ಬಿಪಿಎಲ್ ಕುಟುಂಬಗಳಿಗೆ 3 ತಿಂಗಳು ಉಚಿತ LPG ಸಿಲಿಂಡರ್: ನಿರ್ಮಲಾ ಸೀತಾರಾಮನ್
ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ಐದು ಕೆಜಿ ಅಕ್ಕಿ ಅಥವಾ ಗೋಧಿಯನ್ನು ಹೆಚ್ಚವರಿಯಾಗಿ ನೀಡುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಜೊತೆಗೆ ಮೂರು ತಿಂಗಳು ಉಚಿತ ಎಲ್ಪಿಜಿ ಸಿಲಿಂಡರ್ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲಾಕ್ಡೌನ್ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲವಾಗಬೇಕು. ಈ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜನತೆಯು ಹಸಿವಿನಿಂದ ಇರಬಾರದು ಎಂದು ಆರ್ಥಿಕ ಪ್ಯಾಕೇಜ್ ಘೋಷಿಸಿರುವ ಕೇಂದ್ರ ಸರ್ಕಾರ ,ಉಜ್ವಲ ಯೋಜನೆಯಡಿ ಎಲ್ಪಿಜಿ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳವರೆಗೂ 3 ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಿದೆ. ಇದರಿಂದಾಗಿ ಬಿಪಿಎಲ್ ಅಡಿಯಲ್ಲಿ ಎಲ್ಪಿಜಿ ಸಂಪರ್ಕ ಪಡೆದಿರುವ 8 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿದೆ.
ಇದರ ಜೊತೆಗೆ ಜನ್ ಧನ್ ಅಕೌಂಟ್ ಹೊಂದಿರುವ 20 ಕೋಟಿ ಮಹಿಳೆಯರಿಗೆ ತಲಾ 500 ರುಪಾಯಿ ಮುಂದಿನ ಮೂರು ತಿಂಗಳ ಕಾಲ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
3 ತಿಂಗಳು ಉಚಿತ ಸಿಲಿಂಡರ್, 5 ಕೆಜಿ ಅಕ್ಕಿ, ಗೋಧಿ ಫ್ರೀ, 3 ತಿಂಗಳು PF ಹಣ ಸರ್ಕಾರದಿಂದಲೇ ಪಾವತಿ, ರೈತರಿಗೆ 2,000 ರು
ಅಲ್ಲದೆ ಸ್ವ-ಸಹಾಯ ಮಹಿಳಾ ಸಂಘಗಳಿಗೆ ದೀನ್ ದಯಾಳ್ ಯೋಜನೆಯಡಿ 20 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ವಯೋವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ತಿಂಗಳಿಗೆ 1000 ರುಪಾಯಿ ಪಿಂಚಣಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.