ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತವು ಕಂಪೆನಿ ಬೇಜವಾಬ್ದಾರಿ: ಸಮಿತಿ
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೇ 7, 2020ರಲ್ಲಿ ನಡೆದಿದ್ದ ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತ, ಆ ದಿನ ಹನ್ನೆರಡು ಮಂದಿ ಸಾವನ್ನಪ್ಪಿದ್ದು ನೆನಪಿದೆಯಾ? ಆ ದುರಂತದ ಬಗ್ಗೆ ವರದಿ ನೀಡುವುದಕ್ಕಾಗಿ ಸರ್ಕಾರ ನೇಮಿಸಿದ್ದ ಸಮಿತಿಯು ತನಿಖೆ ನಡೆಸಿ, ತನ್ನ ಅಭಿಪ್ರಾಯವನ್ನು ನೀಡಿದೆ. ಈ ಬಗ್ಗೆ ಸಮಿತಿಯ ವರದಿ ಮಂಗಳವಾರ (ಜುಲೈ 7, 2020) ಬಿಡುಗಡೆ ಮಾಡಲಾಗಿದೆ.
LG ಪಾಲಿಮರ್ಸ್ ಕಂಪೆನಿಗೆ 50 ಕೋಟಿ ಠೇವಣಿ ಇಡುವಂತೆ NGT ಸೂಚನೆ
ಆ ವರದಿಯ ಪ್ರಕಾರ, ಜನರು ವಾಸಿಸದ ಸ್ಥಳಕ್ಕೆ ಎಲ್ ಜಿ ಪಾಲಿಮರ್ಸ್ ಘಟಕವನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿದೆ. ದಕ್ಷಿಣ ಕೊರಿಯಾದ ಅತಿದೊಡ್ಡ ಪೆಟ್ರೋಕೆಮಿಕಲ್ ಉತ್ಪಾದಕ ಕಂಪೆನಿ ಎಲ್ ಜಿ ಕೆಮಿಕಲ್ ಗೆ ಸೇರಿದ ಒಂದು ಘಟಕ ಈ ಎಲ್ ಜಿ ಪಾಲಿಮರ್ಸ್. ಇದು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಎಲ್ ಜಿ ಪಾಲಿಮರ್ಸ್ ಘಟಕದ ಎಚ್ಚರಿಕೆ ವ್ಯವಸ್ಥೆಯು ಕೆಲಸ ಮಾಡುತ್ತಿರಲಿಲ್ಲ ಎಂದು ಸಮಿತಿ ಹೇಳಿದೆ.
ಮೇ 7ನೇ ತಾರೀಕಿನ ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದಲ್ಲಿ ಇರುವ ಎಲ್ ಜಿ ಪಾಲಿಮರ್ಸ್ ನಿಂದ ವಿಷಯುಕ್ತ ಸ್ಟೈರೀನ್ ಅನಿಲ ಬಿಡುಗಡೆ ಆಗಿತ್ತು. ಮಲಗಿದ್ದ ಸ್ಥಳದಲ್ಲೇ ಹಲವರು ಸಮಸ್ಯೆಗೆ ಗುರಿಯಾದರು ಹಾಗೂ ಹನ್ನೆರಡು ಮಂದಿ ಸಾವನ್ನಪ್ಪಿದ್ದರು. ಈ ಘಟನೆ ನಂತರ ಜನರು ವ್ಯಾಪಕ ಆಕ್ರೋಶ ಹೊರಹಾಕಿದ್ದರು.