ಜಿಎಸ್ಟಿ ಆದಾಯ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
ಕೊರೊನಾ ಸಾಂಕ್ರಾಮಿಕದ ನಡುವೆ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಾಖಲೆಯ ಮಟ್ಟದಲ್ಲಿ ಸಂಗ್ರಹವಾಗಿದ್ದು, ಇಡೀ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ಎಂಟನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದ ಬಿಎಸ್ವೈ ಸರ್ಕಾರವು 2020-21ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್ಟಿ ಸೇರಿದಂತೆ 82,443 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿಪಡಿಲಾಗಿತ್ತು. ಫೆಬ್ರವರಿ ತಿಂಗಳ ಅಂತ್ಯಕ್ಕೆ 71,833 ಕೋಟಿ ರೂ. ಸಂಗ್ರಹಿಸಲಾಗಿದೆ. ಹೀಗಾಗಿ 2021-22ನೇ ಸಾಲಿಗೆ 76,473 ಕೋಟಿ ರೂ. ಜಿಎಸ್ಟಿ ಸಂಗ್ರಹದ ಗುರಿಯನ್ನು ವಾಣಿಜ್ಯ ತೆರಿಗೆ ಇಲಾಖೆಗೆ ನಿಗದಿ ಪಡಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಇದು ಕಳೆದ ವರ್ಷದ ಗುರಿಗಿಂತಲೂ 5,970 ಕೋಟಿ ರೂ. ಕಡಿಮೆಯಾಗಿದೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಎರಡನೇ ರಾಜ್ಯವಾಗಿದೆ. ಉತ್ತಮ ತೆರಿಗೆ ಅನುಪಾಲನೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆ ವಂಚನೆ ತಡೆಗಟ್ಟಲು ವಾಣಿಜ್ಯ ತೆರಿಗೆ ಮುಂಚೂಣಿಯಲ್ಲಿದೆ.
ಈ ಹಿಂದಿನ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸುವ ಹಾಗೂ ತೆರಿಗೆ ಬಾಕಿಯನ್ನು ತ್ವರಿತ ಗತಿಯಲ್ಲಿ ವಸೂಲಿ ಮಾಡಲು ''ಜಿಎಸ್ಟಿ ಪೂರ್ವದ ಕಾಯ್ದೆಗಳಿಗೆ ಸಂಬಂಸಿದಂತೆ ಕರ ಸಮಾಧಾನ ಯೋಜನೆ 2020-21'' ಅನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಆರ್ಥಿಕ ಸಾಲಿನಲ್ಲಿ ನಿರೀಕ್ಷೆ ಮಾಡಲಾಗಿದ್ದ 28,591 ಕೋಟಿ ತೆರಿಗೆಗೆ ಪ್ರತಿಯಾಗಿ 20,053 ಕೋಟಿಗೆ ಇಳಿಕೆಯಾಗಿದೆ. 2020-21ನೇ ಸಾಲಿಗೆ 24,591 ಕೋಟಿ ತೆರಿಗೆ ಪಾಲು ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯದ ಜಿಎಸ್ಟಿ ಸಂಗ್ರಹ ಇಳಿಕೆಯಾಗಿದೆ. ಇದನ್ನು ಕೇಂದ್ರ ಸರ್ಕಾರ ನೀಡಬೇಕಾಗಿದ್ದು, ಆದರೆ ಸಾಲ ಪಡೆದು ಹಣ ನೀಡುವುದಾಗಿ ತಿಳಿಸಿದೆ.
2020-21ನೇ ಸಾಲಿನಲ್ಲಿ 12,407 ಕೋಟಿಯನ್ನು ಕೇಂದ್ರ ಸರ್ಕಾರ ಸಾಲ ಪಡೆದು ಜಿಎಸ್ಟಿಗೆ ಪರಿಹಾರವಾಗಿ ನೀಡಿದೆ.