ಉದ್ಯಮದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ ಅತ್ಯವಶ್ಯಕ; ರೋಹಿತ್ ಭಟ್
ಉಡುಪಿ, ಅಕ್ಟೋಬರ್ 25: "ಯಶಸ್ವಿ ಉದ್ಯಮಿಯಾಗಲು ಪರಿಶ್ರಮ, ಗಮನ ಕೊಡುವಿಕೆ, ಆತ್ಮವಿಶ್ವಾಸ ಮತ್ತು ಲೆಕ್ಕಾಚಾರದ ಅಪಾಯವನ್ನು ತೆಗೆದುಕೊಳ್ಳುವ ಇಚ್ಛೆ ಅತೀ ಅವಶ್ಯಕ,'' ಎಂದು 99 ಗೇಮ್ಸ್ ಸಿಇಒ ರೋಹಿತ್ ಭಟ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಲ್ಲಿ ಆಯೋಜಿಸಲಾದ 'ಯಶಸ್ವಿ ಉದ್ಯಮಿಗಳ ಕಥೆ' ಕಾರ್ಯಕ್ರಮದಲ್ಲಿ ತನ್ನ ಉದ್ಯಮ ಕ್ಷೇತ್ರದ ಪ್ರಯಾಣವನ್ನು ರೋಹಿತ್ ಭಟ್ ಹಂಚಿಕೊಂಡರು.
ಉಡುಪಿಯವರಾದ ರೋಹಿತ್ ಉಡುಪಿಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮವನ್ನು ಅಭಿವೃದ್ಧಿಪಡಿಸುವ ಕನಸು ಕಂಡವರಾಗಿದ್ದು, ಸಮಾನಾಂತರ ಉದ್ಯಮಿಯಾಗಿ ರೋಬೋಸಾಫ್ಟ್ ಟೆಕ್ನಾಲಜೀಸ್, ಗ್ಲೋಬಲ್ ಡಿಲೈಟ್ ಮತ್ತು 99 ಗೇಮ್ಸ್ ಎಂಬ ಮೂರು ಕಂಪನಿಗಳನ್ನು ಸ್ಥಾಪಿಸಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ. ವೆಂಕಟೇಶ್ ಉದ್ಘಾಟನಾ ಭಾಷಣದಲ್ಲಿ, ಮಾಹೆಯು ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವುದರೊಂದಿಗೆ, ಆರಂಭಿಕ ಹಂತದ ತಯಾರಿಕೆ ಮತ್ತು ಜೋಡಣಾ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಮಣಿಪಾಲದ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಪ್ರೊ. ಮಧು ವೀರರಾಘವನ್, "ಉದ್ಯಮಿಗಳ ಯಶಸ್ಸು ಮತ್ತು ವೈಫಲ್ಯದ ಕಥೆಗಳೆರಡೂ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅಗತ್ಯ," ಎಂದು ಅಭಿಪ್ರಾಯಪಟ್ಟರು.
ಸಮಾರೋಪ ಭಾಷಣದಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ "ಸವಾಲಿನ ವಾತಾವರಣದಲ್ಲಿ ಅವಕಾಶಗಳನ್ನು ಗುರುತಿಸಿ ತನ್ನದೇ ಆದ ವೈವಿಧ್ಯವನ್ನು ಸೃಷ್ಟಿಸುವಂತಹ ರೋಹಿತ್ ಭಟ್ ಪ್ರಯಾಣದ ಪಾಠಗಳು ಯುವ ಪೀಳಿಗೆಗೆ ಅನುಕರಣೀಯವಾಗಿದೆ," ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಮಾಹೆಯ ಕಾರ್ಪೊರೇಟ್ ಸಂಬಂಧಗಳ ಕಚೇರಿ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಟಿಎಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್, ಮಣಿಪಾಲ್ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಎಂಯುಟಿಬಿಐ) ಮತ್ತು ಎಂಐಟಿ ಉದ್ಯಮಶೀಲತಾ ಕೋಶ, ಜಂಟಿಯಾಗಿ ಆಯೋಜಿಸಿವೆ.
ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ರವಿರಾಜ. ಎನ್.ಎಸ್ ಸ್ವಾಗತಿಸಿದರು ಮತ್ತು ಎಂಯುಟಿಬಿಐ ಸಿಇಒ ಡಾ. ವೈ ಶ್ರೀಹರಿ ಉಪಾಧ್ಯಾಯ ವಂದನಾರ್ಪಣೆ ಮಾಡಿದರು. ಎಂ.ಐ.ಟಿ.ಯ ಪ್ರಾಧ್ಯಾಪಕರಾದ ಡಾ. ದಶರಥರಾಜ್. ಕೆ. ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.