ಷೇರು ಖರೀದಿಗೆ ಇದು ಸೂಕ್ತ ಸಮಯವೇ? ತಿಳಿಯಬೇಕಾದ 4 ಅಂಶಗಳು
ಈ ವಾರದ ಆರಂಭದಲ್ಲೇ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಬಿಎಸ್ ಇ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ತಲುಪಿತು. ಆ ನಂತರ ಸ್ವಲ್ಪ ಮಟ್ಟಿಗೆ ಆ ಎತ್ತರದಿಂದ ಇಳಿದಿದೆ. ಷೇರು ಮಾರುಕಟ್ಟೆಯಿಂದ ದೂರ ಇರುವುದಕ್ಕೆ ಸರಿಯಾದ ಸಮಯ ಇದು. ಹೌದು, ಯಾವ ಕಾರಣಕ್ಕಾಗಿ ಷೇರು ಖರೀದಿಯಿಂದ ದೂರ ಇರಬೇಕು? ಈ ಪ್ರಶ್ನೆ ಬರುವುದು ಸಹಜ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಇರುವ ತರ್ಕದ ಮೂಲವೇ "ಕಡಿಮೆ ಮಟ್ಟದಲ್ಲಿ ಇರುವಾಗ ಖರೀದಿ ಮಾಡಬೇಕು" ಮತ್ತು "ಹೆಚ್ಚಿನ ಮಟ್ಟದಲ್ಲಿ ಇರುವಾಗ ಮಾರಬೇಕು". ಹೀಗಿರುವಾಗ ಷೇರು ಮಾರುಕಟ್ಟೆ ದಾಖಲೆ ಮಟ್ಟದಲ್ಲಿ ಇರುವಾಗ ಮಾರಲು ಸೂಕ್ತವೇ ಹೊರತು ಖರೀದಿಗೆ ಅಲ್ಲ ಎಂಬುದು ಗಮನಿಸಬೇಕಾದ ಅಂಶ.
ಒಂದು ಸಲ ಎತ್ತರಕ್ಕೆ ತಲುಪಿದ್ದು, ಸ್ವಲ್ಪ ಅಥವಾ ಭಾರೀ ಮಟ್ಟದಲ್ಲಿ ಕೆಳಗೆ ಇಳಿದು, ಒಂದು ಕಡೆ ನೆಲೆ ನಿಲ್ಲುತ್ತದೆ. ನಿಧಾನಕ್ಕೆ ಆ ಮಟ್ಟದಲ್ಲೇ ಕೆಲ ಕಾಲ ಏರಿಳಿತ ಕಂಡು ಮೇಲಿನ ಹಾದಿಯಲ್ಲಿ ಸಾಗುವ ಅವಕಾಶ ಇರುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಕುಸಿಯುವ ಸಾಧ್ಯತೆ ಜಾಸ್ತಿ ಇದೆ ಎನ್ನುವ ತಜ್ಞರ ಮಾತನ್ನು ಕೇಳಿಸಿಕೊಳ್ಳಬೇಕಿದೆ. ಹೀಗಾದರೆ ಹೂಡಿಕೆದಾರರ ಬಂಡವಾಳ ಕೊಚ್ಚಿಹೋಗುತ್ತದೆ.
ವಿಶ್ವದ ಅತ್ಯಂತ ಲಾಭದ ಕಂಪೆನಿ Saudi Aramco IPO ಅಲಿಬಾಬ ದಾಖಲೆ ಮೀರುತ್ತಾ?
ಇಷ್ಟೆಲ್ಲ ಹೇಳಿದ ನಂತರವೂ ಈಗಿನ ಸನ್ನಿವೇಶ ಏಕೆ ಖರೀದಿಗೆ ಸೂಕ್ತವಲ್ಲ ಅಥವಾ ತುಂಬ ಎಚ್ಚರಿಕೆಯ ಟ್ರೇಡಿಂಗ್ ಮಾಡಬೇಕು ಎಂಬುದನ್ನು ಐದು ಅಂಶಗಳಲ್ಲಿ ಇಲ್ಲಿ ವಿವರಿಸುತ್ತಿದ್ದೇವೆ.
ಕಂಪೆನಿಗಳ ಗಳಿಕೆ ಬಹಳ ನಿರಾಶಾದಾಯಕ
ಯಾವುದೇ ಷೇರು ಮಾರುಕಟ್ಟೆಗೆ ಅಲ್ಲಿನ ಕಂಪೆನಿಗಳ ಲಾಭದ ಪ್ರಮಾಣ ಬಹಳ ಮುಖ್ಯ. ಅದು ಚೆನ್ನಾಗಿದ್ದಷ್ಟು ಕಾಲ ಮಾರುಕಟ್ಟೆ ಕೂಡ ತಣ್ಣಗಿರುತ್ತದೆ. ಆದರೆ ಈಗಿನ ಸ್ಥಿತಿಯಲ್ಲಿ ಗ್ರಾಹಕರ ಬೇಡಿಕೆ ಸೃಷ್ಟಿ ಆಗುತ್ತಿಲ್ಲ. ಅದು ಆಟೋ ವಲಯ ಇರಬಹುದು ಅಥವಾ ಬೇರೆ ಯಾವುದೇ ಇರಬಹುದು. ಒಂದು ಸರಳ ಉದಾಹರಣೆ ಅಂದರೆ, ಟೈಟಾನ್ ಇಂಡಸ್ಟ್ರೀಸ್. ಕಂಪೆನಿಯ ಮಾರಾಟ ಕಡಿಮೆ ಆಗಿದೆ. ಏಕೆಂದರೆ, ಉದ್ಯೋಗವನ್ನೇ ಕಳೆದುಕೊಳ್ಳುತ್ತಿರುವ ಈ ದಿನಮಾನದಲ್ಲಿ ಟೈಟಾನ್ ಇಂಡಸ್ಟ್ರಿಯ ಉತ್ಪನ್ನಗಳಿಗೂ ಬೇಡಿಕೆ ಕಡಿಮೆ ಆಗಿದೆ. ಇದು ಒಂದು ಉದಾಹರಣೆ ಅಷ್ಟೆ. ಇದನ್ನೇ ಮಾರುತಿ ಸುಜುಕಿಗೂ ಅನ್ವಯಿಸಿಕೊಳ್ಳಬಹುದು.
ಜಾಗತಿಕ ಆರ್ಥಿಕ ಸ್ಥಿತಿಯೇ ದುರ್ಬಲವಾಗಿದೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವಾಗ್ದಂಡನೆ, ಅಮೆರಿಕ- ಚೀನಾ ವ್ಯಾಪಾರ ಸಮರ ಇನ್ನೂ ಸಾಕಷ್ಟು ಅಂಶಗಳು ಸೇರಿ ಮಾರುಕಟ್ಟೆಯೇ ದುರ್ಬಲವಾದಂತೆ ಕಾಣುತ್ತಿದೆ. ಇನ್ನೂ ಮುಖ್ಯ ಅಂಶ ಏನೆಂದರೆ, ಅಮೆರಿಕದ ಷೇರು ಮಾರುಕಟ್ಟೆ ಕೂಡ ಸಾರ್ವಕಾಲಿಕ ದಾಖಲೆ ಮಟ್ಟವನ್ನು ಮುಟ್ಟಿದೆ. ಆದ್ದರಿಂದ ಬೆಲೆ ಇಳಿಕೆ ಟ್ರೆಂಡ್ ಚಿತ್ರಣವು ಕಾಣಿಸಿಕೊಳ್ಳಲಾರಂಭಿಸಿದೆ.
ಬಡ್ಡಿ ದರ ಇಳಿಕೆ ಚಕ್ರಕ್ಕೆ ಭಾರತದಲ್ಲಿ ಕೊನೆಯಾಗಲಿದೆ
ಭಾರತದಲ್ಲಿ ಬಡ್ಡಿ ದರ ಇಳಿಕೆ ಆಗುವ ಚಕ್ರ ಕೊನೆಯಾದಂತೆ ಕಾಣುತ್ತಿದೆ. ಮುಂದಿನ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡಬಹುದಾದ ಬಡ್ಡಿ ಕಡಿತವೇ ಕೊನೆ ಆಗಬಹುದು. ಯಾವಾಗ ಬಡ್ಡಿ ದರ ಕಡಿಮೆ ಆಗುತ್ತದೋ ಆಗ ಹೂಡಿಕೆದಾರರು ಹಣದ ಹೂಡಿಕೆಯನ್ನು ಈಕ್ವಿಟಿ ಅಂದರೆ ಷೇರು ಮಾರುಕಟ್ಟೆ ಮೇಲೆ ಮಾಡುತ್ತಾರೆ. ಈಗಿನ ಸನ್ನಿವೇಶದಲ್ಲಿ ಇನ್ನೊಂದು ಬಾರಿ ಬಡ್ಡಿ ದರ ಕಡಿತ ಆಗಬಹುದು. ಅದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ.
ಅರ್ಧದಷ್ಟು ಲಾಭ ತೆಗೆದುಕೊಳ್ಳುವುದು ಉತ್ತಮ
ಈಗಾಗಲೇ ಖರೀದಿ ಮಾಡಿದ ಷೇರುಗಳು ಲಾಭದಲ್ಲಿ ಇದ್ದರೆ ಅವುಗಳಲ್ಲಿ ಒಂದಿಷ್ಟು ಭಾಗ ಲಾಭವನ್ನು ತೆಗೆದುಕೊಳ್ಳುವುದು ಉತ್ತಮ. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿರುತ್ತವಲ್ಲಾ ಅಂಥ ಷೇರುಗಳ ಲಾಭ ತೆಗೆದುಕೊಳ್ಳಬಹುದು. ಇಲ್ಲಿಂದ ಮೇಲೆ ಷೇರು ಮಾರುಕಟ್ಟೆ ದೊಡ್ಡ ಎತ್ತರಕ್ಕೆ ಹೋಗುವುದು ನಿರೀಕ್ಷಿಸುವುದು ಸಾಧ್ಯವಿಲ್ಲ. ಈಗಲೂ ಷೇರು ಖರೀದಿ ಮಾಡ್ತೀವಿ ಅನ್ನುವವರಾದರೆ ತುಂಬ ಒಳ್ಳೆ ಕಂಪೆನಿಯ ಷೇರುಗಳನ್ನೇ ಖರೀದಿಸಬೇಕು. ಇಲ್ಲದಿದ್ದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಮಾರುಕಟ್ಟೆ ತುಂಬ ಎತ್ತರದಲ್ಲಿ ಇರುವಾಗ ಇನ್ನೂ ಮೇಲೆ ಹೋಗುತ್ತದೆ ಎಂಬ ಅತಿಯಾಸೆ ಪಡುವುದು ಅನಾಹುತಕ್ಕೆ ಕಾರಣ ಆಗುತ್ತದೆ.