ಹೆಚ್ಚಿನ ಬಡ್ಡಿ ಆಸೆಗೆ ವಿಜ್ಞಾನಿ ಸರ್ ಸಿ.ವಿ. ರಾಮನ್ ಕೂಡ ಮೋಸಕ್ಕೆ ಒಳಗಾಗಿದ್ದರು!
ಸಮಾಜದಲ್ಲಿ ಮೋಸ ಒಳಗಾಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈ ಮಾತು ಸಾಮಾನ್ಯವಾಗಿ ನೀವೆಲ್ಲರೂ ಕೇಳಿರುತ್ತೀರಿ. ಅಮಾಯಕರ ಸಂಕಟಗಳ ಮೇಲೆ ಅರಮನೆಯನ್ನು ಕಟ್ಟಿಕೊಳ್ಳುವ ಜನರು ಈ ಸಮಾಜದಲ್ಲಿದ್ದಾರೆ. ಹೆಚ್ಚಿನ ಬಡ್ಡಿ ದರ ನೀಡುತ್ತೇವೆ ಎಂದು ಆಮಿಷಗಳನ್ನು ತೋರಿಸಿ ಯಾಮಾರಿಸುವ ಘಟನೆಗಳು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಇಂತಹ ಕುಟಿಲ ಬುದ್ದಿಯವರು ನಮ್ಮ ನಡುವೆಯೇ ಇದ್ದಾರೆ.
ಹೆಚ್ಚು ಬಡ್ಡಿ ಪಡೆಯಬಹುದು ಎಂದು ಲೆಕ್ಕಕ್ಕೆ ಇಲ್ಲದಷ್ಟು ಅದೆಷ್ಟೋ ಜನರು ಮೋಸಕ್ಕೆ ಒಳಗಾಗಿದ್ದಾರೆ. ಮುಗ್ಧ ಜನರನ್ನು ಯಾಮಾರಿಸುವ ಇವರು ಸುಖದ ಸುಪ್ಪತ್ತಿನಲ್ಲಿ ತೇಲಾಡುತ್ತಿರುತ್ತಾರೆ. ಈ ಕುಟಿಲ ಬುದ್ಧಿಯವರಿಂದಾಗಿ ಮೋಸಕ್ಕೆ ಒಳಗಾದವರಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್ ಕೂಡ ಹೊರತಾಗಿಲ್ಲ. ಕೆಲವು ಮೋಸದ ಪ್ರಕರಣಗಳ ಜೊತೆಗೆ ಹಣ ಹೂಡಿಕೆ ಮಾಡುವಾಗ ಜನರು ಯಾವ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಅಮೆರಿಕಾದ ಹೂಡಿಕೆದಾರರಿಗೆ ಕೈ ಕೊಟ್ಟಿದ್ದ ಚಾರ್ಲ್ಸ್ ಪೊಂಜಿ
ಅಮೆರಿಕಾದಲ್ಲಿ ಜನರನ್ನು ಮೋಸದ ಬಲೆಯಲ್ಲಿ ಕೆಡವಿದ ಚಾರ್ಲ್ಸ್ ಪೊಂಜಿ, ಸಾವಿರಾರು ಜನರಿಗೆ ಪಂಗನಾಮ ಹಾಕಿದ್ದ. ಸಾವಿರಾರು ಅಮೆರಿಕಾ ಹೂಡಿಕೆದಾರರು ಹೆಚ್ಚು ಬಡ್ಡಿ ನೀಡುತ್ತಾನೆ ಎಂದು ನಂಬಿ ಹಣ ಹೂಡಿಕೆ ಮಾಡಿದ್ದರು. ಆಗಿನ ಕಾಲದಲ್ಲೇ 20 ಮಿಲಿಯನ್ ಅಮೆರಿಕನ್ ಡಾಲರ್ ಕೆಲವೇ ತಿಂಗಳುಗಳಲ್ಲಿ ಸಂಗ್ರಹಿಸಿದ್ದರು ಆದರೆ ಆತ ದಿವಾಳಿ ಆಗುವುದರ ಜೊತೆಗೆ ಸಾವಿರಾರು ಹೂಡಿಕೆದಾರರು ಆತನನ್ನು ನಂಬಿ ಗುಂಡಿಗೆ ಬಿದ್ದರು. ಇದು ಅಮೆರಿಕಾದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಈ ಹಗರಣಕ್ಕೆ ಚಾರ್ಲ್ಸ್ ಪೊಂಜಿ ಸ್ಕ್ಯಾಮ್ ಎಂದು ಕರೆಯಲಾಗಿದೆ.
ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ಹಣ ಕಳೆದುಕೊಂಡಿದ್ದ ನೊಬೆಲ್ ಪುರಸ್ಕೃತ ವಿಜ್ಞಾನಿ
ಅಮೆರಿಕಾ ಏಕೆ ನಮ್ಮ ಮೈಸೂರಿನಲ್ಲಿ ಹೆಚ್ಚಿನ ಬಡ್ಡಿ ಆಸೆಗೆ ನೊಬೆಲ್ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್ ಮೋಸಕ್ಕೆ ಒಳಗಾಗಿದ್ದರು. 1964ರಲ್ಲಿ ಅಂದರೆ ಸುಮಾರು 70 ವರ್ಷಗಳ ಹಿಂದೆ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದ (ಇಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸಾಮಾನ್ಯ ನೌಕರನಾಗಿದ್ದ ಬಿ.ಎನ್. ಗೋಪಾಲ್ರಾವ್ ಎಂಬ ವ್ಯಕ್ತಿ ತಾನೇ ಒಂದು ಹಣಕಾಸು ಸಂಸ್ಥೆಯನ್ನು ಆರಂಭಿಸಿ, ಆಗಿನ ಕಾಲದಲ್ಲಿ ಬ್ಯಾಂಕಿನಲ್ಲಿ ಚಾಲ್ತಿಯಲ್ಲಿದ್ದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ನೀಡಲು ಶುರುಮಾಡಿದ.
ಈತನ ಹಣಕಾಸು ಸಂಸ್ಥೆಯಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದೆಂದು ಗಣ್ಯ ವ್ಯಕ್ತಿಗಳು ಸಹ ಹಣ ಹೂಡಿಕೆ ಮಾಡಿದ್ದರು. ಇದರಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಕೂಡ ಒಬ್ಬರು. ತಮಗೆ ನೊಬೆಲ್ ಪ್ರಶಸ್ತಿಯಿಂದ ಬಂದ ಹಣವನ್ನು ಅಲ್ಲಿ ಠೇವಣಿ ಇಟ್ಟಿದ್ದರು.
ಆದರೆ ಮೈಸೂರು ಮಹಾರಾಜರಿಂದ 'ಧರ್ಮರತ್ನಾಕರ' ಎಂಬ ಬಿರುದನ್ನೂ ಪಡೆದಿದ್ದ ಗೋಪಾಲ್ ರಾವ್ ಆರ್ಥಿಕ ಹಣಕಾಸು ಸಂಸ್ಥೆ ಇದ್ದಕ್ಕಿದ್ದಂತೆ ಕುಸಿಯಿತು. ಸಂಸ್ಥೆಯ ಹಣಕಾಸು ಕಾರ್ಯಚಟುವಟಿಕೆಗಳು ಸ್ಥಗಿತಗೊಂಡವು ಇದರಿಂದ ಹೂಡಿಕೆದಾರರು ಎಲ್ಲರೂ ತಮ್ಮ ಹಣ ಕಳೆದುಕೊಂಡರು.
''ಈತನಿಗೇ ನೊಬೆಲ್ ಪ್ರಶಸ್ತಿ ದೊರಕಬೇಕಿತ್ತು''- ಸಿ.ವಿ. ರಾಮನ್
ಗೋಪಾಲ್ ರಾವ್ ಆರ್ಥಿಕ ಹಣಕಾಸು ಸಂಸ್ಥೆಯಲ್ಲಿ ತನ್ನ ನೊಬೆಲ್ ಪ್ರಶಸ್ತಿಯಿಂದ ಬಂದ ಹಣವನ್ನು ಹೂಡಿಕೆ ಮಾಡಿದ್ದ ಸಿ.ವಿ ರಾಮನ್ ಹಣ ಕಳೆದುಕೊಂಡ ಮೇಲೆ ಹೀಗೆ ಹೇಳಿದರಂತೆ. ಈತ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವ ಚಾಕಚಕ್ಯತೆಗೆ ' ಈತನಿಗೇ ನೊಬೆಲ್ ಪ್ರಶಸ್ತಿ ದೊರಕಬೇಕಿತ್ತು' ಎಂದರಂತೆ.
ವಿಜ್ಞಾನಿ ಸಿ.ವಿ. ರಾಮನ್ ತಮಗೆ ಬಂದಿದ್ದ ನೊಬೆಲ್ ಪ್ರಶಸ್ತಿ ಹಣದಲ್ಲಿ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಬೇಕು ಎಂದುಕೊಂಡಿದ್ದರಂತೆ. ಆದರೆ ಹೆಚ್ಚಿನ ಬಡ್ಡಿ ಆಸೆಗೆ ಯಾಮಾರಿ ಸಿ.ವಿ. ರಾಮನ್ ಮೋಸ ಹೋದ ಘಟನೆಯನ್ನು ಮರೆಯಲಾಗದು.
ಹೂಡಿಕೆದಾರರು ವಹಿಸಬೇಕಾದ ಎಚ್ಚರ
ಯಾವುದಾದರೂ ಹಣಕಾಸು ಸಂಸ್ಥೆಯು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ ಎಂದು ತಿಳಿದ ತಕ್ಷಣ ಹಣ ಹೂಡುವ ಮೊದಲು ಪ್ರತಿಯೊಬ್ಬರು ಕೆಲವೊಂದು ಮಹತ್ತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಹಕಾರಿ ಕ್ಷೇತ್ರವೂ ಒಳಗೊಂಡಂತೆ, ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡಿದಾಗ ಅದಕ್ಕೆ ವಿಮೆಯ ಸೌಲಭ್ಯವಿರುತ್ತದೆ. ಒಂದು ವೇಳೆ ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಡಿಪಾಸಿಟ್ ಇನ್ಶೂರನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾಪೋರೇಷನ್ ಸಂಸ್ಥೆಯು ಒಂದು ಲಕ್ಷ ರೂ.ವರೆಗೆ ವಿಮಾ ಪರಿಹಾರ ನೀಡುತ್ತದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದರೆ ಈ ಸೌಲಭ್ಯವಿರುವುದಿಲ್ಲ.
ಸುರಕ್ಷಿತ ಹೂಡಿಕೆಯನ್ನು ಉತ್ತೇಜಿಸಲೆಂದೇ ಹಲವಾರು ಸಂಸ್ಥೆಗಳಲ್ಲಿ ಉದ್ಯೋಗಿಗಳು ನಿವೃತ್ತರಾಗುವ ಸಂದರ್ಭದಲ್ಲಿ ಹಣಕಾಸಿನ ನಿರ್ವಹಣೆ ಹಾಗೂ ಹೂಡಿಕೆಯ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಲಿ
ಯಾರು ನಿಮಗೆ ಎಷ್ಟೇ ತಿಳುವಳಿಕೆ ಹೇಳಿದರೂ ಹಣದ ಸುರಕ್ಷತೆ ಕುರಿತು ನೀವೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಯಾವುದೇ ದುರಾಸೆಗೆ ಒಳಗಾಗದೆ ಸುರಕ್ಷಿತ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ನಿಯಂತ್ರಿತ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಹಣ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ.
ಸುರಕ್ಷಿತ ಹಣ ಹೂಡಿಕೆ ಹೇಗೆ?
ಹೂಡಿಕೆ ಸಂದರ್ಭದಲ್ಲಿ ಪರಿಗಣಿಸಬೇಕಾದ ಮೂರು ಪ್ರಮುಖ ಸೂತ್ರಗಳೆಂದರೆ, ಸುರಕ್ಷತೆ, ಬಡ್ಡಿ ಹಾಗೂ ದ್ರವತ್ವ (ಲಿಕ್ವಿಡಿಟಿ). ಇವುಗಳ ಕಡೆಗೆ ಬಹಳಷ್ಟು ಜನ ಗಮನ ಹರಿಸುವುದಿಲ್ಲ. ಹೆಚ್ಚಿನ ಬಡ್ಡಿ ಎಂದಾಕ್ಷಣ ಅದು ಹೇಗಿದ್ದರೂ ತಿಳಿಯದೇ ಹಣ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗುವುದು ಸಾಮಾನ್ಯ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಹಾಗೂ ಸರ್ಕಾರಿ ಪ್ರ್ರಾಯೋಜಿತ ಹೂಡಿಕೆಗಳು, ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದಾಗ ಇರುವ ಸುರಕ್ಷತೆ ಮತ್ಯಾವ ಕ್ಷೇತ್ರದಲ್ಲಿ ಕಡಿಮೆ ಇರುತ್ತದೆ. ಅಲ್ಲಿ ಹೂಡುವ ಹಣಕ್ಕೆ ನೀಡುವ ಬಡ್ಡಿ ಗ್ಯಾರಂಟಿ. ಬೇಕೆಂದಾಗ ಹಣ ಹಿಂದಕ್ಕೆ ಪಡೆಯಲು ಸಹ ಅವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ನೀಡುವ ಬಡ್ಡಿ ದರವು ರಿಸರ್ವ್ ಬ್ಯಾಂಕ್ ನಿಯಮಗಳಿಗೆ ಒಳಪಟ್ಟಿರುವುದರಿಂದ ನ್ಯಾಯಸಮ್ಮತವಾಗಿರುತ್ತದೆ. ಆದರೆ, ಜನರು ಸುಲಭವಾಗಿ ಅತಿ ಹೆಚ್ಚು ಬಡ್ಡಿ ದರದ ಆಸೆಗೆ ಬಲಿಯಾಗುತ್ತಾರೆ. ಎಲ್ಲಿಯ ತನಕ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರೂ ಇರುತ್ತಾರೆಂಬುದು ಇದರಿಂದಲೇ ಸತ್ಯವಾಗುತ್ತದೆ.