ಮತ್ತೊಂದು ಅವ್ಯವಹಾರ ಬಯಲು: ಸಹಕಾರೀ ಬ್ಯಾಂಕುಗಳ ವಿಶ್ವಾಸಾರ್ಹತೆಗೇ ಸವಾಲು
'ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರೂ ಇದ್ದೇ ಇರುತ್ತಾರೆ' ಎನ್ನುವ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ ಸಹಕಾರೀ ಬ್ಯಾಂಕು, ಚಿಟ್ ಫಂಡ್ ಗಳ ಭ್ರಷ್ಟಾಚಾರ/ಅವ್ಯವಹಾರ ದಿನದಿಂದ ದಿನಕ್ಕೆ ಬಯಲಾಗುತ್ತಿದೆ, ಹೆಚ್ಚಾಗುತ್ತಲೂ ಇದೆ.
ಹೂಡಿಕೆದಾರರು, ಜೀವನಪೂರ್ತಿ ಕಷ್ಟಪಟ್ಟು ದುಡಿದ ಹಣವನ್ನು ಹೆಚ್ಚಿನ ಬಡ್ಡಿಯ ಆಸೆಗಾಗಿ ಇಂತಹ ಕಡೆ ಠೇವಣಿಯಿಟ್ಟು, ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಸರಕಾರೇತರ ಸಂಸ್ಥೆಗಳು, ಫಿಕ್ಸೆಡ್ ಡೆಪಾಸಿಟ್ ಮೇಲೆ ಅದ್ಯಾವ ಲೆಕ್ಕಾಚಾರದ ಮೇಲೆ ಶೇ. 15-18ರಷ್ಟು ಬಡ್ಡಿಯನ್ನು ನೀಡುತ್ತವೆ ಎನ್ನುವ ಪ್ರಶ್ನೆ ಇವರಿಗೆ ಕಾಡದೆ ಇರುವುದು ದುರಂತ.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ಏಕೆ? ಗ್ರಾಹಕರ ಗತಿ ಏನಾಗಬಹುದು?
ಪ್ರಮುಖವಾಗಿ ನಿವೃತ್ತಿ ಹೊಂದಿದ ನೌಕರರು ತಮ್ಮ ಪಿಎಫ್, ಸೆಟ್ಲ್ ಮೆಂಟ್ ಮುಂತಾದ ಲಕ್ಷಾಂತರ ರೂಪಾಯಿ ಹಣವನ್ನು ಇಂತಹ ಕಡೆ ಡೆಪಾಸಿಟ್ ಮಾಡುವುದನ್ನು ಗಮನಿಸಿದ್ದೇವೆ. ಈ ರೀತಿ ಹರಿದು ಬರುವ ಹಣಗಳನ್ನು ಸೂಕ್ತ ದಾಖಲೆಯಿಲ್ಲದೇ ಅಥವಾ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ, ಸಾಲದ ರೂಪದಲ್ಲಿ ನೀಡಿದ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ.
ಆದಾಯ ತೆರಿಗೆ ಉಳಿಸಲು ಯಾವ ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಬೆಸ್ಟ್?
ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ), ಇದೇ ರೀತಿ, ಹೌಸಿಂಗ್ ಡೆವಲಪ್ ಮೆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನಾಲ್ಕು ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಸಾಲದ ರೂಪದಲ್ಲಿ ನೀಡಿತ್ತು. ಸಾಲ ಪಡೆದಿದ್ದ ಸಂಸ್ಥೆ ಮರುಪಾವತಿ ಮಾಡದ ಹಿನ್ನಲೆಯಲ್ಲಿ, ಏನೂ ತಪ್ಪದ ಮಾಡದ ಗ್ರಾಹಕರು ಇದರಿಂದ ತೊಂದರೆ ಅನುಭವಿಸಿದ್ದು ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ಅವ್ಯವಹಾರ ಬಯಲು:
ಪಿಎಂಸಿ ಬ್ಯಾಂಕಿನ ಅವ್ಯವಹಾರ, ಮೂರು ಸಾವು
ಕೆಲವು ದಿನಗಳ ಹಿಂದೆ, ಸರಿಯಾದ ಸಮಯದಲ್ಲಿ ಹಣ ವಿದ್ ಡ್ರಾ ಮಾಡಲು ಆಗದೇ ಪಿಎಂಸಿ ಬ್ಯಾಂಕಿನ ಅವ್ಯವಹಾರದಿಂದಾಗಿ ಮೂವರು ಗ್ರಾಹಕರು ಮೃತ ಪಟ್ಟಿದ್ದರು. ಸಂಜಯ್ ಗುಲಾಟಿ ಎನ್ನುವ ಗ್ರಾಹಕರು ಹೃದಯಾಘಾತದಿಂದ ಮೃತರಾಗಿದ್ದರು. ಅವರು ಈ ಬ್ಯಾಂಕಿನಲ್ಲಿ 90 ಲಕ್ಷ ರೂ. ಠೇವಣಿ ಇಟ್ಟಿದ್ದರು. ಮುರಳೀಧರ ರಾವ್ ಮತ್ತು ಫತ್ತೋಮಳ್ ಪಂಜಾಬಿ ಎನ್ನುವ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್
ಇನ್ನು, ರಾಜ್ಯದ ವಿಚಾರಕ್ಕೆ ಬಂದಾಗ, ಸಾರ್ವಜನಿಕ ವಲಯದಲ್ಲಿ ಉತ್ತಮ ನಂಬಿಕೆಯನ್ನು ಗಳಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಗೆ ಆರ್ಬಿಐ ನೋಟಿಸ್ ನೀಡಿತ್ತು. ಬ್ಯಾಂಕ್ನಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಯಾವುದೇ ಗ್ರಾಹಕರು ಹಣ ಡ್ರಾ ಮಾಡಬಾರದು ಎನ್ನುವ ಆದೇಶವನ್ನು ರಿಸರ್ವ್ ಬ್ಯಾಂಕ್ ಹೊರಡಿಸಿತ್ತು. ವಿಚಾರ ತಿಳಿಯುತ್ತಿದ್ದಂತೆಯೇ, ಸಾವಿರಾರು ಗ್ರಾಹಕರು, ಬ್ಯಾಂಕ್ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು.
ಹಿರಿಯ ನಾಗರಿಕರೇ ಅಧಿಕ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಿಂದ ಸಾಲಪಡೆದವರ ಖಾತೆಯಲ್ಲಿ ಆರ್ಬಿಐ ಕೆಲವು ಲೋಪ ಗುರುತಿಸಿತ್ತು. ಈ ಕಾರಣದಿಂದಾಗಿ ಪ್ರತಿ ಖಾತೆಯಿಂದ ಕೇವಲ 35 ಸಾವಿರ ರೂ. ಮಾತ್ರ ಡ್ರಾ ಮಾಡಲು ಸೂಚನೆ ನೀಡಿದೆ. ಠೇವಣಿದಾರರು ಆತಂಕಗೊಳ್ಳುವ ಅಗತ್ಯವಿಲ್ಲ, ಎಲ್ಲರ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿತ್ತು. 2,400 ಕೋಟಿ ವಹಿವಾಟು ನಡೆಸುವ ಈ ಬ್ಯಾಂಕ್ ನಲ್ಲಿ ಠೇವಣಿ ಇಟ್ಟವರಲ್ಲಿ ಹಿರಿಯ ನಾಗರಿಕರೇ ಅಧಿಕ.
ಬೆಂಗಳೂರು ಮೂಲದ ಜನತಾ ಸೇವಾ ಕೋಪರೇಟಿವ್ ಬ್ಯಾಂಕ್
ಇದೇ ರೀತಿಯ ಮತ್ತೊಂದು ಪ್ರಕರಣ ಸೋಮವಾರ (ಜ 27) ದಾಖಲಾಗಿದೆ. ಠೇವಣಿದಾರರ ಹಣವನ್ನು ನಿಯಮಬಾಹಿರವಾಗಿ ಸಂಸ್ಥೆಯೊಂದಕ್ಕೆ ನೀಡಿದ ಕಾರಣಕ್ಕಾಗಿ ಬೆಂಗಳೂರು ಮೂಲದ ಜನತಾ ಸೇವಾ ಕೋಪರೇಟಿವ್ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರ ವಿರುದ್ದ FIR ದಾಖಲಾಗಿದೆ. ಈ ವಿಚಾರ ತಿಳಿದ ಠೇವಣಿದಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಐಪಿಸಿ ಸೆಕ್ಸನ್ 471,418,419,420 ಅಡಿಯಲಿ, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ವಿರುದ್ದ ದೂರು ದಾಖಲಾಗಿದೆ. ವಿಜಯನಗರ ಪೊಲೀಸರು ವಿಚಾರಣೆ ಈಗಾಗಲೇ ಆರಂಭಿಸಿದ್ದಾರೆ.
ಚಿಟ್ ಫಂಡ್ ಗಳಂತೂ ಸಾರ್ವಜನಿಕರಿಗೆ ಉಂಡೆನಾಮ ಉದಾಹರಣೆಗಳು ಸಾಕಷ್ಟು
ಈ ರೀತಿಯ ಪ್ರಕರಣಗಳು ಒಂದಲ್ಲಾ, ಎರಡಲ್ಲಾ.. ಚಿಟ್ ಫಂಡ್ ಗಳಂತೂ ಸಾರ್ವಜನಿಕರಿಗೆ ಉಂಡೆನಾಮ ಉದಾಹರಣೆಗಳು ಸಾಕಷ್ಟಿವೆ. ವಿನಿವಿಂಕ್, ತುಲ್ಸಿಯಾನ ಕಂಪೆನಿ, ಇಪಿಸಿ-ಎಸ್ ಆರ್ , ವಿಕ್ರಂ ಚಿಟ್ ಫಂಡ್ , ಸ್ವಯಂ ಕೃಷಿ ಚಿಟ್ ಫಂಡ್, ಐಎಂಐ, ಈ ರೀತಿಯ ಹಲವು ಉದಾಹರಣೆಗಳು ಕರ್ನಾಟಕ ಒಂದರಲ್ಲೇ ಸಿಗುತ್ತದೆ. ಹಾಗಾಗಿ, ಇನ್ನಾದರೂ ಸಾರ್ವಜನಿಕರು ಎಚ್ಚರವಾಗುವುದು ಸೂಕ್ತ.