ಸಂಕ್ರಾಂತಿ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಚೀಟಿದಾರರಿಗೆ 2,500 ರುಪಾಯಿ ನಗದು ನೀಡಲು ನಿರ್ಧಾರ ಮಾಡಿದೆ. 2.6 ಕೋಟಿ ಪಡಿತರ ಚೀಟಿದಾರರಿಗೆ ಇದರಿಂದ ಅನುಕೂಲ ಆಗಲಿದೆ. ಜನವರಿ 4, 2021ರಿಂದ ನಗದು ವಿತರಣೆ ಶುರುವಾಗುತ್ತದೆ. ಹಬ್ಬದ ಆಚರಣೆಗೆ ಇದರಿಂದ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ವಿತರಣೆ ಆರಂಭಿಸಲಾಗುತ್ತದೆ.
ನಗದಿನ ಜತೆಗೆ ಒಂದು ಕೇಜಿ ಅಕ್ಕಿ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿಯನ್ನು ಬಟ್ಟೆ ಚೀಲದಲ್ಲಿ ಹಾಕಿ, ಅದರ ಜತೆಗೆ ಕಬ್ಬನ್ನು ಉಚಿತವಾಗಿ ನೀಡಲಾಗುತ್ತದೆ. ಕಳೆದ ವರ್ಷ ಅಕ್ಕಿ ಖರೀದಿಗಾಗಿ ತಮಿಳುನಾಡು ಸರ್ಕಾರವು ಪಡಿತರ ಚೀಟಿದಾರರಿಗೆ 1,000 ರುಪಾಯಿ ನೀಡಿತ್ತು. ಈ ವರ್ಷ ಇದು 1500ರಿಂದ 2500 ರುಪಾಯಿಗೆ ಏರಿಕೆ ಆಗಿತ್ತು. ಜನವರಿ 14, 2021ರಂದು ಸಂಕ್ರಾಂತಿ (ಪೊಂಗಲ್) ಆಚರಿಸಲಾಗುತ್ತದೆ.
2014ರಿಂದ ತಮಿಳುನಾಡು ಜನರು ಎಐಎಡಿಎಂಕೆ ಸರ್ಕಾರದಿಂದ 1 ಕೇಜಿ ಅಕ್ಕಿ, 1 ಕೇಜಿ ಸಕ್ಕರೆ ಜತೆಗೆ 100 ರುಪಾಯಿ ನೀಡಲು ಶುರುವಾಯಿತು. 2018ರಲ್ಲಿ ಆ ಮೊತ್ತ 1000 ರುಪಾಯಿಗೆ ಹೆಚ್ಚಾಯಿತು ಮತ್ತು ಈಗ 2500 ರುಪಾಯಿಗೆ ಮೇಲೇರಿತು.

ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷಗಳು ತಮ್ಮ ಅಗ್ರ ನೇತಾರರಾಗಿದ್ದ ಎಂ. ಕರುಣಾನಿಧಿ ಹಾಗೂ ಜಯಲಲಿತಾ ಅವರಿಲ್ಲದೆ ಚುನಾವಣೆ ಎದುರಿಸುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಸಿಕ್ಕಿದ್ದರೂ ಡಿಎಂಕೆ ನಾಯಕ ಸ್ಟಾಲಿನ್ ಪಾಲಿಗೆ ಸವಾಲಿದೆ. ಇನ್ನು ಎಐಎಡಿಎಂಕೆ ಪಕ್ಷದೊಳಗೆ ಬಣ ರಾಜಕೀಯದಿಂದ ದುರ್ಬಲವಾದಂತೆ ಕಾಣುತ್ತಿದೆ.


Click it and Unblock the Notifications