ತಮಿಳುನಾಡಿನಲ್ಲಿ ಥೇಟ್ SBIನಂಥದ್ದೇ ನಕಲಿ ಬ್ರ್ಯಾಂಚ್ ಆರಂಭಿಸಿದ್ದ 19ರ ಯುವಕ
ಮೋಸ ಮಾಡುವವವರಲ್ಲಿ, ಮಾಡುವ ವಿಧಾನದಲ್ಲಿ ವಂಚಕರ ಸಾಮರ್ಥ್ಯ, ಅನುಭವ ಹಾಗೂ ಅವಕಾಶಕ್ಕೆ ತಕ್ಕಂತೆ ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಈಗ ನೀವು ಓದುತ್ತಿರುವ ವರದಿ ಈ ವರೆಗೆ ಕೇಳಿರಬಹುದಾದ, ನೋಡಿರಬಹುದಾದ ವಂಚನೆಯಲ್ಲೇ ಬಹಳ ವ್ಯತ್ಯಾಸವಾಗಿ ಇರುವಂಥದ್ದು. ಇನ್ನೂ ಒಂದು ಹೆಜ್ಜೆ ಮುಂದೆ ಆಲೋಚನೆ ಮಾಡಿದರೆ ವಂಚನೆಯೇ ಅಲ್ಲವೇನೋ ಅಂತ ಕನ್ ಫ್ಯೂಸ್ ಆಗಿಬಿಡುತ್ತಿದೆ.
ತಮಿಳುನಾಡಿನ ಒಂದು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಕಲಿ ಬ್ರ್ಯಾಂಚ್ ನಡೆಸಲಾಗುತ್ತಿತ್ತು. ಅಂತೂ ಶುಕ್ರವಾರ (ಜುಲೈ 10, 2020) ಆ ಶಾಖೆಯ ಬಾಗಿಲು ಮುಚ್ಚಿಸುವುದರಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಇಂಥ ಖತರ್ನಾಕ್ ಆಲೋಚನೆ ಯಾರಿಗೆ ಬಂದಿರಬಹುದು ಅಂತ ನೋಡಿದರೆ, ಮುಖ್ಯ ಆರೋಪಿಯು ಸ್ತೇಟ್ ಬ್ಯಾಂಕ್ ಇಂಡಿಯಾದಲ್ಲೇ ಉದ್ಯೋಗ ಮಾಡುತ್ತಿದ್ದ ನಿವೃತ್ತ ಸಿಬ್ಬಂದಿಯೊಬ್ಬರ ಮಗ.
ಬ್ಯಾಂಕ್ ವ್ಯವಹಾರ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಿತ್ತು
ವರ್ಷಗಟ್ಟಲೆ ಬ್ಯಾಂಕ್ ಗೆ ಭೇಟಿ ನೀಡುತ್ತಿದ್ದ ಆತನಿಗೆ ವ್ಯವಹಾರಗಳು ಹೇಗೆ ನಡೆಯುತ್ತವೆ ಎಂಬುದು ಚೆನ್ನಾಗಿ ಗೊತ್ತಿತ್ತು. ತಮಿಳುನಾಡಿನ ಕಡಲೂರು ಜಿಲ್ಲೆಯ ಪನರುತಿ ಎಂಬಲ್ಲಿ ಥೇಟ್ ಎಸ್ ಬಿಐ ಶಾಖೆಯನ್ನೇ ಆರಂಭಿಸಿದ್ದಾನೆ. ಆದರೆ ಈ ತನಕ ಯಾವ ಗ್ರಾಹಕರೂ ಈ ಶಾಖೆಯಿಂದ ತಮಗೆ ಹಣ ಕಳೆದುಕೊಂಡಿದ್ದೇವೆ ಅಂತ ದೂರು ನೀಡಿಲ್ಲ.
ಈ ಪ್ರಕರಣದಲ್ಲಿ ಮೂವರ ಬಂಧನ
19 ವರ್ಷದ ಕಮಲ್ ಬಾಬು ಮುಖ್ಯ ಆರೋಪಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಸಿಬ್ಬಂದಿಯ ಮಗ ಆತ. ಅವನ ಜತೆಗೆ ಎ. ಕುಮಾರ್ ಹಾಗೂ ಎಂ. ಮಾಣಿಕಂ ಎಂಬಿಬ್ಬರನ್ನು ಬಂಧಿಸಲಾಗಿದೆ. ಕಮಲ್ ಬಾಬು ತಾಯಿ ಎರಡು ವರ್ಷಗಳ ಹಿಂದೆ ಎಸ್ ಬಿಐನಿಂದ ನಿವೃತ್ತರಾಗಿದ್ದಾರೆ. ಇದೀಗ ಕಮಲ್ ಬಾಬು ವಿರುದ್ಧ ಐಪಿಸಿ ಸೆಕ್ಷನ್ 473, 469, 484 ಹಾಗೂ 109ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಥೇಟ್ ಎಸ್ ಬಿಐ ಶಾಖೆಯಂತೆಯೇ ಇತ್ತು
ಯಾವಾಗ ಎಸ್ ಬಿಐ ನಕಲಿ ಶಾಖೆ ಆರಂಭವಾಗಿದೆ ಅಂತ ಗೊತ್ತಾಯಿತೋ ಪನರುತಿಗೆ ಎಸ್ ಬಿಐನಿಂದ ನಿಜವಾದ ಸಿಬ್ಬಂದಿಯೇ ಹೋಗಿ ನೋಡಿದ್ದಾರೆ. ಅಧಿಕೃತವಾಗಿ ಶಾಖೆಗಳು ಹೇಗಿರುತ್ತವೋ ಥೇಟ್ ಅದೇ ರೀತಿಯ ಎಲ್ಲ ವ್ಯವಸ್ಥೆ ಮಾಡಲಾಗಿತ್ತಂತೆ. ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ಕಮಲ್ ಬಾಲ್ ಬಾಬು ಲಾಕರ್ ಗಳನ್ನು ಖರೀದಿಸಿದ್ದ, ಟೆಕ್ನಾಲಜಿ ಹಾರ್ಡ್ ವೇರ್ ಮತ್ತು ಬ್ಯಾಂಕ್ ಗೆ ಅಗತ್ಯದ ಇತರ ಡಾಕ್ಯುಮೆಂಟ್ ಗಳನ್ನು ಸಹ ಖರೀದಿಸಿದ್ದ.
ನಷ್ಟವಾಗಿದೆ ಎಂದು ಯಾರೂ ದೂರು ನೀಡಿಲ್ಲ
ಇನ್ನೂ ವಿಚಿತ್ರ ಏನೆಂದರೆ, ಈ ಶಾಖೆಯಿಂದ ತಮಗೆ ಹಣ ನಷ್ಟವಾಗಿದೆ ಎಂದು ಯಾವ ಗ್ರಾಹಕರೂ ದೂರು ನೀಡಿಲ್ಲ. ಪೊಲೀಸರು ಹೇಳುವಂತೆ, ಕಮಲ್ ಬಾಬುವಿಗೆ ಜನರನ್ನು ಮೋಸ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಆದರೆ ಆತನಿಗೆ ತನ್ನದೇ ಒಂದು ಬ್ಯಾಂಕ್ ಆರಂಭಿಸಬೇಕು ಎಂದಿತ್ತು. ಆ ಆಸೆಯನ್ನು ಪೂರೈಸಿಕೊಂಡಿದ್ದ.