ಸದ್ಯಕ್ಕಿಲ್ಲ ಸುಸ್ತಿ ಸಾಲ ವಸೂಲಿ, ಕಾರ್ಪೋರೇಟ್ ವಲಯದ ಸಾಲಗಾರರಿಗೆ ನೆಮ್ಮದಿ
ಈಗಾಗಲೇ ಕೊರೊನಾವೈರಸ್ನಿಂದಾಗಿ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ಕಾರ್ಪೋರೇಟ್ ಉದ್ಯಮಗಳು ಕೂಡ ಭಾರೀ ನಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿಗೆ ಜಾರಿಯಲ್ಲಿ ಇರುವ ದಿವಾಳಿ ಸಂಹಿತೆ(ಐಬಿಸಿ) ಪ್ರಕ್ರಿಯೆಯನ್ನು ಒಂದು ವರ್ಷದವರೆಗೆ ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪಿಟಿಐ ಮೂಲಗಳು ಹೇಳಿವೆ.
ಕೊರೊನಾವೈರಸ್ ದೇಶದ ಆರ್ಥಿಕತೆಯ ಜೊತೆಗೆ ಕಾರ್ಪೋರೇಟ್ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ. ಹೀಗಾಗಿ ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಕಾರ್ಪೋರೇಟ್ ವಲಯದ ಸಾಲಗಾರರಿಗೆ ಸರ್ಕಾರದ ಈ ತೀರ್ಮಾನದಿಂದ ನೆಮ್ಮದಿ ಸಿಗಲಿದೆ.
ಸಾಲ ಮರುಪಾವತಿ ಮಾಡದ ಸುಸ್ತಿದಾರರಿಂದ ಸಾಲ ವಸೂಲಾತಿಗೆ ಅವಕಾಶ ಮಾಡಿಕೊಟ್ಟಿದ್ದ "ಐಬಿಸಿ' ಪ್ರಕ್ರಿಯೆಗೆ ಈಗ ಒಂದು ವರ್ಷದವರೆಗೆ ತಡೆ ದೊರೆಯಲಿದೆ. ಸಾಲ ಮರುಪಾವತಿಸದಿರುವುದು 90 ದಿನಗಳನ್ನು ದಾಟಿದರೆ ಅದನ್ನು ಸುಸ್ತಿ ಸಾಲ ಎಂದು ಪರಿಗಣಿಸಲಾಗುತ್ತದೆ.
ಐಬಿಸಿಯ ಪ್ರಕ್ರಿಯೆಗೆ ಒಂದು ವರ್ಷ ತಡೆ ನೀಡುವುದರಿಂದ ಬ್ಯಾಂಕುಗಳು ಸಾಲಗಳನ್ನು ಮರು ಹೊಂದಾಣಿಕೆ ಮಾಡಲು ಅವಕಾಶ ದೊರೆಯಲಿದೆ.