ತಿರುಪತಿ ತಿಮ್ಮಪ್ಪನಿಗೆ 2 ಕೇಜಿಯ 20 ಚಿನ್ನದ ಬಿಸ್ಕೆಟ್ ಅರ್ಪಿಸಿದ ಅಪರಿಚಿತ ಭಕ್ತರು
ಅಪರಿಚಿತ ಭಕ್ತರೊಬ್ಬರು ತಿರುಪತಿ ತಿರುಮಲ ಬೆಟ್ಟದ ವೆಂಕಟೇಶ್ವರ ದೇವಾಲಯಕ್ಕೆ 20 ಚಿನ್ನದ ಬಿಸ್ಕೆಟ್ ಗಳನ್ನು ಅರ್ಪಿಸಿದ್ದಾರೆ ಎಂದು ದೇವಾಲಯದ ಹಿರಿಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರದಂದು ಹುಂಡಿಯಲ್ಲಿ ಸಿಕ್ಕಿರುವ ಚಿನ್ನದ ಬಿಸ್ಕೆಟ್ ಗಳ ತೂಕ 2 ಕೇಜಿ ಎಂದು ಮಾಹಿತಿ ನೀಡಲಾಗಿದೆ.
ವಿಶ್ವದ ಶ್ರೀಮಂತ ದೇಗುಲ ತಿರುಪತಿ ದೇವಸ್ಥಾನದ ಆರ್ಥಿಕ ಸ್ಥಿತಿ ಹೇಗಿದೆ?
ದಿನದ ಹುಂಡಿ ಸಂಗ್ರಹವನ್ನು ಎಣಿಕೆ ಮಾಡುವ ವೇಳೆ ಇದು ಗೊತ್ತಾಯಿತು ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಒಟ್ಟು ನಗದು ಸಂಗ್ರಹ 16.7 ಕೋಟಿ ರುಪಾಯಿ ಆಗಿದೆ. ಕೊರೊನಾ ಲಾಕ್ ಡೌನ್ ನಂತರ ದೇವಾಲಯವನ್ನು ಜೂನ್ 11ನೇ ತಾರೀಕಿನಿಂದ ಮತ್ತೆ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಒಂದು ತಿಂಗಳಲ್ಲಿ 2.5 ಲಕ್ಷ ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನು 67 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಆನ್ ಲೈನ್ ಟಿಕೆಟ್ ಬುಕ್ ಮಾಡಿದ್ದವರು ಕೊರೊನಾ ಸೇರಿದಂತೆ ನಾನಾ ಕಾರಣಗಳಿಗಾಗಿ ಭೇಟಿ ನೀಡಿಲ್ಲ. 3,569 ಮಂದಿಯ ಕೊರೊನಾ ಪರೀಕ್ಷೆ ಮಾಡಿದ ಬಳಿಕ ಈ ತನಕ ಟಿಟಿಡಿಯ 91 ಸಿಬ್ಬಂದಿ ಕೊರೊನಾ ಪಾಸಿಟಿವ್ ಎಂಬುದು ಗೊತ್ತಾಗಿದೆ ಎಂದು ಸಿಂಘಾಲ್ ಅವರು ತಿಳಿಸಿದ್ದಾರೆ.