ಜಿಎಸ್ಟಿ ಪರಿಹಾರ: ತಕ್ಷಣವೇ 11,000 ಕೋಟಿ ರೂ. ಬಾಕಿ ಬಿಡುಗಡೆಗೆ ಕರ್ನಾಟಕ ಆಗ್ರಹ
ನವದೆಹಲಿಯಲ್ಲಿ ಶುಕ್ರವಾರ ನಡೆದ 43ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ಟಿ ಪರಿಹಾರ ಬಾಕಿ 11,000 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಆಗ್ರಹಿಸಿದೆ.
ಕರ್ನಾಟಕದಿಂದ ಜಿಎಸ್ಟಿ ಮಂಡಳಿ ಪ್ರತಿನಿಧಿಯಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಭೆಯಲ್ಲಿ ಹಾಜರಾಗಿದ್ದರು. ಈ ವೇಳೆ ಕೋವಿಡ್-19 ಸಂಬಂಧಿತ ಪರಿಕರಗಳ ಮೇಲೆ ತೆರಿಗೆ ಕಡಿತಗೊಳಿಸುವಂತೆ ಮನವಿ ಸಲ್ಲಿಸುವುದರ ಜೊತೆಗೆ, 2020-21ರ ಹಣಕಾಸು ವರ್ಷದಲ್ಲಿ ಬಾಕಿ ಉಳಿಸಿಕೊಂಡಿರುವ ಜಿಎಸ್ಟಿ ಪರಿಹಾರ ಮೊತ್ತ 11,000 ಕೋಟಿ ರೂಪಾಯಿ ತಕ್ಷಣವೇ ಬಿಡುಗಡೆ ಮಾಡುವಂತೆ ಕೇಳಿದ್ದಾರೆ.
2021-22 ವರ್ಷದಲ್ಲೂ ಜಿಎಸ್ಟಿ ಪರಿಹಾರ ವಿಸ್ತರಿಸಲು ವಿನಂತಿ
ಬಾಕಿ ಉಳಿಸಿಕೊಂಡಿರುವ 11,000 ಕೋಟಿ ಜಿಎಸ್ಟಿ ಪರಿಹಾರ ಬಿಡುಗಡೆ ಜೊತೆಗೆ, ಜಿಎಸ್ಟಿ ನಷ್ಟ ಪರಿಹಾರ ಒದಗಿಸುವ ಸೌಲಭ್ಯವನ್ನು 2021- 2022ರ ನಂತರವೂ ಮುಂದುವರಿಸುವ ಕುರಿತು ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.
ಅಂದರೆ ರಾಜ್ಯಗಳ ಪರಿಹಾರಕ್ಕಾಗಿ ಕೇಂದ್ರ ನೀಡುವ ಸಾಲ ಸೌಲಭ್ಯವನ್ನು 2021-22ರ ಹಣಕಾಸು ವರ್ಷದಲ್ಲೂ ವಿಸ್ತರಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿನಂತಿಸಿದ್ದಾರೆ.
ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಿಎಸ್ಟಿ ಪರಿಹಾರ ಬಾಕಿ ಬಿಡುಗಡೆ, ರಿಯಾಯಿತಿ ವಸ್ತುಗಳ ಪಟ್ಟಿಯಲ್ಲಿ ಆಮ್ಲಜನಕ ಉಪಕರಣಗಳು, ಪಿಪಿಇ ಕಿಟ್ಗಳು ಮತ್ತು ಕಪ್ಪು ಶಿಲೀಂಧ್ರಕ್ಕೆ ಸಂಬಂಧಿಸಿದ ಔಷಧಿಗಳನ್ನು ಸೇರಿಸಬೇಕು ಎಂದು ಹೇಳಿದ್ದಾರೆ.
ಜೊತೆಗೆ ಕೋವಿಡ್-19 ಸಂಬಂಧಿತ ಸರುಕು-ಸೇವೆಗಳ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ಜಿಎಸ್ಟಿ 12%ರಿಂದ 5%ಗೆ ಇಳಿಸುವಂತೆ ಸಲಹೆ
ವೈದ್ಯಕೀಯ ದರ್ಜೆಯ ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್ / ಜನರೇಟರ್ಗಳು, ಪಲ್ಸ್ ಆಕ್ಸಿಮೀಟರ್ಗಳು ಮತ್ತು ಪರೀಕ್ಷಾ ಕಿಟ್ಗಳಿಗೆ ಆಗಸ್ಟ್ 31 ರವರೆಗೆ ಕೋವಿಡ್ ಸಂಬಂಧಿತ ಸರಕುಗಳ ಮೇಲಿನ ತೆರಿಗೆ ದರವನ್ನು ಶೇಕಡ 12 ರಿಂದ 5 ಕ್ಕೆ ಇಳಿಸಲು ಸಚಿವ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು.
ಸದ್ಯಕ್ಕೆ ಆಮದು ತೆರಿಗೆ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಸದ್ಯಕ್ಕೆ ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲೆ ಆಮದು ಸುಂಕ (IGST) ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. 2021 ರ ಆಗಸ್ಟ್ 31 ರವರೆಗೆ ಕೋವಿಡ್ಗೆ ಸಂಬಂಧಿಸಿದ ಸರಬರಾಜಿನಲ್ಲಿ ಐಜಿಎಸ್ಟಿಗೆ ವಿನಾಯಿತಿ ನೀಡಲಾಗುವುದು.
ಜೂನ್ 8ರಂದು ಅಂತಿಮ ತೀರ್ಮಾನ ಸಾಧ್ಯತೆ
ಈಗಾಗಲೇ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಕೋವಿಡ್-19 ಸಂಬಂಧಿತ ಪರಿಕರಗಳ ಮೇಲೆ ಸಂಪೂರ್ಣ ಜಿಎಸ್ಟಿ ವಿನಾಯಿತಿ ನೀಡಬೇಕು ಎಂಬ ಆಗ್ರಹಕ್ಕೆ ಅಂತಿಮ ತೀರ್ಮಾನವು ಜೂನ್ 8ರಂದು ಹೊರಬೀಳುವ ಸಾಧ್ಯತೆಯಿದೆ.
ಕೋವಿಡ್ ಸಂಬಂಧಿತ ಉತ್ಪನ್ನಗಳ ಮೇಲಿರುವ ಜಿಎಸ್ಟಿ ದರವನ್ನು ಪರಿಶೀಲಿಸಿ, ಈ ಕುರಿತು ಅಂತಿಮ ತೀರ್ಮಾನವನ್ನು ಜೂನ್ 8ರಂದು ವರದಿಯಲ್ಲಿ ತಿಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.