಪುರಾವೆಯನ್ನು ಸಲ್ಲಿಸಿದರೆ ಸಾಕಾಗುತ್ತದೆ.
ಇನ್ನು ಅರ್ಜಿ ಸಲ್ಲಿಕೆ ಮಾಡುವವರು ಮಹಿಳೆಯರು ಆಗಿರಬೇಕು ಹಾಗೂ ಅವರ ವಯಸ್ಸು ಹದಿನೆಂಟು ವರ್ಷ ಮೇಲ್ಪಟ್ಟಿರಬೇಕು. ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಬೇರೆ ಎಲ್ಪಿಜಿ ಬುಕ್ಕಿಂಗ್ ಇರಬಾರದು. ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿರಬೇಕು. ನಾವು ಸ್ಥಳೋಯ ಎಲ್ಪಿಜಿ ವಿತರಣಾ ಸಂಸ್ಥೆಗಳಿಗೆ ಭೇಟಿ ನಡುವ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಆನ್ಲೈನ್ನಲ್ಲಿಯಾದರೆ ಅರ್ಜಿ ಸಲ್ಲಿಕೆದಾರರು pmujjwalayojana.com ಗೆ ಭೇಟಿ ನೀಡಬಹುದು. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬಹುದು. ಆ ಬಳಿಕ ಆ ಅರ್ಜಿಯನ್ನು ಸಮೀಪದ ಎಲ್ಪಿಜಿ ಸೆಂಟರ್ನಲ್ಲಿ ನೀಡಬೇಕಾಗುತ್ತದೆ.
ಉಜ್ವಲ ಯೋಜನೆಯ ಮೈಲಿಗಲ್ಲು
* 2016ರಲ್ಲಿ ಉಜ್ವಲ ಯೋಜನೆ ಆರಂಭವಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಐದು ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ.
* 2018ರಲ್ಲಿ ಈ ಯೋಜನೆಗೆ ಇನ್ನೂ ಏಳು ವಿಭಾಗದ ಮಹಿಳೆಯರಿಗೆ ವಿಸ್ತರಣೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಮೊದಲಾದ ವರ್ಗಗಳ ಮಹಿಳೆಯರಿಗೆ ವಿಸ್ತರಣೆ ಮಾಡಲಾಗಿದೆ.
* ಇನ್ನು ಆ ಬಳಿಕ ಈ ಯೋಜನೆಯಲ್ಲಿ ಎಂಟು ಮಿಲಿಯನ್ ಎಲ್ಪಿಜಿ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ನಿಗದಿತ ದಿನದ ಏಳು ತಿಂಗಳು ಮುನ್ನವೇ ತಲುಪಲಾಗಿದೆ.
* ಇನ್ನು 2021-22 ವರ್ಷದಲ್ಲಿ ಇನ್ನೂ ಒಂದು ಕೋಟಿ ಗುರಿಯನ್ನು ನಿಗದಿ ಮಾಡಲಾಗಿದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.
* ಈಗ ವಲಸೆ ಕಾರ್ಮಿಕರಿಗೂ ಕೂಡಾ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.