ಭಾರತದಿಂದ ಹತ್ತಿಯ ಆಮದು ಪ್ರಸ್ತಾಪ ತಿರಸ್ಕರಿಸಿದ ಪಾಕಿಸ್ತಾನ
ಭಾರತದಿಂದ ಹತ್ತಿಯ ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ತಿರಸ್ಕರಿಸಿದ್ದು, ಈ ಕುರಿತು ಅಲ್ಲಿನ ಜವಳಿ ಉದ್ಯಮವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳಬೇಕು ಎಂದು ಸಮಿತಿಯೊಂದು ಮಾಡಿದ್ದ ಪ್ರಸ್ತಾಪವನ್ನು ಪಾಕಿಸ್ತಾನದ ಸಚಿವ ಸಂಪುಟವು ತಿರಸ್ಕರಿಸಿದೆ. ಪರಿಣಾಮ ಹತ್ತಿಯ ಆಮದು ಪ್ರಸ್ತಾಪ ಅರ್ಧಕ್ಕೆ ನಿಂತಿದೆ ಹಾಗೂ ಈ ಕುರಿತು ಜವಳಿ ಉದ್ಯಮವು ನಿರಾಸೆಗೊಂಡಿದೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ತಾನವು, ಭಾರತದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವವರೆಗೂ ಹತ್ತಿಯನ್ನು ಖರೀದಿಸುವವರಲ್ಲಿ ಪಾಕಿಸ್ತಾನ ಪ್ರಮುಖ ರಾಷ್ಟ್ರವಾಗಿತ್ತು.
ಪಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ಸ್ಥಳೀಯ ನಾಯಕರುಗಳೇ ಟೀಕಿಸಿದ್ದಾರೆ. ಭಾರತದಿಂದ ಹತ್ತಿ ಮತ್ತು ನೂಲು ಆಮದು ಮಾಡಿಕೊಳ್ಳಬೇಕು ಎಂಬ ಪ್ರಸ್ತಾಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಪಾಕಿಸ್ತಾನ ಸಿದ್ಧ ಉಡುಪುಗಳ ವೇದಿಕೆ ಅಧ್ಯಕ್ಷ ಜಾವೆದ್ ಬಿಲ್ವಾನಿ ಒತ್ತಾಯಿಸಿದ್ದಾರೆ.
ಭಾರತವು ವಿಶ್ವದಲ್ಲೇ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿದ್ದು, ಜೊತೆಗೆ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕವಾಗಿದೆ.