ಗಗನಕ್ಕೇರಿದ ಬೆಲೆಗಳು: ಮಧ್ಯಮ, ಬಡ ಕುಟುಂಬ ತತ್ತರ
ದೇಶದಲ್ಲಿ ಹಣದುಬ್ಬರ ತೀವ್ರ ಮಟ್ಟಕ್ಕೆ ಏರಿಕೆ ಕಂಡಿದೆ. ಈ ವೇಳೆ ಪ್ರಮುಖವಾಗಿ ಬಡವರು ಹಾಗೂ ಮಧ್ಯಮ ವರ್ಗದ ಜನರು ತತ್ತರಿಸಿಹೋಗಿದ್ದಾರೆ. ಆಹಾರ ಪದಾರ್ಥಗಳು, ತೈಲ ಮತ್ತು ಅಡುಗೆ ಅನಿಲದ ಬೆಲೆಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಹಲವಾರು ಕುಟುಂಬಗಳು ದಿಕ್ಕುದೋಚದಾಗಿದೆ. ದಿನದೂಡಲು ಕಷ್ಟಪಡುತ್ತಿದೆ. ದಿನಬಳಕೆಯ ವಸ್ತುಗಳಿಗೆ ಹಣ ಉಳಿಸುವುದು ಕೂಡಾ ಹರಸಾಹಸವಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಣ್ಣ ಅಂಗಡಿ ವ್ಯಾಪಾರಿಯೊಬ್ಬರು, "ಈ ಬೆಲೆ ಏರಿಕೆಯಿಂದಾಗಿ ನನಗೆ ನಷ್ಟವಾಗಿದೆ. ಈರುಳ್ಳಿ ಮತ್ತು ಟೊಮೆಟೊದಿಂದ ಎಣ್ಣೆಯವರೆಗೆ ಬಹುತೇಕ ಎಲ್ಲವೂ ದುಬಾರಿಯಾಗಿದೆ. ನಮಗೆ ಎಲ್ಲಿಂದ ಹಣ ಸಿಗುತ್ತದೆ. ನಾವು ಜನರಿಗೆ ನೀಡಿದ ಆಹಾರಕ್ಕೆ ಅವರು ನೀಡುವ ಕಾಸು ಈರುಳ್ಳಿ, ಟೊಮೆಟೊ, ಖಾದ್ಯ ತೈಲಗೆಂದೇ ಖರ್ಚಾಗುತ್ತದೆ. ನಮ್ಮ ಮನೆ ಖರ್ಚಿಗೆ ಏನು ಉಳಿಯುವುದಿಲ್ಲ," ಎಂದು ಹೇಳಿದ್ದಾರೆ. ಇನ್ನು ಹಣದುಬ್ಬರ ಹೆಚ್ಚಾದಂತೆ ತನ್ನ ಸ್ಟಾಲ್ಗೆ ಗ್ರಾಹಕರು ಕೂಡಾ ಕಡಿಮೆಯಾಗಿದ್ದಾರೆ ಎಂದು ಮತ್ತೋರ್ವ ಮಹಿಳಾ ವ್ಯಾಪಾರಿ ನೊಂದು ನುಡಿದಿದ್ದಾರೆ.
ಖರೀದಿದಾರರ ನಿರ್ಧಾರದ ಮೇಲೆ ಪ್ರಭಾವ ಬೀರುತ್ತಿದೆ ಬೆಲೆ ಏರಿಕೆ!
ಏಪ್ರಿಲ್ನಲ್ಲಿ ಗ್ರಾಹಕ ಬೆಲೆ ಹಣದುಬ್ಬರವು 7.79 ಪ್ರತಿಶತಕ್ಕೆ ಏರಿತು. ಇದಕ್ಕೂ ಮುನ್ನ ಮೇ 2014 ರಲ್ಲಿ 8.3 ಪ್ರತಿಶತ ಹಣದುಬ್ಬರ ದಾಖಲಾಗಿದೆ. ಆದರೆ ಏಪ್ರಿಲ್ನಲ್ಲಿ ಹಣದುಬ್ಬರ ವೇಗವಾಗಿ ಹೆಚ್ಚಾಗಿದೆ. ಈ ಹಣದುಬ್ಬರವು ಸಣ್ಣ ಫುಡ್ ಸ್ಟಾಲ್ಗಳನ್ನು ಮುಚ್ಚಬೇಕಾದಂತಹ ಸ್ಥಿತಿಗೆ ತಂದೊಡ್ಡಿದೆ.
ಎಲ್ಲವೂ ದುಬಾರಿ: ಜೀವನ ಬಿಕಾರಿ
ಜನರು ಕೊರೊನಾ ವೈರಸ್ ಸಾಂಕ್ರಾಮಿಕಕ್ಕೂ ಮುನ್ನವೇ ಜನರು ಕೆಲವು ಆರ್ಥಿಕ ನೀತಿಯ ಕಾರಣದಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬೆನ್ನಲ್ಲೇ ಕೊರೊನಾ ಗಾಯದ ಮೇಲೆ ಬರೆಯಾಯಿತು. ಹಲವಾರು ಮಂದಿ ಉದ್ಯೋಗ ಕಳೆದುಕೊಂಡರು. ಈ ನಡುವೆ ಆಹಾರ, ವಸತಿ, ಸಾರಿಗೆ ಮತ್ತು ಆರೋಗ್ಯ ಸೇವೆಗಳ ವೆಚ್ಚವು ಕಳೆದ ವರ್ಷದ ಮಧ್ಯದಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಡೇಟಾ ಸೂಚಿಸುತ್ತದೆ. ಇಂಧನ ದರ ಹೆಚ್ಚಳದಿಂದಾಗಿ ಸರಕುಗಳು ಮತ್ತು ಸೇವೆಗಳ ಬೆಲೆಗಳನ್ನು ಹೆಚ್ಚಾಗಿದೆ. ಈ ನಡುವೆ ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ದರ ಏರುತ್ತಿದೆ. ಎಲ್ಪಿಜಿಯು ದುಬಾರಿಯಾಗಿದೆ.
ಜನರಿಗೆ ಡಬಲ್ ಧಮಾಕ
ಈ ಬೆಲೆ ಏರಿಕೆಗಳ ನಡುವೆ ಆರ್ಬಿಐ ಜನರಿಗೆ ಡಬಲ್ ಧಮಾಕವನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬೆಂಚ್ಮಾರ್ಕ್ ರೆಪೋ ದರವನ್ನು ಮೇ 4 ರಂದು 40 ಬೇಸಿಸ್ ಪಾಯಿಂಟ್ಗಳಿಂದ 4.4 ಪ್ರತಿಶತಕ್ಕೆ ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ದರವು ಕೂಡಾ ಹೆಚ್ಚಾಗಿದೆ. ಜನರಿಗೆ ಇಎಂಐ ಹೊರೆಯು ಅಧಿಕವಾಗಿದೆ. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ಕ್ರಮವಾಗಿ ಆರ್ಬಿಐ ರೆಪೋ ದರವನ್ನು ಇನ್ನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದಂತೆ ಜನರು ತಮ್ಮ ಆದ್ಯತೆಯನ್ನೇ ಬದಲಾವಣೆ ಮಾಡಿದ್ದಾರೆ. ಎಲ್ಲವನ್ನು ಲೆಕ್ಕ ಹಾಕಿ ಖರೀದಿ ಮಾಡುತ್ತಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ ಕೊರೊನಾ ಸಾಂಕ್ರಾಮಿಕದಿಂದಾಗಿ ಕನಿಷ್ಠ 7 ಮಿಲಿಯನ್ ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. "ಈ ಹಿಂದೆ ನಮಗೆ ಯಾವುದು ಇಷ್ಟವೋ ಅದನ್ನು ಖರೀದಿ ಮಾಡುತ್ತಿದ್ದೆವು. ಆದರೆ ಈಗ ನಾವು ಯಾವುದೇ ಅಗತ್ಯ ವಸ್ತುವಾಗಲಿ ಯಾವುದು ಕಡಿಮೆ ದರದಲ್ಲಿ ಲಭ್ಯವಿದೆ ಎಂದು ನೋಡಿ ಅದನ್ನೇ ಖರೀದಿ ಮಾಡುತ್ತೇವೆ," ಎಂದು ಶೋಭಾ ಎಂಬವರು ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆಗಳು ಶೇಕಡಾ 8.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ತರಕಾರಿ ಬೆಲೆಗಳು ಶೇಕಡಾ 14.53 ರಷ್ಟು ಕುಸಿದಿದ್ದರೆ, ಕಳೆದ ತಿಂಗಳು ಇದು ಶೇಕಡಾ 15.41 ರಷ್ಟು ಜಿಗಿದಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಖರೀದಿ, ಬೇಡಿಕೆಗೂ ಬಿತ್ತು ಪೆಟ್ಟು
"ಬೆಲೆಯ ಒತ್ತಡ ಮತ್ತಷ್ಟು ಹೆಚ್ಚಾಗುವ ಮೊದಲು ಗ್ರಾಹಕರ ಬೇಡಿಕೆಯು ಈಗಾಗಲೇ ದುರ್ಬಲವಾಗಿದೆ," ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ನ ಹಿರಿಯ ಅರ್ಥಶಾಸ್ತ್ರಜ್ಞ ಉಪಸ್ನಾ ಭಾರದ್ವಾಜ್ ಹೇಳಿದ್ದಾರೆ. "ಹಣದುಬ್ಬರ ಹೆಚ್ಚಾಗುತ್ತಿದ್ದಂತೆ ಜನರು ತಮಗೆ ಬೇಕಾದ ವಸ್ತುವನ್ನು ಖರೀದಿ ಮಾಡುವುದನ್ನು ಕಡಿತ ಮಾಡಿದ್ದಾರೆ. ಬಜೆಟ್ ಮೇಲೆ ಸ್ಟಿಕ್ ಆಗಿದ್ದಾರೆ" ಎಂದು ಕೂಡಾ ತಿಳಿಸಿದ್ದಾರೆ. ಇನ್ನು ಜನರು ಆಹಾರವನ್ನು ಆರ್ಡರ್ ಮಾಡುವುದರ ಮೇಲೆ ಈ ಹಣದುಬ್ಬರ ಪ್ರಭಾವ ಬೀರಿದೆ. ಜನರು ಹೆಚ್ಚಾಗಿ ಆಹಾರವನ್ನು ಆರ್ಡರ್ ಮಾಡುತ್ತಿಲ್ಲ. ಜನರು ಆಹಾರದ ಮೇಲಿನ ವೆಚ್ಚವನ್ನು ಕಡಿಮೆ ಮಾಡಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ.
ಆರ್ಬಿಐಗೆ ಸವಾಲು ಏನು?
ಏಪ್ರಿಲ್ನಲ್ಲಿ ಹಣದುಬ್ಬರವು ಅಸಾಮಾನ್ಯವಾಗಿ ಹೆಚ್ಚಾಗಿದೆ. ಇದು ಸತತ ನಾಲ್ಕನೇ ತಿಂಗಳು ಹಣದುಬ್ಬರ ಏರಿಕೆ ಕಂಡಿದೆ. ಈ ನಡುವೆ ಆರ್ಬಿಐಗೆ ದೊಡ್ಡ ಸವಾಲು ಎದುರಾಗಿದೆ. ಆರ್ಬಿಐ ಹಣಕಾಸು ನೀತಿ ಸಮಿತಿಯು ಹಣದುಬ್ಬರವನ್ನು 2-6 ಪ್ರತಿಶತ ಬ್ಯಾಂಡ್ನಲ್ಲಿ ಇರಿಸುವ ಆದೇಶವನ್ನು ಹೊಂದಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಈ ಗುರಿಯನ್ನು ತಲುಪಲು ವಿಫಲವಾದರೆ ಕೇಂದ್ರ ಬ್ಯಾಂಕ್ ಸಂಸತ್ತಿಗೆ ಈ ಬಗ್ಗೆ ಲಿಖಿತ ವಿವರಣೆ ನೀಡಬೇಕಾಗುತ್ತದೆ. ಆ ಸಾಧ್ಯತೆಯು ಸೆಪ್ಟೆಂಬರ್ ವೇಳೆಗೆ ಉದ್ಭವಿಸುವ ಸಾಧ್ಯತೆಯಿದೆ ಎಂದು ಮಾಜಿ ಆರ್ಬಿಐ ಗವರ್ನರ್ ಡಿ ಸುಬ್ಬರಾವ್ ಹೇಳಿದ್ದಾರೆ.