ಜೀವನದಲ್ಲಿ ಸಕ್ಸಸ್ ಕಾಣಲು ಮೊದಲು ಈ 6 ವಿಚಾರಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ
ಪ್ರತಿಯೊಬ್ಬರೂ ತಾವು ಜೀವನದಲ್ಲಿ ಸಕ್ಸಸ್ ಕಾಣಬೇಕು ಎಂದು ಬಯಸೋದು ಸಹಜ. ಯಶಸ್ಸಿನ ಕುದುರೆಯನ್ನೇರಲು ನಾನಾ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಯಶಸ್ಸನ್ನು ಬೆನ್ನತ್ತಿದಾಗ ಏಳು-ಬೀಳುಗಳನ್ನ ಕಾಣೋದು ಸಾಮಾನ್ಯ. ಆದರೆ ಈ ಕುದುರೆ ಬೆನ್ನಟ್ಟಿದವರೆಲ್ಲರು ಯಶಸ್ಸಿನ ಸವಾರಿ ಮಾಡಲು ಸಾಧ್ಯವಿಲ್ಲ. ಓಡಿ ಓಡಿ ಸುಸ್ತಾಗಿ ನನಗೆ ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುವವರೇ ಹೆಚ್ಚು. ಇನ್ನು ಕೆಲವರು ಛಲ ಬಿಡದೇ ಛಲದಂಕಮಲ್ಲರಂತೆ ಗುರಿಯನ್ನು ತಲುಪುತ್ತಾರೆ.
ಹೀಗೆ ಯಶಸ್ಸನ್ನು ಕಂಡವರು ನಮ್ಮೊಂದಿಗೆ ಇದ್ದರೂ , ನಮಗೆ ಸಾಧ್ಯವಾಗದೇ ಇದ್ದದ್ದನ್ನ ಹೇಗೆ ಗುರಿ ಮುಟ್ಟಿದರೂ ಎಂದು ನೀವು ತುಂಬಾ ಬಾರಿ ಯೋಚಿಸಿರಬಹುದು. ಹಾಗಂತ ಅವರಲ್ಲಿ ಅಸಾಮಾನ್ಯ ಶಕ್ತಿಗಳೇನು ಇರದು. ಇರುವ ಬುದ್ದಿಶಕ್ತಿಯನ್ನೇ ಸಮರ್ಪಕವಾಗಿ ಬಳಸಿಕೊಂಡಿರುವ ನೈಪುಣ್ಯತೆ ಅರಿತುಕೊಂಡಿರುತ್ತಾರಷ್ಟೆ.
ಯಶಸ್ಸು ಸಾಧಿಸಿದವರು ಹೇಳಿರುವುದು ನಿಮ್ಮ ಕಿವಿಗೆ ಬಿದ್ದಿರಬಹುದು. 'Don't be Quit' ಅಂದರೆ ನೀವು ನಿಮ್ಮ ಗುರಿಯಲ್ಲಿ ಗೆಲ್ಲುತ್ತೀರೋ ಅಥವಾ ಸೋಲು ಕಾಣುತ್ತೀರೋ ತಿಳಿಯದು ಆದರೆ ಅರ್ಧದಲ್ಲೇ ಆಗದು ಎಂದು ಸೋಲನ್ನ ಒಪ್ಪಿಕೊಳ್ಳದಿರಿ. ಹೀಗೆ ನಿಮ್ಮಲ್ಲಿರುವ ಕೆಲವು ಯೋಚನೆಗಳೇ ನಿಮ್ಮ ಗುರಿಗಳನ್ನು ತಲುಪುವ ದಾರಿಯಲ್ಲಿರೋ ತಡೆಗೋಡೆಗಳಾಗಿವೆ. ಹಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಮೊದಲು ಯಾವೆಲ್ಲಾ ವಿಚಾರಗಳನ್ನು ತಲೆಯಿಂದ ತೆಗೆದುಹಾಕಬೇಕು ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿ.
1. ನಿಮ್ಮನ್ನು ನೀವು ಅವಮಾನಿಸುವುದನ್ನು ಮೊದಲು ಬಿಡಿ
ಆತ್ಮವಿಶ್ವಾಸ ಎಂಬುವುದು ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರವನ್ನೇ ವಹಿಸುತ್ತದೆ. ನಿಮಗೆ ಕಷ್ಟವಾದ ಹಂತಗಳು ಎದುರಾದಾಗ ಅವುಗಳನ್ನು ತಲುಪಲು ಸಾಧ್ಯವೇ ಇಲ್ಲ ಎಂದು ಅನ್ನಿಸಿಬಿಡಬಹುದು. ಆಗ ಈ ಆತ್ಮವಿಶ್ವಾಸವೇ ನಿಮಗೆ ಬೂಸ್ಟ್ ನೀಡಲಿದೆ. ಅಂದರೆ ನೀವು ಅಂದುಕೊಂಡ ಕಾರ್ಯದಲ್ಲಿ ಪದೇ ಪದೇ ಅಡ್ಡಿ, ಆತಂಕಗಳು ಎದುರಾದಾಗ ಆತ್ಮವಿಶ್ವಾಸವು ನಿಮ್ಮನ್ನು ಹುರಿದುಂಬಿಸಿ ಗುರಿಯತ್ತ ಮುನ್ನುಗ್ಗಿಸುತ್ತದೆ.
ಆದರೆ ಯಾವುದೇ ವಿಚಾರಕ್ಕಾಗಲಿ ನನ್ನಿಂದ ಇದು ಸಾಧ್ಯವಿಲ್ಲ ಎಂದು ನಿಮ್ಮನ್ನು ನೀವೇ ಅವಮಾನಿಸಿಕೊಳ್ಳುವುದನ್ನು ಮೊದಲು ಬಿಟ್ಟು ಬಿಡಬೇಕು. ಎದುರಿರುವ ಕಾರ್ಯ ಎಷ್ಟೇ ಪ್ರಬಲವಾಗಿದ್ದರೂ ನಿಮ್ಮ ಬುದ್ದಿಶಕ್ತಿಯಿಂದ ಸುಲಭವಾಗಿಸಿಬಿಡಬಹುದು. ಆದರೆ ಅದಕ್ಕೆ ಬೇಕಾಗುವುದು ಆತ್ಮವಿಶ್ವಾಸ ಅಂದರೆ ನಿಮ್ಮ ಮೇಲೆ ನಿಮಗೆ ನಂಬಿಕೆ. ನಿಮ್ಮನ್ನು ನೀವು ಯಾವುದೇ ಕಾರ್ಯದಲ್ಲೂ ಸಾಧ್ಯವಿಲ್ಲ ಎಂದು ಹಿಂದೆ ಸರಿಯದೇ ನನ್ನಿಂದ ಸಾಧ್ಯ ಎಂದು ಮುನ್ನುಗ್ಗುವ ಮನಸ್ಸನ್ನು ಬೆಳೆಸಿಕೊಳ್ಳಬೇಕು.
2. ಯಾವುದೇ ವಿಷಯಗಳನ್ನು ಮುಂದೂಡುವುದನ್ನು ಬಿಟ್ಟುಬಿಡಿ
ಈ ವಿಚಾರವನ್ನು ಬಹುತೇಕ ಜನರು ಅಳವಡಿಸಿಕೊಂಡಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ನೀವು ಕೂಡ ಅವರಲ್ಲಿ ಒಬ್ಬರಾಗಿರಬಹುದು. ಯಾವುದಾದರು ಕೆಲಸವನ್ನ ಪೂರ್ಣಗೊಳಿಸಲು ಅಂತಿಮ ಗಡುವಿಗೆ ಇನ್ನೂ ಸಮಯ ಇದೆ ಎಂದಾಕ್ಷಣ ನಾಳೆ ಮಾಡಿದರಾಯ್ತು ಎಂದು ಪಟ್ ಎಂದು ನಿಮ್ಮ ತಲೆಯಲ್ಲಿ ವಿಚಾರ ಓಡಾಡುವುದು ಸಾಮಾನ್ಯ.
ಆದರೆ, ಯಾವುದೇ ಯೋಜನೆಯನ್ನು ಕೈಗೊಳ್ಳುವ ಮುನ್ನ ಮುಂದೂಡುವುದನ್ನು ಮೊದಲು ನಿಲ್ಲಿಸುವುದನ್ನು ಅರಿತುಕೊಳ್ಳಬೇಕು. ಹರೆಯದ ವಯಸ್ಸಿನಲ್ಲೇ ಸ್ವಲ್ಪ ಮಟ್ಟಿನ ಹೆಚ್ಚಿನ ಉದಾಸೀನ ಭಾವ ಇರುವುದು ಸಹಜ. ಆದರೆ ಯಾವುದೇ ಕಾರ್ಯ ಕೈಗೊಳ್ಳುವಾಗ ಇನ್ನೂ ಸಮಯವಿದೆ ಎಂದು ಮುಂದೂಡುವುದನ್ನು ಆದಷ್ಟು ತಡೆಗಟ್ಟಬೇಕು. ಉದಾಹರಣೆಗೆ ಯಾವುದಾದರೂ ಕೆಲಸಕ್ಕೆ 2 ತಿಂಗಳ ನಿಗದಿತ ಸಮಯವಿರುತ್ತದೆ. ಆದರೆ ಇನ್ನೂ ಒಂದು ತಿಂಗಳು ಇದೆ ಮಾಡಿದರಾಯ್ತು ಎಂದು ಮುಂದೂಡುವ ಮನೋಭಾವವನ್ನು ಹೊರಹಾಕಬೇಕು.
ಈ ರೀತಿಯ ಮನೋಭಾವವನ್ನು ತ್ಯಜಿಸದೇ ಹೋದಲ್ಲಿ ನೀವು ಹರೆಯದಲ್ಲೇ ಕೈಗೊಳ್ಳಬೇಕಾಗಿದ್ದ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ 10 ವರ್ಷ ಹೆಚ್ಚಿನ ವಯಸ್ಸಾಗಿರುತ್ತೀರಿ. ಹೀಗಾಗಿ ಮುಂದೂಡುವುದನ್ನು ತಪ್ಪಿಸಬೇಕು.
40 ವಯಸ್ಸಿನೊಳಗೆ ಲೈಫ್ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!
3. ನಿಮಗೆ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಯೋಚಿಸುವುದನ್ನು ಬಿಡಿ
ಯಾವುದೇ ವಿಚಾರಕ್ಕಾಗಲಿ ಅಥವಾ ಯಾವುದೇ ಸಂದರ್ಭವಾಗಲಿ ಯಾವಾಗಲೂ ಮತ್ತೊಂದು ಆಯ್ಕೆ ಇದ್ದೇ ಇರುತ್ತದೆ. ಆಯ್ಕೆ ಇದೆ, ಆಯ್ಕೆ ಇಲ್ಲ ಎಂಬ ಎರಡು ವಿಷಯಗಳ ನಡುವೆ ನಿಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತದೆ. ಎಂದಿಗೂ ಆಯ್ಕೆ ಇದೆ ಎಂಬುದರತ್ತ ನಿಮ್ಮ ಯೋಚನೆಗಳು ಖುಣಾತ್ಮಕವಾಗಿರಬೇಕು. ಕೆಲವೊಮ್ಮೆ ಅಸಹಾಯಕತೆಯು ನಿಮ್ಮನ್ನು ದುರ್ಬಲರನ್ನಾಗಿಸಿಬಿಡಬಹುದು. ಆದರೆ ಆ ವೇಳೆ ಕೊಂಚ ನಿಮ್ಮ ಬುದ್ದಿಶಕ್ತಿಗೆ ಕೆಲಸಕೊಟ್ಟು ನೋಡಿ ಮತ್ತೊಂದು ಆಯ್ಕೆ ಅಲ್ಲೇ ಸುಳಿದಾಡುತ್ತಿರುತ್ತದೆ.
ಯಾವುದೇ ಕಾರ್ಯವನ್ನು ಅನಿವಾರ್ಯತೆಯಿಂದ ಮಾಡುವ ಬದಲು ನಿಮಗೆ ಆಸಕ್ತಿ ಇರುವ ವಿಚಾರದಲ್ಲಿ ಮುಂದುವರೆಯುವುದು ಒಳಿತು. ಆ ವಿಚಾರದಲ್ಲೇ ಶ್ರದ್ದೆ, ಪರಿಶ್ರಮದಿಂದ ಕಾರ್ಯ ನಿರ್ವಹಿಸಿದರೆ ಈ ಆಯ್ಕೆ ಅಥವಾ ಆಯ್ಕೆ ಇಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ ಮೊದಲು ಯಾವುದೇ ಆಯ್ಕೆ ಇಲ್ಲ ಎಂದು ಯೋಚಿಸುವುದನ್ನು ಬಿಟ್ಟುಬಿಡಿ.
30ನೇ ವಯಸ್ಸಿನಲ್ಲಿ ಈ ಐದು ಹಣಕಾಸಿನ ತಪ್ಪುಗಳನ್ನು ಮಾಡದಿರಿ!
4. ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಿ ಬೇರೆ ಫಲಿತಾಂಶ ನಿರೀಕ್ಷಿಸುವುದನ್ನು ನಿಲ್ಲಿಸಿ
ಒಂದೇ ಕೆಲಸವನ್ನು ಪದೇ ಪದೇ ಮಾಡಿ ಬೇರೆ ಫಲಿತಾಂಶವನ್ನು ನಿರೀಕ್ಷಿಸುವುದು ಹುಚ್ಚುತನ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಹೇಳಿದ್ದಾರೆ. ಅಂದರೆ ಎರಡು ಪ್ಲಸ್ ಎರಡು ಅಂತಿಮವಾಗಿ ಸಮನಾಗಿರುತ್ತದೆ. ಆದರೆ ಬಹುತೇಕರು ಎರಡು ಪ್ಲಸ್ ಎರಡು ಅಂತಿಮವಾಗಿ ಐದಕ್ಕೆ ಸಮನಾಗಿರುತ್ತದೆ ಎಂದು ನಿಶ್ಚಯಿಸಿರುವ ಬಹಳಷ್ಟು ಜನರಿದ್ದಾರೆ.
ಆದರೆ ಸತ್ಯವು ಬಹಳ ಸರಳವಾಗಿದೆ. ಆದರೂ ಅದೇ ವಿಧಾನವನ್ನು ಇಟ್ಟುಕೊಂಡು ಎಷ್ಟೇ ಪ್ರಯತ್ನಿಸಿದರೂ ಅದೇ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ವಿಭಿನ್ನ ಫಲಿತಾಂಶಗಳನ್ನು ಬಯಸಿದರೆ, ನಿಮ್ಮ ವಿಧಾನಗಳನ್ನು ಬದಲಾಯಿಸಬೇಕಿದೆ. ಹಾಗೆ ಮಾಡುವುದು ನಿಮಗೆ ನೋವು ತರುವ ಸಂಗತಿಯಾಗಿದ್ದರೂ ಉತ್ತಮ ಫಲಿತಾಂಶಕ್ಕೆ ಅದೇ ಸತ್ಯ.
5. ಎಲ್ಲ ಕೆಲಸ ಅದರ ಪಾಡಿಗೆ ಆಗುತ್ತದೆ ಎಂದು ಯೋಚಿಸುವುದನ್ನು ಬಿಡಿ
ಕೆಲವರು ತಮ್ಮದೇ ಆದ ಆಲೋಚನಾ ಶಕ್ತಿಯೊಳಗೆ ತಮ್ಮನ್ನು ತಾವು ಬಂಧಿಸಿಕೊಂಡಿರುತ್ತಾರೆ. ಯಾವುದೇ ಕೆಲಸ ಇರಲಿ ನಾನು ಸ್ವಲ್ಪ ಮಾಡಿದರೆ ಸಾಕು ಕೊನೆಯಲ್ಲಿ ಅದೇ ಕಾರ್ಯರೂಪಕ್ಕೆ ಬರಲಿದೆ ಎಂದು ಯೋಚಿಸುವವರು ಇರುತ್ತಾರೆ. ಆದರೆ ಸತ್ಯವೆಂದರೆ ನೀವೇ ಅದನ್ನು ಕಾರ್ಯರೂಪಕ್ಕೆ ತರಬೇಕು.
ನೀವು ಯಾವುದೇ ಕೆಲಸ ಮಾಡುವಾಗ ನಿಮ್ಮ ಬಾಸ್ ನಿಮ್ಮನ್ನು ಗಮನಿಸಬೇಕೆಂದು ನಿರೀಕ್ಷಿಸಬೇಡಿ. ಯಾವುದು ಕೂಡ ಮಾಂತ್ರಿಕವಾಗಿ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲು ಹೋಗುವುದಿಲ್ಲ. ಯಾವುದೇ ಕೆಲಸವನ್ನು ನೀವು ಪೂರ್ವಭಾವಿಯಾಗಿ ಮುಗಿಸಬೇಕು ಮತ್ತು ನಿಮ್ಮ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು. ಅದರ ಬದಲು ಯಾರೂ ಮಾಡದಿದ್ದರೆ ನಾನು ಮಾಡಿದರಾಯ್ತು ಎಂಬ ಆಲೋಚನೆ ಒಳ್ಳೆಯದಲ್ಲ.
ಸಂಬಂಧಿಕರಿಗೆ, ಸ್ನೇಹಿತರಿಗೆ ಸಾಲ ಕೊಡುವ ಮುನ್ನ ನೀವು ಅನುಸರಿಸಬೇಕಾದ 5 ಕ್ರಮಗಳು
6. ಎಲ್ಲೆಡೆ 'ಹೌದು' ಎಂದು ಹೇಳುವುದನ್ನು ಬಿಟ್ಟುಬಿಡಿ
ಕೆಲವೊಮ್ಮೆ ಈ ಹೌದು ಎಂದು ಹೇಳುವುದು ನಿಮಗೆ ಮುಳುವಾಗಿ ಪರಿಣಮಿಸಬಹುದು. ಎಲ್ಲಾ ಕಾರ್ಯಗಳಲ್ಲಿ ಹೌದು ಎಂದರೆ ನೀವು ಒತ್ತಡ ಅಥವಾ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ಹಾಗೆಯೇ ಇಲ್ಲ ಎಂದು ಹೇಳುವುದು ಅನೇಕರಿಗೆ ಸವಾಲಾಗಿ ಕೂಡ ಪರಿಣಮಿಸಿದೆ.
"ಇಲ್ಲ" ಎಂದು ಹೇಳುವುದು ನಿಮ್ಮ ಅಸ್ತಿತ್ವದಲ್ಲಿರುವ ಬದ್ಧತೆಗಳನ್ನು ಗೌರವಿಸುತ್ತದೆ ಮತ್ತು ಅವುಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವನ್ನು ನೀಡುತ್ತದೆ. "ಇಲ್ಲ" ಎಂದು ಹೇಳಲು ನೀವು ಕಲಿತಾಗ ನೀವು ಅನಗತ್ಯ ನಿರ್ಬಂಧಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತೀರಿ ಮತ್ತು ಜೀವನದ ಪ್ರಮುಖ ವಿಷಯಗಳಿಗಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಬಳಸಿಕೊಳ್ಳಲು ಸಹಾಯವಾಗುತ್ತದೆ.
ಉದಾಹರಣೆಗೆ ನಿಮ್ಮ ಆತ್ಮೀಯರು, ಸ್ನೇಹಿತರು ನಿಮ್ಮ ಬಳಿ ಸಾಲ ಕೇಳಿದಾಗ ಇಲ್ಲ ಎಂದು ಹೇಳುವುದು ತುಂಬಾನೆ ಕಷ್ಟವಾಗಿರುತ್ತದೆ. ಆದರೆ ನಿಮ್ಮ ಬಳಿ ಹೆಚ್ಚು ಹಣವಿಲ್ಲದೆ ಇದ್ದಾಗ ಅಂದರೆ ನಿಮ್ಮ ಹೆಚ್ಚುವರಿ ಆದಾಯ ಇಲ್ಲದಿದ್ದಾಗ ಇರುವ ಹಣವನ್ನು ಕೊಟ್ಟು ಬಿಡುವುದು ಆರ್ಥಿಕ ಹೊರೆಯಾಗಿ ಪರಿಣಮಿಸಬಹುದು.
ನಿಮ್ಮ ಬಳಿ ಸಾಲ ಪಡೆಯುವವರು ಯಾವ ಕಾರಣಕ್ಕೆ ಸಾಲ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ಸಾಲ ಪಡೆಯುವ ವ್ಯಕ್ತಿ ತುರ್ತು ಸಂದರ್ಭಕ್ಕಾಗಿ ಹಣ ಪಡೆಯುತ್ತಿದ್ದಾರೆಯೇ, ಅಥವಾ ಕಾರು ಖರೀದಿ, ಮನೆ ಖರೀದಿಗೆ ಹಣ ಕೇಳುತಿದ್ದಾರೆಯೇ? ಅಥವಾ ಕ್ರೆಡಿಟ್ ಕಾರ್ಡ್, ಇತರೆ ಬಿಲ್ ಪಾವತಿಗಾಗಿ ನಿಮ್ಮ ಬಳಿ ಹಣ ಕೇಳಿದ್ದಾರೆಯೇ ಗಮನಿಸಿ. ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಕಾರಣಕ್ಕೆ ಹಣ ನೀಡುವುದನ್ನು ತಪ್ಪಿಸಿ.