ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ಗೆ ಆರ್ಥಿಕ ಉತ್ತೇಜನ: ಕೆಡಿಇಎಂನೊಂದಿಗೆ ಎಸ್ಬಿಐ ಒಪ್ಪಂದ
ಬೆಂಗಳೂರು, ಜುಲೈ 08, 2022: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಮೂಹವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ ) ನೊಂದಿಗೆ ಸಹಭಾಗಿತ್ವ ಹೊಂದಿದೆ. ಕೆಡಿಇಎಂ ಮತ್ತು ಎಸ್ ಬಿಐ ತಿಳುವಳಿಕಾ ಒಡಂಬಡಿಕೆ (ಎಂಒಯು) ಮಾಡಿಕೊಂಡಿದ್ದು, ಎಸ್ ಬಿಐ ಈಗ ಮಂಗಳೂರಿನ ಫಿನ್ಟೆಕ್ ಇನ್ನೋವೇಶನ್ ಹಬ್ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ರಾಜ್ಯದ ನವ ಉದ್ಯಮಗಳಿಗೆ ಧನಸಹಾಯವನ್ನು ಒದಗಿಸಲು ಸಿಜಿಟಿಎಸ್ಎಂಇ ಯೋಜನೆಯನ್ನು ಬಳಸಿಕೊಳ್ಳಲಿದೆ. ಬ್ಯಾಂಕಿಂಗ್ ಸಂಸ್ಥೆಯಿಂದ ನವೋದ್ಯಮಗಳಿಗೆ ನೆರವು ನೀಡುವ ಈ ಕ್ರಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇದೇ ಪ್ರಥಮ ಹೆಜ್ಜೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಬಿಟಿ, ಎಸ್ &ಟಿ ಇಲಾಖೆಯ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ, ಎಸ್.ಬಿ.ಐ. ಉಪ ವ್ಯವಸ್ಥಾಪಕ ನಿರ್ದೇಶಕರಾದ (ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಮತ್ತು ನ್ಯೂ ಇನಿಶಿಯೇಟೀವ್ಸ್) ರಾಣಾ ಅಶುತೋಷ್ ಕುಮಾರ್ ಸಿಂಗ್ , ಎಸ್ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಬೆಂಗಳೂರು ವೃತ್ತ) ನಂದ ಕಿಶೋರ್ ಅವರ ಉಪಸ್ಥಿತಿಯಲ್ಲಿ ಈ ತಿಳುವಳಿಕಾ ಒಡಂಬಡಿಕೆಗೆ ಕೆಡಿಇಎಂನ ಸಿಇಓ ಸಂಜೀವ್ ಗುಪ್ತಾ ಮತ್ತು ಬೆಂಗಳೂರು ವೃತ್ತದ ಎಸ್ ಬಿಐನ ಎನ್ ಡಬ್ಲ್ಯೂ-1ರ ಪ್ರಧಾನ ವ್ಯವಸ್ಥಾಪಕರಾದ ಎಸ್. ರಾಧಾಕೃಷ್ಣನ್ ಅವರು ಸಹಿ ಹಾಕಿದರು.
ಸೈಬರ್ ದಾಳಿಗೆ ಎಸ್ಬಿಐ ವಿಮಾ ಸುರಕ್ಷೆ, ಇಲ್ಲಿದೆ ವಿವರ
ಈ ತಿಳುವಳಿಕಾ ಒಡಂಬಡಿಕೆಯು ಕೆಡಿಇಎಂ ಬೆಂಬಲಿತ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ನವೋದ್ಯಮಗಳಿಗೆ ಸಾಲ ಸೇರಿದಂತೆ ಆರ್ಥಿಕ ಸೇವೆಗಳನ್ನು ಪಡೆಯಲು ದೃಢವಾದ ಕಾರ್ಯವಿಧಾನವನ್ನು ನಿರ್ಮಿಸಲು ಎಸ್ಬಿಐಗೆ ಅಧಿಕಾರ ನೀಡುತ್ತದೆ. ಮೈಕ್ರೋ ಅಂಡ್ ಸ್ಮಾಲ್ ಎಂಟರ್ಪ್ರೈಸಸ್ ಗಾಗಿ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (ಸಿಜಿಟಿಎಸ್ಎಂಇ) ಅನ್ನು ಎಲಿವೇಟ್ ವಿಜೇತರಿಗೆ ಮತ್ತು ಕರ್ನಾಟಕದ ಎಐಎಫ್ ಬೆಂಬಲಿತ ನವೋದ್ಯಮಗಳಿಗೆ ವಿಸ್ತರಿಸುವುದು ಈ ತಿಳಿವಳಿಕೆ ಒಪ್ಪಂದದ ಪ್ರಮುಖ ಲಕ್ಷಣವಾಗಿದೆ.
ನವೀನ ನವೋದ್ಯಮಗಳನ್ನು ಗುರುತಿಸಲು ಮತ್ತು ಪೋಷಿಸಲು ಮತ್ತು ವಿವಿಧ ಹಂತಗಳಲ್ಲಿ ಧನಸಹಾಯ ಅಥವಾ ಮಾರ್ಗದರ್ಶನದ ಮೂಲಕ ಅಗತ್ಯ ಉತ್ತೇಜನವನ್ನು ಒದಗಿಸಲು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯು ಎಲಿವೇಟ್-ಐಡಿಯಾ2ಪಿಒಸಿಯನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, ನಾವು ಈಗಾಗಲೇ 750 ಎಲಿವೇಟ್ ವಿಜೇತರನ್ನು ನಮ್ಮೊಂದಿಗೆ ಹೊಂದಿದ್ದೇವೆ, ಮತ್ತು ಈ ತಿಳುವಳಿಕಾ ಒಡಂಬಡಿಕೆಯೊಂದಿಗೆ 1000 ಕ್ಕೂ ಹೆಚ್ಚು ನವೋದ್ಯಮಗಳನ್ನು ಬೆಂಬಲಿಸಲಿದ್ದೇವೆ ಎಂದು ಹೇಳಿಕೆಯಲ್ಲಿ ಎಸ್ಬಿಐ ತಿಳಿಸಿದೆ.
ಎಸ್ಬಿಐ ಗ್ರಾಹಕರೆ ಗಮನಿಸಿ: ಸಾಲದ ಬಡ್ಡಿದರ ಏರಿಕೆ, ಮಾಸಿಕ ಬಜೆಟ್ಗೆ ಇಎಂಐ ಕತ್ತರಿ
ಸಂತಸ ವ್ಯಕ್ತಪಡಿಸಿದ ಸಚಿವ ಸಿ.ಎನ್.ಅಶ್ವತ್ಥನಾರಾಯಣ
ಈ ತಿಳುವಳಿಕಾ ಒಡಂಬಡಿಕೆಗಾಗಿ ಕೆಡಿಇಎಂ ಮತ್ತು ಎಸ್ಬಿಐ ಅನ್ನು ಅಭಿನಂದಿಸಿ ಮಾತನಾಡಿದ ವಿದ್ಯುನ್ಮಾನ, ಐಟಿ ಬಿಟಿ ಎಸ್ & ಟಿ ಇಲಾಖೆಯ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ, "ಕರ್ನಾಟಕವು ಈಗಾಗಲೇ ದೃಢವಾದ ನೀತಿ ಚೌಕಟ್ಟು ಮತ್ತು ಮೂಲಸೌಕರ್ಯಗಳಿಂದ ಬೆಂಬಲಿತವಾದ ಅನುಕೂಲಕರ ನವೋದ್ಯಮ ಪರಿಸರ ವ್ಯವಸ್ಥೆಯೊಂದಿಗೆ ರಾಷ್ಟ್ರದಲ್ಲಿ ಪ್ರಮುಖ ರಾಜ್ಯವಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಎಸ್.ಬಿ.ಐ.ಯಂತಹ ಬೃಹತ್ ಸಾರ್ವಜನಿಕ ವಲಯದ ಸಮೂಹವು ರಾಜ್ಯ ಮತ್ತು ರಾಷ್ಟ್ರದ ಡಿಜಿಟಲ್ ಅರ್ಥವ್ಯವಸ್ಥೆಯನ್ನು ಉತ್ತೇಜಿಸಿ ಸಮೃದ್ಧ ವಾತಾವರಣವನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಗೌರವಿಸುತ್ತದೆ ಎಂದು ನನಗೆ ಸಂತೋಷವಾಗಿದೆ. ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿ ಮಂಗಳೂರಿನ ಇನ್ನೊವೇಶನ್ ಹಬ್ಗೆ ಬೆಂಬಲ ನೀಡಿದ್ದಕ್ಕಾಗಿಸಂಜೀವ್ ಗುಪ್ತಾ ಮತ್ತು ರಾಣಾ ಅಶುತೋಷ್ ಕುಮಾರ್ ಸಿಂಗ್ ಅವರನ್ನು ನಾನು ಅಭಿನಂದಿಸುತ್ತೇನೆ," ಎಂದು ಹೇಳಿದರು.
ನವೋದ್ಯಮ ಪರಿಸರ ವ್ಯವಸ್ಥೆಗೆ ಉತ್ತೇಜನ
ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿ ನಂತರ ಮಾತನಾಡಿದ ಕೆಡಿಇಎಂನ ಸಿಇಒಸಂಜೀವ್ ಗುಪ್ತಾ ಅವರು, "ಈಗ ನಾವು ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ ಬಿಐ ಅನ್ನು ಹೊಂದಿರುವುದರಿಂದ, ಕರ್ನಾಟಕವು ವಿಶ್ವದ ಫಿನ್ಟೆಕ್ ಕೇಂದ್ರವಾಗಲಿದ್ದು, ವಿಶ್ವದ ಟಾಪ್ 5 ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಾಗುವ ವಿಶ್ವಾಸವಿದೆ. ನವೋದ್ಯಮಗಳಿಗೆ ಮೀಸಲಾದ ಹಣಕಾಸು ಸೇವೆಗಳನ್ನು ಒದಗಿಸುವ ಎಸ್ ಬಿಐ ಈಗ ಬೆಂಗಳೂರು ಕ್ಲಸ್ಟರ್ನ ಆಚೆಗೂ ನವೋದ್ಯಮ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ," ಎಂದರು.
ಉದ್ಯಮಕ್ಕೆ ಗೇಮ್ ಚೇಂಜರ್
ಎಂಒಯು ಬಗ್ಗೆ ಮಾತನಾಡಿದ ಎಸ್ ಬಿಐನ ಉಪ ವ್ಯವಸ್ಥಾಪಕ ನಿರ್ದೇಶಕರಾದ (ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಮತ್ತು ನ್ಯೂ ಇನಿಶಿಯೇಟೀವ್ಸ್) ರಾಣಾ ಅಶುತೋಷ್ ಕುಮಾರ್ ಸಿಂಗ್, "ವಿಶ್ವದರ್ಜೆಯ ಆವಿಷ್ಕಾರ ಕೇಂದ್ರ ಮತ್ತು ರಾಷ್ಟ್ರವನ್ನು ಪ್ರೇರೇಪಿಸುವ ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಶ್ರಮಿಸುತ್ತಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ಕರ್ನಾಟಕ ಸರ್ಕಾರದಂತಹ ಸಂಸ್ಥೆಗಳೊಂದಿಗೆ ಪಾಲುದಾರರಾಗಿರುವುದು ನಮಗೆ ಬಹಳ ಸಂತೋಷವಾಗಿದೆ. ಇದು ಸೂಕ್ತವಾದ ಪಾಲುದಾರಿಕೆ ಎಂದು ನಾವು ನಂಬುತ್ತೇವೆ ಏಕೆಂದರೆ ನಾವು ನಮ್ಮ ಆರ್ಥಿಕ ಚಾತುರ್ಯವನ್ನು ಕೆಡಿಇಎಂನ ವೇದಿಕೆಯೊಂದಿಗೆ ಒಗ್ಗೂಡಿಸಬಹುದುದಾಗಿದ್ದು, ಒಟ್ಟಾರೆ ಉದ್ಯಮಕ್ಕೆ ಗೇಮ್ ಚೇಂಜರ್ ಆಗಲಿದೆ," ಎಂದು ಹೇಳಿದರು.
ಕೆಡಿಇಎಂ ಅಧ್ಯಕ್ಷರಾದಬಿ.ವಿ.ನಾಯ್ಡು ಅವರು ಮಾತನಾಡಿ, "ಕರ್ನಾಟಕದ ನವೋದ್ಯಮ ಪ್ರಯಾಣದಲ್ಲಿ ಬದಲಾವಣೆ ಮತ್ತು ಆವಿಷ್ಕಾರಗಳನ್ನು ಸಕ್ರಿಯಗೊಳಿಸಲು ಕೆಡಿಇಎಂ ಶ್ರಮಿಸುತ್ತಿದೆ. ಈ ತಿಳಿವಳಿಕೆ ಒಪ್ಪಂದವು ನವೋದ್ಯಮಗಳಿಗೆ ಲಭ್ಯವಿರುವ ಸಮಗ್ರ ಹಣಕಾಸು ಸೇವೆಗಳ ಮೂಲಕ ಹೆಚ್ಚಿನ ಉತ್ತೇಜನ ನೀಡುತ್ತದೆ. ಮುಂದಿನ 3 ರಿಂದ 6 ತಿಂಗಳಲ್ಲಿ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ಉದಯೋನ್ಮುಕ ಟೆಕ್ ಕ್ಲಸ್ಟರ್ ಗಳಲ್ಲಿ ಸ್ಟಾರ್ಟ್ ಅಪ್ ಶಾಖೆಗಳನ್ನು ತೆರೆಯಲು ಎಸ್ ಬಿಐ ಹೆಚ್ಚಿನ ಆಸಕ್ತಿ ತೋರಿಸಿದೆ. ಇದು ಭಾರತದಲ್ಲಿಯೇ ಮೊದಲನೆಯದಾಗಿದ್ದು, ನಮ್ಮ ಕ್ಲಸ್ಟರ್ ಸೀಡ್ ಫಂಡ್ ಗಳಲ್ಲಿ ಭಾಗವಹಿಸಲು ಎಸ್ ಬಿಐ ಉತ್ಸುಕವಾಗಿರುವುದರಿಂದ ನಮಗೆ ಹೆಚ್ಚಿನ ಸಂತಸವಾಗಿದೆ," ಎಂದರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನವೋದ್ಯಮಗಳಿಗೆ ಸೇವೆಗಳನ್ನು ಒದಗಿಸಲು ಬೆಂಗಳೂರಿನ ಎಚ್ಎಸ್ಆರ್ ಲೇಔಟ್fನಲ್ಲಿರುವ ಕರ್ನಾಟಕ ಸರ್ಕಾರದ 'ಇನ್ನೋವೇಶನ್ ಟವರ್'ನಲ್ಲಿ ವಿಶೇಷವಾದ ನವೋದ್ಯಮ ಡೆಸ್ಕ್ ಅನ್ನು ತೆರೆಯಲಿದೆ. ತದನಂತರ, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಬೆಳಗಾವಿಯ ಮೂರು ಕ್ಲಸ್ಟರ್ ಗಳಲ್ಲಿ ಶಾಖೆಗಳನ್ನು ತೆರೆಯಲು ಎಸ್ ಬಿಐಗೆ ಕೆಡಿಇಎಂ ನೆರವು ನೀಡಲಿದೆ.