ನೀವು ಶ್ರೀಮಂತರಾಗಲು ಯಹೂದಿಗಳ ಈ 10 ಸೂತ್ರಗಳನ್ನು ಅನುಸರಿಸಿ
ನೀವು ದಿಢೀರ್ ಎಂದು ಶ್ರೀಮಂತರಾಗಲು ಸಾಧ್ಯವಿಲ್ಲ. ನಿಮ್ಮ ಹಣವನ್ನು ಸರಿಯಾದ ಕಡೆಯಲ್ಲಿ, ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಿದರೆ ಮಾತ್ರ ಉತ್ತಮ ಆದಾಯ ಪಡೆಯಲು ಸಾಧ್ಯ. ಹೂಡಿಕೆಯ ಜೊತೆಗೆ ಎದುರಾಗುವ ಸಮಸ್ಯೆಗಳ ಅರಿವು ನಿಮಗಿರಬೇಕು. ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮಲಿರಬೇಕು.
ಕೆಲವರಿಗೆ ಹಣ ಇದ್ರೂ ಎಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿದಿರುವುದಿಲ್ಲ. ಮತ್ತೆ ಹಲವರಲ್ಲಿ ಬಂಡವಾಳದ ಕೊರತೆ. ಕೆಲವರು ಯೋಚಿಸಿ ಉತ್ತಮ ಹೂಡಿಕೆ ಮಾಡುತ್ತಾರೆ. ಮತ್ತೆ ಕೆಲವರಿಗೆ ಹಣ ಹೂಡಿಕೆ ಮಾಡಿದರೂ ವಾಪಸ್ ಬರುತ್ತದೆ ಎಂಬ ನಂಬಿಕೆಯು ಇರುವುದಿಲ್ಲ. ಹೀಗಾಗಿ ಹಣ ಸಂಪಾದಿಸಿ ಸಿರಿವಂತರಾಗುವುದು ಅಸಾಧ್ಯವೆನಿಸಿದರೂ ಕನಸು ಕಾಣುವುದನ್ನು, ಪ್ರಯತ್ನ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ.
ಪಿಪಿಎಫ್ ಮೂಲಕ 1 ಕೋಟಿ ಗಳಿಸುವುದು ಹೇಗೆ ಎಂಬುದನ್ನು ಬನ್ನಿ ತಿಳಿಯೋಣ.
ಶ್ರೀಮಂತರಾಗಲು ಕೆಲವು ಅಭ್ಯಾಸಗಳನ್ನು ರೂಢಿಸಬೇಕಾಗುತ್ತದೆ. ಮತ್ತೆ ಕೆಲವು ಅಭ್ಯಾಸಗಳನ್ನು ಬಿಡಬೇಕಾಗುತ್ತದೆ. ಕೆಲವು ಆರ್ಥಿಕ ತಪ್ಪುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ನೀನು ಶ್ರೀಮಂತನಾಗಬೇಕು ಎಂದರೆ ಯಹೂದಿ ತರಹ ಯೋಚನೆ ಮಾಡು ಎಂಬ ಮಾತೇ ಇದೆ. ಹಾಗಿದ್ದರೆ ಯಹೂದಿಗಳು ಅನುಸರಿಸುವ ಸೂತ್ರಗಳೇನು? ಶ್ರೀಮಂತರಾಗಲು ಅವರ 10 ಸಲಹೆಗಳು ಏನು ಎಂಬುದನ್ನು ತಿಳಿಯಲು ಈ ಕೆಳಗಿನ ವಿವರಣೆ ಓದಿ.
1. ವ್ಯವಹಾರದ ಘನತೆ ಮತ್ತು ನೈತಿಕತೆಯನ್ನು ನಂಬಿರಿ
ಯಹೂದಿಗಳು ಯಾವುದೇ ವ್ಯವಹಾರವನ್ನು ಪ್ರಾಮಾಣಿಕವಾಗಿ ಮತ್ತು ನೈತಿಕತೆಯಿಂದ ಮಾಡಬೇಕೆಂದು ತಿಳಿಸುತ್ತಾರೆ. ಜನರು ಬಯಸುವ ಅಥವಾ ಅಗತ್ಯವಿರುವ ಉತ್ಪನ್ನ ಅಥವಾ ಸೇವೆಯನ್ನು ನೀಡಬೇಕು. ಇದರಿಂದ ಉತ್ತಮ ಜಗತ್ತನ್ನು ನಿರ್ಮಿಸಲು ಸಾಧ್ಯ. ಜೊತೆಗೆ ನಿಮ್ಮ ಉತ್ಪನ್ನ ಅಥವಾ ಸೇವೆ ಜನರನ್ನು ಹೆಚ್ಚು ಸಂತೋಷಪಡಿಸುತ್ತದೆ.
ಜೀವನಕ್ಕಾಗಿ ನೀವು ಏನು ಮಾಡುತ್ತೀರಿ ಎಂಬುದು ಜಗತ್ತಿಗೆ ಮತ್ತು ಇತರ ಜನರಿಗೆ ಮಾಡುವ ಸೇವೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ತತ್ವವು ಮುಖ್ಯವಾಗಿದೆ. ನೀವು ಮೌಲ್ಯಯುತವಾದ ವ್ಯವಹಾರವನ್ನು ಮಾಡಿದರೆ, ಹಣವು ಅದಾಗಿಯೇ ನಿಮ್ಮತ್ತ ಹುಡುಕಿಕೊಂಡು ಬರುತ್ತದೆ ಎಂಬುದು ಇವರ ನಂಬಿಕೆ.
2. ಜನರ ಜೊತೆಗಿನ ಸಂಪರ್ಕವನ್ನು ಹೆಚ್ಚಿಸಿಕೊಳ್ಳಿ
ನೀವು ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡುವುದು ಮುಖ್ಯ. ಇತರ ಜನರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ, ಸಂಪತ್ತಿನ ಸಂದರ್ಭಗಳನ್ನು ಸೃಷ್ಟಿಸಬಹುದು ಎಂಬುದು ಯಹೂದಿಗಳ ತತ್ವವಾಗಿದೆ. ಜನರು ಸಂಬಂಧ ಹೊಂದಿರುವ ಇತರರೊಂದಿಗೆ ಮಾತ್ರ ವ್ಯವಹಾರ ಮಾಡಲು ಒಲವು ತೋರುತ್ತಾರೆ ಎಂಬುದು ಇವರ ಧ್ಯೇಯವಾಗಿದೆ.
ಇಲ್ಲಿ ನೆನಪಿನಲ್ಲಿ ಇಡಬೇಕಾದ ಪ್ರಮುಖ ಅಂಶವೆಂದರೆ ನೀವು ಅಡ್ಡ ದಾರಿ ಮೂಲಕ ನಕಲಿ ಸಂಬಂಧಗಳು ಹೊಂದಿದ್ದರೆ ಅವು ನಿಮ್ಮನ್ನು ಜೀವನದಲ್ಲಿ ಎಲ್ಲಿಗೂ ಕರೆದೊಯ್ಯುವುದಿಲ್ಲ. ಹಾಗಾಗಿ ಪ್ರಾಮಾಣಿಕ ಸಂಬಂಧ ಹೊಂದಿರಿ.
3. ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಿ
ನೀವು ಯಾವುದೇ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ನಿಮ್ಮನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಜನರು ಸಾಮ್ಯತೆ ಇದ್ದರೆ ಮಾತ್ರ ನಿಮ್ಮೊಂದಿಗೆ ವ್ಯವಹಾರ ಮಾಡಲು ಬಯಸುತ್ತಾರೆ. ವ್ಯವಹಾರ ಮಾಡುವ ವ್ಯಕ್ತಿಯಲ್ಲಿ ನಂಬಿಕೆ, ನಿರ್ಣಯ, ವ್ಯಕ್ತಿತ್ವ, ದೃಢ ನಿರ್ಧಾರ, ಸ್ಥಿರತೆಯನ್ನು ಬಯಸುತ್ತಾರೆ. ಶಿಸ್ತು ಮತ್ತು ಶ್ರದ್ಧೆಯನ್ನು ಹೊಂದಿರುವ, ಸ್ಥಿರ ಜನರೊಂದಿಗೆ ವ್ಯವಹಾರ ಮಾಡಲು ಬಯಸುತ್ತಾರೆ.
4. ಪರಿಪೂರ್ಣವಾಗಲು ಪ್ರಯತ್ನಿಸಬೇಡಿ
ಜೀವನ, ಹೂಡಿಕೆ ಮತ್ತು ವ್ಯವಹಾರವು ಎಂದಿಗೂ ಪರಿಪೂರ್ಣವಾಗುವುದಿಲ್ಲ. ದಾರಿಯುದ್ದಕ್ಕೂ ಹಲವು ಸಮಸ್ಯೆಗಳು ಮತ್ತು ಅಪೂರ್ಣತೆಗಳು ಇರುತ್ತವೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಚಿಂತಿಸದೇ ಮುಂದುವರಿಯಿರಿ.
5. ನಾಯಕನಾಗಿರಿ
ಯಹೂದಿಗಳ ಸಂಪ್ರದಾಯವು ಚಿಕ್ಕಂದಿನಿಂದಲೇ ನಾವೆಲ್ಲರೂ ನಾಯಕರೆಂಬ ಮನೋಭಾವವನ್ನು ಕಲಿಸುತ್ತದೆ. ಯಹೂದಿ ಸಂಪ್ರದಾಯದ ಪ್ರಕಾರ ನಾಯಕನಾದವನು ಅನುಯಾಯಿಗಳನ್ನು ಹೊಂದಿರುವವನು. ನೀವು ಅನುಯಾಯಿಗಳು ಇಲ್ಲದೆ ನಾಯಕನಾಗಲು ಸಾಧ್ಯವಿಲ್ಲ.
6. ಬದಲಾವಣೆಗಳನ್ನು ಸ್ವೀಕರಿಸಿ
ನಾಯಕನಾದವನು ಬದಲಾವಣೆಗಳನ್ನು ಸ್ವೀಕರಿಸಬೇಕು. ವ್ಯವಹಾರದಂತೆ ಜಗತ್ತು ಕ್ರಿಯಾತ್ಮಕವಾಗಿದೆ, ಹಾಗಾಗಿ ಬದಲಾವಣೆಗೆ ಮುಕ್ತ ಮನಸ್ಸನ್ನು ಇಟ್ಟುಕೊಳ್ಳಿ ಇದರಿಂದ ಸಮೃದ್ಧಿಯನ್ನು ತರುತ್ತದೆ. ಒಂದು ವೇಳೆ ಬದಲಾವಣೆಯನ್ನು ಸ್ವೀಕರಿಸದಿದ್ದರೆ, ಅಲ್ಪಾವಧಿಯಲ್ಲಿ ಪ್ರಕ್ಷುಬ್ದತೆಯನ್ನು ಉಂಟುಮಾಡಬಹುದು.
7. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿ
ಭವಿಷ್ಯಕ್ಕಾಗಿ ನೀವು ಉತ್ತಮ ಯೋಜನೆಗಳನ್ನು ರೂಪಿಸುವುದರಿಂದ, ನೀವು ಜೀವನದಲ್ಲಿ ಹೆಚ್ಚು ಯಶಸ್ವಿಯಾಗಬಹುದು. ಹಿಂದಿನ ತಪ್ಪುಗಳಿಂದ ಅರಿಯುವುದು, ಸಮಯ ತೆಗೆದುಕೊಂಡು ಪ್ರಸ್ತುತ ಸಂದರ್ಭವನ್ನು, ಪ್ರವೃತ್ತಿಗಳನ್ನು ವಿಶ್ಲೇಷಿಸುವುದು ಹೂಡಿಕೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ.
8. ಹಣದ ಮಹತ್ವ ಅರಿತುಕೊಳ್ಳಿ
ಹಣ ಎಂಬುದು ನಂಬಿಕೆಯ ಮೇಲೆ ನಿರ್ಮಿಸಲಾದ ವ್ಯಾಪಾರದ ಸರಳ ವ್ಯವಸ್ಥೆಯಾಗಿದೆ. ವಿಶ್ವಾಸಾರ್ಹವಲ್ಲದ ಯಾವುದೇ ರಾಷ್ಟ್ರಗಳು ದುರ್ಬಲ ಹಣವನ್ನು ಹೊಂದಿರುತ್ತವೆ. ಆದ್ದರಿಂದ ಹಣವು ನೀವು ಇತರರಿಗಾಗಿ ಏನು ಮಾಡಿದ್ದೀರಿ ಎಂಬುದರ ಭೌತಿಕ ನಿರೂಪಣೆಯಾಗಿದೆ. ಹೆಚ್ಚು ಹಣ ಹೊಂದಿದ್ದೀರಿ ಎಂದಾದರೆ ನೀವು ಹೆಚ್ಚು ಬದಲಾವಣೆ ತಂದಿದ್ದೀರಿ ಎಂದರ್ಥ.
9. ದಾನ ಮಾಡಬೇಕು
ಶ್ರೀಮಂತ ಯಹೂದಿಗಳು ತಮ್ಮ ಹಣದಲ್ಲಿ ಶೇಕಡಾ 10ರಷ್ಟನ್ನು ದತ್ತಿ ಅಥವಾ ಇತರ ವಿಧಾನಗಳಿಗೆ ನೀಡಬೇಕು ಎಂಬ ಸೂತ್ರವನ್ನು ಅನುಸರಿಸುತ್ತಾರೆ. ಇದು ತರ್ಕಬದ್ಧವಲ್ಲದಿದ್ದರೂ ನಿಮ್ಮ ಹಣವನ್ನು ನೀವು ಬಿಟ್ಟುಕೊಟ್ಟಾಗ, ಹೆಚ್ಚಿನದು ನಿಮಗೆ ಹಿಂತಿರುಗುತ್ತದೆ ಎಂದು ಹೇಳಲಾಗುತ್ತದೆ.
ನೀವು ಹೆಚ್ಚು ದಾನ ಮಾಡಿದರೆ ನಿಮ್ಮನ್ನು ಉದಾರ ವ್ಯಕ್ತಿಯಾಗಿ ಜನರು ನೋಡುತ್ತಾರೆ. ನಿಮ್ಮನ್ನು ಯಶಸ್ವಿ ಮತ್ತು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಹೆಚ್ಚಿನ ವ್ಯವಹಾರವು ನಿಮ್ಮ ಹಾದಿಗೆ ಬರುತ್ತದೆ.
10. ಎಂದಿಗೂ ನಿವೃತ್ತಿ ಪಡೆಯಬೇಡಿ
ಯಹೂದಿಗಳ ಬುದ್ದಿವಂತಿಕೆ ಪ್ರಕಾರ ಬೇಗನೆ ನಿವೃತ್ತಿಯಾಗುವುದು ಒಳ್ಳೆಯದಲ್ಲ. ಒಂದು ನಿರ್ಧಿಷ್ಟ ವಯಸ್ಸಿಗೆ ನಿವೃತ್ತಿಯಾಗಲು ಯೋಜಿಸುವುದು ಅತೃಪ್ತಿಯ ಒಂದು ವಿಧಾನವಾಗಿದೆ. ಅವರ ತತ್ವದ ಪ್ರಕಾರ ದೇವರು ನಮ್ಮನ್ನು ಕೆಲಸ ಮಾಡಲು ಸೃಷ್ಟಿಸುತ್ತಾನೆ. ಜಗತ್ತಿಗೆ ನಿಮ್ಮ ಉಪಯುಕ್ತತೆ ಸೀಮಿತ ಸಂಪನ್ಮೂಲವಲ್ಲ.