ಅನಿಲ್ ಅಂಬಾನಿ ವಿರುದ್ಧ ದಿವಾಳಿ ಕಲಾಪಕ್ಕೆ NCLT ಒಪ್ಪಿಗೆ: ಏನಿದು ಪ್ರಕರಣ?
ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ವಿರುದ್ಧ ದಿವಾಳಿ ಕಲಾಪ ನಡೆಸುವುದಕ್ಕೆ ಮುಂಬೈನ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ (ಎನ್ ಸಿಎಲ್ ಟಿ) ಅನುಮತಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದಿದ್ದ 1200 ಕೋಟಿ ರುಪಾಯಿ ಸಾಲಕ್ಕೆ ಅನಿಲ್ ಅಂಬಾನಿ ವೈಯಕ್ತಿಕ ಗ್ಯಾರಂಟಿ (ಖಾತ್ರಿ) ನೀಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅನಿಲ್ ಅಂಬಾನಿ ವಿರುದ್ಧ ದಿವಾಳಿ ಕಲಾಪ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ.
ಸಾಲ ವಸೂಲಿಗಾಗಿ ಅನಿಲ್ ಅಂಬಾನಿ ವಿರುದ್ಧ NCLT ಮೆಟ್ಟಿಲೇರಿದ SBI
ಅನಿಲ್ ಅಂಬಾನಿ ಮುನ್ನಡೆಸುತ್ತಿರುವ ಎಡಿಎಜಿ ಸಮೂಹದ ಅಡಿಯಲ್ಲಿ ಇರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ರಿಲಯನ್ಸ್ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ 2016ರಲ್ಲಿ ಎಸ್ ಬಿಐ ಸಾಲ ನೀಡಿತ್ತು. ಸಾಲ ಪಡೆದಿದ್ದ ಕಂಪೆನಿಗಳು 2017ರ ಜನವರಿಯಲ್ಲೇ ಮರುಪಾವತಿಸಲು ವಿಫಲವಾಗಿವೆ ಎಂಬುದು ಎನ್ ಸಿಎಲ್ ಟಿ ಮುಂಬೈ ಗಮನಕ್ಕೆ ಬಂದಿದೆ.
ಅಗತ್ಯ ಕ್ರಮ ಕೈಗೊಳ್ಳಲು ಎಸ್ ಬಿಐಗೆ ಸೂಚನೆ
ಆಗಸ್ಟ್ 26, 2016ರಲ್ಲಿ ಈ ಖಾತೆಗಳನ್ನು ನಾನ್ ಪರ್ಫಾರ್ಮಿಂಗ್ ಖಾತೆಗಳು (ಎನ್ ಪಿಎ) ಎಂದು ಘೋಷಿಸಲಾಗಿದೆ. ಅದು ಕೂಡ ಎಸ್ ಬಿಐ ಜತೆಗೆ ಸಾಲ ಒಪ್ಪಂದಕ್ಕೆ ಬರುವುದಕ್ಕೆ ಮುಂಚೆಯೇ ಎನ್ ಪಿಎ ಎಂದು ಘೋಷಣೆ ಮಾಡಲಾಗಿದೆ. ಇನ್ನು ಈಗಿನ ಆದೇಶದಲ್ಲಿ ತಿಳಿಸಿರುವ ಪ್ರಕಾರ, ಸಾಲ ತೀರುವಳಿ ವೃತ್ತಿಪರರನ್ನು ಆಯ್ಕೆ ಮಾಡುವಂತೆ ಹಾಗೂ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ತಿಳಿಸಲಾಗಿದೆ. ರಿಲಯನ್ಸ್ ಕಮುನಿಕೇಷನ್ಸ್ ಗೆ 565 ಕೋಟಿ ಹಾಗೂ ಆರ್ ಟಿಐಎಲ್ ಗೆ 635 ಕೋಟಿ ರುಪಾಯಿಯನ್ನು ಎಸ್ ಬಿಐ ನಿಂದ 2016ರ ಆಗಸ್ಟ್ ನಲ್ಲಿ ನೀಡಲಾಗಿದೆ. ಸಾಲ ವ್ಯವಸ್ಥೆಗಾಗಿ 2016ರ ಸೆಪ್ಟೆಂಬರ್ ನಲ್ಲಿ ಅನಿಲ್ ಅಂಬಾನಿ ವೈಯಕ್ತಿಕ ಖಾತ್ರಿ ನೀಡಿದ್ದಾರೆ. ಆನಂತರ 2017ರಲ್ಲಿ ಆ ಎರಡೂ ಖಾತೆಗಳಿಂದ ಸಾಲ ಮರುಪಾವತಿ ಆಗಿಲ್ಲ. ಹೀಗೆ 2016ರ ಆಗಸ್ಟ್ ನಿಂದಲೂ ಆಗಿದೆ.
ಸಾಲ ವಸೂಲಿಗಾಗಿ ಅಂಬಾನಿಗೆ ನೋಟಿಸ್
ಅನಿಲ್ ಅಂಬಾನಿ ನೀಡಿದ್ದ ವೈಯಕ್ತಿಕ ಖಾತ್ರಿಗೆ 2018ರ ಜನವರಿಯಲ್ಲಿ ಎಸ್ ಬಿಐನಿಂದ ಚಾಲನೆ ನೀಡಲಾಗಿದೆ. 2020ರ ಫೆಬ್ರವರಿಯಲ್ಲಿ ಸಾಲ ವಸೂಲಿಗಾಗಿ ಅನಿಲ್ ಅಂಬಾನಿಗೆ ಎಸ್ ಬಿಐ ನೋಟಿಸ್ ನೀಡಿದೆ. ಆದರೆ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಅನಿಲ್ ಅಂಬಾನಿ ವಕ್ತಾರರು ಮಾತನಾಡಿ, ಎನ್ ಸಿಎಲ್ ಟಿ ಆದೇಶವನ್ನು ಕಂಪೆನಿಯು ಪರಿಶೀಲಿಸುತ್ತಿದೆ. ತೀರುವಳಿ ಪ್ರತಿನಿಧಿಗಳ ನೇಮಕದ ವಿರುದ್ಧ ಸೂಕ್ತ ಅರ್ಜಿಯನ್ನು ದಾಖಲಿಸಲು ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಎನ್ ಸಿಎಲ್ ಟಿಯಿಂದ ತೀರುವಳಿ ಪ್ರತಿನಿಧಿಗಳ ನೇಮಕಕ್ಕೆ ಆದೇಶ ಬಂದಿದೆ ಎಂದ ಮಾತ್ರಕ್ಕೆ ದಿವಾಳಿ ಕಲಾಪದ ವಿಚಾರಣೆಯನ್ನು ಒಪ್ಪಿಕೊಂಡಂತೆ ಅಲ್ಲ ಎಂದು ವಕ್ತಾರರು ಹೇಳಿದ್ದಾರೆ.
ಚೈನೀಸ್ ಬ್ಯಾಂಕ್ ಗಳು ವರ್ಸಸ್ ಎಸ್ ಬಿಐ
ಈಗ ನೇಮಕ ಆಗುವ ತೀರುವಳಿ ವೃತ್ತಿಪರರು ಎಸ್ ಬಿಐನಿಂದ ಸಲ್ಲಿಸಿರುವ ದಿವಾಳಿ ಅರ್ಜಿಯನ್ನು ಪರಿಶೀಲನೆ ನಡೆಸಿ, ಆ ಬಗ್ಗೆ ವರದಿ ನೀಡುತ್ತಾರೆ. ಈಗಿನ ಎನ್ ಸಿಎಲ್ ಟಿ ಆದೇಶದಿಂದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್, ರಿಲಯನ್ಸ್ ಪವರ್ ಹಾಗೂ ರಿಲಯನ್ಸ್ ಕ್ಯಾಪಿಟಲ್ ಕಾರ್ಯನಿರ್ವಹಣೆ ಮೇಲೆ ಏನೂ ಪರಿಣಾಮ ಬೀರಲ್ಲ ಎಂದು ಕೂಡ ವಕ್ತಾರರು ಹೇಳಿದ್ದಾರೆ. ಈಚೆಗೆ ಚೈನೀಸ್ ಬ್ಯಾಂಕ್ ಗಳು ಯುನೈಟೆಡ್ ಕಿಂಗ್ ಡಮ್ ನಲ್ಲಿ ಕೋರ್ಟ್ ಮೆಟ್ಟಿಲೇರಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಗೆ ನೀಡಿದ 5447 ಕೋಟಿ ರುಪಾಯಿ ಸಾಲ ವಸೂಲು ಮಾಡಲು ಆದೇಶ ಪಡೆದುಕೊಂಡಿದ್ದರು. ಆ ಬ್ಯಾಂಕ್ ಗಳಿಗೂ ಇದೇ ರೀತಿ ವೈಯಕ್ತಿಕ ಖಾತ್ರಿ ನೀಡಿರುವುದನ್ನು ಬಳಸಬಹುದು ಎಂಬ ಆತಂಕ ಎಸ್ ಬಿಐಗೆ ಇದೆ. ಒಂದು ವೇಳೆ ಚೈನೀಸ್ ಬ್ಯಾಂಕ್ ಗಳು ಅನಿಲ್ ಅಂಬಾನಿ ವೈಯಕ್ತಿಕ ಖಾತ್ರಿ ಮೂಲಕವೇ ಸಾಲ ವಸೂಲಿಗೆ ಮುಂದಾದಲ್ಲಿ ಎಸ್ ಬಿಐ ಪಾಲಿಗೆ ಕಷ್ಟವಾಗಲಿದೆ. ಭಾರತದ ದಿವಾಳಿ ಕಾನೂನು ಇದನ್ನೇ ಹೇಳುತ್ತದೆ.