ಲಂಚದ ಬಗ್ಗೆ ದೂರು ನೀಡುವವರಿಗೆ 50 ಸಾವಿರ ತನಕ ನಗದು ಪುರಸ್ಕಾರ
ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ, ಗುರುವಾರ ಪ್ರಸ್ತಾವವೊಂದಕ್ಕೆ ಒಪ್ಪಿಗೆ ಸೂಚಿಸಿದೆ. ಲಂಚದ ಪ್ರಕರಣಗಳನ್ನು ವರದಿ ಮಾಡಿ, 1 ಸಾವಿರದಿಂದ 50 ಸಾವಿರ ರುಪಾಯಿ ತನಕ ನಗದು ಪುರಸ್ಕಾರ ಪಡೆಯಿರಿ ಎಂದು ಜನರಿಗೆ ಆಹ್ವಾನ ನೀಡಿದೆ.
ಬಿಹಾರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ 16 ಪ್ರಸ್ತಾವಗಳಲ್ಲಿ ಇದೂ ಒಂದು. ಈ ನಿರ್ಧಾರದ ಅನ್ವಯ, ಲಂಚಕ್ಕಾಗಿ ಬೇಡಿಕೆ ಇಡುವ ಸಿಬ್ಬಂದಿ, ಅಧಿಕಾರಿಗಳ ಬಗ್ಗೆ ದೂರು ನೀಡುವ ಜನರಿಗೆ ರಾಜ್ಯ ಸರ್ಕಾರವು ನಗದು ಪುರಸ್ಕಾರವನ್ನು ನೀಡಲಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಬಹುಮಾನ ನಿಧಿಯನ್ನು ಸಹ ಸ್ಥಾಪಿಸಿದೆ.
ಈ ನಿಧಿಯ ಮೂಲಕ ದೂರುದಾರರು ಕೋರ್ಟ್ ಗೆ ಹೋಗಿಬರುವ ಖರ್ಚು, ಕೋರ್ಟ್ ವೆಚ್ಚಗಳು, ಆಹಾರ- ಪಾನೀಯಕ್ಕಾಗಿ ಹೆಚ್ಚುವರಿಯಾಗಿ 200 ರುಪಾಯಿ ಮೀಸಲಿಡಲಾಗುವುದು. ದೂರುದಾರರ ಗುರುತನ್ನು ಗೋಪ್ಯವಾಗಿ ಇಡಲಾಗುತ್ತದೆ.
ಇದೇ ವೇಳೆ ಸಚಿವರ ಆಪ್ತ ಸಹಾಯಕರಿಗೆ ಹಾಗೂ ಕಾರ್ಯದರ್ಶಿಗಳಿಗೆ ಇದ್ದ ಪ್ರಯಾಣ ಭತ್ಯೆ ವಾರ್ಷಿಕ ಮೊತ್ತವನ್ನು 1.5 ಲಕ್ಷದಿಂದ 3 ಲಕ್ಷ ರುಪಾಯಿಗೆ ಏರಿಕೆ ಮಾಡಲಾಗಿದೆ.