1,00,000 ಕೋಟಿ ಸಂಪತ್ತಿನ ಪದ್ಮನಾಭಸ್ವಾಮಿ ದೇಗುಲ ಹಾಗೂ ತಿರುವಾಂಕೂರು ಸಂಸ್ಥಾನ
ದಶಕಗಳಷ್ಟು ಹಳೆಯ ವ್ಯಾಜ್ಯವೊಂದಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಅಂತ್ಯ ಹಾಡಿತು. ತಿರುವನಂತಪುರದಲ್ಲಿ ಇರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ನಿರ್ವಹಣೆಯನ್ನು ತಿರುವಾಂಕೂರು ರಾಜ ಮನೆತನದವರು ನೋಡಿಕೊಳ್ಳುವ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಈ ದೇವಾಲಯದ ಕೀರ್ತಿ, ಹಿಂದಿನ ವಿವಾದ, ಸಂಪತ್ತು ಇತ್ಯಾದಿಗಳು ಅದೆಷ್ಟು ಬಾರಿ ಸುದ್ದಿಯಾದರೂ ಮತ್ತೊಮ್ಮೆ ನೆನಪಿಸಿಕೊಳ್ಳಲು ಸೂಕ್ತವಾಗಿದೆ.
ದೇಶದ ಶ್ರೀಮಂತ ದೇಗುಲದ ನಿರ್ವಹಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು
ಇತಿಹಾಸಕಾರರು ಅಭಿಪ್ರಾಯ ಪಡುವಂತೆ, ಈ ದೇವಾಲಯಕ್ಕೆ 8ನೇ ಶತಮಾನದಿಂದಲೂ ಇತಿಹಾಸ ಇದೆ. ಆದರೆ ಈಗಿನ ರಚನೆ ಇದೆಯಲ್ಲಾ, ಅದು ರೂಪುಗೊಂಡಿದ್ದು 18ನೇ ಶತಮಾನದಲ್ಲಿ. ನಿರ್ಮಿಸಿದವರು ತಿರುವಾಂಕೂರ್ ಮಹಾರಾಜ ಮಾರ್ತಾಂಡ ವರ್ಮಾ. ಈ ದೇವಾಲಯದ ವಾಸ್ತುಶಿಲ್ಪ ಚೇರ ಶೈಲಿಯಲ್ಲಿ ಇದೆ.
ವೈಷ್ಣವರ 108 ದಿವ್ಯಸನ್ನಿಧಿಗಳಲ್ಲಿ ಇದೂ ಒಂದು
ಇಲ್ಲಿನ ವಿಷ್ಣು ಮೂರ್ತಿ ಅನಂತಶಯನನ ಸ್ವರೂಪದಲ್ಲಿ ಇದ್ದು, ಆದಿಶೇಷನ ಮೇಲೆ ಮಹಾವಿಷ್ಣು ಪವಡಿಸಿದ್ದಾನೆ. ವೈಷ್ಣವರ 108 ದಿವ್ಯಸನ್ನಿಧಿಗಳಲ್ಲಿ ಅನಂತಪದ್ಮನಾಭ ಸ್ವಾಮಿ ದೇವಾಲಯದ ಸನ್ನಿಧಿಯೂ ಒಂದು. 1947ರಲ್ಲಿ ದೇಶ ಸ್ವತಂತ್ರಗೊಂಡ ನಂತರ 1991ರ ತನಕ ರಾಜ ಮನೆತನದವರೇ ನೋಡಿಕೊಳ್ಳುತ್ತಿದ್ದರು. ಹಾಗೆ ಆಡಳಿತ ನೋಡಿಕೊಳ್ಳುತ್ತಿದ್ದದ್ದು ಚಿತ್ತಿರ ತಿರುನಾಳ್ ಬಲರಾಮ ವರ್ಮಾ. ಅವರ ಸಾವಿನ ನಂತರ ತಿರುವಾಂಕೂರು ರಾಜಮನೆತನಕ್ಕೆ ದೇವಾಲಯ ನಿರ್ವಹಣೆಯ ಹೊಣೆಗೆ ಸರ್ಕಾರ ಅವಕಾಶ ನೀಡಿತ್ತು. ಉತ್ರದಮ್ ತಿರುನಾಳ್ ಮಾರ್ತಾಂಡ ವರ್ಮಾ ಅವರು ಆಡಳಿತ ನೋಡಿಕೊಳ್ಳುತ್ತಿದ್ದರು. 2011ರಲ್ಲಿ ಕೇರಳ ಹೈಕೋರ್ಟ್ ಆದೇಶ ನೀಡಿ, ರಾಜಮನೆತನದವರು ಪಾರುಪತ್ತೇದಾರರ ಹೊಣೆ ನಿರ್ವಹಿಸುವಂತಿಲ್ಲ ಎಂದು ತಿಳಿಸಿತು. ಈಗ ಆ ಆದೇಶಕ್ಕೆ ವ್ಯತಿರಿಕ್ತವಾಗಿಯೇ ರಾಜಮನೆತನದವರಿಗೆ ದೇವಾಲಯ ನಿರ್ವಹಣೆಯಲ್ಲಿ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
12,500 ಸಾಲಿಗ್ರಾಮಗಳಿಂದ ಮೂರ್ತಿ
ಈ ದೇವಾಲಯದಲ್ಲಿ ಇರುವ ಮೂರ್ತಿಯು ಬ್ರಹ್ಮ, ವಿಷ್ಣು, ಮಹೇಶ್ವರ ಹೀಗೆ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತದೆ. ರಾಜಮನೆತನದವರು ಹೇಳುವಂತೆ, ಕದರ್ಶಕರದ ಅಂದರೆ, ವೈದ್ಯಕೀಯ ಮೂಲಿಕೆ, ಮರಳು ಮತ್ತು ರಾಳ ಒಳಗೊಂಡ ದಿವ್ಯವಾದ ಮೂರ್ತಿ ಇದು. ಮೊದಲಿಗೆ ಈ ದೇವಾಲಯವನ್ನು ಮರದಲ್ಲಿ ನಿರ್ಮಿಸಲಾಯಿತು. ಆ ನಂತರ ಇವತ್ತಿಗೆ ಕಾಣುತ್ತಿದೆಯಲ್ಲಾ, ಆ ರೀತಿ ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ. ವರ್ಷದ ಎಲ್ಲ ದಿನವನ್ನೂ ಪ್ರತಿನಿಧಿಸುವಂತೆ 365 ಕಂಬಗಳು ಇವೆ. ಮುಖ್ಯ ಮೂರ್ತಿಯನ್ನು 12,500 ಸಾಲಿಗ್ರಾಮಗಳಿಂದ ಮಾಡಲಾಗಿದೆ. ನೇಪಾಳದ ಗಂಡಕಿ ನದಿಯಿಂದ ಇವುಗಳನ್ನು ತರಲಾಗಿದೆ. ಈ ದೇವಾಲಯದ ಕೆಳಗೆ ಒಟ್ಟು ಆರು ಕೋಣೆಗಳಿದ್ದು, ಅದರೊಳಗೆ ಇರುವ ಬೆಲೆ ಬಾಳುವ ವಸ್ತುಗಳ ಲೆಕ್ಕವನ್ನು ಮಾಡುವ ಸಲುವಾಗಿ ತೆರೆದಿದ್ದರಿಂದ ದಶಕಗಳ ಕಾನೂನು ಸಮರಕ್ಕೆ ನಾಂದಿ ಹಾಡಿತು.
ಸಂಪತ್ತಿನ ಮೌಲ್ಯ 1,00,000 ಕೋಟಿ
ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯಮ್ ನೇತೃತ್ವದಲ್ಲಿ ಏಳು ಸದಸ್ಯರ ತಂಡವೊಂದನ್ನು ಸುಪ್ರೀಂ ಕೋರ್ಟ್ 2017ರಲ್ಲಿ ನೇಮಿಸಿತು. ದೇವಾಲಯದ ಕೆಳಗೆ ಕೋಣೆಗಳಲ್ಲಿ ಇರುವ ಸಂಪತ್ತನ್ನು ಮೌಲ್ಯಮಾಪನ ಮಾಡಲು ಸೂಚಿಸಲಾಯಿತು. ಅವುಗಳಲ್ಲಿ ಎರಡು ಕೋಣೆಗಳನ್ನು 130 ವರ್ಷಗಳಿಂದ ತೆರೆದಿರಲಿಲ್ಲ. ಆ ಸಂಪತ್ತು ಮೌಲ್ಯಮಾಪನ ಮಾಡಿದ ಗೋಪಾಲ್ ಸುಬ್ರಮಣಿಯಮ್ ನೇತೃತ್ವದ ಸಮಿತಿ, ಇಲ್ಲಿನ ಸಂಪತ್ತಿನ ಮೌಲ್ಯ 1,00,000 ಕೋಟಿ ರುಪಾಯಿ ಎಂದು ತಿಳಿಸಿತು. ದೇವಾಲಯದ ಕೆಳ ಭಾಗದ ರಹಸ್ಯ ಕೋಣೆಗಳೊಳಗೆ ಏನೇನು ಸಿಕ್ಕಿದವು ಎಂದು ಸುಪ್ರೀಂ ಕೋರ್ಟ್ ಗೆ ವರದಿ ನೀಡಿತು. ನೆಪಲೋನಿಕ್, ರೋಮನ್, ಬ್ರಿಟಿಷ್ ಹಾಗೂ ಮಧ್ಯಯುಗದ ಚಿನ್ನದ ನಾಣ್ಯಗಳು ಇರುವ ಚೀಲಗಳು ದೊರೆತಿದ್ದವು.
ಚಿನ್ನದ ಚೀಲಗಳ ತೂಕ 800 ಕೇಜಿ ಇತ್ತು
ಆ ಪೈಕಿ ಕೆಲವು ಚೀಲಗಳ ತೂಕ 800 ಕೇಜಿ ಇತ್ತು. ಸಮಿತಿಗೆ ಆ ಸ್ಥಳದಲ್ಲಿ ಕಂಡುಬಂದಿದ್ದರಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವಂಥ ಚಿನ್ನದ ಕುಂಡ, ಕುರ್ಚಿಗಳು ಸಹ ಇದ್ದವು. 4 ಅಡಿX 3 ಅಡಿ ಗಟ್ಟಿ ಚಿನ್ನದ ವಿಷ್ಣುವಿನ ವಿಗ್ರಹ ಇತ್ತು. ಅದಕ್ಕೆ ವಜ್ರಗಳು ಮತ್ತು ಬೆಲೆ ಬಾಳುವ ರತ್ನಗಳು ಜೋಡಿಸಲಾಗಿತ್ತು. ಇನ್ನು ದೇವರ ಮೂರ್ತಿಯನ್ನು ಕೂರಿಸಲು ಬಳಸುತ್ತಿದ್ದ 28 ಅಡಿಯ ಚಿನ್ನದ ಸಿಂಹಾಸನ ದೊರೆತಿತ್ತು. ಇನ್ನು ದೇವರ ಮೂರ್ತಿಗೆ ತೊಡಿಸುವ ಸಲುವಾಗಿ 30 ಕೇಜಿಯಷ್ಟು ತೂಕದ ಚಿನ್ನದ ತೊಡುಗೆ ಇತ್ತು. ಇನ್ನು ಚಿನ್ನದ ತೆಂಗಿನಕಾಯಿ ಹಾಗೂ ಅದಕ್ಕೆ ವಜ್ರ, ರೂಬಿ, ಸಫೈರ್, ಪಚ್ಚೆ ಮತ್ತಿತರ ರತ್ನಗಳನ್ನು ಅದಕ್ಕೆ ಜೋಡಿಸಲಾಗಿದ್ದು ಇತ್ತು. ಈ ರೀತಿಯ ಇನ್ನೂ ಅನೇಕ ಕಲಾತ್ಮಕ ವಸ್ತುಗಳು ಸಮಿತಿಗೆ ಕಂಡುಬಂದಿದ್ದವು.