ಐತಿಹಾಸಿಕ ತಾಂತ್ರಿಕ ಆರ್ಥಿಕ ಕುಸಿತದಲ್ಲಿದೆ ಭಾರತ ಎಂದ ಆರ್ ಬಿಐ
ಭಾರತದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲೂ ಬಹುತೇಕ ಕುಸಿತ ಕಾಣಲಿದೆ ಎಂದು ಆರ್ಥಿಕ ತಜ್ಞರನ್ನು ಒಳಗೊಂಡ ತಂಡವು ಅಭಿಪ್ರಾಯ ಪಟ್ಟಿದೆ. ಹಣಕಾಸು ನೀತಿಯ ಜವಾಬ್ದಾರಿ ಹೊತ್ತಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಗವರ್ನರ್ ಮೈಕೆಲ್ ಪಾತ್ರ ಈ ತಂಡದಲ್ಲಿ ಇದ್ದು, ದೇಶವು ಈ ಹಿಂದೆಂದೂ ಕಂಡಿರದ ಆರ್ಥಿಕ ಕುಸಿತಕ್ಕೆ ಸಿಲುಕಲಿದೆ ಎಂದಿದ್ದಾರೆ.
ಆರ್ ಬಿಐನಿಂದ ಪ್ರಕಟಿಸಿರುವ ವರದಿ ಪ್ರಕಾರ, ಸೆಪ್ಟೆಂಬರ್ ತ್ರೈ ಮಾಸಿಕದ ಕೊನೆಗೆ ಜಿಡಿಪಿ 8.6% ಇಳಿಕೆ ಆಗಿದೆ. ಹೈ ಫ್ರೀಕ್ವೆನ್ಸಿ ಡೇಟಾದ ಆಧಾರದಲ್ಲಿ ಅಂದಾಜು ಮಾಹಿತಿ ಮಾತ್ರ ಇದು. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯು ಇಪ್ಪತ್ನಾಲ್ಕು ಪರ್ಸೆಂಟ್ ಕುಸಿತ ಕಂಡಿತ್ತು.
"ಈಗಿನ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಐದು ವರ್ಷ ಬೇಕಾಗಬಹುದು"
"ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತವು 2020- 21ರ ಪ್ರಥಮಾರ್ಧದಲ್ಲಿ ತಾಂತ್ರಿಕ ಆರ್ಥಿಕ ಕುಸಿತಕ್ಕೆ ಪ್ರವೇಶಿಸಿದೆ," ಎಂದು ಲೇಖಕರು ದಾಖಲಿಸಿದ್ದಾರೆ ಅಂದ ಹಾಗೆ ಅಧಿಕೃತ ಲೆಕ್ಕಾಚಾರವನ್ನು ನವೆಂಬರ್ 27ನೇ ತಾರೀಕಿನಂದು ಪ್ರಕಟಿಸಲಿದೆ.
ವಾಹನಗಳ ಮಾರಾಟ ಸೇರಿದಂತೆ ವಿವಿಧ ಅಂಶಗಳನ್ನು ರಿಸರ್ವ್ ಬ್ಯಾಂಕ್ ಗಣನೆಗೆ ತೆಗೆದುಕೊಂಡಿದೆ. ಇನ್ನು ಅಕ್ಟೋಬರ್ ನಲ್ಲಿ ಆದ ಸಕಾರಾತ್ಮಕ ಬದಲಾವಣೆ ಹೀಗೇ ಮುಂದುವರಿದಲ್ಲಿ ಮಾತ್ರ ಭಾರತದ ಆರ್ಥಿಕತೆಯು ಅಕ್ಟೋಬರ್ ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಮರಳುತ್ತದೆ. ಈ ಹಿಂದೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಂದಾಜು ಮಾಡಿದ್ದಕ್ಕಿಂತ ಶೀಘ್ರವಾಗಿ ಇದು ಆಗಲಿದೆ ಎನ್ನಲಾಗಿದೆ.
ಆದರೆ, ನೀತಿ ನಿರೂಪಣೆಯ ವಿಚಾರದಲ್ಲಿ ನಂಬಿಕೆ ಇಡುವ ಸ್ಥಿತಿಯಲ್ಲಿ ಇಲ್ಲ. ಈ ಕಾರಣಕ್ಕೆ ಹಣದುಬ್ಬರ ಆಗಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಇದರ ಜತೆಗೆ ಜಾಗತಿಕ ಮಟ್ಟದಲ್ಲಿ ಎರಡನೇ ಸುತ್ತಿನ ಕೊರೊನಾ ಅಪಾಯದ ಭೀತಿಯೂ ಇದೆ ಎಂದು ಹೇಳಿದ್ದಾರೆ.
ಕುಟುಂಬಗಳು ಹಾಗೂ ಕಾರ್ಪೊರೇಟ್ ವಲಯದಲ್ಲಿ ಒತ್ತಡದಲ್ಲಿ ಇದ್ದು, ಅದು ಹಣಕಾಸು ವಲಯದಲ್ಲಿ ಕಾಣಿಸಿಕೊಳ್ಳಬಹುದು ಎಂದಿರುವ ವಿಶ್ಲೇಷಕರು, ನಾವೀಗ ಸವಾಲಿನ ಸನ್ನಿವೇಶದಲ್ಲಿ ಇದ್ದೇವೆ ಎಂದು ವರದಿ ಮುಕ್ತಾಯ ಮಾಡಿದ್ದಾರೆ.