ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು, ರೈತರಿಗಾಗಿ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು, ರೈತರಿಗಾಗಿ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರೈತರ ಸಾಲಮನ್ನಾಕ್ಕಾಗಿ ಒಟ್ಟು ರೂ. 12,650 ಕೋಟಿ ಮೀಸಲಿಟ್ಟಿದ್ದಾರೆ. ಶೇ. 3 ಬಡ್ಡಿದರದಲ್ಲಿ ಸಣ್ಣ ರೈತರಿಗೆ ಗೃಹಲಕ್ಷ್ಮೀ ಸಾಲ ಹಾಗು ರೈತ ಕಣಜ ಯೋಜನೆಗಾಗಿ ರೂ. ೫೧೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಸಾಲ ಮನ್ನಾ ಗಡುವು
ಸಾಲಮನ್ನಾಕ್ಕಾಗಿ ರಾಜ್ಯದ ರೈತರು ನಿರೀಕ್ಷೆಯಲ್ಲಿದ್ದಾರೆ. 2019ರ ಜೂನ್ ವೇಳೆಗೆ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಕೊನೆಗೊಂಡರೆ, ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ 2019-20ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ರೈತರ ಸಾಲ ಮನ್ನಾ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕ ಬಜೆಟ್ 2019: ಎಚ್.ಡಿ ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..
ಸಹಕಾರಿ, ವಾಣಿಜ್ಯ ಬ್ಯಾಂಕುಗಳಿಗೆ ಮೀಸಲಿಟ್ಟ ಮೊತ್ತ
ರೈತರ ಸಾಲ ಮನ್ನಾಕ್ಕೆ ಸಹಕಾರಿ ಬ್ಯಾಂಕುಗಳಿಗೆ ರೂ. 6150 ಕೋಟಿ ಹಾಗು ವಾಣಿಜ್ಯ ಬ್ಯಾಂಕುಗಳಿಗೆ ರೂ. 6500 ಕೋಟಿ ಮೀಸಲಿಡಲಾಗಿದೆ. ರೈತರ ಸಾಲಮನ್ನಾಕ್ಕಾಗಿ ಇಲ್ಲಿಯವರೆಗೆ ಒಟ್ಟು ರೂ. 18,650 ಕೋಟಿ ಬಿಡುಗಡೆ ಮಾಡಿದಂತಾಗಿದೆ. ಇದರಿಂದ ಸುಮಾರು ಆರು ಲಕ್ಷ ರೈತರಿಗೆ ಸಹಾಯವಾಗಲಿದೆ.
ಎಷ್ಟು ರೈತರಿದ್ದಾರೆ?
ವಿವಿಧ ವಾಣಿಜ್ಯ ಬ್ಯಾಂಕುಗಳು ಮತ್ತು ಸ್ಥಳೀಯ ಗ್ರಾಮೀಣ ಬ್ಯಾಂಕುಗಳಲ್ಲಿ ಸುಮಾರು 20 ಲಕ್ಷ ರೈತರ ಸಾಲ ಖಾತೆಗಳಿವೆ. ಸುಮಾರು 17 ಲಕ್ಷ ರೈತರು ಸ್ವಘೋಷಿತ ಪ್ರಮಾಣಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಜೊತೆಗೆ 20 ಲಕ್ಷ ಖಾತೆಗಳಲ್ಲಿ 10 ಲಕ್ಷ ಸಾಲದ ಖಾತೆಗಳನ್ನು ಸಹಕಾರಿ ಬ್ಯಾಂಕುಗಳಿಂದ ಸಂಗ್ರಹಿಸಲಾಗಿದೆ. ರೈತರ ಸಾಲ ಮನ್ನಾ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉಲ್ಲೇಖ ಮಾಡಿದ್ದಾರೆ.


Click it and Unblock the Notifications