ಅರ್ಚಕರು, ಪ್ರುರೋಹಿತರನ್ನು ಮದುವೆ ಆಗುವ ಬ್ರಾಹ್ಮಣ ಹೆಣ್ಣುಮಕ್ಕಳಿಗೆ 3 ಲಕ್ಷ ರು. ಬಾಂಡ್
ಕರ್ನಾಟಕದಲ್ಲೂ ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣರಿಗಾಗಿ ಯೋಜನೆ ಘೋಷಿಸಲಾಗಿದೆ. ಏನು ಆ ಯೋಜನೆ ಏನು ಅಂದರೆ, ಅರ್ಚಕ- ಪುರೋಹಿತ ವೃತ್ತಿಯಲ್ಲಿ ಇರುವವರನ್ನು ಮದುವೆಯಾಗಲು ಮುಂದೆ ಬರುವ ಹೆಣ್ಣುಮಕ್ಕಳ ಹೆಸರಿಗೆ 3 ಲಕ್ಷ ರುಪಾಯಿ ಮೊತ್ತದ ಬಾಂಡ್ ವಿತರಿಸಲಾಗುತ್ತದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಚ್. ಸಚ್ಚಿದಾನಂದ ಸೋಮವಾರ (ಜನವರಿ 4, 2021) ತಿಳಿಸಿದ್ದಾರೆ.
ಇತ್ತೀಚೆಗೆ ಅರ್ಚಕರು, ಪುರೋಹಿತರಿಗೆ ಮದುವೆಗೆ ಹೆಣ್ಣುಮಕ್ಕಳು ಸಿಗುವುದು ಹಾಗೂ ಅವರು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ಈ ಬಾಂಡ್ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ ಮೂರು ವರ್ಷದ ನಂತರ ಬಾಂಡ್ ಹಣವನ್ನು ಫಲಾನುಭವಿಗಳು ಪಡೆಯಬಹುದು ಎಂದಿದ್ದಾರೆ.
Wedding Insurance: ಮದುವೆ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಈ ಯೋಜನೆಗೆ ಜನವರಿ 6ನೇ ತಾರೀಕಿನಂದು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಈ ಬಾಂಡ್ ಯೋಜನೆ ರೀತಿಯಲ್ಲೇ ಬಡ ಹೆಣ್ಣುಮಕ್ಕಳ ಮದುವೆಗೆ 25 ಸಾವಿರ ರು., ಐದು ಎಕರೆಯೊಳಗೆ ಕೃಷಿ ಜಮೀನು ಇರುವವರಿಗೆ ಕೊಳವೆಬಾವಿ (ಬೋರ್ ವೆಲ್) ಕೊರೆಸುವುದಕ್ಕೆ, ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಮತ್ತು ಹೈನುಗಾರಿಕೆಗೆ ಧನ ಸಹಾಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ 'ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ'ವನ್ನು ಪರಿಚಯಿಸಲಾಗಿದೆ. ಇದರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಜಿಲ್ಲೆಗೆ ಮೂವರಂತೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕ್ರಮವಾಗಿ 15, 10 ಮತ್ತು 5 ಸಾವಿರ ರು., ಪದಚಿ ವಿದ್ಯಾರ್ಥಿಗಳಿಗೆ 25 ಸಾವಿರ ರು., ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 50 ಸಾವಿರ ರು. ಶಿಷ್ಯವೇತನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.