ವಿಶ್ವದಾಖಲೆಯ ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿ ಮೋದಿ ಕಾರ್ಯಕ್ರಮಗಳ ವೆಚ್ಚ ಎಷ್ಟು?
ಬೆಂಗಳೂರು, ನ. 11: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ಹಲವು ಕಾರಣಗಳಿಗೆ ಸದ್ದು ಮಾಡಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನೆಯಿಂದ ಹಿಡಿದು ಕೆಂಪೇಗೌಡ ಪ್ರತಿಮೆ ಅನಾವರಣದವರೆಗೂ ನರೇಂದ್ರ ಮೋದಿ ಕೆಲವಾರು ಕಾರ್ಯಕ್ರಮಗಳನ್ನು ಚಾಲನೆ ಕೊಟ್ಟಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ (ಕೆಐಎಎಲ್) ಹೊಸ ಟರ್ಮಿನಲ್ ಉದ್ಘಾಟನೆ, ಮೂರು ಕಾಮಗಾರಿಗಳು, ಕೆಂಪೇಗೌಡ ಪ್ರತಿಮೆ ಅನಾವರಣ, ಮೋದಿ ಕಾರ್ಯಕ್ರಮ ಆಯೋಜನೆ ಹೀಗೆ ಒಟ್ಟು ಆಗಿರುವ ವೆಚ್ಚ ಅಂದಾಜು 48 ಕೋಟಿ ರೂ ಎಂಬುದು ತಿಳಿದುಬಂದಿದೆ.
ಇದು ದಿ ಫೈಲ್ನಲ್ಲಿ ಪ್ರಕಟವಾದ ವರದಿಯನ್ನ ಆಧರಿಸಿ ಮಾಹಿತಿ ನೀಡಿರುವುದಾಗಿದೆ. ಇಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಭಾರತ್ ಗೌರವ್ ಕಾಶಿ ದರ್ಶನ್ ರೈಲು ಉದ್ಘಾಟನೆಯ ಕಾರ್ಯಕ್ರಮಗಳ ವೆಚ್ಚ ಇದರಲ್ಲಿಲ್ಲ.
ದಿ ಫೈಲ್ ವರದಿ ಪ್ರಕಾರ ಏರ್ಪೋರ್ಟ್ ಬಳಿಯ ಮೂರು ಕಾಮಗಾರಿಗಳು ಮತ್ತು ವ್ಯವಸ್ಥೆಗೆ ಅಂದಾಜು 45.73 ಕೋಟಿ ರೂ ಖರ್ಚಾಗಿದೆ. ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮದ ಆಯೋಜನೆಗೆ 2.75 ಕೋಟಿ ವೆಚ್ಚವಾಗಬಹುದು ಎಂದು ಹೇಳಲಾಗಿದೆ.
ಕೆಂಪೇಗೌಡ ಪ್ರತಿಮೆ ವಿಶ್ವದಾಖಲೆ
ಕೆಐಎಎಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ಈ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದರು. ಪ್ರಗತಿ ಪ್ರತಿಮೆ ಎಂದೇ ಹೆಸರಿಸಲಾಗಿರುವ ಕೆಂಪೇಗೌಡರ ಈ ಪ್ರತಿಮೆಯನ್ನು ಕಂಚಿನಿಂದ ನಿರ್ಮಿಸಲಾಗಿದೆ. ವಿಶ್ವದ ನಗರ ನಿರ್ಮಾತೃ ವ್ಯಕ್ತಿಗಳ ಮೊದಲ ಮತ್ತು ಅತಿದೊಡ್ಡ ಪ್ರತಿಮೆ ಇದು ಎಂಬ ದಾಖಲೆ ಬರೆದಿದೆ. ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಇದು ಸ್ಥಾನ ಪಡೆದಿದೆ.
ಬೆಂಗಳೂರು ಕಟ್ಟಿದ ಕೆಂಪೇಗೌಡರ ಈ ಬೃಹತ್ ಪ್ರತಿಮೆ ಕಟ್ಟಲು ಅಂದಾಜು 100 ಕೋಟಿ ರೂ ಆಗಿರಬಹುದು. 108 ಅಡಿ ಎತ್ತರದ ಈ ಪ್ರತಿಮೆಯಲ್ಲಿ ಕೆಂಪೇಗೌಡರ ಕೈಯಲ್ಲಿ ಇರುವ ಖಡ್ಗವೇ 4 ಟನ್ ತೂಗುತ್ತದೆ.
ವಿವಾದ
ಕೆಂಪೇಗೌಡ ಪ್ರತಿಮೆ ನಿರ್ಮಾಣ ವಿಚಾರ ರಾಜಕೀಯವಾಗಿ ವಿವಾದಕ್ಕೆ ಒಳಗಾಗಿದ್ದು ಹೌದು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರತಿಮೆ ನಿರ್ಮಿಸಲು ಮತ್ತು ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಿಸಲು ಸರ್ಕಾರ ಯಾಕೆ ಹಣ ಕೊಟ್ಟಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಿಮಾನ ನಿಲ್ದಾಣ ಸ್ಥಾಪಿಸಲು ಸರ್ಕಾರ ಬಿಐಎಎಲ್ಗೆ ಜಮೀನು ಮತ್ತು ಹಣ ಎರಡನ್ನೂ ಒದಗಿಸಿತ್ತು. ಆದರೂ ಅಲ್ಲಿ ಪ್ರತಿಮೆ ಮತ್ತು ಥೀಮ್ ಪಾರ್ಕ್ ನಿರ್ಮಿಸಲು ಸರ್ಕಾರ ಮತ್ತೆ ಕೈಯಿಂದ ಹಣ ನೀಡಿರುವುದಕ್ಕೆ ವಿಪಕ್ಷಗಳು ಆಕ್ಷೇಪಿಸಿವೆ.
ಇನ್ನು, ಹೆರಿಟೇಜ್ ಥೀಮ್ ಪಾರ್ಕ್ ಅನ್ನು 23 ಎಕರೆ ಪ್ರದೇಶದಲ್ಲಿ 84 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವುದು ತಿಳಿದುಬಂದಿದೆ. ಇನ್ನು ಇಂದು ಉದ್ಘಾಟನೆಯಾದ ಏರ್ಪೋರ್ಟ್ನ ಎರಡನೇ ಟರ್ಮಿನಲ್ ಅನ್ನು 5 ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈಗ ಬೆಂಗಳೂರಿನ ಈ ಏರ್ಪೋರ್ಟ್ಗೆ ಎರಡು ಟರ್ಮಿನಲ್ಗಳು ಸಿಕ್ಕಂತಾಗಿದ್ದು, ಪ್ರಯಾಣಿಕರ ಸೇವೆ ಸಾಮರ್ಥ್ಯ ದುಪ್ಪಟ್ಟಾಗುತ್ತದೆ. ಮುಂಚೆ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರಿಗೆ ಏರ್ಪೋರ್ಟ್ನಲ್ಲಿ ಅವಕಾಶ ಇತ್ತು. ಈಗ ವರ್ಷಕ್ಕೆ 5-6 ಕೋಟಿ ಪ್ರಯಾಣಿಕರು ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಬೇರೆ ಕಾರ್ಯಕ್ರಮಗಳು
ಏರ್ಪೋರ್ಟ್ ಟರ್ಮಿನಲ್ ಮಾತ್ರವಲ್ಲದೆ 25 ಸಾವಿರ ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನರೇಂದ್ರ ಮೋದಿ ಶುಕ್ರವಾರ ಚಾಲನೆ ಕೊಟ್ಟಿದ್ದಾರೆ. ಇದಾದ ಬಳಿಕ ಪ್ರಧಾನಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಅಶ್ವತ್ಥ ನಾರಾಯಣ ಮತ್ತಿತರರು ಈ ಕಾರ್ಯಕ್ರಮದಲ್ಲಿ ಮೋದಿ ಜೊತೆಗಿದ್ದರು.
ಇದಾದ ಬಳಿಕ ಪ್ರಧಾನಿ ಮೋದಿ ತಮಿಳುನಾಡು, ಆಂದ್ರ ಮತ್ತು ತೆಲಂಗಾಣಕ್ಕೆ ತೆರಳಲಿದ್ದಾರೆ. ಇಂದು ತಮಿಳುನಾಡಿನ ದಿಂಡಿಗಲ್ನ ಗಾಂಧಿಗ್ರಾಂ ರೂರಲ್ ಇನ್ಸ್ಟಿಟ್ಯೂಟ್ನ 36ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಶನಿವಾರ ಆಂಧ್ರದ ವಿಶಾಖಪಟ್ಟಣಂನಲ್ಲಿ ಹಲವು ಯೋಜನೆಗಳಿಗೆ ಚಾಲನೆ ಕೊಡಲಿದ್ದಾರೆ. ನಂತರ ತೆಲಂಗಾಣದ ರಾಮಗುಂಡಂನಲ್ಲಿರುವ ಆರ್ಎಫ್ಸಿಎಲ್ ಘಟಕಕ್ಕೆ ಭೇಟಿ ನೀಡಿ 9500 ಕೋಟಿ ರೂ ಮೊತ್ತದ ರೈಲು ಮತ್ತು ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಿದ್ದಾರೆ.