Bank Strike : ಮಾ.28ರಿಂದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಬ್ಯಾಂಕ್ ಒಕ್ಕೂಟ
ನವದೆಹಲಿ, ಮಾರ್ಚ್ 23: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಯೂನಿಯನ್ಗಳು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ., ಇದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ. ಬ್ಯಾಂಕ್ ಒಕ್ಕೂಟಗಳು ಮಾರ್ಚ್ 28 ಮತ್ತು ಮಾರ್ಚ್ 29 ರಂದು (ಸೋಮವಾರ ಮತ್ತು ಮಂಗಳವಾರ) ಮುಷ್ಕರಕ್ಕೆ ಕರೆ ನೀಡಿವೆ.
ಮಾರ್ಚ್ 28 ಮತ್ತು ಮಾರ್ಚ್ 29 ರಂದು (ಸೋಮವಾರ ಮತ್ತು ಮಂಗಳವಾರ) ಮುಷ್ಕರ ಕ್ಕೂ ಮೊದಲು, ವಾರಾಂತ್ಯದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹೀಗಾಗಿ ಒಟ್ಟಾರೆ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (ಬಿಇಎಫ್ಐ) ಮತ್ತು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರತಿನಿಧಿಸುವ ಕಾರ್ಮಿಕ ಸಂಘಗಳು ತಮ್ಮ ಸದಸ್ಯರು ಈ ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದು ಬ್ಯಾಂಕ್ ಯೂನಿಯನ್ ಪ್ರಕಟಣೆಯಲ್ಲಿ ಹೇಳಲಾಗಿದೆ. ಬ್ಯಾಂಕ್ ಕಾನೂನು ತಿದ್ದುಪಡಿ ಮಸೂದೆ-2021 ವಿರೋಧ, ದೀರ್ಘಕಾಲದ ಬೇಡಿಕೆಗಳ ಈಡೇರಿಕೆ, ಖಾಸಗೀಕರಣ ವಿರೋಧಿಸಿ ಮುಷ್ಕರ ಹೂಡಲಾಗುತ್ತಿದೆ.
ಇಂಟರ್ನೆಟ್ ಹಾಗೂ ಡಿಜಿಟಲ್ ಬ್ಯಾಂಕ್ ಸೇವೆಗಳನ್ನು ಎಂದಿನಂತೆ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.