ಬೆಂಗಳೂರು, ಅ. 26: ಇಡೀ ವಿಶ್ವವೇ ಕಳವಳಪಡುವಂಥ ವಿಚಾರ ಇದು. ಜಾಗತಿಕ ಆರ್ಥಿಕತೆ ರಿಸಿಷನ್ ಹಂತಕ್ಕೆ ಜಾರುತ್ತಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ ಪೋಲಿಂಗ್ನಲ್ಲಿ ಬಹುತೇಕ ಅರ್ಥಶಾಸ್ತ್ರಜ್ಞರು ಈ ಅನಿಸಿಕೆ ವ್ಯಕ್ತಪಡಿಸಿದ್ದು, ಪ್ರಮುಖ ದೇಶಗಳ ಆರ್ಥಿಕತೆಯ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದೂ ಅಂದಾಜು ಮಾಡಿದ್ದಾರೆ.
ಆದರೆ, ಸಕಾರಾತ್ಮಕ ಅಂಶ ಎಂದರೆ ಈಗಾಗಲೇ ಆರ್ಥಿಕ ಹಿಂಜರಿತಕ್ಕೆ ಹೋಗಿರುವ ಅಥವಾ ಆ ಹಾದಿಯಲ್ಲಿರುವ ದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಆತಂಕಕಾರಿ ಎನಿಸುವಷ್ಟು ಇಲ್ಲ. ಯಾಕೆಂದರೆ, ಹಿಂದೆ ಜಾಗತಿಕ ಆರ್ಥಿಕ ಹಿಂಜರಿತ ಬಂದಿದ್ದ ಸಂದರ್ಭದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿ, ಸಂಕಷ್ಟದ ಭೀಕರತೆ ಹೆಚ್ಚಾಗುವಂತೆ ಮಾಡಿತ್ತು.
ಆದರೆ ಈ ಬಾರಿ ಆರ್ಥಿಕ ಹಿಂಜರಿತದ ಮಧ್ಯೆಯೂ ನಿರುದ್ಯೋಗ ಅಷ್ಟೇನೂ ಹೆಚ್ಚಿರುವುದಿಲ್ಲ ಎಂಬ ಅಂಕಿ ಅಂಶ ಇದೆ. ಇದು ಹಿಂಜರಿತದ ಪರಿಣಾಮವನ್ನು ತಗ್ಗಿಸುತ್ತದೆಯಾದರೂ ಈ ಸ್ಥಿತಿ ತಾತ್ಕಾಲಿಕ ಮಾತ್ರ ಎಂದೂ ಆರ್ಥಿಕ ತಜ್ಞರು ಎಚ್ಚರಿಸಿದ್ಧಾರೆ. ಈ ಬಾರಿ ಹಣದುಬ್ಬರದ ಅಪಾಯಕಾರಿ ಸ್ಥಿತಿ ನಿರೀಕ್ಷೆಗಿಂತಲೂ ದೀರ್ಘಾವಧಿಯವರೆಗೆ ಇರುತ್ತದೆ ಎಂಬ ಕಳವಳ ಇದೆ.
ಹಣದುಬ್ಬರ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯಗಳು ಕಡಿಮೆ ಆಗಿವೆ. ಬಡ್ಡಿ ದರ ಹೆಚ್ಚಳದ ಕ್ರಮವನ್ನು ವಿವಿಧ ದೇಶಗಳಲ್ಲಿ ಬಹಳ ವೇಗವಾಗಿ ತೆಗೆದುಕೊಳ್ಳಲಾಗಿದೆ. ಆದರೂ ಹಣದುಬ್ಬರ ಕಡಿಮೆ ಆಗಿಲ್ಲ. ಮುಂದಿನ ವರ್ಷ ಹೆಚ್ಚು ಕ್ರಮಕ್ಕೆ ಅವಕಾಶವೇ ಇಲ್ಲವಾಗಿದೆ ಎಂಬುದು ತಜ್ಞರ ಆತಂಕ.
ಹಣದುಬ್ಬರ ಗುರಿ ಮುಟ್ಟಲ್ಲ
ರಾಯ್ಟರ್ಸ್ ನಡೆಸಿದ ಪೋಲಿಂಗ್ನಲ್ಲಿ 22 ದೇಶಗಳ ಸೆಂಟ್ರಲ್ ಬ್ಯಾಂಕ್ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂದಿನ ವರ್ಷಾಂತ್ಯದಲ್ಲಿ ತಮ್ಮ ಹಣದುಬ್ಬರ ಮಿತಿಯ ಗುರಿಯನ್ನು ಮುಟ್ಟಲು ಸಾಧ್ಯವೇ ಎಂಬ ವಿಚಾರದಲ್ಲಿ ಆರು ಸೆಂಟ್ರಲ್ ಬ್ಯಾಂಕುಗಳು ಮಾತ್ರ ಸಕಾರಾತ್ಮಕವಾಗಿವೆ. ಜುಲೈನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಸೆಂಟ್ರಲ್ ಬ್ಯಾಂಕುಗಳು ಹಣದುಬ್ಬರ ನಿಯಂತ್ರಿಸುವ ವಿಶ್ವಾಸದಲ್ಲಿದ್ದವು. ಈಗ ಹೊಸ ಸಮೀಕ್ಷೆಯಲ್ಲಿ ಆ ಆತ್ಮವಿಶ್ವಾಸ ಬಹಳ ಕಡಿಮೆ ಆಗಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳುವ ಸೆಂಟ್ರಲ್ ಬ್ಯಾಂಕುಗಳು ಶೇ. 30 ಕೂಡ ಇಲ್ಲ.
ರಾಯ್ಟರ್ಸ್ ಅಭಿಮತ ಸಂಗ್ರಹವನ್ನು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ. ವಿಶ್ವಾದ್ಯಂತ ಪ್ರಮುಖ 257 ಆರ್ಥಿಕ ತಜ್ಞರು ಮತ್ತು 22 ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಪಾಲ್ಗೊಂಡಿದ್ದರೆನ್ನಲಾಗಿದೆ. ಇವರ ಪ್ರಕಾರ ಜಾಗತಿಕ ಆರ್ಥಿಕ ಬೆಳವಣಿಗೆ 2023ರಲ್ಲಿ ಶೇ. 2.9 ಇರಬಹುದು ಎಂದಿದ್ದ ನಿರೀಕ್ಷೆ ಇದೀಗ ಶೇ. 2.3ಕ್ಕೆ ಇಳಿದಿದೆ. ಆದರೆ, 2024ರಲ್ಲಿ ಆರ್ಥಿಕತೆ ಚೇತರಿಸಿಕೊಂಡು ಶೇ. 3ರ ವೇಗದಲ್ಲಿ ಬೆಳವಣಿಗೆ ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಅಭಿಪ್ರಾಯಪಟ್ಟಿದ್ದಾರೆ.
ಪೋಲಿಂಗ್ನಲ್ಲಿ ಪಾಲ್ಗೊಂಡಿದ್ದ 257 ಆರ್ಥಿಕ ತಜ್ಞರ ಪೈಕಿ 179 ಮಂದಿ ಮುಂದಿನ ದಿನಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುವ ಸಾಧ್ಯತೆ ಕಡಿಮೆ ಎಂಬ ನಿಲುವಿಗೆ ಬಂದಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಜೀವನ ವೆಚ್ಚದ ಬಿಕ್ಕಟ್ಟು ಹೆಚ್ಚಾಗಬಹುದು ಎಂದು ಶೇ. 70ರಷ್ಟು ಮಂದಿ ಹೇಳಿದರೆ, ಜೀವನ ವೆಚ್ಚದ ಸಮಸ್ಯೆ ಸುಧಾರಿಸಬಹುದು ಎಂಬುದು ಮಿಕ್ಕವರ ಅನಿಸಿಕೆ.
ಅಮೆರಿಕದ ಸಂಕಷ್ಟ
ಚೀನಾ, ಅಮೆರಿಕ ಮೊದಲಾದ ಬೃಹತ್ ಆರ್ಥಿಕತೆಯ ದೇಶಗಳ ಬೆಳವಣಿಗೆ ಬಹಳ ಕಡಿಮೆ ಆಗುವ ನಿರೀಕ್ಷೆ ಇದೆ. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಹಣದುಬ್ಬರ ಮಿತಿಮೀರಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕೆ ಸತತ ಮೂರು ಬಾರಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಇನ್ನೂ ಒಂದೆರಡು ಬಾರಿಯಾದರೂ ಬಡ್ಡಿ ದರ ಹೆಚ್ಚುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಡಾಲರ್ಗೆ ಬೇಡಿಕೆ ಹೆಚ್ಚಿ ಬೇರೆ ಕರೆನ್ಸಿಗಳ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತದೆ. ತತ್ಪರಿಣಾಮವಾಗಿ ರೂಪಾಯಿ ಕುಸಿತವನ್ನು ತಡೆಯಲು ಆರ್ಬಿಐ ಕೂಡ ಬಡ್ಡಿ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಅತ್ತ ಫೆಡರಲ್ ಬ್ಯಾಂಕ್ ದರ ಏರಿಕೆ ಆಗುತ್ತಿರುವಂತೆಯೇ ಆರ್ಬಿಐ ಕೂಡ ದರ ಏರಿಸುವಂಥ ಪರಿಸ್ಥಿತಿ ಇದೆ.
ಅಮೆರಿಕದ ಫೆಡರಲ್ ಬ್ಯಾಂಕ್ ನವೆಂಬರ್ 2ರಂದು 75 ಮೂಲಾಂಕಗಳಷ್ಟು ಬಡ್ಡಿ ದರ ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿದೆ. ಭಾರತದಲ್ಲೂ ಬಡ್ಡಿ ದರ ಏರಿಕೆಗೆ ಜನರು ಸಿದ್ಧವಾಗಬೇಕಷ್ಟೇ.
ಚೀನಾದ ಒದ್ದಾಟ
ಚೀನಾದ ಆರ್ಥಿಕತೆ 2022ರಲ್ಲಿ ಶೇ. 3.2ರಷ್ಟು ಇರಬಹುದು ಎಂಬ ನಿರೀಕ್ಷೆ ಇದೆ. ಈ ಬಿಕ್ಕಟ್ಟು ಉದ್ಭವಿಸುವ ಮುನ್ನ ಚೀನಾದ ಆರ್ಥಿಕತೆ 2022ರಲ್ಲಿ ಶೇ 5.5ರಷ್ಟು ಇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಕೋವಿಡ್ ಬಿಕ್ಕಟ್ಟು ಬಂದ ಸಂದರ್ಭದಲ್ಲಿ ಚೀನಾದ ಜಿಡಿಪಿ ಕೇವಲ 2.2ರಷ್ಟು ಮಾತ್ರ ಬೆಳವಣಿಗೆ ಹೊಂದಿತ್ತು. ಆ ವರ್ಷ ಹೊರತುಪಡಿಸಿದರೆ 1976ರ ನಂತರ 2022 ಚೀನಾ ಪಾಲಿಗೆ ಅತೀ ಕಳಪೆಯ ಆರ್ಥಿಕ ವರ್ಷ ಆಗಿರಲಿದೆ.
ಬೇರೆ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಪ್ರಗತಿ ಅಂದಾಜು ಉತ್ತಮವಾಗಿದೆ. ನಿರೀಕ್ಷಿಸಿದಕ್ಕಿಂತ ಬೆಳವಣಿಗೆ ಕಡಿಮೆ ಆಗುತ್ತದಾದರೂ 2022-23ರ ಹಣಕಾಸು ವರ್ಷದಲ್ಲಿ ಶೇ. 6-7ರ ಆಸುಪಾಸಿನಲ್ಲಿ ಭಾರತದ ಆರ್ಥಿಕ ಪ್ರಗತಿ ಇರುವ ನಿರೀಕ್ಷೆ ಇದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications