ಆರ್ಥಿಕ ಹಣದುಬ್ಬರ ಹೆಚ್ಚಳವಾಗಿದ್ದು ಎಲ್ಲಾ ವಸ್ತುಗಳು ದುಬಾರಿಯಾಗಿದೆ. ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಏರಿಕೆಯಾದ ಬೆಲೆ ತಗ್ಗಿಸಲು ಸರ್ಕಾರವು ಪ್ರಮುಖವಾಗಿ ಹತ್ತು ಕ್ರಮಗಳನ್ನು ಕೈಗೊಂಡಿದೆ. ಸರಣಿಯಾಗಿ ಈ ಕ್ರಮಗಳನ್ನು ಘೋಷಣೆ ಮಾಡಿದೆ.
ಏಪ್ರಿಲ್ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 7.8 ಕ್ಕೆ ತಲುಪಿದೆ. ಸಗಟು ಬೆಲೆಗಳು ಶೇಕಡಾ 15 ಅನ್ನು ದಾಟಿದೆ. ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಕೆಲವು ಕ್ರಮಗಳನ್ನು ಘೋಷಿಸಿದೆ. ಈ ನಡುವೆ ಸರ್ಕಾರದ ಈ ಹಿಂದಿನ ಕೆಲವು ನಿಯಮ, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಪ್ರಮುಖ ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಒತ್ತಡವು ಹಣದುಬ್ಬರ ಹೆಚ್ಚಳಕ್ಕೆ ಸವಾಲನ್ನು ಒಡ್ಡಿದೆ. ಇನ್ನು ಇತ್ತೀಚೆಗೆ ಆರ್ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ಗಳಿಂದ ಮತ್ತು ಸಿಆರ್ಆರ್ ಅನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇನ್ನು ಹಣದುಬ್ಬರ ನಿಯಂತ್ರಣಕ್ಕೆ ಮತ್ತೆ ದರ ಹೆಚ್ಚಳದ ಸುಳಿವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ. ಪ್ರತಿ ದಿನ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈ ನಡುವೆ ಸರ್ಕಾರ ಈ ಬೆಲೆ ತಗ್ಗಿಸಲು ಕೈಗೊಂಡ ಕ್ರಮಗಳು ಯಾವುದು ಎಂದು ತಿಳಿಯೋಣ ಮುಂದೆ ಓದಿ..

ಬೆಲೆ ತಗ್ಗಿಸಲು ಸರ್ಕಾರ ಕೈಗೊಂಡ ಹತ್ತು ಕ್ರಮ
1. ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ 8 ಮತ್ತು ಡೀಸೆಲ್ ಮೇಲೆ ರೂ 6 ಅಬಕಾರಿ ತೆರಿಗೆ ಕಡಿತವನ್ನು ಘೋಷಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದಾಗಿ 1 ಲಕ್ಷ ಕೋಟಿ ರೂಪಾಯಿ ಕೊರತೆಯನ್ನು ಸರ್ಕಾರ ಭರಿಸಲಿದೆ.
2. ಕೇಂದ್ರ ಸರ್ಕಾರದ ಬಳಿಕ ಕೇರಳ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆ ಮಾಡಿದೆ. ಇದರಿಂದಾಗಿ ಬೆಲೆ ಮತ್ತಷ್ಟು ಇಳಿಕೆಯಾಗಿದೆ.
3. ಸರ್ಕಾರವು ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮಕ್ಕೆ ಪ್ರಮುಖ ಕಚ್ಚಾ ವಸ್ತುಗಳು ಮತ್ತು ಒಳಹರಿವಿನ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಆಮದು ಸುಂಕ ಕಡಿತದ ಜತೆಗೆ ಉಕ್ಕಿನ ಬೆಲೆಯೂ ಇಳಿಕೆಯಾಗಲಿದೆ.
4. ಸರ್ಕಾರವು ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಿದೆ.
5. ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ, 20 ಲಕ್ಷ ಟನ್ಗಳಷ್ಟು ಕಚ್ಚಾ ಸೋಯಾಬೀನ್ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಸುಂಕ ರಹಿತ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
6. ಉಜ್ವಲ ಯೋಜನೆ ಅಡಿಯಲ್ಲಿ, ಸರ್ಕಾರವು ಪ್ರತಿ ಸಿಲಿಂಡರ್ಗೆ 200 ರೂ ಸಬ್ಸಿಡಿಯನ್ನು ಸಹ ನೀಡಿದೆ
7. ಸಕ್ಕರೆ ರಫ್ತಿನ ಮೇಲೆ ಸರ್ಕಾರವು 100 ಲಕ್ಷ ಟನ್ಗಳ ಮಿತಿಯನ್ನು ನಿಗದಿಪಡಿಸಿದೆ. ಅಕ್ಟೋಬರ್ನಲ್ಲಿ ಸಕ್ಕರೆ ಋತು ಪ್ರಾರಂಭವಾಗುವವರೆಗೂ ದಾಸ್ತಾನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
8. ದೇಶದಲ್ಲಿ ಸಾಕಷ್ಟು ದಾಸ್ತಾನುಗಳನ್ನು ಕಾಪಾಡಿಕೊಳ್ಳಲು ಕೇಂದ್ರವು ಸಕ್ಕರೆ ರಫ್ತುಗಳನ್ನು ಸಹ ನಿಯಂತ್ರಿಸಿದೆ. ಜೂನ್ 1 ರಿಂದ, ಸೆಪ್ಟೆಂಬರ್ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಕೇವಲ 10 ಮಿಲಿಯನ್ ಟನ್ ಸಕ್ಕರೆ ರಫ್ತು ಮಾಡಬಹುದು.
9. ಆಹಾರ ಭದ್ರತೆ ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಭಾರತವು ಗೋಧಿ ರಫ್ತಿನ ಮೇಲೆ ನಿಷೇಧವನ್ನು ಹೇರಿತು.
10. ಪ್ರಸಕ್ತ ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಬಜೆಟ್ನಲ್ಲಿ ಸರ್ಕಾರವು ರೈತರಿಗೆ 1.1 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಯನ್ನು ನೀಡುತ್ತದೆ.


Click it and Unblock the Notifications