ಜೂನ್ ವೇಳೆಗೆ ದೇಶದಲ್ಲಿ ಆರ್ಥಿಕ ಹಿಂಜರಿತ ಎಂದ ಕೇಂದ್ರ ಸಚಿವ, ಪಾಕ್, ಶ್ರೀಲಂಕಾ ಸ್ಥಿತಿ ನೆನಪಿಸಿಕೊಳ್ಳಿ!
ಭಾರತ ದೇಶವು ಈಗಷ್ಟೇ ಹಣದುಬ್ಬರದಿಂದ ಕೊಂಚ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಈಗಾಗಲೇ ಹಣದುಬ್ಬರ ನಿಯಂತ್ರಣಕ್ಕೆ ತರುವ ನಿಟ್ಟನಲ್ಲಿ ಆರ್ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಇದರಿಂದಾಗಿ ಸಾಲದ ಬಡ್ಡಿದರ ಏರಿದೆ. ಆರ್ಥಿಕ ಸ್ಥಿತಿ ಕೊಂಚ ಸಹಜತೆಗೆ ಮರಳಲಿದೆ ಅಂದುಕೊಳ್ಳುವಾಗಲೇ, "ಭಾರತದಲ್ಲಿ ಜೂನ್ ವೇಳೆಗೆ ಆರ್ಥಿಕ ಹಿಂಜರಿತ ಉಂಟಾಗಲಿದೆ," ಎಂದು ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ ಸೋಮವಾರ ತಿಳಿಸಿದ್ದಾರೆ.
"ಜೂನ್ ವೇಳೆಗೆ ದೇಶದಲ್ಲಿ ಆರ್ಥಿಕ ಹಿಂಜರಿತ ಅಪ್ಪಳಿಸಲಿದೆ. ಆದರೆ ಇದರ ಪರಿಣಾಮ ಜನರ ಮೇಲೆ ಬೀಳದಂತೆ ಸರ್ಕಾರವು ಈಗಾಗಲೇ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡುತ್ತಿದೆ. ಈಗಾಗಲೇ ಜಾಗತಿಕವಾಗಿ ಹಿಂಜರಿತ ಕಾಡುತ್ತಿದೆ. ಹಲವಾರು ದೇಶಗಳಿಗೆ ಹಿಂಜರಿತ ಉಂಟಾಗಿದೆ," ಎಂದು ಕೂಡಾ ಹೇಳಿಕೊಂಡಿದ್ದಾರೆ.
ಆರ್ಥಿಕ ಬಿಕ್ಕಟ್ಟು: ಬೆಲೆ ಏರಿಕೆ, ಮಾರುಕಟ್ಟೆ ಬಂದ್, ಪಾಕಿಸ್ತಾನದ ಸ್ಥಿತಿ ಹೇಗಿದೆ?
"ಜಾಗತಿಕವಾಗಿ, ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಹಣದುಬ್ಬರವಿದೆ. ಈ ಮಾಹಿತಿಯನ್ನು ನಾವು ಕೇಂದ್ರ ಸರ್ಕಾರದ ಸಭೆಯಲ್ಲಿ ಚರ್ಚಿಸಿ ಬಳಿಕ ನಿಮಗೆ ತಿಳಿಸುತ್ತಿದ್ದೇನೆ. ಜೂನ್ ಬಳಿಕ ಭಾರತದಲ್ಲಿ ಆರ್ಥಿಕ ಹಿಂಜರಿತ ಅಪ್ಪಳಿಸಲಿದೆ," ಎಂದು ಹೇಳಿದ್ದಾರೆ. ಈ ನಡುವೆ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಉಂಟಾದ ಸ್ಥಿತಿಯು ಭಾರತದಲ್ಲಿಯೂ ಉಂಟಾಗಬಹುದೇ ಎಂಬ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....
ಜನರಿಗೆ ಪ್ರಭಾವ ಬೀರದಂತೆ ಸರ್ಕಾರದ ಕ್ರಮ
"ಈಗಾಗಲೇ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ, ಆ ದೇಶಗಳು ಈ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಜೂನ್ನಲ್ಲಿ ಭಾರತದಲ್ಲಿಯೂ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಹಿಂಜರಿತವು ದೇಶದ ಜನತೆಯ ಮೇಲೆ ಯಾವುದೇ ಪ್ರಭಾವ ಉಂಟು ಮಾಡದಿರಲಿ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ," ಎಂದು ಕೇಂದ್ರ ಸಣ್ಣ, ಮಧ್ಯಮ ಕೈಗಾರಿಕೆ ಸಚಿವ ನಾರಾಯಣ ರಾಣೆ ಹೇಳಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತದ ಬಯಕೆ
ಜಿ20 ಐಡಬ್ಲ್ಯೂಜಿ ಎರಡು ದಿನಗಳ ಕಾಲ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಾರಾಯಣ ರಾಣೆ ಭಾಗಿಯಾಗಿದ್ದಾರೆ. "ಉದ್ಯೋಗ ಸೃಷ್ಟಿಯ ಪ್ರಯತ್ನವನ್ನು ನಾವು ಮಾಡುತ್ತೇವೆ. ಈ ಸಭೆಯು ದೀರ್ಘಾವಧಿಯ ಹಾಗೂ ಸಹ್ಯ ಆರ್ಥಿಕ ಬೆಳವಣಿಗೆಗೆ ಸಹಕಾರಿ. ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಇದರಲ್ಲಿ ಭಾಗಿಯಾಗುತ್ತಿದೆ. ನಾವು ಕೂಡಾ ಅಭಿವೃದ್ಧಿ ಹೊಂದಿದ ದೇಶವಾಗಲು ಬಯಸುತ್ತೇವೆ. ನಮ್ಮ ಪ್ರಧಾನಿಯ ಬಗ್ಗೆ ನಮಗೆ ಹೆಮ್ಮೆಯಿದೆ. ಮೂಲಸೌಕರ್ಯ ಹಲವಾರು ವಲಯಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಕಳೆದ ಎಂಟು ವರ್ಷದಲ್ಲಿ ದೇಶವು ಬೇರೆ ಬೇರೆ ದೇಶವನ್ನು ಸೆಳೆದಿದೆ," ಎಂದು ಕೇಂದ್ರ ಸಚಿವ ನಾರಾಯಣ ರಾಣೆ ತಿಳಿಸಿದ್ದಾರೆ.
ಪಾಕಿಸ್ತಾನ, ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು
ಶ್ರೀಲಂಕಾದಲ್ಲಿ 2019ರಿಂದ ಆರ್ಥಿಕ ಬಿಕ್ಕಟ್ಟು ಆರಂಭವಾಗಿದ್ದು ಪ್ರಸ್ತುತವೂ ದೇಶ ಅದರಿಂದ ಹೊರಬರಲು ಸಾಧ್ಯವಾಗಿಲ್ಲ. ಆರ್ಥಿಕ ಬಿಕ್ಕಟ್ಟು ನೇರವಾಗಿ ಜನರ ಮೇಲೆ ಪ್ರಭಾವ ಉಂಟು ಮಾಡಿದೆ. ಈ ಸ್ಥಿತಿಗೆ ಕೋವಿಡ್ ಸಾಂಕ್ರಾಮಿಕ, ಆರ್ಥಿಕ, ರಾಜಕೀಯ ಸ್ಥಿತಿ ಎಲ್ಲವೂ ಪ್ರಭಾವ ಬೀರಿದೆ. ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸುವಂತಹ ಸ್ಥಿತಿ ಉಂಟಾಗಿದೆ. ದಿನಸಿಗಾಗಿ ಸಾಲು ನಿಂತು ಕೊನೆಗೆ ದಿನಸಿ ಲಭಿಸದೆ ಮನೆಗೆ ಹಿಂದುರುಗಬೇಕಾದ ಸ್ಥಿತಿ ಅಲ್ಲಿ ಉಂಟಾಗಿದೆ. ಎಲ್ಲ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಹಾಲು, ಅಕ್ಕಿ ದರವು ಗಗನಕ್ಕೆ ಏರಿದೆ. ಪಾಕಿಸ್ತಾನದಲ್ಲಿಯೂ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಅಲ್ಲಿಯೂ ಸರ್ಕಾರದ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಇಂಧನ, ಆಹಾರ ಉತ್ಪನ್ನಗಳ ದರ ಗಗನಕ್ಕೇರಿದೆ.