Dhanteras : ಧನತ್ರಯೋದಶಿ ದಿನವೇ ಜನರು ಚಿನ್ನ ಖರೀದಿಸುವುದೇಕೆ?
ಇನ್ನೆರಡು ವಾರದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಲಿದೆ. ಇದಕ್ಕಾಗಿ ಈಗಾಗಲೇ ಹಲವಾರು ಮಂದಿ ತಯಾರಿ ನಡೆಸಿದ್ದಾರೆ. ತಾವು ಉದ್ಯೋಗ ಮಾಡುವ ಸಂಸ್ಥೆಯಲ್ಲಿ ರಜೆಗಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಇದರೊಂದಿಗೆ ಮನೆಯಲ್ಲಿ ಅಲಂಕಾರ ಹೇಗೆ ಮಾಡುವುದು ಏನೆಲ್ಲ ಬೇಕು ಎಂಬ ಲೀಸ್ಟ್ ಅನ್ನು ಕೆಲವರು ಮಾಡಿಕೊಂಡಿದ್ದರೆ, ಇನ್ನು ಕೆಲವರು ಈಗಾಗಲೇ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿ, ತಯಾರಿ ಶುರು ಮಾಡಿದ್ದಾರೆ. ಈ ನಡುವೆ ಧನತ್ರಯೋದಶಿಯದ್ದೇ ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ. ಅದು ಯಾಕೆ ಗೊತ್ತಾ?
ಧನತ್ರಯೋದಶಿ ಅಥವಾ ಧನ್ತೇರಸ್ ಎಂದು ಕರೆಯಲ್ಪಡುವ ಆಚರಣೆಯನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಣೆ ಮಾಡಲಾಗುತ್ತದೆ. ಈ ದಿನ ಮನೆಗೆ ಯಾವುದೇ ವಸ್ತುಗಳನ್ನು ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ಹಾಗೂ ಕುಬೇರನನ್ನು ಪೂಜಿಸುವ ಈ ಹಬ್ಬದಲ್ಲಿ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಹಬ್ಬವು ಹಿಂದೂಗಳಲ್ಲಿ ಅತೀ ಪ್ರಮುಖ ಹಬ್ಬವಾಗಿದೆ. ಅದರಲ್ಲೂ ವ್ಯಾಪಾರ ನಡೆಸುವವರು ಈ ಹಬ್ಬದ ವೇಳೆ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸುತ್ತಾರೆ.
ಈ ಧನತ್ರಯೋದಶಿ ಸಂದರ್ಭ ಚಿನ್ನ ಖರೀದಿ ಸೂಕ್ತವೇ?
ಈ ವರ್ಷ (2022) ಅಕ್ಟೋಬರ್ 23ರಂದು ಧನತ್ರಯೋದಶಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಜನರು ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಈ ದಿನದಂದೇ ಚಿನ್ನ ಖರೀದಿ ಮಾಡುವುದು ಏಕೆ ಮಂಗಳಕರ ಎಂದು ನಂಬಲಾಗಿದೆ, ಈ ಹಬ್ಬವನ್ನು ಮೊದಲು ಯಾವಾಗ ಆರಂಭ ಮಾಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಚಿನ್ನದ ಮೇಲೆ ಮೋಹ
ಭಾರತದಲ್ಲಿ ಯಾವುದೇ ಧರ್ಮದವರಾಗಲಿ ಚಿನ್ನದ ಮೇಲೆ ಅತೀವವಾದ ಮೋಹವಿದೆ. ಯಾವುದೇ ಹಬ್ಬ, ಸಮಾರಂಭವಿದ್ದರೆ ಚಿನ್ನವನ್ನು ಖರೀದಿ ಮಾಡುವುದು ವಾಡಿಕೆಯಾಗಿದೆ. ಭಾರತವು ಚೀನಾದ ಬಳಿಕ ಅತೀ ಹೆಚ್ಚು ಚಿನ್ನವನ್ನು ಉಪಯೋಗ ಮಾಡುವ ದೇಶವಾಗಿದೆ. ಹಾಗೆಯೇ ಅತೀ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಮಕರ ಸಂಕ್ರಾಂತಿ, ದಸರಾ, ನವರಾತ್ರಿ, ದೀಪಾವಳಿ, ಅಕ್ಷಯ ತೃತೀಯ, ಧನತ್ರಯೋದಶಿ ಹೀಗೆ ಹಬ್ಬಗಳ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಾರೆ. ಇದರ ಹಿಂದೆ ಹಲವಾರು ನಂಬಿಕೆಗಳು ಕೂಡಾ ಇದೆ. ಇನ್ನು ಧನತ್ರಯೋದಶಿ ದಿನವೇ ಚಿನ್ನದ ಖರೀದಿ ಭಾರೀ ಪ್ರಮಾಣಕ್ಕೆ ಏರಿಕೆಯಾಗುತ್ತದೆ.
ದೀಪಾವಳಿ ಸಂದರ್ಭದಲ್ಲಿ ಹಾಲ್ ಮಾರ್ಕ್ ಆಭರಣಗಳನ್ನೇ ಖರೀದಿಸಿ!
ಈ ಹಬ್ಬದ ಹಿಂದೆ ಇರುವ ಲೆಜೆಂಡ್ ಯಾರು?
ಒಂದು ಕಾಲದಲ್ಲಿ ಹಿಮ ಎಂಬ ರಾಜ ಇದ್ದನು. ಈತನಿಗೆ 16 ವರ್ಷದ ಮಗನಿದ್ದನು. ರಾಜ ತನ್ನ ಪುತ್ರನಿಗೆ ವಿವಾಹ ಮಾಡಿಸಿದನು. ಆದರೆ ಮದುವೆಯ ನಾಲ್ಕನೇ ದಿನವೇ ರಾಜಕುಮಾರ (ರಾಜನ ಮಗ) ಹಾವು ಕಚ್ಚಿ ಸಾವನ್ನಪ್ಪುವುದಾಗಿ ಜ್ಯೋತಿಷಿಗಳು ಭವಿಷ್ಯ ನುಡಿದರು. ಇದು ರಾಜ ಹಾಗೂ ರಾಜಕುಮಾರನ ಪತ್ನಿಗೆ ತಲೆನೋವನ್ನು ಉಂಟು ಮಾಡಿತು. ವಧು ಅತೀ ಬುದ್ಧಿವಂತೆ ಆಗಿದ್ದಳು. ತನ್ನ ಪತಿಯ ಪ್ರಾಣವನ್ನು ಉಳಿಸಲು ಆಕೆ ಒಂದು ಉಪಾಯವನ್ನು ಮಾಡಿದಳು ಎಂಬ ಕಥೆಯಿದೆ. ರಾಜಕುಮಾರ ಯಾವ ದಿನ ಮೃತಪಡುತ್ತಾನೆ ಎಂದು ಜ್ಯೋತಿಷಿಗಳು ಹೇಳಿದ್ದರೋ ಆ ದಿನ ವಧು ಎಲ್ಲ ಆಭರಣಗಳನ್ನು ಸಂಗ್ರಹಿದಳು, ಅದನ್ನು ಮುಖ್ಯ ಬಾಗಿಲಿನ ಮುಂಭಾಗದಲ್ಲೇ ಇರಿಸಿದಳು. ರಾಜಕುಮಾರನ ಬಳಿ ನಿದ್ದೆಗೆ ಜಾರದಂತೆ ಹೇಳಿ, ಅವನೊಂದಿಗೆ ಕೂತು ಕಥೆಗಳನ್ನು ಹೇಳುತ್ತಿದ್ದಳು, ಹಾಡು ಹಾಡುತ್ತಿದ್ದಳು. ಆ ರಾತ್ರಿ ಪೂರ್ತಿ ದಂಪತಿಗಳು ನಿದ್ದೆ ಮಾಡಿಲ್ಲ.
ಯಮ ಬಂದಾಗ ಏನಾಗುತ್ತದೆ?
ರಾಜಕುಮಾರನ ಪ್ರಾಣವನ್ನು ಪಡೆಯಲೆಂದು ಯಮನು ಅರಮನೆಗೆ ಆಗಮಿಸುತ್ತಾನೆ. ರಾಜಕುಮಾರನಿಗೆ ಕಡಿಯಬೇಕಾದ ಹಾವನ್ನು ಕೂಡಾ ತಂದಿರುತ್ತಾನೆ. ಹಾವು ಅರಮನೆಗೆ ಪ್ರವೇಶ ಮಾಡುವಾಗ ಆಭರಣಗಳು ಅದಕ್ಕೆ ಅಡ್ಡಲಾಗುತ್ತದೆ. ಆಭರಣಗಳ ಹೊಳಪು ಹಾವಿನ ದೃಷ್ಟಿಯೇ ಕುರುಡಾಗುವಂತೆ ಮಾಡುತ್ತದೆ. ಹಾವಿಗೆ ಅರಮನೆಯ ಒಳಗೆ ಪ್ರವೇಶ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಈ ವೇಳೆಯೇ ಹಾವು ವಧುವಿನ ಸುಮಧುರ ಸಂಗೀತಕ್ಕೆ ತಲೆಬಾಗುತ್ತದೆ. ಇಡೀ ರಾತ್ರಿ ಹಾವು ಮುಖ್ಯ ದ್ವಾರದಲ್ಲೇ ಬಾಕಿಯಾಗುತ್ತದೆ. ಆದರೆ ಅಷ್ಟರಲ್ಲಿ ರಾಜಕುಮಾರ ಸಾವನ್ನಪ್ಪಬೇಕಾಗಿದ್ದ ಸಮಯವು ಮೀರಿ ಹೋಗಿರುತ್ತದೆ. ಈ ರೀತಿ ತನ್ನ ಬುದ್ಧಿವಂತೆಯಿಂದ ರಾಜಕುಮಾರನ ಪ್ರಾಣವನ್ನು ವಧು ಉಳಿಸಿದಳು ಎಂಬ ಕಥೆಯಿದೆ.
ಧನತ್ರಯೋದಶಿ ಸಮಾರಂಭ
ಈ ಕಥೆಗೂ ಧನತ್ರಯೋದಶಿ ಹಬ್ಬಕ್ಕೂ ಏನು ನಂಟು ಎಂಬ ಗೊಂದಲವೇ?. ಇಲ್ಲಿದೆ ವಿವರ ನೋಡಿ. ಆ ಬುದ್ಧಿವಂತೆ ವಧು ತನ್ನ ಪತಿಯನ್ನು ಉಳಿಸಿಕೊಳ್ಳಲು ಚಿನ್ನದ ಆಭರಣಗಳನ್ನು ಬಳಕೆ ಮಾಡಿದ ಸಂಕೇತವಾಗಿ ಪ್ರತಿ ವರ್ಷ ಆ ದಿನದಂದೇ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಚಿನ್ನವನ್ನು ಪೂಜಿಸಲಾಗುತ್ತದೆ. ಹಾಗೆಯೇ ಈ ದಿನ ಚಿನ್ನವನ್ನು ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ಜನರು ಈ ಶುಭದಿನದಂದೇ ಚಿನ್ನವನ್ನು ಖರೀದಿ ಮಾಡುತ್ತಾರೆ.