ಧಾರವಾಡದಲ್ಲಿ ಎಲ್ಜಿ ಟಿವಿ ಖರೀದಿಸಿ ಮೋಸಹೋದ ಗ್ರಾಹಕನಿಗೆ ಕೋರ್ಟ್ನಿಂದ ನ್ಯಾಯ
ಧಾರವಾಡ, ಅ. 17: ಕಳಪೆ ಗುಣಮಟ್ಟದ ಎಲ್ಜಿ ಟಿವಿ ಖರೀದಿಸಿ ವಂಚನೆಗೊಳಗಾದ ಗ್ರಾಹಕನಿಗೆ ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗದಿಂದ ನ್ಯಾಯ ಸಿಕ್ಕಿದೆ. ಮೂರು ಬಾರಿ ಟಿವಿ ಬದಲಿಸಿದರೂ ಟಿವಿ ಕೆಟ್ಟಿದ್ದರಿಂದ ಗ್ರಾಹಕರ ವೇದಿಕೆ ಮೊರೆ ಹೋದ ಗ್ರಾಹಕರೊಬ್ಬರಿಗೆ ಟಿವಿಯ ಬೆಲೆ ಜೊತೆಗೆ ಪರಿಹಾರವೂ ಸಿಕ್ಕಿದೆ.
ಹುಬ್ಬಳ್ಳಿಯ ನೆಹರೂ ನಗರದ ಶ್ರೀರಾಮ್ ಶ್ರೀನಿವಾಸ್ ಎಲ್ಜಿ ಎಲೆಕ್ಟ್ರಾನಿಕ್ಸ್ನಿಂದ ಕಳಪೆ ಟಿವಿ ಪಡೆದ ಗ್ರಾಹಕ. ಶ್ರೀರಾಮ್ ಅವರು ಹುಬ್ಬಳ್ಳಿಯ ಏರ್ಪೋರ್ಟ್ ರಸ್ತೆಯಲ್ಲಿರುವ ರಿಲಾಯನ್ಸ್ ಡಿಜಿಟಲ್ ಶೋ ರೂಮ್ನಲ್ಲಿ ಎಲ್ಜಿ ಬ್ರ್ಯಾಂಡ್ನ ಟಿವಿ ಖರೀದಿಸಿದ್ದರು. 2,80,990 ರೂ ಬೆಲೆಯ ಎಲ್ಜಿ ಟಿವಿಗೆ 91 ಸಾವಿರ ರೂ ಡಿಸ್ಕೌಂಟ್ ಸಿಕ್ಕು 1,89,818 ರೂಪಾಯಿಗೆ ಪಡೆದಿದ್ದರು.
ಡಿಜಿಲಾಕರ್ನಲ್ಲಿ ಪೆನ್ಷನ್ ಸರ್ಟಿಫಿಕೇಟ್ ಸೇರಿ ಹೊಸ ಸೇವೆಗಳು
ಆದರೆ, ಈ ಟಿವಿಯನ್ನು ಮನೆಯಲ್ಲಿ ಅಳವಡಿಸುವ ಮುನ್ನವೇ ದೋಷ ಕಾಣಿಸಿಕೊಂಡಿತು. ಗ್ರಾಹಕ ಶ್ರೀರಾಮ್ ಎಲ್ಜಿ ಎಲೆಕ್ಟ್ರಾನಿಕ್ಸ್ ಕಂಪನಿಗೆ ದೂರು ನೀಡಿದ ಬಳಿಕ ಟಿವಿಯನ್ನು ಬದಲಿಸಲಾಯಿತು. ಆ ಟಿವಿಯಲ್ಲೂ ದೋಷ ಕಾಣಿಸಿಕೊಂಡು ಮತ್ತೊಂದು ಟಿವಿ ರೀಪ್ಲೇಸ್ ಮಾಡಲಾಯಿತು. ವಿಚಿತ್ರವೆಂದರೆ ಆ ಟಿವಿಯಲ್ಲೂ ದೋಷ ಕಾಣಿಸಿಕೊಂಡು ಮೂರನೇ ಟಿವಿಯನ್ನು ಬದಲಿಸಿಕೊಡಲಾಯಿತು. ಆದರೆ, ಐದು ತಿಂಗಳ ಬಳಿಕ ಈ ಮೂರನೇ ಟಿವಿಯಲ್ಲೂ ದೋಷ ಕಾಣಿಸಿಕೊಂಡಿತ್ತು.
ಈ ಹಂತದಲ್ಲಿ ಹತಾಶೆಗೊಂಡ ಗ್ರಾಹಕರು, ಧಾರವಾಡ ಜಿಲ್ಲಾ ಗ್ರಾಹಕರ ವೇದಿಕೆಗೆ ನ್ಯಾಯಕ್ಕಾಗಿ ಮೊರೆ ಹೋದರು. ಎಲ್ಜಿ ಟಿವಿ ತಯಾರಕರು ತಮ್ಮ ಬ್ರ್ಯಾಂಡ್ ನೇಮ್ ದುರುಪಯೋಗಿಸಿಕೊಂಡು ಕಳಪೆ ಟಿವಿಗಳನ್ನು ಮಾರುತ್ತಿದ್ದಾರೆ. ಅವರಿಂದ ತನಗೆ ಅನ್ಯಾಯವಾಗಿದೆ. ಆ ಟಿವಿ ಖರೀದಿಗೆ ತಾನಿತ್ತ ಹಣದ ಜೊತೆಗೆ ತನಗಾದ ತೊಂದರೆಗೆ ಸೂಕ್ತ ಪರಿಹಾರ ಹಾಗೂ ಈ ಪ್ರಕರಣ ನಡೆಸಲು ತನಗಾಗುವ ಎಲ್ಲಾ ಖರ್ಚು ವೆಚ್ಚ ಭರಿಸಿಕೊಡುವಂತೆ ಅವರು ಆಯೋಗದಲ್ಲಿ ಮನವಿ ಮಾಡಿದರು.
ಧಾರವಾಡ ಜಿಲ್ಲಾ ಗ್ರಾಹಕರ ಅಯೋಗದ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು ಈ ದೂರಿನ ವಿಚಾರಣೆ ನಡೆಸಿದರು. ಎಲ್ಜಿ ಎಲೆಕ್ಟ್ರಾನಿಕ್ಸ್ ಕಂಪನಿಯಿಂದ ಗ್ರಾಹಕರಿಗೆ ಕಳಪೆ ಗುಣಮಟ್ಟದ ಟಿವಿಯನ್ನು ಮಾರಲಾಗಿದೆ ಎಂಬ ಆರೋಪದಲ್ಲಿ ಹುರುಳಿದೆ ಎಂಬುದು ಆಯೋಗಕ್ಕೆ ಮನವರಿಕೆಯಾಗಿದೆ. ದೂರುದಾರರ ವಾದವನ್ನು ಮನ್ನಿಸಿ ತೀರ್ಪು ನೀಡಿದೆ. ಗ್ರಾಹಕ ಶ್ರೀರಾಮ್ ಶ್ರೀನಿವಾಸ್ ಅವರಿಗೆ ನ್ಯಾಯ ಸಿಕ್ಕಿತು.
ಟಿವಿ ಖರೀದಿಸಲು ಮಾಡಿದ 1,89,818 ರೂ ಹಣವನ್ನು ಗ್ರಾಹಕರಿಗೆ ಮರಳಿಸುವಂತೆ ಎಲ್ಜಿ ಟಿವಿ ಕಂಪನಿಗೆ ಆಯೋಗವು ಆದೇಶ ನೀಡಿತು. ಶ್ರೀರಾಮ್ ಕೋರಿಕೆಯಂತೆ ಈ ಪ್ರಕರಣದಲ್ಲಿ ಅವರಿಗಾದ ಮಾನಸಿಕ ಕಿರಿಕಿರಿಗೆ ಪರಿಹಾರವಾಗಿ 25 ಸಾವಿರ ರೂ ಹಾಗೂ ಈ ಪ್ರಕರಣ ನಡೆಸಲು ವೆಚ್ಚವಾದ 10 ಸಾವಿರ ರೂ ಅನ್ನೂ ಸೇರಿಸಿಕೊಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿ ತೀರ್ಪು ನೀಡಿತು.
ಗ್ರಾಹಕನೇ ರಾಜ; ಐಫೋನ್ ಪ್ರಕರಣ ತಪ್ಪದೇ ನೋಡಿ
ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ನಾನಾ ತಂತ್ರ ಉಪಯೋಗಿಸುತ್ತಾರೆ. ಹಲವೊಮ್ಮೆ ಸುಳ್ಳು ಸುಳ್ಳು ಆಫರ್ಗಳನ್ನು ತೋರಿಸಿ ಮೋಸ ಮಾಡುವುದೂ ಉಂಟು. ಇದು ಆನ್ಲೈನ್ ಶಾಪಿಂಗ್ನಲ್ಲಿ ಹೆಚ್ಚು ನಡೆಯುತ್ತವೆ. ವಂಚನೆಗೊಳಗಾದರೂ ಜನರು ಮರೆತು ಸುಮ್ಮನಾಗುವುದೇ ಹೆಚ್ಚು. ಆದರೆ, ಹಲವು ರೀತಿಯ ಕನ್ಸೂಮರ್ ಕೋರ್ಟ್ಗಳು ನಮ್ಮ ದೇಶದಲ್ಲಿವೆ. ಇವುಗಳಿಂದ ನಮಗೆ ನ್ಯಾಯ ಹೇಗೆ ಸಿಗುತ್ತದೆ ಎಂಬುದಕ್ಕೆ ನಿಖಿಲ್ ಬನ್ಸಾಲ್ ಎಂಬ ವಿದ್ಯಾರ್ಥಿಯ ಪ್ರಕರಣ ಸಾಕ್ಷಿಯಾಗಿ ತೆಗೆದುಕೊಳ್ಳಬಹುದು.
ಇ-ಕಾಮರ್ಸ್ ತಾಣ ಸ್ನ್ಯಾಪ್ಡೀಲ್ನಲ್ಲಿ 46,719 ರೂ ಬೆಲೆಯ ಐಫೋನ್ 5ಎಸ್ ಗೋಲ್ಡ್ ಸ್ಮಾರ್ಟ್ಫೋನ್ ಕೇವಲ 68 ರೂಪಾಯಿಗೆ ಮಾರಾಟಕ್ಕಿದೆ ಎಂದು ಜಾಹೀರಾತಿತ್ತು. ನಿಖಿಲ್ ಬನ್ಸಾಲ್ ಕೂಡಲೇ ಆರ್ಡರ್ ಮಾಡುತ್ತಾನೆ. ಕನ್ಫರ್ಮೇಶನ್ ಕೂಡ ಬರುತ್ತದೆ. ಆದರೆ, ನಂತರ ಅದು ತಾಂತ್ರಿಕ ದೋಷದಿಂದ ತಪ್ಪಾಗಿ ಬಂದ ಆಫರ್ ಎಂಬ ಸ್ಪಷ್ಟೀಕರಣ ಬರುತ್ತದೆ.
ಆಗ ನಿಖಿಲ್ ಬನ್ಸಾಲ್ ಇ ಕಾಮರ್ಸ್ ಗ್ರಾಹಕ ದೂರುಗಳ ವೇದಿಕೆಯ ಮೆಟ್ಟಿಲೇರುತ್ತಾನೆ. ಈ ರೀತಿಯ ಆಫರ್ಗಳು ಜನರನ್ನು ವಂಚಿಸುತ್ತವೆ. ಆಫರ್ ಕೊಟ್ಟಂತೆ ನಡೆದುಕೊಳ್ಳುವುದು ಸ್ನ್ಯಾಪ್ಡೀಲ್ನ ಕರ್ತವ್ಯ. ತನಗೆ ಆಫರ್ ದರಕ್ಕೆ ಐಫೋನ್ ದೊರಕಿಸಿಕೊಡಬೇಕೆಂದು ನಿಖಿಲ್ ಮನವಿ ಮಾಡುತ್ತಾನೆ.
ಗ್ರಾಹಕ ದೂರುಗಳ ವೇದಿಕೆಯು ಈ ದೂರನ್ನು ಮನ್ನಿಸಿ ನಿಖಿಲ್ ಪರವಾಗಿ ತೀರ್ಪು ನೀಡುತ್ತದೆ. ಐಫೋನ್ 5ಎಸ್ ಅನ್ನು 68 ರೂಪಾಯಿಗೆ ನಿಖಿಲ್ಗೆ ಕೊಡಬೇಕು.. ಜೊತೆಗೆ 2 ಸಾವಿರ ಪರಿಹಾರ ಒದಗಿಸಬೇಕೆಂದು ತೀರ್ಪು ನೀಡುತ್ತದೆ. ಸ್ನ್ಯಾಪ್ಡೀಲ್ ಸಂಸ್ಥೆ ಈ ತೀರ್ಪನ್ನು ಪ್ರಶ್ನಿಸಿ ಮರುಮನವಿ ಸಲ್ಲಿಸುತ್ತದೆ. ಆಗ ಗ್ರಾಹಕರ ವೇದಿಕೆ ತನ್ನ ತೀರ್ಪಿಗೆ ಬದ್ಧವಾಗಿದ್ದಲ್ಲದೇ ಪರಿಹಾರ ಮೊತ್ತವನ್ನು 10 ಸಾವಿರ ರೂಪಾಯಿಗೆ ಏರಿಸುತ್ತದೆ.