ಹಲವಾರು ತಿಂಗಳುಗಳಿಂದ ಡಿಎ ಅಥವಾ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರುಗಳು ಕಾದುಕೂತಿದ್ದಾರೆ. ಮುಂದಿನ ತಿಂಗಳು ಡಿಎ ಏರಿಕೆಯಾಗಲಿದೆ, ಎಂದು ಪ್ರತಿ ತಿಂಗಳು ಮಾಹಿತಿ ಆಧಾರದಲ್ಲಿ ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ಈ ನಡುವೆ ಈ ರಾಜ್ಯ ಸರ್ಕಾರವೊಂದು ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಹೆಚ್ಚಳ ಮಾಡಿದೆ.
ಹೌದು ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ತ್ರಿಪುರಾ ಸರ್ಕಾರ ಶೇಕಡ 12ರಷ್ಟು ತುಟ್ಟಿಭತ್ಯೆ (ಡಿಎ) ಹಾಗೂ ಡಿಆರ್ ಅನ್ನು ಹೆಚ್ಚಳ ಮಾಡಿದೆ. ಅಷ್ಟು ಮಾತ್ರವಲ್ಲದೆ ಈ ಪರಿಷ್ಕೃತ ಡಿಎ ಡಿಸೆಂಬರ್ 1, 2022ರಿಂದಲೇ ಜಾರಿಗೆ ಬರಲಿದೆ. ತ್ರಿಪುರಾ ಸರ್ಕಾರವು ಸುಮಾರು ಶೇಕಡ 12ರಷ್ಟು ಡಿಎ ಏರಿಕೆ ಮಾಡಿದ ಕಾರಣದಿಂದಾಗಿ ಡಿಎ ಶೇಕಡ 8ರಿಂದ ಶೇಕಡ 20ಕ್ಕೆ ಏರಿಕೆಯಾಗಿದೆ.
ಮುಖ್ಯಮಂತ್ರಿ ಮಾಣಿಕ್ ಸಹಾ ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟು 1,04,600 ಸಾಮಾನ್ಯ ಉದ್ಯೋಗಿಗಳು ಹಾಗೂ 80,800 ಪಿಂಚಣಿದಾರರಿಗೆ ಈ ಪ್ರಯೋಜನವು ಲಭ್ಯವಾಗಲಿದೆ. ಇನ್ನು ಗುತ್ತಿಗೆ ಆಧಾರದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುವವರಿಗೆ ಸಂಭಾವನೆಯನ್ನು ದುಪ್ಪಟ್ಟು ಮಾಡಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ವೇತನ ರಚನೆ ಪರಿಷ್ಕರಣೆ
ಈ ಹಿಂದೆ ಸರ್ಕಾರವು ಡಿಎ ರೂಪದಲ್ಲಿ ನೀಡುತ್ತಿದ್ದ ಮೊತ್ತಕ್ಕಿಂತ ಈಗ ಅಧಿಕ ಮೊತ್ತವನ್ನು ನೀಡಬೇಕಾಗುತ್ತದೆ. ಡಿಎ ಶೇಕಡ 12ರಷ್ಟು ಹೆಚ್ಚಳ ಮಾಡಿದ ಬಳಿಕ ತ್ರಿಪುರಾ ಸರ್ಕಾರ ಮಾಸಿಕವಾಗಿ 120 ಕೋಟಿ ರೂಪಾಯಿ ಹಾಗೂ ವಾರ್ಷಿಕವಾಗಿ 1,440 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. "ಇದನ್ನು ಹೊರತುಪಡಿಸಿ ಸರ್ಕಾರವು ವೇತನ ರಚನೆಯನ್ನು ಕೂಡಾ ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲಿದೆ," ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಮಾತನಾಡಿ, "ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ಡಿಎ ಹೆಚ್ಚಳ ಮಾಡದ ಕಾರಣ ಭಾರೀ ಟೀಕೆ ವ್ಯಕ್ತವಾಗಿದೆ. ಹೆಚ್ಚಿನ ಜನರಿಗೆ ಸರ್ಕಾರದ ಪ್ರಯೋಜನ ಅಧಿಕವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಎಲ್ಲ ಪ್ರಯತ್ನವನ್ನು ಮಾಡುತ್ತದೆ," ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ವಾರ್ಷಿಕವಾಗಿ 1,440 ಕೋಟಿ ರೂಪಾಯಿ ಅಧಿಕ ಹೊರೆ ಹೇಗೆ ಬೀಳಲಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, "ಆರ್ಥಿಕ ಲೆಕ್ಕಾಚಾರವನ್ನು ವ್ಯವಸ್ಥಿತವಾಗಿ, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಒಂದು ಕಲೆಯಾಗಿದೆ. ಜನರಿಗೆ ಕೊಂಚ ಅಧಿಕ ಲಾಭವನ್ನು ನೀಡಲು, ಜನರಿಗೆ ಸಹಾಯ ಮಾಡಲು ಕೊಂಚ ದೈರ್ಯ ಹಾಗೂ ಉತ್ತಮ ಮನಸ್ಸು ಎರಡೂ ಬೇಕು," ಎಂದು ಉತ್ತರಿಸಿದ್ದಾರೆ.


Click it and Unblock the Notifications