ಇರಾನ್ ನ ಕಮ್ಯಾಂಡರ್ ಖಾಸಿಂ ಸುಲೇಮಾನಿಯನ್ನು ಇರಾಕ್ ನ ಬಾಗ್ದಾದ್ ನಲ್ಲಿ ಅಮೆರಿಕವು ವಾಯುದಾಳಿಯಲ್ಲಿ ಹತ್ಯೆ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ಮಧ್ಯೆ ಯುದ್ಧವೇ ಸಂಭವಿಸುವಂಥ ಸ್ಥಿತಿ ಇದೆ ಎಂಬುದು ಸದ್ಯಕ್ಕೆ ವಿಶ್ಲೇಷಕರ ಅಭಿಮತ. ಈ ಹತ್ಯೆಯ ಬೆನ್ನಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬಿರುಗಾಳಿಯೇ ಏಳಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ.
ವಿಶ್ವ ಮಟ್ಟದಲ್ಲಿ ಈ ವಿದ್ಯಮಾನ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಅರೆಕ್ಷಣ ಪಕ್ಕಕ್ಕಿಟ್ಟು, ಭಾರತಕ್ಕೆ ಮಾತ್ರ ಅನ್ವಯಿಸಿ ಹೇಳುವುದಾದರೂ ಆರ್ಥಿಕತೆ ಮೇಲೆ ಸ್ಪಷ್ಟ ಪರಿಣಾಮ ಬೀರಬಹುದು ಎಂಬ ಅಂಶ ಖಾತ್ರಿ ಆಗುತ್ತದೆ. ಏಕೆಂದರೆ, ಭಾರತಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ತೈಲ ಆಮದಾಗುವುದು ಇರಾನ್ ನಿಂದ. ಅಮೆರಿಕ ಮತ್ತು ಇರಾನ್ ಮಧ್ಯೆ ಕದನ ಸನ್ನಿವೇಶ ಸೃಷ್ಟಿಯಾಗಿದ್ದರೆ ಹೊಡೆತ ಭಾರತಕ್ಕೆ ಬೀಳುತ್ತದೆ.
ಯಾವ ರೀತಿಯಲ್ಲಿ ಈ ಪರಿಣಾಮ ಆಗುತ್ತದೆ ಎಂಬುದನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಅದರ ವಿವರಣೆ ಹೀಗಿದೆ.
ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು
ಭಾರತದ ಶೇಕಡಾ ತೊಂಬತ್ತರಷ್ಟು ತೈಲ ಆಮದು ಆಗುವುದು ಇರಾನ್ ನಿಂದ. ಇರಾನ್ ನ ಸೇನಾ ಮುಖ್ಯಸ್ಥರನ್ನು ಅಮೆರಿಕ ಹತ್ಯೆ ಮಾಡಿದ ಮೇಲೆ ಬ್ಯಾರೆಲ್ ಕಚ್ಚಾ ತೈಲದ ಬೆಲೆ ನಾಲ್ಕು ಪರ್ಸೆಂಟ್ ಏರಿಕೆ ಆಗಿದೆ. ಅಮೆರಿಕಕ್ಕೆ ಪ್ರತೀಕಾರ ಹೇಳಲೇಬೇಕು ಎಂದು ನಿರ್ಧರಿಸಿರುವ ಇರಾನ್ ಮುಂದೆ ಕೆಲವು ಆಯ್ಕೆಗಳಿವೆ. ಅವುಗಳಲಿ ಮುಖ್ಯವಾದದ್ದು ಹರ್ಮಜ್ ಜಲಸಂಧಿಯನ್ನು ಮುಚ್ಚುವುದು. ಪರ್ಷಿಯನ್ ರಾಷ್ಟ್ರಗಳಿಂದ ತೈಲ ಬರುವುದಕ್ಕೆ ಇರುವ ಏಕೈಕ ಸಮುದ್ರ ಮಾರ್ಗ ಇದು. ಎರಡು ವರ್ಷಗಳ ಹಿಂದೆ ಅಮೆರಿಕವು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದಾಗ ಹೀಗೇ ಮಾಡಲಾಗಿತ್ತು. ಪರ್ಷಿಯನ್ ಗಲ್ಫ್ ಮತ್ತು ಮಧ್ಯಪ್ರಾಚ್ಯದ ಮೇಲೆ ಇರಾನ್ ದಾಳಿ ನಡೆಸಬಹುದು ಎಂಬ ಮಾತು ಕೇಳಿಬರುತ್ತಿದೆ.
ಕಳೆದ ವರ್ಷ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ದಾಳಿ ಆಗಿ, ಉತ್ಪಾದನೆ ಮೇಲೆ ಪರಿಣಾಮ ಆಗಿತ್ತು. ಅದೇ ರೀತಿಯದು ಅಥವಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ದಾಳಿ ನಡೆದರೆ ತೈಲ ಸರಬರಾಜಿನಲ್ಲಿ ಕೊರತೆ ಆಗುತ್ತದೆ. ಭಾರತದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಆಗುತ್ತದೆ. ಸದ್ಯಕ್ಕೆ ಪೆಟ್ರೋಲ್ -ಡೀಸೆಲ್ ಬೆಲೆ ನಿತ್ಯವೂ ಪರಿಷ್ಕರಣೆ ಆಗುತ್ತಿದೆ. ಅಂತರರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರದ ಆಧಾರದಲ್ಲಿ ಬೆಲೆ ನಿಗದಿ ಆಗುತ್ತದೆ. ಆದ್ದರಿಂದ ಬೆಲೆ ಏರಿಕೆ ಆಗಬಹುದು ಎನ್ನಲಾಗುತ್ತಿದೆ.
ರುಪಾಯಿ ಮೌಲ್ಯ
ಆಮದು ಮೌಲ್ಯದ ಮೊತ್ತ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ವಿತ್ತೀಯ ಕೊರತೆ ಎದುರಾಗಿ, ರುಪಾಯಿ ಮೌಲ್ಯ ಕುಸಿತವಾಗುತ್ತದೆ. ಎರಡು ವರ್ಷದ ಹಿಂದೆ ಅಕ್ಟೋಬರ್ ನಲ್ಲಿ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಎಪ್ಪತ್ನಾಲ್ಕು ರುಪಾಯಿ ದಾಟಿತ್ತು. ಮುಖ್ಯವಾಗಿ ಅದಕ್ಕೆ ತೈಲ ಬೆಲೆಯಲ್ಲಿನ ಏರಿಕೆ ಕಾರಣ ಆಗಿತ್ತು. ಭಾರತದ ಎಲ್ಲ ನಗರಗಳಲ್ಲೂ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಿತ್ತು. ಕಳೆದ ಶುಕ್ರವಾರ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ನಾಲ್ಕು ಪರ್ಸೆಂಟ್ ಇಳಿಯಿತು.
ಹಣದುಬ್ಬರ
ತೈಲ ಬೆಲೆ ಏರಿಕೆ, ರುಪಾಯಿ ಮೌಲ್ಯ ಕುಸಿತದಿಂದ ಹಣದುಬ್ಬರ ಅಗುತ್ತದೆ. ಭಾರತವು ಆರ್ಥಿಕ ಕುಸಿತ ಎದುರಿಸುತ್ತಿದ್ದು, ಹಣದುಬ್ಬರದ ಕಾರಣಕ್ಕೆ ರಿಸರ್ವ್ ಬ್ಯಾಂಕ್ ನ ಆರ್ಥಿಕ ಬೆಳವಣಿಗೆಯ ಪ್ರಯತ್ನಗಳಿಗೆ ಬ್ರೇಕ್ ಬಿದ್ದಂತಾಗುತ್ತದೆ. ಬಡ್ಡಿದರ ಇನ್ನಷ್ಟು ಕಡಿತ ನಿರೀಕ್ಷೆ ಸಾಧ್ಯವಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ದರವು ಮೂರು ವರ್ಷದ ಗರಿಷ್ಠ ಮಟ್ಟ ತಲುಪಿತ್ತು. ಇನ್ನು ಆಹಾರ ಹಣದುಬ್ಬರ ಹತ್ತು ಪರ್ಸೆಂಟ್ ದಾಟಿತ್ತು. ಯಾವಾಗ ತೈಲ ಬೆಲೆ ಏರಿಕೆ ಆಗುತ್ತದೋ ಆಗ ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಅದರ ಬೆನ್ನಿಗೇ ಹಣದುಬ್ಬರ ಆಗುತ್ತದೆ.
ಈಕ್ವಿಟಿ ಹೂಡಿಕೆ
ಅಮೆರಿಕದ ವಾಯು ದಾಳಿ ಸುದ್ದಿಯ ಬೆನ್ನಿಗೇ ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಜಾಗೃತರಾಗಿದ್ದಾರೆ. ಅದರ ಪರಿಣಾಮವಾಗಿ ಷೇರು ಮಾರುಕಟ್ಟೆ ಇಳಿಕೆ ದಾಖಲಿಸಿವೆ. ಇಂಥ ಅನಿಶ್ಚಿತ ಸನ್ನಿವೇಶದಲ್ಲಿ ಸಾಂಸ್ಥಿಕ ಹೂಡಿಕೆದಾರರು ಈಕ್ವಿಟಿ ಹೂಡಿಕೆಯನ್ನು ಕಡಿಮೆ ಮಾಡುತ್ತಾರೆ. ರೀಟೇಲ್ ಹೂಡಿಕೆದಾರರು ರಿಯಾಯಿತಿ ಬೆಲೆಗೆ ಮಾರಾಟ ಆಗುತ್ತಿರುವ ಉತ್ತಮ ಷೇರುಗಳ ಖರೀದಿಗೆ ಅವಕಾಶಗಳನ್ನು ಎದುರು ನೋಡುತ್ತಾರೆ.


Click it and Unblock the Notifications