ಕೇಂದ್ರ ಬಜೆಟ್ 2019: ಮೋದಿ ಸರ್ಕಾರ ಬಜೆಟ್ನಲ್ಲಿ ಏನೇನೆಲ್ಲ ಘೋಷಿಸಬಹುದು?
ಇದು ಚುನಾವಣೆಯ ವರ್ಷವಾಗಿರುವುದರಿಂದ ಬಹುತೇಕ ಈ ಬಾರಿ ಮತದಾರರ ಓಲೈಕೆಗಾಗಿ ಸರಕಾರ ತನ್ನ ಬಜೆಟ್ನಲ್ಲಿ ಕೆಲ ಮಹತ್ವದ ಅಂಶಗಳನ್ನು ಘೋಷಿಸಬಹುದಾಗಿದೆ.
ಕೇಂದ್ರ ಸರಕಾರದ ಬಜೆಟ್ ತಯಾರಿಕೆಯು ಬಹುದೊಡ್ಡ ಕಾರ್ಯವಾಗಿದ್ದು, ಇದರಲ್ಲಿ ಸುಮಾರು 100 ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿರುತ್ತಾರೆ. ಈ ಎಲ್ಲ ಅಧಿಕಾರಿಗಳು ಬಜೆಟ್ ಮಂಡನೆ ಆಗುವವರೆಗೂ ಹೊರ ಜಗತ್ತಿನ ಬಹುತೇಕ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿರುತ್ತಾರೆ ಎಂಬುದು ವಿಶಿಷ್ಟವಾಗಿದೆ. ಬಜೆಟ್ನಲ್ಲಿರುವ ಯಾವುದೇ ವಿಷಯಗಳು ಸೋರಿಕೆಯಾಗದಂತೆ ತಡೆಗಟ್ಟಲು ಇಂಥದೊಂದು ಕ್ರಮ ಅಗತ್ಯವಾಗಿದೆ.
ಇದು ಚುನಾವಣೆಯ ವರ್ಷವಾಗಿರುವುದರಿಂದ ಬಹುತೇಕ ಈ ಬಾರಿ ಮತದಾರರ ಓಲೈಕೆಗಾಗಿ ಸರಕಾರ ತನ್ನ ಮಧ್ಯಂತರ ಬಜೆಟ್ನಲ್ಲಿ ಕೆಲ ಮಹತ್ವದ ಅಂಶಗಳನ್ನು ಘೋಷಿಸಬಹುದಾಗಿದೆ.
ಅರ್ಥಶಾಸ್ತ್ರ ಪರಿಣಿತರ ಪ್ರಕಾರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಬಜೆಟ್ನಲ್ಲಿ ಯಾವೆಲ್ಲ ಅಂಶಗಳಿಗೆ ಹೆಚ್ಚು ಒತ್ತು ನೀಡಬಹುದು ಎಂಬುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ನೀವೂ ಓದಿ ಕುತೂಹಲ ತಣಿಸಿಕೊಳ್ಳಿ. ಕೇಂದ್ರ ಬಜೆಟ್ ಬಗ್ಗೆ ತಿಳಿಯೋಣ ಬನ್ನಿ..
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಕೇಂದ್ರ ಬಜೆಟ್ನಲ್ಲಿ ಇರಬಹುದಾದ ಪ್ರಮುಖ ಸಂಗತಿಗಳು:
1. ರೈತರಿಗೆ ಪರಿಹಾರ ಕ್ರಮಗಳು
ಇತ್ತೀಚೆಗೆ ಮುಗಿದ ಕೆಲ ರಾಜ್ಯಗಳ ವಿಧಾನಸಭೆಯಲ್ಲಿ ಬಿಜೆಪಿ ಸೋತಿದೆ. ಮಧ್ಯ ಪ್ರದೇಶ, ಛತ್ತೀಸಗಢ ಹಾಗೂ ರಾಜಸ್ಥಾನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಲೇ ಆಯಾ ರಾಜ್ಯಗಳಲ್ಲಿನ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ಇದರಿಂದಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ರೈತರಿಗಾಗಿ ಯಾವುದಾದರೂ ದೊಡ್ಡ ಪ್ರಮಾಣದ ನೆರವು ಅಥವಾ ಪರಿಹಾರದ ಕ್ರಮಗಳನ್ನು ಘೋಷಣೆ ಮಾಡುವ ಒತ್ತಡಕ್ಕೆ ಸಿಲುಕಿದೆ.
ಈ ಬಾರಿಯ ಬಜೆಟ್ ರೈತ ಕೇಂದ್ರಿತವಾಗಿರುತ್ತದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಸಾಲ ಮನ್ನಾ ಸೇರಿದಂತೆ ರೈತರಿಗೆ ನೇರ ನಗದು ವರ್ಗಾವಣೆ ಯೋಜನೆಯನ್ನು ಸರಕಾರ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿತ್ತುವ ಕಾಲದಲ್ಲಿ ರೈತರಿಗೆ ಸಾಲ ಸಿಗುವಂತಾಗಲು ಸಾಲ ಯೋಜನೆಗಳನ್ನು ಸರಳೀಕರಣಗೊಳಿಸಬಹುದು.
ಪಿಟಿಐ ಸುದ್ದಿಸಂಸ್ಥೆಯ ವರದಿಯ ಪ್ರಕಾರ ಕೃಷಿ ವಲಯಕ್ಕೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು ಶೇ. 10 ರಷ್ಟು ಅಂದರೆ 1 ಲಕ್ಷ ಕೋಟಿ ರೂಪಾಯಿ ಹೆಚ್ಚಿಸುವ ಸಾಧ್ಯತೆಗಳಿವೆ. ಹೀಗಾದಲ್ಲಿ ಒಟ್ಟಾರೆ ಕೃಷಿ ಸಾಲದ ಮಿತಿ 12 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಲಿದೆ.
2. ತೆರಿಗೆ ವಿನಾಯಿತಿಗಳು
ಹಣಕಾಸು ವರ್ಷಾರಂಭದಿಂದ ಹೊಸ ಸರಕಾರ ಅಧಿಕಾರಕ್ಕೆ ಬರುವವರೆಗೆ ಖರ್ಚು ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯಲು ಮಂಡಿಸಲಾಗುತ್ತಿರುವ ಬಜೆಟ್ನಲ್ಲಿ ತೆರಿಗೆ ಪಾವತಿದಾರರಿಗೆ ಕೆಲ ವಿನಾಯಿತಿಗಳನ್ನು ಘೋಷಿಸಬಹುದಾಗಿದೆ.
ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ದೊಡ್ಡ ಪ್ರಮಾಣದ ತೆರಿಗೆ ಕಡಿತ ಮಾಡದಿರುವುದರಿಂದ ತೆರಿಗೆ ಪಾವತಿದಾರರಲ್ಲಿ ಸರಕಾರದ ಬಗ್ಗೆ ಒಂದು ರೀತಿಯ ಅಸಮಾಧಾನ ಮೂಡಿದೆ. ಹೀಗಾಗಿ ಈಗಿರುವ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಸುವ ಸಾಧ್ಯತೆ ಇದೆ.
ಅಲ್ಲದೆ ಈಗಿನ ವೈಯಕ್ತಿಕ ಆದಾಯ ತೆರಿಗೆಯನ್ನು ಶೇ. 30 ರಿಂದ 25 ಕ್ಕೆ ಇಳಿಸಬಹುದಾಗಿದೆ.
ಆದರೆ ಇಲ್ಲಿಯವರೆಗೂ ಯಾವುದೇ ಮಧ್ಯಂತರ ಬಜೆಟ್ಗಳಲ್ಲಿ ತೆರಿಗೆ ನೀತಿಯನ್ನು ಮಾರ್ಪಾಡು ಮಾಡಿದ ಉದಾಹರಣೆ ಇಲ್ಲ. ಆದಾಗ್ಯೂ ನರೇಂದ್ರ ಮೋದಿ ನೇತೃತ್ವದ ಸರಕಾರ ಈ ವಿಷಯದಲ್ಲಿ ಏನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
3. ತೆರಿಗೆ ಕಡಿತ ಮಿತಿ ಹೆಚ್ಚಳ
ಆದಾಯ ತೆರಿಗೆ ವಿನಾಯಿತಿಯ ಮಟ್ಟವನ್ನು ಹೆಚ್ಚಿಸುವ ಆಲೋಚನೆಯಲ್ಲಿರುವ ಸರಕಾರ ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆಯಡಿಯ ವಿವಿಧ ತೆರಿಗೆಗಳ ವಿನಾಯಿತಿ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ಆದಾಯ ತೆರಿಗೆ ಕಾಯ್ದೆ 80-ಸಿ ಅಡಿಯಲ್ಲಿ ಈಗಿರುವ ತೆರಿಗೆ ವಿನಾಯಿತಿ ಮಿತಿಯನ್ನು 1,50,000 ರೂ.ಗಳಿಂದ 2,50,000 ಗಳಿಗೆ ಹೆಚ್ಚಿಸಬೇಕೆಂದು ದೇಶದ ಪ್ರಮುಖ ಕೈಗಾರಿಕಾ ಒಕ್ಕೂಟಗಳು ಸರಕಾರಕ್ಕೆ ಒತ್ತಾಯಿಸಿವೆ.
4. ಆರೋಗ್ಯಕ್ಕೆ ಹೆಚ್ಚಿನ ಒತ್ತು
ದೇಶದ ಬಡಜನರ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು 2018 ರಲ್ಲಿನ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಈ ಬಾರಿ ಆರೋಗ್ಯ ಕ್ಷೇತ್ರಕ್ಕಾಗಿ ಮತ್ತಷ್ಟು ಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ.
ಆದಾಯ ತೆರಿಗೆ ಕಾಯ್ದೆ 80ಡಿ ಯಡಿ ವೈದ್ಯಕೀಯ ಚಿಕಿತ್ಸೆ ಹಾಗೂ ರೋಗಪೂರ್ವ ಚೆಕ್ ಅಪ್ಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬಹುದಾಗಿದೆ.
5. ಬಡವರಿಗಾಗಿ ಸಾರ್ವತ್ರಿಕ ಆದಾಯ ಯೋಜನೆ (Universal basic income model -UBI)
2019ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೇಂದ್ರ ಸರಕಾರ ಬಡವರಿಗಾಗಿ ಸಾರ್ವತ್ರಿಕ ಆದಾಯ ಯೋಜನೆ ಯೊಂದನ್ನು ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಸರಕಾರ ಆಗಾಗ ಇದರ ಬಗ್ಗೆ ಹೇಳಿಕೊಳ್ಳುತ್ತ ಬಂದಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿಗದಿತ ಆದಾಯಯನ್ನು ಖಾತರಿಪಡಿಸುವುದು ಸಾರ್ವತ್ರಿಕ ಆದಾಯ ಯೋಜನೆಯ ಗುರಿಯಾಗಿದೆ.
ಕೊನೆಮಾತು
ಕೆಲ ಹಣಕಾಸು ತಜ್ಞರು ಇಂಥ ಯಾವುದೇ ಕ್ರಮಗಳನ್ನು ಜಾರಿಗೆ ತರುವುದು ಮೂರ್ಖತನ ಎಂದು ಜರಿದಿದ್ದರೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎನ್ಡಿಎ ಸರಕಾರ ಇಂಥದೊಂದು ಕ್ರಮಕ್ಕೆ ಮುಂದಾದರೂ ಆಶ್ಚರ್ಯ ಪಡಬೇಕಿಲ್ಲ. ಫೆಬ್ರುವರಿ 1 ರಂದು ಬಜೆಟ್ ಮಂಡನೆ ಆಗಲಿದೆ. ಬಜೆಟ್ನಲ್ಲಿ ದೇಶದ ಜನರಿಗಾಗಿ ಏನೇನು ಇರಲಿದೆ ಎಂಬುದನ್ನು ತಿಳಿಯಲು ಅಲ್ಲಿಯವರೆಗೆ ಕಾಯುವುದು ಅನಿವಾರ್ಯ.