ಸರ್ಕಾರಿ ಬ್ಯಾಂಕು ಸಿಇಒಗಳ ಜೊತೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆ
ನವದೆಹಲಿ, ನ. 16: ನಿನ್ನೆ ಮಂಗಳವಾರ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಉಪ-ಸಮಿತಿಯ ಸಭೆ ನಡೆಸಿದ್ದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಬುಧವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಿಇಒಗಳ ಸಭೆ ಕರೆದಿದ್ದಾರೆ. ಠೇವಣಿ ಸಂಗ್ರಹ ಕಡಿಮೆ ಆಗುತ್ತಿರುವುದು ಯಾಕೆ ಮತ್ತು ಸಾಲಕ್ಕಿರುವ ಬೇಡಿಕೆ ಮುಂದುವರಿಯುವಂತೆ ಮಾಡುವುದು ಹೇಗೆ ಎಂಬುದನ್ನು ಇವತ್ತಿನ ಸಭೆಯಲ್ಲಿ ದಾಸ್ ಚರ್ಚಿಸಲಿದ್ದಾರೆ.
ರೀಟೇಲ್ ಮತ್ತು ಎಂಎಸ್ಎಂಇ ವಲಯದಲ್ಲಿ ಸಾಲ ವಾಪಸಾತಿಯ ಸ್ಥಿತಿ ಹೇಗಿದೆ. ಹಾಗೆಯೇ, ಕಳೆದ ತಿಂಗಳು ಆರಂಭವಾದ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಆರ್ಬಿಐ ಗವರ್ನರ್ ಅವಲೋಕಿಸಲಿದ್ದಾರೆ.
ಸ್ವತ್ತು ಮಾರಾಟದಿಂದ ಬರುವ ಲಾಭಕ್ಕೆ ತೆರಿಗೆ; ಮಾರ್ಪಾಡಿಗೆ ಸರ್ಕಾರ ಚಿಂತನೆ
ಆರ್ಬಿಐ ಡಾಟಾ ಪ್ರಕಾರ ಕಳೆದ ವರ್ಷದಕ್ಕೆ ಹೋಲಿಸಿದರೆ ಬ್ಯಾಂಕ್ ಠೇವಣಿಗಳು ಶೇ. 9.6ರಷ್ಟು ಹೆಚ್ಚಾಗಿದೆ. ಇನ್ನು, ಸಾಲ ನೀಡುವಿಕೆಯೂ ಬಹಳ ಹೆಚ್ಚಾಗಿದೆ. ಕಳೆದ ವರ್ಷದಕ್ಕಿಂತ ಈ ಬಾರಿ ಶೇ. 17.9ರಷ್ಟು ಹೆಚ್ಚು ಸಾಲಗಳನ್ನು ಬ್ಯಾಂಕ್ಗಳು ವಿತರಿಸಿವೆ.
ಬ್ಯಾಂಕ್ಗಳಿಂದ ಪುಷ್ಟಿ
ಈ ಬಾರಿಯ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಿದೆ. ಅದಕ್ಕೆ ಪೂರಕವಾಗಿ ಬ್ಯಾಂಕಿಂಗ್ ವಲಯ ಬಂಡವಾಳದೊಂದಿಗೆ ತುಂಬಿ ತುಳುಕುತ್ತಾ ಆರ್ಥಿಕ ಚಟುವಟಿಕೆಗೆ ಬೆಂಬಲವಾಗಿ ನಿಂತಿತ್ತು. ರೀಟೇಲ್, ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಬ್ಯಾಂಕ್ಗಳಿಂದ ಸಂದಾಯವಾದ ಸಾಲ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು.
ಆಹಾರೇತರ ಸಾಲ ಸೆಪ್ಟೆಂಬರ್ 2022ರಲ್ಲಿ ಬಹಳ ಹೆಚ್ಚಾಗಿದೆ. 2022ರ ಮಾರ್ಚ್ ತಿಂಗಳಾಂತ್ಯದ ಅರ್ಧವಾರ್ಷಿಕ ಅವಧಿಯಲ್ಲಿ ಆಹಾರೇತರ ಸಾಲ ಶೇ. 8.7ರಷ್ಟು ಹೆಚ್ಚಿತ್ತು. ಆದರೆ, 2022 ಸೆಪ್ಟೆಂಬರ್ ತಿಂಗಳಾಂತ್ಯದ ಅರ್ಧವಾರ್ಷಿಕದಲ್ಲಿ ಇದು 16.7 ಪ್ರತಿಶತದಷ್ಟು ಏರಿದೆ.
ಇಸಿಎಲ್ಜಿಎಸ್ ಸ್ಕೀಮ್
ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಯೋಜನೆಯಿಂದಾಗಿ ಎಂಎಸ್ಎಂಇಗಳಿಗೆ ಸಾಕಷ್ಟು ಬ್ಯಾಂಕ್ ಸಾಲ ಸಿಕ್ಕಿದೆ. ಅಗಸ್ಟ್ ತಿಂಗಳಲ್ಲಿ ಈ ಸ್ಕೀಮ್ಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂ ಫಂಡಿಂಗ್ ಒದಗಿಸಿತ್ತು. ಕೋವಿಡ್ ಸಾಂಕ್ರಾಮಿಕದಿಂದ ಹೊಡೆತ ತಿಂದ ಹೋಟೆಲ್ ಇತ್ಯಾದಿ ಆತಿಥ್ಯ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಬಹಳಷ್ಟು ಉದ್ದಿಮೆಗಳಿಗೆ ಉಸಿರಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇಸಿಎಲ್ಜಿ ಸ್ಕೀಮ್ ಅನ್ನು 2020 ಮೇ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಕೋವಿಡ್ನಿಂದ ಬಳಲಿದ್ದ ವಿವಿಧ ವಲಯಗಳಿಗೆ ಸಾಲ ರೂಪದಲ್ಲಿ ಸಹಾಯ ಒದಗಿಸುವುದು ಈ ಸ್ಕೀಮ್ ಉದ್ದೇಶ. ಕೇವಲ 7 ಪ್ರತಿಶತ ಬಡ್ಡಿ ದರದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರ ಉದ್ದಿಮೆಗಳಿಗೆ ಸಾಲ ಕೊಡಲಾಗುತ್ತದೆ. ಈ ಸ್ಕೀಮ್ಗೆ ಕೇಂದ್ರ ಸರ್ಕಾರ ಹೆಚ್ಚುವರಿ ಫಂಡಿಂಗ್ ಸೇರಿ ಒಟ್ಟು 5 ಲಕ್ಷ ಕೋಟಿ ರೂ ಮೊತ್ತವನ್ನು ಒದಗಿಸಿದೆ. ಇದರಲ್ಲಿ ಆಗಸ್ಟ್ 5ರವರೆಗೆ ಒಟ್ಟು 3.67 ಲಕ್ಷ ಕೋಟಿ ರೂ ಸಾಲ ನೀಡಲಾಗಿದೆ.
ಮಂಗಳವಾರದ ಸಭೆ
ನಿನ್ನೆ ನವೆಂಬರ್ 15ರಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಫೈನಾನ್ಷಿಯಲ್ ಸ್ಟೆಬಿಲಿಟಿ ಅಂಡ್ ಡೆವಲಪ್ಮೆಂಟ್ ಕೌನ್ಸಿಲ್ನ ಸಬ್ ಕಮಿಟಿಯ ಸಭೆ ನಡೆಸಿದರು. ವಿವಿಧ ಹಣಕಾಸು ವಲಯದ ಪರಿಸ್ಥಿತಿ ಹೇಗಿದೆ, ಜಾಗತಿಕ ಮತ್ತು ದೇಶೀಯ ಆರ್ಥಿಕತೆಯ ಪ್ರಮುಖ ಬೆಳವಣಿಗೆಗಳು ಹೇಗೆ ಆಗುತ್ತಿವೆ ಎಂಬುದನ್ನು ಈ ಸಭೆಯಲ್ಲಿ ಅವಲೋಕಿಸಲಾಯಿತು. ಈ ಉಪಸಮಿತಿಯ ಸಭೆಯನ್ನು ಆರ್ಬಿಐ ಆಗಾಗ್ಗೆ ನಡೆಸುತ್ತಿರುತ್ತದೆ.
ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಶಶಾಂಕ್ ಸಕ್ಸೇನಾ, ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶ ವಿವೇಕ್ ಜೋಶಿ, ಕಾರ್ಪೊರೇಟ್ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಮನೋಜ್ ಗೋವಿಲ್, ಕಂದಾಯ ಇಲಾಖೆ ಅಧಿಕಾರಿ ಸಂಜಯ್ ಮಲ್ಹೋತ್ರಾ, ಸೆಬಿ ಮುಖ್ಯಸ್ಥ ಮಧಾಬಿ ಪುರಿ ಬುಚ್, ಐಆರ್ಡಿಎಐ ಅಧ್ಯಕ್ಷ ದೇಬಶಿಶ್ ಪಾಂಡ ಮೊದಲಾದವರು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮತ್ತೆ ಎಂಸಿಎಲ್ಆರ್ ಏರಿಸಿದ ಎಸ್ಬಿಐ, ಪರಿಣಾಮವೇನು?