ಷೇರುಪೇಟೆಯಲ್ಲಿ ಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ ಇರುವೆಯಾಗಿ ಸಕ್ಕರೆ ತಿನ್ನಬಹುದು ಹೇಗೆ?
ಆಳದ ಅರಿವಿಲ್ಲದೆ ಜಾರುತ್ತಿರುವ ಪೇಟೆಗೆ ಆಸರೆಯೇ ಕಾಣದಂತಾಗಿದೆ. ಷೇರುಪೇಟೆಯಲ್ಲಿ ಹೂಡಿಕೆದಾರರ ಸ್ವತ್ತು ಹೇಗೆ ಕರಗುತ್ತಿದೆ ಎಂದರೆ ಅನಿಲ ಆವಿಯಾಗುವುದಕ್ಕಿಂತ ವೇಗವಾಗಿದೆ. ವಿಶೇಷವಾಗಿ ೨೨ ರಂದು ಗುರುವಾರದ ಪರಿಸ್ಥಿತಿಯು ಹೇಳತೀರದಾಗಿದೆ.
ಆಳದ ಅರಿವಿಲ್ಲದೆ ಜಾರುತ್ತಿರುವ ಪೇಟೆಗೆ ಆಸರೆಯೇ ಕಾಣದಂತಾಗಿದೆ. ಷೇರುಪೇಟೆಯಲ್ಲಿ ಹೂಡಿಕೆದಾರರ ಸ್ವತ್ತು ಹೇಗೆ ಕರಗುತ್ತಿದೆ ಎಂದರೆ ಅನಿಲ ಆವಿಯಾಗುವುದಕ್ಕಿಂತ ವೇಗವಾಗಿದೆ. ವಿಶೇಷವಾಗಿ ೨೨ ರಂದು ಗುರುವಾರದ ಪರಿಸ್ಥಿತಿಯು ಹೇಳತೀರದಾಗಿದೆ. ಅಂದು ಅಮೆರಿಕಾದ ಡಾಲರ್ ವಿರುದ್ಧ ರೂಪಾಯಿಯ ಬೆಲೆಯೂ ೭೨ ರ ಗಡಿ ದಾಟಿತು. ಸೆನ್ಸೆಕ್ಸ್ ಸುಮಾರು ೬೭೦ ಪಾಯಿಂಟುಗಳ ಇಳಿಕೆಗೊಳಪಟ್ಟು ನಂತರ ಭಾರಿ ೫೮೭ ಪಾಯಿಂಟುಗಳಲ್ಲಿ ಕೊನೆಗೊಂಡಿದೆ. ಇದರಲ್ಲಿ ಬ್ಯಾಂಕಿಂಗ್ ವಲಯದ ಕೊಡುಗೆ ೪೧೭ ಪಾಯಿಂಟುಗಳಷ್ಟಾಗಿದೆ. ಅಂದರೆ ಬ್ಯಾಂಕಿಂಗ್ ವಲಯವು ಸೆನ್ಸೆಕ್ಸ್ ನ ಕುಸಿತದ ಸುಮಾರು ಶೇ.೭೦ ರಷ್ಟಕ್ಕೆ ಕಾರಣವಾಗಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾದ ಮಾರಾಟದ ಹಾದಿಯಲ್ಲಿರುವುದು, ಕಳೆದ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಕಂಪನಿಗಳು ಪ್ರದರ್ಶಿಸಿರುವ ಕಳಪೆ ಸಾಧನೆ, ಪ್ರಕಟಿಸಿದ ಕಾರ್ಪೊರೇಟ್ ಫಲಗಳು ಸಹ ನಿರಾಶಾದಾಯಕವಾಗಿವೆ, ಜಾಗತಿಕ ಪೇಟೆಗಳು ಕುಸಿಯುತ್ತಿವೆ, ಆಂತರಿಕವಾಗಿ ಡೊಮೆಸ್ಟಿಕ್ ಸೇವಿಂಗ್ಸ್ ಸಹ ಮ್ಯುಚುಯಲ್ ಫಂಡ್ ಮತ್ತು ಪೆನ್ಷನ್ ಫಂಡ್ ಮೂಲಕ ಪೇಟೆ ಪ್ರವೇಶಿಸಿದ್ದು ಅವು ಸಹ ಕರಗಿವೆ. ಇವೆಲ್ಲದರ ಕಾರಣ ಪೇಟೆಯು ಆರ್ಥಿಕ ಹಿಂಜರಿತಕ್ಕೊಳಗಾಗಿದೆ ಎಂಬ ತೀರ್ಮಾನಕ್ಕೆ ಬಂದಂತಿದೆ. ಭಾರತಕ್ಕೆ ಮಾತ್ರ ಆಂತರಿಕ ಬಳಕೆದಾರರ ಬೆಂಬಲವಿರುವುದರಿಂದ ಆರ್ಥಿಕ ಹಿಂಜರಿತದ ದುಷ್ಪರಿಣಾಮ ಹೆಚ್ಚಿರಲಾರದು.
ವಿದೇಶಿ ವಿತ್ತೀಯ ಸಂಸ್ಥೆಗಳು ೨೨ ರಂದು ರೂ.೯೦೨ ಕೋಟಿಯಷ್ಟು ಮಾರಾಟಮಾಡಿವೆ ಮತ್ತು ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.೧,೭೧೯ ಕೋಟಿಯಷ್ಟು ಖರೀದಿಮಾಡಿದರು ಸಹ ೫೮೭ ಪಾಯಿಂಟುಗಳ ಕುಸಿತವನ್ನು ಗುರುವಾರ ಕಂಡಿದೆ. ಅಂದರೆ ಇವೆರಡು ವಿತ್ತೀಯಸಂಸ್ಥೆಗಳ ಚಟುವಟಿಕೆಯು ವಿಭಿನ್ನ ರೀತಿಯಲ್ಲಿರುತ್ತದೆ.
ಆರ್ಥಿಕ ಹಿಂಜರಿತ
ಹಿಂದೆ ೨೦೦೯ ರಲ್ಲಿ ಉಂಟಾದ ಆರ್ಥಿಕ ಹಿಂಜರಿತಕ್ಕೆ ಮೂಲ ಕಾರಣವಾದ ೧೫೮ ವರ್ಷಗಳ ಇತಿಹಾಸವಿದ್ದ ಲಿಮನ್ ಬ್ರದರ್ಸ್ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದ ನಂತರ ಆ ಕಂಪನಿಯ ಸಹವಾಸವಿದ್ದ ಭಾರತೀಯ ಕಂಪೆನಿಗಳನೇಕವು ಜೊತೆಗೆ ಕೆಲವು ಬ್ಯಾಂಕ್ ಗಳು ಹೆಚ್ಚಿನ ಒತ್ತಡಕ್ಕೊಳಗಾದವು. ಕೆಲವು ಕಂಪನಿಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಫೆಡರಲ್ ರಿಸರ್ವ್ ನ ಸಹಕಾರ ಪಡೆದವು. ಮೆರಿಲ್ ಲಿಂಚ್ ಸಂಸ್ಥೆಯು ಬ್ಯಾಂಕ್ ಆಫ್ ಅಮೇರಿಕಾದಲ್ಲಿ ವಿಲೀನಗೊಂಡಿತು. ನಂತರದಲ್ಲಿ ಅದೇ ವರ್ಷ ದುಬೈ ಸಹ ಸಾಲದ ಸುಳಿಯ ಕಾರಣ ಆರ್ಥಿಕ ಒತ್ತಡವನ್ನೆದುರಿಸಿತು. ಅಂತಹ ಪರಿಸ್ಥಿತಿ ಈಗ ಉದ್ಭವಿಸಿಲ್ಲವಾದರೂ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ. ಈಗಿನ ಷೇರುಪೇಟೆಯಾಗಲಿ, ಚಿನಿವಾರಪೇಟೆಯಾಗಲಿ, ಅಥವಾ ಇತರೆ ಪೇಟೆಗಳಾಗಲಿ ಎಲ್ಲರ ಧ್ಯೇಯ ಕೇವಲ ಲಾಭ ಗಳಿಕೆ ಮಾತ್ರ.
ಲಾಭ-ನಷ್ಟ
ಲಾಭ ಸ್ವಂತಕ್ಕೆ, ಹಾನಿ ಸಾರ್ವಜನಿಕರಿಗೆ ಎಂಬ ನೀತಿ ಸರಿಯಲ್ಲ. ಸಾಮಾಜಿಕ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಎಲ್ಲವು ಸರಿದಾರಿಗೆ ಬರುತ್ತದೆ ಎಂದು ಚೀಫ್ ಎಕನಾಮಿಕ್ ಅಡ್ವಿಸರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಪ್ರಾಯ ಸರಿ ಎನಿಸುವುದು ಆಯಾ ವೃತ್ತಿಪರರು ತಮ್ಮ ವೃತ್ತಿಯಲ್ಲಿ ಸಮತೋಲನೆ ಕಂಡಾಗ ಮಾತ್ರ. ಈಗಿನ ವಾತಾವರಣದಲ್ಲಿ ಎಲ್ಲೆಡೆ ಅಸಮತೋಲನೆ, ಅಸ್ಥಿರತೆ, ಅನಿಶ್ಚಿತತೆ ಗಳು ತುಂಬಿರುವಾಗ ಲಾಭವು ಸ್ವಂತಕ್ಕೆ ಮತ್ತು ಸಾರ್ವಜನಿಕರಿಗೆ ಎಂಬುದು ಜಾರಿಯಾಗುವುದು ವಿರಳ.
ವಹಿವಾಟುದಾರರ ಕೈಚಳಕ
ಇಂತಹ ಪೇಟೆಯಲ್ಲಿಯೂ ಸಾಮಾನ್ಯ ಹೂಡಿಕೆದಾರರಿಗೆ ಅರಿವಿಲ್ಲದ ರೀತಿಯಲ್ಲಿ ಪೇಟೆಯ ವಹಿವಾಟುದಾರರು ತಮ್ಮ ಕೈಚಳಕ ತೋರಿ ತಮ್ಮ ಲಾಭವನ್ನು ಗಟ್ಟಿಮಾಡಿಕೊಳ್ಳುತ್ತಾರೆ. ಜನಸಾಮಾನ್ಯರು ಪೇಟೆಯ ಏರಿಳಿತಗಳ ರಭಸದಿಂದ ದೂರವಿದ್ದು ಕೆಲವೊಮ್ಮೆ ತಪ್ಪು ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಾರೆ. ಉದಾಹರಣೆಗೆ ಗಾಡ್ ಫ್ರೆ ಫಿಲಿಪ್ಸ್ ಕಂಪನಿಯು ಫಲಿತಾಂಶ ಪ್ರಕಟಿಸಿದ ನಂತರವೂ ಷೇರಿನ ಬೆಲೆ ರೂ.೭೦೦ ರ ಸಮೀಪದಿಂದ ಏರಿಕೆ ಕಂಡು ಹಿಂದಿನ ಶುಕ್ರವಾರ ೧೬ ರಂದು ದಿನದ ಆರಂಭದ ರೂ.೮೪೦ ರಿಂದ ಶೇ.೨೦ ರಷ್ಟು ಮುನ್ನಡೆದು ದಿನದ ಗರಿಷ್ಟದಲ್ಲಿ ಕೊನೆಗೊಂಡಿತು. ನಂತರದ ದಿನ ೧೯ ರಂದು ರೂ. ೧,೦೮೮ ರ ಗರಿಷ್ಟ ಮಟ್ಟಕ್ಕೆ ಏರಿಕೆ ಕಂಡು ೨೨ ರ ಶುಕ್ರವಾರದಂದು ರೂ. ೮೯೮ ರವರೆಗೂ ಕುಸಿದು ರೂ. ೯೧೭ರ ಸಮೀಪ ಕೊನೆಗೊಂಡಿದೆ. ಕವಡೆಯನ್ನು ಗಾಳಿಗೆ ತುರಿದಂತೆ ಮೇಲೇರಿ ಕುಸಿದಿದೆ. ಅದು ಒಂದೇ ವಾರದಲ್ಲಿ. ಇದು ಇಂದಿನ ದಿನಗಳಲ್ಲಿ ವಹಿವಾಟುದಾರರು ನಡೆಸುತ್ತಿರುವ ವೈಖರಿಯಾಗಿದೆ. ಉತ್ತಮ ಫಲಿತಾಂಶ ಪ್ರಕಟಿಸಿರುವ ಈ ಕಂಪನಿ ಪ್ರತಿ ಷೇರಿಗೆ ರೂ.೧೦ ರ ಲಾಭಾಂಶವಿದೆ . ಸೆಪ್ಟೆಂಬರ್ ೧೩ ರಿಂದ ಎಕ್ಸ್ ಡಿವಿಡೆಂಡ್ ವಹಿವಾಟು ಆರಂಭವಾಗಲಿದೆ.
ಲಾಭಾಂಶ ನಂತರದ ವಹಿವಾಟು
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿ ಷೇರಿನ ಬೆಲೆ ಆಗಸ್ಟ್ ೮ ರಂದು ರೂ.೪೨೫ ರ ಸಮೀಪವಿದ್ದು ೧೪ ರಂದು ರೂ. ೬೨೫ ರವರೆಗೂ ಜಿಗಿದು, ನಂತರದಲ್ಲಿ ೨೨ ರ ಶುಕ್ರವಾರ ರೂ. ೪೩೯ ರವರೆಗೂ ಕುಸಿದಿದೆ. ಈ ಮಧ್ಯ ಕಂಪನಿಯು ಪ್ರತಿ ಷೇರಿಗೆ ರೂ. ೮ ರ ಲಾಭಾಂಶ ವಿತರಿಸಿದೆ. ೧೯ರಿಂದ ಲಾಭಾಂಶ ನಂತರದ ವಹಿವಾಟು ಆರಂಭವಾಗಿದೆ.
ನಕಾರಾತ್ಮಕ ಅಂಶಗಳು
ಡಿಎಲ್ಎಫ್ ಕಂಪನಿ ಷೇರಿನ ಬೆಲೆ ರೂ. ೧೭೧ ರಲ್ಲಿದ್ದು ಇಂದು ಆರಂಭಿಕ ಕ್ಷಣಗಳಲ್ಲಿ ರೂ. ೧೬೮.೯೦ ರಲ್ಲಿದ್ದು ನಂತರ ರೂ. ೧೩೮ ರವರೆಗೂ ಕುಸಿದು ವಾರ್ಷಿಕ ಕನಿಷ್ಟದ ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನೋಟಿಸ್ ವಿಚಾರವು ಬೆಳಕಿಗೆ ಬಂದಿತು. ಸ್ವಲ್ಪ ಸಮಯದ ನಂತರದಲ್ಲಿ ಚೇತರಿಕೆ ಕಂಡ ಈ ಷೇರಿನ ಬೆಲೆ ರೂ. ೧೫೩ ರವರೆಗೂ ಏರಿಕೆ ಕಂಡು ರೂ. ೧೪೪ ರಲ್ಲಿ ಕೊನೆಗೊಂಡಿದೆ.
ಮಾರುತಿ ಸುಜುಕಿ ಷೇರಿನ ಬೆಲೆ ಶುಕ್ರವಾರ ೧೬ ರಂದು ರೂ. ೫,೫೯೫ ರಲ್ಲಿ ಆರಂಭವಾಗಿ ರೂ. ೫,೯೯೮ ರವರೆಗೂ ಏರಿಕೆ ಕಂಡಿತು. ನಂತರದ ದಿನಗಳಲ್ಲಿ, ಕಂಪನಿಯ ಸಾಧನೆ ಆಕರ್ಷಕವಾಗಿಲ್ಲ, ಕೆಲವು ದಿನ ಉತ್ಪಾದನೆ ಸ್ಥಗಿತಗೊಳಿಸಿರುವುದು, ಉದ್ಯೋಗ ಕಡಿತ ಮುಂತಾದ ನಕಾರಾತ್ಮಕ ಅಂಶಗಳು ಮುಂದುವರೆದಿದ್ದರು ಸಹ ೨೨ ನೇ ಗುರುವಾರದಂದು ರೂ.೬,೨೯೮ ರವರೆಗೂ ಏರಿಕೆ ಕಂಡು ರೂ.೬,೨೦೮ ರ ಸಮೀಪ ಕೊನೆಗೊಂಡಿದೆ. ಅಂದರೆ ರೂ.೭೦೦ ರೂಪಾಯಿಗಳ ಏರಿಕೆ ಒಂದೇ ವಾರದಲ್ಲಿ.
ಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸು
ಹೀಗೆ ಅಲ್ಪಕಾಲೀನದಲ್ಲಿ ಅಗ್ರಮಾನ್ಯ ಕಂಪನಿಗಳ ಷೇರಿನ ಬೆಲೆಗಳ ಏರಿಳಿತಗಳ ಲಾಭವನ್ನು ವಹಿವಾಟುದಾರರು ಪಡೆದುಕೊಳ್ಳುತ್ತಿರುವಾಗ, ಸಣ್ಣ ಹೂಡಿಕೆದಾರರು ಸಹ ಅಲ್ಪ ಪ್ರಮಾಣದಲ್ಲಿ ಲಾಭಪಡೆಯಲು ಪ್ರಯತ್ನಿಸಬಹುದು. ಇಂದಿನ ಷೇರುಪೇಟೆಯ ಚಟುವಟಿಕೆ ಸಂದರ್ಭದಲ್ಲಿ ನೆನಪಿನಲ್ಲಡಬೇಕಾದ ಅಂಶವೆಂದರೆ ' ಆನೆಯಾಗಿ ಸೊಪ್ಪು ತಿನ್ನುವುದಕ್ಕಿಂತ ಇರುವೆಯಾಗಿ ಸಕ್ಕರೆ ತಿನ್ನುವುದು ಲೇಸು.' ಗಜ ಗಾತ್ರದ ವಹಿವಾಟಿನ ವ್ಯಾಮೋಹ ಬಿಟ್ಟು ಅಲ್ಪ ಪ್ರಮಾಣದ ಷೇರುಗಳಲ್ಲಿ ಸೀಮಿತ ಲಾಭಕ್ಕೆ ಒಳಪಟ್ಟಿದ್ದಲ್ಲಿ, ಬಂಡವಾಳವು ಅಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.