ಇರಾನ್ಗೆ ಭಾರತದ ಬಾಸ್ಮತಿ ಅಕ್ಕಿ ರಫ್ತಿಗೆ ತಡೆ, ಬೆಳೆಗಾರರಿಗೆ ನಷ್ಟ
ಇರಾಕ್ನ ಬಾಗ್ದಾದ್ನಲ್ಲಿ ಇರಾನ್ ಸೇನಾಧಿಕಾರಿ ಹತ್ಯೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡದಂತೆ ತಡೆ ಹಿಡಿಯುವ ಸಾಧ್ಯತೆ ಇದೆ.
ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಖರೀದಿಸಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇರಾನ್ಗೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಲು ಸಾಧ್ಯವಿಲ್ಲ. ಸದ್ಯದ ಪರಿಸ್ಥಿತಿಯು ತಿಳಿಯಾಗುವವರೆಗೂ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ(ಎಐಆರ್ಎಇ) ತನ್ನ ಸದಸ್ಯರಿಗೆ ಮನವಿ ಮಾಡಿದೆ.
''ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಸಾಗಾಣಿಕೆ ಪಾವತಿ ಹಲವಾರು ತಿಂಗಳು ವಿಳಂಭವಾಗುವುದು ಖಚಿತ. ಬಾಸ್ಮತಿ ಅಕ್ಕಿ ರಫ್ತು ಸ್ಥಗಿತಗೊಂಡರೆ ದೇಶದಲ್ಲಿನ ಸಂಗ್ರಹ ಹೆಚ್ಚಳಗೊಳ್ಳಲಿದೆ. ಆದ್ದರಿಂದ ಬೆಲೆ ಅಗ್ಗವಾಗಿ ಬೆಳೆಗಾರರ ಆದಾಯಕ್ಕೆ ಹೊಡೆತ ಬೀಳಲಿದೆ'' ಎಂದು ಎಐಆರ್ಎಇ ಅಧ್ಷಕ್ಷ ಎನ್.ಆರ್. ಗುಪ್ತಾ ಹೇಳಿದ್ದಾರೆ.
ಇರಾನ್ ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನದ ಕಾರಣಕ್ಕೆ ಹಿಂದಿನ ವರ್ಷ ರಫ್ತಿಗೆ ಸಂಬಂಧಿಸಿದಂತೆ 900 ಕೋಟಿ ಪಾವತಿ ಬಾಕಿ ಉಳಿದಿದೆ. ಡಿಸೆಂಬರ್ನಲ್ಲಿ ಇರಾನ್ ದೇಶವು ಭಾರತದಿಂದ 2 ಲಕ್ಷ ಟನ್ ಬಾಸ್ಮತಿಗಾಗಿ ಹೊಸ ಟೆಂಡರ್ ತೆರೆದಿದ್ದ ಹಿನ್ನೆಲೆ ಭಾರತದ ಅಕ್ಕಿ ರಫ್ತುದಾರರು ವ್ಯಾಪಾರದಲ್ಲಿ ವೇಗ ಕಾಣಬಹುದೆಂದು ನಿರೀಕ್ಷಿಸಿದ್ದರು.
ದೇಶದ ಬಾಸ್ಮತಿ ಅಕ್ಕಿಗೆ ಇರಾನ್ ಪ್ರಮುಖ ರಫ್ತು ದೇಶವಾಗಿದೆ. ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಇರಾನ್ ಖರೀದಿಸುತ್ತದೆ. ಆದರೆ ಈಗ ರಫ್ತಿಗೆ ತಡೆ ಬೀಳುವ ಸಾಧ್ಯತೆ ಹಿನ್ನೆಲೆ ಬಾಸ್ಮತಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.