ಕೇಂದ್ರ ಬಜೆಟ್ ಗೂ ಮುನ್ನ 'ಹಲ್ವಾ ಕಾರ್ಯಕ್ರಮ': ಏಕೆ ಮತ್ತು ಹೇಗೆ?
ಕೇಂದ್ರ ಬಜೆಟ್ ಗೂ ಮುನ್ನ ಇದೊಂದು ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೋಮವಾರದಂದು ಸಹ ನಡೆಯಿತು. ಅದು 'ಹಲ್ವಾ ಕಾರ್ಯಕ್ರಮ'. ಯಾವುದೇ ಕೇಂದ್ರ ಬಜೆಟ್ ದಾಖಲೆಯ ಅಧಿಕೃತ ಮುದ್ರಣದ ಆರಂಭದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತದೆ. 2020-21ನೇ ಸಾಲಿನ ಕೇಂದ್ರ ಬಜೆಟ್ ಪೂರ್ವಭಾವಿಯಾಗಿಯೂ ಇದು ಮಾಡಲಾಗಿದೆ.
ಮೋದಿ 2.0 ಸರ್ಕಾರದ ಎರಡನೇ ಬಜೆಟ್ ಇದಾಗಿದೆ. ಫೆಬ್ರವರಿ 1ನೇ ತಾರೀಕು ಮಂಡನೆ ಆಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಮತ್ತಿತರರು ಬಜೆಟ್ ಪೂರ್ವ ಈ ಸಂಪ್ರದಾಯದಲ್ಲಿ ಪಾಲ್ಗೊಂಡರು.
ಆರ್ಥಿಕ ಸಚಿವಾಲಯದಿಂದ #ArthShastri ಅಭಿಯಾನ; ಏನಿದರ ವಿಶೇಷ?
ಬಜೆಟ್ ಬಗ್ಗೆ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಯಾರನ್ನೂ ಹೊರಗೆ ಬಿಡುವುದಿಲ್ಲ. ಬಜೆಟ್ ದಾಖಲೆ ಮುದ್ರಣವಾಗುವ ಪ್ರೆಸ್ ನಾರ್ತ್ ಬ್ಲಾಕ್ ನಲ್ಲೇ ಇದೆ. ಕೇಂದ್ರ ಬಜೆಟ್ ಮಂಡನೆ ಆಗುವ ತನಕ ಈ ಎಲ್ಲ ಅಧಿಕಾರಿಗಳಿಗೆ ಮುದ್ರಣಾಲಯವೇ ಮನೆಯಾಗಿರುತ್ತದೆ ಎಂದು ಆರ್ಥಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂಸತ್ ನಲ್ಲಿ ಬಜೆಟ್ ಮಂಡನೆ ಆಗುವ ತನಕ ಈ ಅಧಿಕಾರಿಗಳು, ಸಿಬ್ಬಂದಿ ಯಾರೂ ತಮ್ಮ ಮನೆಯವರನ್ನು, ಆಪ್ತರನ್ನು ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ. ಆದ್ದರಿಂದ ಈವರೆಗೆ ನಡೆದುಬಂದಿರುವ ಸಂಪ್ರದಾಯದಂತೆ ದೊಡ್ಡ ಬಾಣಲೆಯಲ್ಲಿ 'ಹಲ್ವಾ' ತಯಾರಿಸಲಾಯಿತು. ಆ ನಂತರ ಸಚಿವಾಲಯದ ಎಲ್ಲರಿಗೂ ಅದನ್ನು ಹಂಚಲಾಯಿತು.
ಕೇಂದ್ರ ಬಜೆಟ್ ಮಂಡನೆ ಆಗುವ ತನಕ ಸಿದ್ಧತೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಸಿಬ್ಬಂದಿಯು ತಮ್ಮ ಕುಟುಂಬದ ಸದಸ್ಯರನ್ನು, ಸಂಬಂಧಿಗಳನ್ನು, ಸ್ನೇಹಿತರನ್ನು ಯಾವ ರೀತಿಯಿಂದಲೂ ಸಂಪರ್ಕಿಸಲು ಆಗುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ಮತ್ತು ಸಚಿವಾಲಯದ ಕೆಲವರಿಗೆ ಮಾತ್ರ ಮನೆಗೆ ತೆರಳಲು ಅನುಮತಿ ಇರುತ್ತದೆ.