ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ನಲ್ಲಿ ತೆರಿಗೆದಾರರಿಗೆ ಹೆಚ್ಚೇನೂ ಕೊಡುಗೆ ಸಿಗುವುದು ಅನುಮಾನವಾಗಿದೆ. ತೆರಿಗೆ ಸಂಗ್ರಹದಲ್ಲಿ ಕೊರತೆ ಬೀಳುವುದರಿಂದ ಈ ಬಾರಿಯ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಭಾರೀ ಬದಲಾವಣೆ ಅಥವಾ ವಿನಾಯ್ತಿ ಸಾಧ್ಯತೆ ಬಹುತೇಕ ಕ್ಷೀಣಿಸಿದೆ.
ಆರ್ಥಿಕತೆ ಮಂದಗತಿಯ ನಡುವೆ ಉದ್ದೇಶಿತ ತೆರಿಗೆ ಸಂಗ್ರಹದಲ್ಲಿ 2 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜು ಮಾಡಲಾಗಿದೆ. ಹೀಗಾಗಿ ವೇತನದಾರರಿಗೆ ಉತ್ತಮ ಕೊಡುಗೆಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.
ವೈಯಕ್ತಿಕ ತೆರಿಗೆಯಲ್ಲಿ ವಿನಾಯ್ತಿ ಸಿಗಬಹುದೆಂಬ ನಿರೀಕ್ಷೆ
ಆರ್ಥಿಕತೆಗೆ ಉತ್ತೇಜನ ನೀಡಲು ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಾರ್ಪೋರೇಟ್ ತೆರಿಗೆ ದರದಲ್ಲಿ ಕಡಿತಗೊಳಿಸಿದ್ದರು. ಇದೇ ರೀತಿಯಲ್ಲಿ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿತಗೊಳಿಸಬಹುದು ಅಥವಾ ವಿನಾಯ್ತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.
ತೆರಿಗೆ ಸಂಗ್ರಹದಲ್ಲಿ ಸಾವಿರಾರು ಕೋಟಿ ಕೊರತೆ
ಕಾರ್ಪೋರೇಟ್ ತೆರಿಗೆ ಕಡಿತ ಹಾಗೂ ಆರ್ಥಿಕತೆ ಮಂದಗತಿಯಿಂದಾಗಿ 2019-20ರ ಹಣಕಾಸು ವರ್ಷದಲ್ಲಿ ಕಾರ್ಪೋರೇಟ್ ಮತ್ತು ಆದಾಯ ತೆರಿಗೆ ಸಂಗ್ರಹ ಗುರಿಯನ್ನು 1.5 ಲಕ್ಷ ಕೋಟಿ ಮತ್ತು ಪರೋಕ್ಷ ತೆರಿಗೆಯಲ್ಲಿ 50 ಸಾವಿರ ಕೋಟಿ ಕೊರತೆ ಬೀಳುವ ನಿರೀಕ್ಷೆ ಇದೆ. ವಿವಿಧ ಮೂಲಗಳಿಂದ ಬರಬೇಕಾಗಿದ್ದ ವರಮಾನದಲ್ಲಿ 3.50 ಲಕ್ಷದಿಂದ 3.75 ಲಕ್ಷ ಕೋಟಿ ಕೊರತೆ ಆಗುವ ಅಂದಾಜು ಮಾಡಲಾಗಿದೆ.
ಮೂಲ ಸೌಕರ್ಯಗಳಿಗೆ ಹೆಚ್ಚಿನ ನೆರವು
2020ರ ಕೇಂದ್ರ ಬಜೆಟ್ನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿನ ಗೃಹ ನಿರ್ಮಾಣ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಗೆ (ಎಂಎಸ್ಎಂಇ), ಸ್ಟಾರ್ಟ್ ಅಪ್, ರಸ್ತೆ ನಿರ್ಮಾಣ, ರೈಲ್ವೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ವಹಿವಾಟಿಗೆ ಅನುದಾನ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ.
ಉದ್ಯೋಗ ಸೃಷ್ಟಿಯ ಗುರಿ
ದೇಶದಲ್ಲಿ ಆರ್ಥಿಕತೆ ಮಂದಗತಿಯಿಂದಾಗಿ ವಿವಿಧ ವಲಯಗಳ ಬೆಳವಣಿಗೆ ಕುಂಠಿತವಾಗಿದೆ. ಹೀಗಾಗಿ ಆರ್ಥಿಕ ಪ್ರಗತಿಗೆ ಚೇತರಿಕೆ ನೀಡಲು ಉದ್ಯೋಗ ಸೃಷ್ಟಿಗೆ ಭಾರೀ ಉತ್ತೇಜನ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹೀಗಾಗಿಯೇ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಉದ್ಯೋಗ ಸೃಷ್ಟಿಯ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.


Click it and Unblock the Notifications