ಆರ್ಥಿಕ ಕುಸಿತದ ಹಾದಿಯಲ್ಲಿರುವ ಭಾರತದ ಆರ್ಥಿಕತೆಯನ್ನು ಆ ಸ್ಥಿತಿಯಿಂದ ಆಚೆ ತರುವ ಸಾಮರ್ಥ್ಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.
ಹಿಂಜರಿತದಿಂದ ಆರ್ಥಿಕತೆಯನ್ನು ಹೊರಗೆ ತರಬಹುದು. ಆದರೆ ಈ ಸರ್ಕಾರಕ್ಕೆ ಹಾಗೆ ಮಾಡುವ ಸಾಮರ್ಥ್ಯ ಇಲ್ಲ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಆರ್ಥಿಕತೆಯನ್ನು ಕುಸಿತದಿಂದ ಮೇಲಕ್ಕೆತ್ತಿ ಪ್ರಗತಿಯೆಡೆಗೆ ಕರೆದೊಯ್ಯಲು ಸಂಸಿದ್ಧವಾಗಿಬೆ. ಆದರೆ ಅದಕ್ಕಾಗಿ ನಾವು ಉತ್ತಮ ಸಮಯಕ್ಕಾಗಿ ಕಾಯಬೇಕು ಎಂದು ಹೇಳಿದ್ದಾರೆ.
ಯುಪಿಎ ನೇತೃತ್ವದ ಆಡಳಿತಾವಧಿಯಲ್ಲಿ ಹತ್ತು ವರ್ಷಗಳಲ್ಲಿ ಹದಿನಾಲ್ಕು ಕೋಟಿ ಮಂದಿಯನ್ನು ಬಡತನದಿಂದ ಹೊರಗೆ ತಂದೆವು. ಆದರೆ ಮೂರು ವರ್ಷದಿಂದ ಈಚೆಗೆ ಎನ್ ಡಿಎ ಹತ್ತಾರು ಲಕ್ಷ ಜನರನ್ನು ಬಡತನ ರೇಖೆಗಿಂತ ಕೆಳಗೆ ದೂಡಿದೆ ಎಂದು ಆರೋಪ ಮಾಡಿದ್ದಾರೆ.

ತಿಹಾರ್ ಜೈಲಿನಿಂದ ಬುಧವಾರ ಬಿಡುಗಡೆಯಾದ ಮೇಲೆ ಪಿ ಚಿದಂಬರಂ ಅವರ ಮೊದಲ ಪತ್ರಿಕಾಗೋಷ್ಠಿ ಇದು. ಐಎನ್ ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಪ್ರಕರಣ ದಾಖಲಿಸಿ, ನೂರಾ ಐದು ದಿನಗಳ ಕಾಲ ವಶದಲ್ಲಿದ್ದರು. "ಅನುಮತಿ ಇಲ್ಲದೆ ಬೇರೆ ದೇಶಕ್ಕೆ ಹೋಗುವಂತಿಲ್ಲ. ಪ್ರಕರಣದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವಂತಿಲ್ಲ" ಎಂದು ಕೋರ್ಟ್ ಷರತ್ತು ವಿಧಿಸಿದೆ.
ಈಗಿನ ಆರ್ಥಿಕ ಹಿಂಜರಿತವು ಸ್ಟ್ರಕಚರಲ್ ಅಥವಾ ಸೈಕ್ಲಿಕಲ್ ಎಂಬ ಬಗ್ಗೆಯೇ ಎನ್ ಡಿಎಗೆ ಗೊತ್ತಾಗುತ್ತಿಲ್ಲ. ಈ ವ್ಯತ್ಯಾಸ ಗೊತ್ತಿದ್ದ ರಘುರಾಂ ರಾಜನ್, ಊರ್ಜಿತ್ ಪಟೇಲ್ ಮತ್ತು ಅರವಿಂದ್ ಸುಬ್ರಮಣಿಯನ್ ರಂಥವರನ್ನು ಈ ಸರ್ಕಾರ ನಿರ್ಲಕ್ಷ್ಯ ಮಾಡುತ್ತಾ ಬಂತು ಎಂದು ಚಿದಂಬರಂ ಆರೋಪಿಸಿದ್ದಾರೆ.
ಈಗಿನ ಆರ್ಥಿಕ ಹಿಂಜರಿತವನ್ನು 'ಸೈಕ್ಲಿಕಲ್' ಎಂದು ಸರ್ಕಾರ ಕರೆದಿದೆ. ಸುದೈವ ಏನೆಂದರೆ 'ಸೀಸನಲ್' ಅಂದಿಲ್ಲ. ಈಗಿನದು 'ಸ್ಟ್ರಕ್ಚರಲ್' ಹಿಂಜರಿತ. ಸ್ಟ್ರಕ್ಚರಲ್ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಅಥವಾ ಸುಧಾರಿಸುವುದಕ್ಕೆ ಈ ಸರ್ಕಾರದಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಸರ್ಕಾರ ಮತ್ತೊಮ್ಮೆ ಆರ್ ಬಿಐ ಮೇಲೆ ದಾಳಿ ನಡೆಸಬಹುದು (ಹೆಚ್ಚುವರಿ ಮೀಸಲು ನಿಧಿಗೆ). ಅಥವಾ ಅದೇ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಸ್ಟ್ರಾಟೆಜಿಕ್ ಮಾರಾಟಕ್ಕೆ ಮುಂದಾಗಬಹುದು. ಇದು ಯಾತನಾದಾಯಕ ಹಾಗೂ ಹತಾಶೆಯಿಂದ ಕೂಡಿದ ಮಾರಾಟ ಎಂದು ಚಿದಂಬರಂ ಹೇಳಿದ್ದಾರೆ.
ಮಾಧ್ಯಮಗಳೂ ಸೇರಿದಂತೆ ವಿವಿಧ ಸಂಸ್ಥೆಗಳು ಆಡಳಿತಾರೂಢ ಪಕ್ಷಕ್ಕೆ ಹೆದರಿವೆ. ದಯವಿಟ್ಟು ಭಯ ಬಿಡಿ. ಅಧಿಕಾರಸ್ಥರ ಬಗ್ಗೆ ಸತ್ಯವನ್ನು ಮಾತನಾಡಿ ಎಂದು ಅವರು ಹೇಳಿದ್ದಾರೆ.


Click it and Unblock the Notifications