ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?
ಷೇರು ಮಾರ್ಕೆಟ್ ನಲ್ಲಿ ಹಣ ಹೂಡಬೇಕು ಅಂತ ಇರುವವರಿಗೆ, ಈಗಾಗಲೇ ಹಣ ಹೂಡಿದವರಿಗೆ ಒಂದು ಥಿಯರಿ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ- 'ಗ್ರೇಟರ್ ಫೂಲ್ ಥಿಯರಿ'. ಕಳೆದ ಮಾರ್ಚ್ ನಲ್ಲಿ ಸಟಕ್ಕನೆ ಸೆನ್ಸೆಕ್ಸ್ ಸೂಚ್ಯಂಕ ಪಾತಾಳದ ಹಾದಿ ಹಿಡಿದಿತ್ತು. ಯಾವಾಗ 42 ಸಾವಿರ ಪಾಯಿಂಟ್ ದಾಟಿದ್ದ ಸೂಚ್ಯಂಕ 27 ಸಾವಿರ ಪಾಯಿಂಟ್ ಅಕ್ಕಪಕ್ಕ ಬಂದುಬಿಟ್ಟಿತೋ ಗಾಬರಿ ಬಿದ್ದ ಹೂಡಿಕೆದಾರರು ಹಲವರು ಸಿಕ್ಕ ಬೆಲೆಗೆ ಷೇರುಗಳನ್ನು ಮಾರಿಬಿಟ್ಟರು.
ಆಗ ಮಾರಿದವರ ಪೈಕಿ ಹಲವರು ಈಗ ನೊಂದುಕೊಳ್ಳುತ್ತಿದ್ದಾರೆ. ಏಕೆಂದರೆ, ಅದ್ಯಾವ ಪರಿ ವೇಗದಲ್ಲಿ ಷೇರು ಮಾರ್ಕೆಟ್ ಚೇತರಿಸಿಕೊಂಡಿತು ಅಂದರೆ, ನೋಡನೋಡುತ್ತಾ ನಾಲ್ಕೈದು ಸಾವಿರ ಪಾಯಿಂಟ್ ಒಂದು ತಿಂಗಳಲ್ಲಿ ಮೇಲೇರಿತು. "ಅಯ್ಯೋ, ಷೇರುಗಳನ್ನು ಮಾರಿ ನಾವು ತಪ್ಪು ಮಾಡಿಬಿಟ್ಟೆವಾ?" ಅಂತ ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಹಲವರು.
ಏನಿದು ಗ್ರೇಟರ್ ಫೂಲ್ ಥಿಯರಿ?
ಗ್ರೇಟರ್ ಫೂಲ್ ಥಿಯರಿ ಏನು ಹೇಳುತ್ತದೆ ಗೊತ್ತಾ? ಒಬ್ಬ ಮೂರ್ಖ ಮತ್ತೊಬ್ಬ ಮೂರ್ಖನಿಗೆ ಮಾರಬಹುದು ಎಂಬ ಲೆಕ್ಕಾಚಾರದಲ್ಲಿ ಐಡಿಯಾವನ್ನು ಖರೀದಿ ಮಾಡುತ್ತಾನೆ. ಹೀಗೆ ಮೂರ್ಖರ ಸರಪಣಿ ಮುಂದುವರಿಯುತ್ತದೆ. ಹಾಗೆ ಕೊನೆಯ ಮೂರ್ಖ ಸಿಗುವ ತನಕ ಹೂಡಿಕೆ ಮುಂದುವರಿಯುತ್ತಲೇ ಇರುತ್ತದೆ. ಯಾರೋ ಒಬ್ಬನಿಗೆ ತಾನು ಹಾಳಾಗ್ತಾ ಇದ್ದೀನಿ ಎಂಬ ಜ್ಞಾನೋದಯ ಆಗುತ್ತದೆ. ಆ ಇಡೀ ಸರಪಣಿ ಉಲ್ಟಾ ತಿರುಗುತ್ತದೆ. ದಿಢೀರನೇ ಅನಾಹುತವಾಗಿ ಪರಿಣಮಿಸುತ್ತದೆ. ಅದು ಬಿಟ್ ಕಾಯಿನ್ ವಿಷಯದಲ್ಲಂತೂ ಇನ್ನೂ ಹಸಿರಾಗಿಯೇ ಇದೆ. ಯಾವುದೇ ದೇಶದ ಮಾರ್ಕೆಟ್ ನಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಈ ಥಿಯರಿಯನ್ನು ಗಮನಿಸಬಹುದು. ಮಾರ್ಕೆಟ್ ಮೇಲಕ್ಕೆ ಏರುತ್ತಲೇ ಇದೆ ಅಂದಾಗ ಮಾತ್ರ ಈ ಥಿಯರಿ ನಿಜ ಅಲ್ಲ, ಬೀಳುವಾಗ ಕೂಡ ಇದು ನಿಜವೇ.
ಕೊನೆ ವ್ಯಕ್ತಿಯ ತನಕ ಮುಂದುವರಿಯುತ್ತದೆ
100 ರುಪಾಯಿ ಬೆಲೆ ಇದ್ದಾಗ, ಆ ಷೇರು 90 ರುಪಾಯಿಗೆ ಬಂದಾಗ ಖರೀದಿ ಮಾಡಿದರಾಯಿತು ಅಂದುಕೊಂಡು ಆ ಮೂರ್ಖ ಮಾರುತ್ತಾನೆ. ಇನ್ನು ಆ ದರಕ್ಕೆ ಖರೀದಿಸಿದವನು 70 ರುಪಾಯಿಗೆ ಬಂದಾಗ ಖರೀದಿಸಿದರಾಯಿತು ಅಂದುಕೊಂಡು ಮಾರುತ್ತಾರೆ. ಇದು ಎಲ್ಲಿಯ ತನಕ ಮುಂದುವರಿಯುತ್ತದೆ ಅಂದರೆ, ಒಬ್ಬ ಕೊನೆಯ ವ್ಯಕ್ತಿಗೆ ಗೊತ್ತಾಗುತ್ತದೆ; ಈಗ ಮಾರ್ಕೆಟ್ ಮೇಲಕ್ಕೆ ಏರುತ್ತಲೇ ಇದೆ, ಈಗ ಮಾರಬಾರದು ಎಂಬ ಸಂಗತಿ. ಇನ್ನು ಮಾರಿದರೆ ಉಳಿಗಾಲವಿಲ್ಲ ಎಂದು ಗೊತ್ತಾಗುವ ತನಕ ಮಾರುತ್ತಾರೆ. ಮಾರ್ಕೆಟ್ ಮೇಲಕ್ಕೆ ಏರುವಾಗ ಕೊನೆಯ ಖರೀದಿದಾರ ಬಲಿಪಶುವಾದರೆ, ಇಳಿಯುತ್ತಿರುವ ಮಾರುಕಟ್ಟೆಯಲ್ಲಿ ಕೊನೆಯ ಮಾರಾಟಗಾರ ಬಲಿಪಶುವಾಗುತ್ತಾನೆ.
ಹೂಡಿಕೆ ಜಗತ್ತಿನ ಅತಿರಥ, ಮಹಾರಥರು ಏನು ಹೇಳಿದ್ದಾರೆ?
ಈಗಿನ ಸನ್ನಿವೇಶವೇ ನೋಡಿ, ಸೆನ್ಸೆಕ್ಸ್ 42 ಸಾವಿರ ಪಾಯಿಂಟ್ ನಲ್ಲಿ ಇರುವಾಗ ಕುಸಿತ ಶುರುವಾಯಿತು. ಅದು ಈಚೆಗೆ ಕನಿಷ್ಠ ಮಟ್ಟವಾದ 27 ಸಾವಿರ ಮುಟ್ಟಿತು. ಅಂದರೆ ಮೂವತ್ತೈದು ಪರ್ಸೆಂಟ್ ಕುಸಿತವಾಯಿತು. ಆದರೆ ಹಲವರು ಗಾಬರಿ ಬಿದ್ದರು. ಮಾರ್ಕೆಟ್ 20 ಸಾವಿರ ಪಾಯಿಂಟ್ ಗೆ ಬರುತ್ತದಂತೆ ಎಂಬ ತಲೆ ಬುಡವಿಲ್ಲದ ವದಂತಿಗಳಿಗೆ ಹೆದರಿ ಹೂಡಿಕೆಯನ್ನು ಮಾರಿಕೊಂಡರು. ಇದೇ ನಡವಳಿಕೆಯನ್ನು ಮಾರ್ಕೆಟ್ 42 ಸಾವಿರದಲ್ಲಿ ಇದ್ದಾಗಲೂ ತೋರಿಸಿದರು. 45 ಸಾವಿರ ಅಥವಾ ಅದಕ್ಕಿಂತ ಹೆಚ್ಚಾಗುತ್ತದೆ ಎಂದು ನಂಬಿಕೊಂಡು ಖರೀದಿ ಮಾಡಿದರು. ಹೂಡಿಕೆ ವಿಚಾರದಲ್ಲಿ ಯಾರನ್ನೆಲ್ಲ ಅತಿರಥ, ಮಹಾರಥರು ಅಂದುಕೊಳ್ಳಲಾಗುತ್ತದೋ ಅವರೆಲ್ಲ ಏನು ಸಲಹೆ ನೀಡಿದ್ದಾರೆ ಗೊತ್ತಾ? ಹೂಡಿಕೆ ವಿಚಾರದಲ್ಲಿ ಅತಿಯಾದ ನಿರಾಶಾವಾದ ಅಥವಾ ಅತಿಯಾದ ಆಶಾವಾದ ಎರಡೂ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪರಿಹಾರ ಕೂಡ ಇದೆ ವಾರೆನ್ ಬಫೆಟ್ ಬಳಿ
ಆಗಸ ಶುಭ್ರವಾಗಿದೆ ಅಂದಾಗ ವಿಪರೀತ ಸಕಾರಾತ್ಮಕ ಚಿಂತನೆ, ಅದೇ ರೀತಿ ವಿಪರೀತ ಮಳೆ- ಗುಡುಗು, ಸಿಡಿಲು ಇರುವಾಗ ವಿಪರೀತದ ಎಚ್ಚರಿಕೆ ಅಗತ್ಯವಿಲ್ಲ. ಈ ಎರಡೂ ಸನ್ನಿವೇಶದ ಹಿಂದಿನ ಸ್ಥಿತಿಯನ್ನು ಅಂದಾಜು ಮಾಡಿರಬೇಕು. ನಿಜ, ಮಾರ್ಕೆಟ್ ಏನಾಗುತ್ತದೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಹಾಗಂತ ನಾವು ತಳ ತಲುಪಿದೆವು ಅಂದುಕೊಳ್ಳುವುದು ತಪ್ಪು. ಈಚೆಗೆ ಎಲ್ಲವೂ ಒಂದು ದಿಕ್ಕಿನ ಕಡೆಗೆ ಸಾಗುತ್ತಿದೆ. ಯಾವ ನಂಬಿಕೆ ಕಡೆಗೆ ಹೆಚ್ಚಿನ ಜನರಿರುತ್ತಾರೋ ಆ ಕಡೆಗೆ ಮತ್ತೂ ಹೆಚ್ಚು ಜನ ಸೇರ್ಪಡೆಯಾಗುತ್ತಾರೆ. ಗ್ರೇಟರ್ ಫೂಲ್ ಥಿಯರಿಗೆ ವಾರೆನ್ ಬಫೆಟ್ ಬಳಿ ಪರಿಹಾರ ಇದೆ. ಇಂಥ ಹಲವು ಸನ್ನಿವೇಶಗಳನ್ನು ಅವರು ದಾಟಿದ್ದಾರೆ. ಇದರಲ್ಲಿ ಪಾಲ್ಗೊಂಡು ಕಸಿವಿಸಿ ಆಗುವ ಬದಲಿಗೆ, ಪಕ್ಕದಲ್ಲಿ ನಿಂತು ಪರಿಸ್ಥಿತಿಯನ್ನು ಪರಾಂಬರಿಸುತ್ತಾರೆ. ಬುದ್ಧಿವಂತರು ಆರಂಭದಲ್ಲಿ ಮಾಡಿದ್ದನ್ನು ಮೂರ್ಖರು ಕೊನೆಯಲ್ಲಿ ಮಾಡುತ್ತಾರೆ ಎಂದು ಬಫೆಟ್ ಒಂದು ಸಲ ಹೇಳಿದ್ದರು.
ಅತ್ಯಾಸೆ ಹಾಗೂ ಭಯ ಬಹಳ ಅಪಾಯಕಾರಿ
ಮೊದಲನೆಯದಾಗಿ, ಮಾರ್ಕೆಟ್ ಹೀಗೇ ಆಗುತ್ತದೆ ಎಂದು ನಿರ್ಧರಿಸಿ ಬಿಡಬಾರದು. ನಮ್ಮ ಭಾವನೆಗಳು ನಿರ್ಧಾರಗಳನ್ನು ಹತೋಟಿಗೆ ತೆಗೆದುಕೊಳ್ಳುವಂತೆ ಆಗಬಾರದು. ಅತ್ಯಾಸೆ ಹಾಗೂ ಭಯ ಬಹಳ ಅಪಾಯಕಾರಿಯಾದ ಭಾವನೆ. ಮಾರ್ಕೆಟ್ ಮೇಲೇರಲಿ ಅಥವಾ ಇಳಿಯಲಿ, ನಾವು ಮಾಡಿರುವ ಹೂಡಿಕೆ ಗಟ್ಟಿಯದ್ದಾಗಿರಬೇಕು. ಮಾರ್ಕೆಟ್ ನ ಪ್ರತಿ ಏರಿಳಿತಕ್ಕೂ ಗಾಬರಿಯಾಗಬಾರದು. ಬಫೆಟ್ ಇನ್ನೂ ಮುಂದುವರಿದು ಹೇಳುತ್ತಾರೆ: ದೊಡ್ಡ ಸಂಖ್ಯೆಯ ಹಿಂಡು ಏನು ಮಾಡುತ್ತಾದೋ ಅದನ್ನೇ ಮಾಡಲು ಮುಂದಾಗುವ ಸ್ವಭಾವದಿಂದಲೇ ಬಲಿಪಶುವಾಗುತ್ತಾರೆ. ವಿಪರೀತ ಏರಿಳಿತದ ಸನ್ನಿವೇಶದಲ್ಲಿ ಬುದ್ಧಿವಂತನಾದ ವ್ಯಕ್ತಿ ದೂರವುಳಿದರೆ, ಮೂರ್ಖರಾದವರು ಬಲಿಪಶುಗಳಾಗುತ್ತಾರೆ.