ಉಬರ್ ನಿಂದ ಭಾರತದಲ್ಲಿ ಶೇಕಡಾ 25ರಷ್ಟು ಸಿಬ್ಬಂದಿಗೆ ಪಿಂಕ್ ಸ್ಲಿಪ್
ಉಬರ್ ಇಂಡಿಯಾದಿಂದ ಭಾರತದಲ್ಲಿ 600 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಮಂಗಳವಾರ ಘೋಷಣೆ ಮಾಡಲಾಗಿದೆ. ಅಲ್ಲಿಗೆ ಒಟ್ಟು 2,400 ಉದ್ಯೋಗಿಗಳು ಇರುವ ಕಂಪೆನಿಯಲ್ಲಿ ಶೇಕಡಾ 25ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದಂತಾಗುತ್ತದೆ.
ಗ್ರಾಹಕರು ಮತ್ತು ಚಾಲಕರ ಸಹಾಯವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಬಿಜಿನೆಸ್ ಡೆವೆಲಪ್ ಮೆಂಟ್, ಕಾನೂನು, ಹಣಕಾಸು, ನೀತಿ ಮತ್ತು ಮಾರುಕಟ್ಟೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಕೆಲಸದಿಂದ ತೆಗೆಯಲಾಗುವುದು ಎಂದು ತಿಳಿಸಲಾಗಿದೆ.
10ರಿಂದ 12 ವಾರದ ವೇತನ
ಕೆಲಸದಿಂದ ತೆಗೆಯುವ ಸಿಬ್ಬಂದಿಗೆ 10ರಿಂದ 12 ವಾರದ ವೇತನ, ಆರು ತಿಂಗಳು ವೈದ್ಯಕೀಯ ಇನ್ಷೂರೆನ್ಸ್ ಕವರೇಜ್ ಮತ್ತಿತರ ಸವಲತ್ತು ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಮತ್ತು ಈ ಉದ್ಯೋಗಿಗಳು ಲ್ಯಾಪ್ ಟಾಪ್ ಅನ್ನು ತಾವೇ ಇಟ್ಟುಕೊಳ್ಳಬಹುದು. ಉಬರ್ ಟ್ಯಾಲೆಂಟ್ ಡೈರೆಕ್ಟರಿ ಸೇರಿಕೊಳ್ಳಬಹುದು. ಜಾಗತಿಕ ಮಟ್ಟದಲ್ಲಿ ಕಂಪೆನಿಯ ಪುನರ್ ರಚನೆ ನಡೆಯುತ್ತಿದ್ದು, ಅದರ ಭಾಗವಾಗಿ ಉದ್ಯೋಗಿಗಳ ಕಡಿತ ಮಾಡಲಾಗುತ್ತಿದೆ. ಜತೆಗೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಘೋಷಣೆ ಮಾಡಿದ ಕೊರೊನಾ ಲಾಕ್ ಡೌನ್ ನಿಂದಾಗಿ ಉಬರ್ ಹಣಕಾಸು ಸ್ಥಿತಿಯ ಮೇಲೆ ಪ್ರಭಾವ ಬೀರಿದೆ.
290 ಕೋಟಿ ಅಮೆರಿಕನ್ ಡಾಲರ್ ನಷ್ಟ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜಾಗತಿಕ ವ್ಯವಹಾರದಲ್ಲಿ ಏಪ್ರಿಲ್ ತಿಂಗಳಲ್ಲಿ 80 ಪರ್ಸೆಂಟ್ ಇಳಿಕೆಯಾಗಿದೆ. ಜನವರಿಯಿಂದ ಮಾರ್ಚ್ 2020 ತ್ರೈಮಾಸಿಕದಲ್ಲಿ ಉಬರ್ ಕಂಪೆನಿಯು 290 ಕೋಟಿ ಅಮೆರಿಕನ್ ಡಾಲರ್ ನಷ್ಟ ದಾಖಲಿಸಿದೆ. ಕಳೆದ ಮೂರು ತ್ರೈ ಮಾಸಿಕದಲ್ಲೇ ಇದು ಅತ್ಯಂತ ದೊಡ್ಡ ನಷ್ಟ. ಉಬರ್ ಗೆ ಜಾಗತಿಕವಾಗಿ ಒಟ್ಟು 27,000 ಮಂದಿ ಉದ್ಯೋಗಿಗಳಿದ್ದಾರೆ. ಅದರಲ್ಲಿ 6700 ಮಂದಿಯನ್ನು ಉದ್ಯೋಗದಿಂದ ತೆಗೆಯುವುದಾಗಿ ಹೇಳಿದೆ. ಆ ಮೂಲಕ 100 ಕೋಟಿ ಅಮೆರಿಕನ್ ಡಾಲರ್ ಉಳಿತಾಯ ಮಾಡಿದಂತಾಗುತ್ತದೆ. ಉಬರ್ ಒಟ್ಟಾರೆ ಜಾಗತಿಕ ಮಟ್ಟದ ಉದ್ಯೋಗಿಗಳ ಸಂಖ್ಯೆಯ ಪೈಕಿ ಭಾರತದಲ್ಲಿ 8 ಪರ್ಸೆಂಟ್ ನಷ್ಟಿದ್ದಾರೆ.
ಝೊಮ್ಯಾಟೋಗೆ ಉಬರ್ ಈಟ್ಸ್ ಮಾರಲಾಗಿತ್ತು
ಭಾರತದಲ್ಲಿ ಲಾಭ ಪಡೆಯುವುದಕ್ಕೆ ಉಬರ್ ಬಹಳ ಶ್ರಮಿಸುತ್ತಿದೆ. ತನ್ನ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕು ಎಂದು ಉಬರ್ ಈಟ್ಸ್ ವ್ಯವಹಾರವನ್ನು ಕಳೆದ ಜನವರಿಯಲ್ಲಿ ಝೊಮ್ಯಾಟೋಗೆ ಮಾರಾಟ ಮಾಡಿದೆ. ಅದರಿಂದ 245 ಸಿಬ್ಬಂದಿ ಮೇಲೆ ಪರಿಣಾಮ ಬೀರಿತು. ಇನ್ನು ದೇಶದಾದ್ಯಂತ ಮ್ಯಾನೇಜ್ ಮೆಂಟ್ ಸಂಸ್ಥೆಗಳಲ್ಲಿ ನೀಡಿದ್ದ ಉದ್ಯೋಗದ ಆಫರ್ ಗಳನ್ನು ಉಬರ್ ಹಿಂಪಡೆದಿತ್ತು. ಭಾರತದಲ್ಲಿ ಓಲಾದಿಂದ ಉಬರ್ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಇತ್ತೀಚೆಗೆ ಓಲಾ ಕೂಡ 1400 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಘೋಷಣೆ ಮಾಡಿತು. ಓಲಾ ಮತ್ತು ಉಬರ್ ಎರಡರಲ್ಲೂ ಸಾಫ್ಟ್ ಬ್ಯಾಂಕ್ ಹೂಡಿಕೆ ಮಾಡಿದೆ. ಭಾರತದಲ್ಲಿ ಕೊರೊನಾ ತಡೆಯುವ ಕಾರಣಕ್ಕೆ ಮಾರ್ಚ್ 24ರಿಂದ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ಉಬರ್ ಇಂಡಿಯಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆ ಆಗಿದೆ.