ಈ ಸಂದರ್ಭದಲ್ಲಿ ಹೆಚ್ಚಿನ ಬ್ಯಾಂಕ್ ಸಾಲ ನೀಡಿ, ಮತ್ತಿತರ ಕ್ರಮಗಳ ಮೂಲಕ ಆರ್ಥಿಕತೆಯಲ್ಲಿ ಪೂರೈಕೆ ಚೇತರಿಸಿಕೊಳ್ಳುವಂತೆ ಮಾಡಬಹುದು. ಆದರೆ ಆಂತರಿಕವಾಗಿ ಬೇಡಿಕೆ ಸೃಷ್ಟಿಯಾಗುವ ಮೂಲಕವೇ ಆರ್ಥಿಕತೆ ಬೆಳವಣಿಗೆಗೆ ಉತ್ತೇಜನ ಸಿಗಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಡಳಿ ನಿರ್ದೇಶಕ ಎಸ್. ಗುರುಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ಎರಡನೇ ತ್ರೈಮಾಸಿಕದ ಕೊನೆಗೆ ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ನಿರೀಕ್ಷೆ ಮಾಡಬಹುದು. ಅಷ್ಟರಲ್ಲಿ ಕೊರೊನಾ ಒಂದು ಹಂತಕ್ಕೆ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ಬೇಡಿಕೆ ಸೃಷ್ಟಿಯಾಗಲು ನೆರವಾಗುತ್ತದೆ. ಆದರೆ ಈ ಆರ್ಥಿಕ ಉತ್ತೇಜನ ನೀಡಬೇಕು ಅಂದರೆ, ಸರ್ಕಾರದ ವಿತ್ತೀಯ ಕೊರತೆ ಭರಿಸಿಕೊಳ್ಳಬೇಕು. ಈಗಾಗಲೇ ಆರ್ಥಿಕ ಸ್ಥಿತಿ ಒತ್ತಡದಲ್ಲಿದೆ ಎಂದಿದ್ದಾರೆ.
ಬ್ಯಾಂಕ್ ಗಳು ಆರ್ಥಿಕತೆ ಕುಸಿಯದಂತೆ ತಡೆಯಬಹುದು
ಬ್ಯಾಂಕ್ ಗಳಿಂದ ಬೆಳವಣಿಗೆಗೆ ಚಾಲನೆ ನೀಡುವುದಕ್ಕೆ ಸಾಧ್ಯವಿಲ್ಲ. ಆದರೆ ಆರ್ಥಿಕತೆ ಇನ್ನಷ್ಟು ಕುಸಿಯದಂತೆ ತಡೆಯಬಹುದು. ಆಂತರಿಕ ಬೇಡಿಕೆಯಿಂದಷ್ಟೇ ಉತ್ತೇಜನ ಸಿಗಬಹುದು. ಅದು ಅಂತಿಮವಾಗಿ ಆರ್ಥಿಕವಾಗಿ ಪ್ಯಾಕೇಜ್ ಘೋಷಣೆ ಆದ ಮೇಲೆ ಸಾಧ್ಯವಾಗುತ್ತದೆ ಎಂದು ಗುರುಮೂರ್ತಿ ಮಂಗಳವಾರ ಹೇಳಿದ್ದಾರೆ.
ಆರ್ಥಿಕತೆ ಮೇಲಿನ ಪರಿಣಾಮ ಹೇಳುವುದು ಕಷ್ಟ
ಭಾರತ್ ವಾಣಿಜ್ಯ ಮಂಡಳಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿ, ಕೇಂದ್ರ ಸರ್ಕಾರ ಘೋಷಣೆ ಮಾಡಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಅಂತಿಮವಲ್ಲ. ಕೊರೊನಾ ಬಿಕ್ಕಟ್ಟು ಈಗಲೂ ಇದೆ. ಆರ್ಥಿಕತೆಯ ಮೇಲೆ ಅದರ ಪರಿಣಾಮ ಯಾವ ಮಟ್ಟಕ್ಕೆ ಇರುತ್ತದೆ ಎಂದು ಹೇಳುವುದು ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೇರೆಲ್ಲ ದೇಶಗಳಿಗಿಂತ ಬೇಗ ಚೇತರಿಕೆ
ಬೇರೆಲ್ಲ ದೇಶಗಳಿಗಿಂತ ಭಾರತದ ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳಲಿದೆ ಹಾಗೂ ಮುಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಿಂದಲೇ ಕಾಣಿಸಲು ಆರಂಭವಾಗುತ್ತದೆ. ಆರ್ಥಿಕತೆಯು ತಾನಾಗಿಯೇ ಆರೋಗ್ಯ ಹಾಗೂ ಅದಕ್ಕೆ ಸಂಬಂಧಿಸಿದ ವಲಯಗಳ ಬದಲಾವಣೆ ಮೂಲಕ ಚೇತರಿಕೆ ಕಾಣುತ್ತದೆ. ಜಾಗತಿಕ ಆರ್ಥಿಕತೆಯಲ್ಲಿನ ಬದಲಾವಣೆಯೂ ಇದಕ್ಕೆ ನೆರವಾಗುವ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications