ಆರ್ಬಿಐನ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಭಾರತೀಯ ರಿಸರ್ವ್ ಬ್ಯಾಂಕ್ನ ಎರಡು ನವೀನ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 12 ರಂದು ಚಾಲನೆ ನೀಡಿದ್ದಾರೆ. ಚಿಲ್ಲರೆ ನೇರ ಯೋಜನೆ ಮತ್ತು ಸಮಗ್ರ ಒಂಬುಡ್ಸ್ ಮನ್ ಯೋಜನೆಯು ಆರ್ಬಿಐನ ನೂತನ ಯೋಜನೆಗಳು ಆಗಿದೆ.
ಚಿಲ್ಲರೆ ಹೂಡಿಕೆದಾರರು ಸರ್ಕಾರಿ ಷೇರುಗಳಲ್ಲಿ ಅಧಿಕ ಹೂಡಿಕೆ ಮಾಡುವುದು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್ಬಿಐ ಈ ಚಿಲ್ಲರೆ ನೇರ ಯೋಜನೆಯನ್ನು ಆರಂಭ ಮಾಡಿದೆ. ಈ ಯೋಜನೆಯು ಚಿಲ್ಲರೆ ಹೂಡಿಕೆದಾರರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ.
ಇನ್ನು ಈ ಆರ್ಬಿಐನ ಚಿಲ್ಲರೆ ನೇರ ಯೋಜನೆ ಮೂಲಕ ಹೂಡಿಕೆದಾರರು ಉಚಿತವಾಗಿ, ಯಾವುದೇ ವೆಚ್ಚವನ್ನು ಭರಿಸದೆಯೇ ತಮ್ಮ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದಾಗಿದೆ. ಹೂಡಿಕೆದಾರರು ಆನ್ಲೈನ್ ಮೂಲಕ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಲು ಈ ಯೋಜನೆ ಅವಕಾಶ ಕಲ್ಪಿಸುತ್ತದೆ. ಹಾಗೆಯೇ ಆನ್ಲೈನ್ ಮೂಲಕವೇ ಹೂಡಿಕೆದಾರರು ತಮ್ಮ ಉಚಿತ ಸರ್ಕಾರಿ ಷೇರು ಖಾತೆಗಳನ್ನು ನಿರ್ವಹಣೆ ಮಾಡಬಹುದಾಗಿದೆ.
ಸಮಗ್ರ ಒಂಬುಡ್ಸ್ ಮನ್ ಯೋಜನೆ ಆರ್ಬಿಐನ ಮತ್ತೊಂದು ನೂತನ ಯೋಜನೆ ಆಗಿದೆ. ಆರ್ಬಿಐನಿಂದ ನಿಯಂತ್ರಣ ಮಾಡುವ ಘಟಕಗಳ ವಿರುದ್ಧ ಗ್ರಾಹಕರು ನೀಡುವ ದೂರುಗಳನ್ನು ನಿರ್ವಹಣೆ ಮಾಡಲು ಹಾಗೂ ಗ್ರಾಹಕರ ದೂರುಗಳಿಗೆ ಪರಿಹಾರ ಒದಗಿಸುವ ವಿಧಾನವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಆರ್ಬಿಐ ಈ ಸಮಗ್ರ ಒಂಬುಡ್ಸ್ ಮನ್ ಯೋಜನೆಯನ್ನು ಆರಂಭ ಮಾಡಿದೆ.
'ಒಂದು ರಾಷ್ಟ್ರ- ಒಂದು ಒಂಬುಡ್ಸ್ ಮನ್' ಎಂಬ ಧ್ಯೇಯ ವಾಕ್ಯವನ್ನು ಈ ಸಮಗ್ರ ಒಂಬುಡ್ಸ್ ಮನ್ ಯೋಜನೆ ಹೊಂದಿದೆ. ಗ್ರಾಹಕರಿಗೆ ತಮ್ಮ ದೂರು ಸಲ್ಲಿಸಲು ಒಂದು ಪೋರ್ಟಲ್, ಒಂದು ಇಮೇಲ್ ಮತ್ತು ಒಂದು ವಿಳಾಸವನ್ನು ಸ್ಥಾಪನೆ ಮಾಡಲಾಗುತ್ತದೆ. ಗ್ರಾಹಕರು ತಮ್ಮ ದೂರುಗಳನ್ನು ಸಲ್ಲಿಸಲು, ದಾಖಲೆಗಳನ್ನು ಸಲ್ಲಿಸಲು, ಸ್ಥಿತಿಗತಿ ಬಗ್ಗೆ ನಿಗಾವಹಿಸಲು ಮತ್ತು ಪ್ರತಿಕ್ರಿಯೆಯನ್ನು ಪಡೆಯಲು ಒಂದೇ ಸಂಪರ್ಕ ಕೇಂದ್ರವಿರುತ್ತದೆ. ಹಾಗೆಯೇ ಬಹು ಭಾಷೆಯ ಟೋಲ್ ಫ್ರೀ ಸಂಖ್ಯೆಯು ಕುಂದುಕೊರತೆ ಪರಿಹಾರ ಮಾಡುವ ಕಾರ್ಯವನ್ನು ಮಾಡಲಿದೆ. ಹಾಗೆಯೇ ದೂರುಗಳನ್ನು ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಾಯ ಮಾಡಲಿದೆ.
ಇನ್ನು ಈ ಚಾಲನೆಯ ಬಳಿಕ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, "ಆರ್ಬಿಐ ತನ್ನ ಸೇವೆಗಳ ದಕ್ಷತೆಯನ್ನು ಅಧಿಕ ಮಾಡಲು ತಂತ್ರಜ್ಞಾನ ಹಾಗೂ ನಾವೀನ್ಯತೆಗಳನ್ನು ಬಳಸಿಕೊಳ್ಳುತ್ತಿದೆ. ಆರ್ಬಿಐನ ಅಭಿವೃದ್ಧಿಯ ಪಾತ್ರವು ಹಣಕಾಸು ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆರ್ಬಿಐ ಜನರಿಗೆ ಉಪಯುಕ್ತವಾದ ಹಾಗೂ ಆರ್ಥಿಕ ಚೇತರಿಕೆಯತ್ತ ಗಮನ ಹರಿಸಿದೆ," ಎಂದು ತಿಳಿಸಿದರು.
ಯೋಜನೆಯ ಮಹತ್ವವನ್ನು ವಿವರಿಸಿದ ಪ್ರಧಾನಿ ಮೋದಿ
ಇನ್ನು ಈ ಸಂದರ್ಭದಲ್ಲಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಯೋಜನೆಯು ಆತ್ಮ ನಿರ್ಭರ ಭಾರತಕ್ಕೆ ಸಹಕಾರಿ. ಹೂಡಿಕೆದಾರರಿಗೆ ಸಹಾಯ ಮಾಡಲಿದೆ. ಜನರಿಗೆ ಕೆಲವು ಹೂಡಿಕೆ ವಿಚಾರಗಳು, ಆರ್ಥಿಕ ವಿಚಾರಗಳು ತಿಳಿಯುವುದಿಲ್ಲ. ಆದರೆ ಈ ಹೊಸ ಯೋಜನೆಯ ಮೂಲಕ ದೇಶದ ಮೂಲೆ ಮೂಲೆ ಜನರಿಗೂ, ಸಾಮಾನ್ಯ ಜನರಿಗೂ ಈ ಆರ್ಥಿಕ ಮಾಹಿತಿಯನ್ನು ತಿಳಿಯಲು ಸಹಾಯ ಮಾಡಲಿದೆ. ನೀವು ಆನ್ಲೈನ್ ಮೂಲಕವೇ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದು. ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮೊಬೈಲ್ ಫೋನ್, ಇಂಟರ್ನೆಟ್ ಮೂಲಕವೇ ಎಲ್ಲಾ ಕಾರ್ಯವನ್ನು ಮಾಡಬಹುದು," ಎಂದು ವಿವರಿಸಿದ್ದಾರೆ.